ನವದೆಹಲಿ: ಶಂಕಿತ ಬಾಂಗ್ಲಾದೇಶಿ ನಾಗರಿಕರನ್ನು ‘ಹಿಂದಕ್ಕೆ ತಳ್ಳುತ್ತಿರುವುದು’ ಮತ್ತು ಗಡೀಪಾರು ಮಾಡುತ್ತಿರುವುದು ಅಮಾನವೀಯ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಖಂಡಿಸಿದೆ. ಅಕ್ರಮವಾಗಿ ದೇಶದೊಳಕ್ಕೆ ಪ್ರವೇಶಿಸಿದವರೊಂದಿಗೆ ವ್ಯವಹರಿಸುವ ಬಗ್ಗೆ ಚೆನ್ನಾಗಿಯೇ ರೂಪಿಸಿಟ್ಟಿರುವ ವಿಧಾನಗಳ ಪ್ರಕಾರ ಸರಕಾರ ಇದನ್ನು ನಿಭಾಯಿಸಬೇಕು ಎಂದು ಅದು ಹೇಳಿದೆ.
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು, ನಿರ್ದಿಷ್ಟವಾಗಿ ಬಂಗಾಳಿ ಭಾಷಿಕ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಯಾವುದೇ ಪರಿಶೀಲನೆಯಿಲ್ಲದೆ ಅವರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ. ವರದಿಗಳ ಪ್ರಕಾರ, ಕೆಲವು ನೈಜ ಭಾರತೀಯ ನಾಗರಿಕರನ್ನು ಸಹ ಬಂಧಿಸಿ ಬಾಂಗ್ಲಾದೇಶಕ್ಕೆ ತಳ್ಳಲಾಗುತ್ತಿದೆ.
ವಿದೇಶಿಯರ ನ್ಯಾಯಮಂಡಳಿಗಳು ವಿದೇಶಿ ಪ್ರಜೆಗಳೆಂದು ಘೋಷಿಸಿದ, ಆದರೆ ಆ ಕುರಿತ ಮೇಲ್ಮನವಿಗಳು ಇನ್ನೂ ಗುವಾಹಟಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ನಾಗರಿಕರನ್ನು ಸಹ ಬಲವಂತವಾಗಿ ಹಿಂದಕ್ಕೆ ತಳ್ಳಲಾಗಿದೆ. ಇದಕ್ಕೆ ಅವಕಾಶವಿರಬಾರದು.
ಇದನ್ನೂ ಓದಿ: ಡಾ. ಮಹೇಶ್ ಜೋಶಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನಮಾನ ಹಿಂಪಡೆದ ಸರ್ಕಾರ
ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರವು ತನ್ನ ಕೋಮುವಾದಿ ನೀತಿಗಳನ್ನು ಆಕ್ರಮಣಕಾರಿಯಾಗಿ ಅನುಸರಿಸುತ್ತಿದೆ ಮತ್ತು ಈಗ ‘ಮೂಲನಿವಾಸಿ ಜನ’ರನ್ನು ಶಸ್ತ್ರಸಜ್ಜಿತಗೊಳಿಸಲು ನಿರ್ಧರಿಸಿದೆ. ಇದು ದೂರಗಾಮಿ ಪರಿಣಾಮಗಳನ್ನು ಹೊಂದಿರುವ ಅಪಾಯಕಾರಿ ನಿರ್ಧಾರವಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ಒಳನುಸುಳುವುದನ್ನು ತಡೆಯುವುದು ಸರ್ಕಾರದ ಕರ್ತವ್ಯವಾಗಿದೆ. ಅವರನ್ನು ಹಿಂದಕ್ಕೆ ತಳ್ಳುವುದು ಮತ್ತು ಕೋಮುವಾದಿ ದೃಷ್ಟಿಯಿಂದ ಆಯ್ದ ಜನವಿಭಾಗಗಳನ್ನು ಶಸ್ತ್ರಸಜ್ಜಿತಗೊಳಿಸುವುದು ಇದಕ್ಕೆ ಪರಿಹಾರಗಳಲ್ಲ.
ಅಕ್ರಮ ವಲಸಿಗರನ್ನು ಗುರುತಿಸಲು ಧರ್ಮವನ್ನು ಬಳಸಬಾರದು ಎಂದು ಸರ್ಕಾರವನ್ನು ಆಗ್ರಹಿಸಿರುವ ಸಿಪಿಐ(ಎಂ) ಅಕ್ರಮ ಮಾರ್ಗಗಳ ಮೂಲಕ ದೇಶವನ್ನು ಪ್ರವೇಶಿಸಿದವರಿಗೆ ನ್ಯಾಯಯುತ ವಿಚಾರಣೆಯ ಅವಕಾಶ ನೀಡಬೇಕು. ಯಾವುದೇ ದುರುದ್ದೇಶಪೂರಿತ ಉದ್ದೇಶಗಳಿಲ್ಲದೆ ದೇಶವನ್ನು ಪ್ರವೇಶಿಸುವ ಬಡ ಮತ್ತು ದಾಖಲೆರಹಿತ ವಲಸಿಗರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಮತ್ತು ಅವರೊಂದಿಗೆ ನಿಗದಿಪಡಿಸಿದ ಕಾರ್ಯವಿಧಾನಗಳ ಪ್ರಕಾರ ವ್ಯವಹರಿಸಬೇಕು ಎಂದು ಹೇಳಿದೆ.
ಇದನ್ನೂ ನೋಡಿ: ಹೊಟ್ಟೆಗೆ ಹಿಟ್ಟಿಲ್ಲದ ಭಾರತವೂ, ಆರ್ಥಿಕವಾಗಿ 4ನೆ ಸ್ಥಾನ ಎನ್ನುವ ಜುಟ್ಟಿಗೆ ಮಲ್ಲಿಗೆ ಹೂವೂ.. Janashakthi Media