ಕೇರಳ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಹಿರಿಯ ನಾಯಕಿ ಆರ್. ರಶ್ಮಿ ಬಿಜೆಪಿ ಸೇರ್ಪಡೆ

ಕೇರಳ: ವಿಧಾನಸಭೆ ಚುನಾವಣೆ 2026ರ ಹೊತ್ತಿನಲ್ಲಿಯೇ ಕೇರಳ ಮಹಿಳಾ ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ 2021ರ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟಾರಕ್ಕರ ಕ್ಷೇತ್ರದ ಯುಡಿಎಫ್ ಅಭ್ಯರ್ಥಿಯಾಗಿದ್ದ ಆರ್. ರಶ್ಮಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಸಮ್ಮುಖದಲ್ಲಿ ಆರ್. ರಶ್ಮಿ ಬಿಜೆಪಿ ಸೇರ್ಪಡೆಯಾದರು. ಸದ್ಯದ ಮಾಹಿತಿಯಂತೆ ಸಿಪಿಎಂನ ಮಾಜಿ ಶಾಸಕಿ ಐಷಾ ಪೋಟ್ಟಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟಾರಕ್ಕರ ಕ್ಷೇತ್ರದಿಂದ ಯುಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ನಿರೀಕ್ಷೆ ಇದೆ. ಆದ್ದರಿಂದ ಆರ್.ರಶ್ಮಿ ಬಿಜೆಪಿ ಸೇರಿದ್ದಾರೆ.

ಆರ್. ರಶ್ಮಿ ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ರಾಜೀವ್ ಚಂದ್ರಶೇಖರ್, “ರಶ್ಮಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ” ಎಂದು ಹೇಳಿದ್ದಾರೆ. ಆದರೆ, ಅವರಿಗೆ ಯಾವ ಕ್ಷೇತ್ರವನ್ನು ಹಂಚಿಕೆ ಮಾಡಲಾಗುವುದು? ಎಂಬ ಕುರಿತು ಅವರು ಹೇಳಿಕೆ ನೀಡಿಲ್ಲ.

“ಕಾಂಗ್ರೆಸ್ ಪಕ್ಷದಲ್ಲಿ ಉಂಟಾದ ಕಹಿ ಅನುಭವಗಳಿಂದಾಗಿ ತಾವು ಬಿಜೆಪಿ ಸೇರಿದ್ದೇನೆ” ಎಂದು ರಶ್ಮಿ ಹೇಳಿದ್ದಾರೆ. ಆದರೆ ವಿವರಗಳನ್ನು ಬಹಿರಂಗಪಡಿಸಿಲ್ಲ. “ಐಷಾ ಪೋಟ್ಟಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದಕ್ಕೂ, ತಾವು ಬಿಜೆಪಿ ಸೇರಿರುವುದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ರಶ್ಮಿ ಅವರು ಮಹಿಳಾ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಸಾಂಸ್ಕೃತಿಕ ಸಾಹಿತ್ಯ ವಿಭಾಗದಲ್ಲಿಯೂ ಕಾರ್ಯನಿರ್ವಹಿಸಿದ್ದರು. 2021ರ ಚುನಾವಣೆಯಲ್ಲಿ ಅವರು ಕೊಟ್ಟಾರಕ್ಕರ ಕ್ಷೇತ್ರದಲ್ಲಿ ಇಂದಿನ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಎದುರಾಳಿಯಾಗಿದ್ದು, ಭಾರೀ ಪೈಪೋಟಿ ನೀಡಿದ್ದರು.

“ಎರಡು ದಶಕದಿಂದ ಕಾಂಗ್ರೆಸ್‌ ಪ್ರತಿನಿಧಿಯಾಗಿ ಕೆಲಸ ಮಾಡಿದ್ದೇನೆ. ಆದರೆ 2021ರ ಚುನಾವಣೆಯಲ್ಲಿ ಕೆ.ಎನ್.ಬಾಲಗೋಪಾಲ್ ವಿರುದ್ಧ ಕಡಿಮೆ ಮತಗಳ ಅಂತರದಿಂದ ಸೋತರೂ ಸಹ ಪಕ್ಷದಲ್ಲಿ ಕಹಿ ಅನುಭವಿಸಿದೆ. ಕ್ಷೇತ್ರದಲ್ಲಿ ಸಕ್ರಿಯವಾಗಿ ಇರಲು ಸಹಕಾರ ದೊರೆಯಲಿಲ್ಲ” ಎಂದು ರಶ್ಮಿ ಹೇಳಿದ್ದಾರೆ.

ಆರ್. ರಶ್ಮಿ ಎರಡು ದಶಕಗಳ ರಾಜಕೀಯ ಜೀವನದಲ್ಲಿ ಕುಳಕ್ಕಡ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಮತ್ತು ಕೊಲ್ಲಂ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟಾರಕ್ಕರ ಕ್ಷೇತ್ರದಲ್ಲಿ ಸಿಪಿಎಂನ ಪ್ರಭಾವಿ ನಾಯಕ ಕೆ.ಎನ್. ಬಾಲಗೋಪಾಲ್ ವಿರುದ್ಧ 10,814 ಮತಗಳ ಅಂತರದಿಂದ ಸೋಲು ಕಂಡಿದ್ದರು.

ಇದನ್ನೂ ನೋಡಿ: “ಯು.ಎಸ್ ಸಾಮ್ರಾಜ್ಯಶಾಹಿ : ಭಾರತ ಜನತೆಯ ಶತ್ರು” | ಹಿನ್ನೆಲೆ ಧ್ವನಿ : ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *