ಸರ್ಕಾರ ಶ್ವೇತಪತ್ರ ಹೊರಡಿಸುವವರೆಗೂ ನಾವು ಹೋರಾಟವನ್ನು ಹಿಂತೆಗೆದುಕೊಳ್ಳುವುದಿಲ್ಲ: ರೈತ ಮಹಾಪಂಚಾಯತ್‌ ಘೋಷಣೆ

ಲಕ್ನೋ: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಸುಮಾರು ಒಂದು ವರ್ಷದಿಂದ ತಾವು ಪ್ರತಿಭಟಿಸುತ್ತಿರುವ ರೈತರು, ಪ್ರಧಾನಿ ಮೋದಿ ಘೋಷಣೆಯ ಬಳಿಕವೂ ರೈತ ಹೋರಾಟವನ್ನು ಹಿಂತೆಗೆದುಕೊಂಡಿಲ್ಲ. ಮೂರು ಕೃಷಿ ಕಾಯ್ದೆಗಳ ರದ್ದತಿ ಬಗ್ಗೆ ಕೇಂದ್ರ ಸರ್ಕಾರವು ಶ್ವೇತಪತ್ರ ಹೊರಡಿಸಿದ ನಂತರವೇ ನಾವು ಹೋರಾಟವನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಲಕ್ನೋದ ಇಕೋ ಗಾರ್ಡನ್‌ನಲ್ಲಿ ನಡೆಯುತ್ತಿರುವ ಕಿಸಾನ್ ಮಹಾಪಂಚಾಯತ್‌ನಲ್ಲಿ ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನ ಹಲವಾರು ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ರೈತರು ಆಗಮಿಸಿದ್ದಾರೆ.

ಗುರುನಾನಕ್‌ ಜಯಂತಿ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುಪುರಬ್‌ನಲ್ಲಿನ ಸಭೆವೊಂದರಲ್ಲಿ ಮಾತನಾಡುತ್ತಾ, ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು ಮತ್ತು ರೈತರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನಾ ನಿರತ ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ನೇತೃತ್ವದಲ್ಲಿ ಇಲ್ಲಿ ಹಮ್ಮಿಕೊಂಡಿದ್ದ ಬೃಹತ್ ಕಿಸಾನ್ ಮಹಾಪಂಚಾಯತ್‌ನಲ್ಲಿ ಹಲವು ಮುಖಂಡರು ಮಾತನಾಡಿದರು. ಅಲ್ಲದೆ, ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಆಶಿಶ್‌ ಮಿಶ್ರಾ ಟೆನಿ ಅವರ ತಂದೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಹಾಪಂಚಾಯತ್‌ ನಲ್ಲಿ ಆಗ್ರಹಿಸಲಾಯಿತು.

ರೈತ ಮುಖಂಡ ಜೋಗಿಂದರ್ ಸಿಂಗ್ “ಪ್ರಧಾನಿ ಮಾಡಿದ ಘೋಷಣೆಯನ್ನು ನಾವು ನಂಬುವುದಿಲ್ಲ. ಸರ್ಕಾರ ಶ್ವೇತಪತ್ರ ಹೊರಡಿಸಿದ ನಂತರವೇ ನಮ್ಮ ಹೋರಾಟವನ್ನು ಹಿಂಪಡೆಯಲಾಗುತ್ತದೆ ಎಂದು ಘೋಷಿಸುತ್ತೇವೆʼʼ ಎಂದು ಹೇಳಿದರು.

ಮಹಾಪಂಚಾಯತ್‌ನಲ್ಲಿ ರಾಕೇಶ್ ಟಿಕಾಯತ್‌ ಮತ್ತು ಬಲ್ಬೀರ್ ಸಿಂಗ್ ರಾಜೇವಾಲಾ ಸೇರಿದಂತೆ ಭಾರತ್ ಕಿಸಾನ್ ಯೂನಿಯನ್ (ಬಿಕೆಯು) ನಾಯಕರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕರ್ತ ಯೋಗೇಂದ್ರ ಯಾದವ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಪ್ರಧಾನಿ ಅಹಂಕಾರದ ರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಿರುವ ಯಾದವ್ “ಬಂಗಾಳದ ಜನರು ಅವರಿಗೆ ಸಣ್ಣ ಚುಚ್ಚುಮದ್ದನ್ನು ನೀಡಿದರು, ಅದು ಸ್ವಲ್ಪ ಪರಿಣಾಮಕಾರಿ ಎಂದು ಸಾಬೀತಾಯಿತು. ಆದರೆ ಅವರಿಗೆ ದೊಡ್ಡ ಪ್ರಮಾಣದ ಅಗತ್ಯವಿದೆ ಮತ್ತು ಅದು ಉತ್ತರ ಪ್ರದೇಶದ ಚುನಾವಣೆಯಾಗಿದೆʼʼ ಎಂದು ಅವರು ಹೇಳಿದರು.‌

“ಎಂಎಸ್‌ಪಿ ಖಾತರಿಗಾಗಿ ಕಾನೂನನ್ನು ರೂಪಿಸುವವರೆಗೆ ರೈತರ ಪ್ರತಿಭಟನೆ ಮುಂದುವರಿಯುತ್ತದೆ ಎಂದು ನಾನು ಇದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಪ್ರತಿಭಟನೆಯ ಸ್ವರೂಪವನ್ನು ಮೋರ್ಚಾ ನಿರ್ಧರಿಸುತ್ತದೆ” ಎಂದು ಯಾದವ್ ಹೇಳಿದರು.

ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ನಡೆಯುತ್ತಿರುವ ಆಂದೋಲನವು ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವವರೆಗೆ ಮುಂದುವರಿಯುತ್ತದೆ ಎಂದು ಹೇಳಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ “ಸರ್ಕಾರವು ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಖಾತರಿಪಡಿಸಲು ಕಾನೂನನ್ನು ತರಬೇಕು ಮತ್ತು ಹೋರಾಟದ ಸಮಯದಲ್ಲಿ ಪ್ರಾಣ ಕಳೆದುಕೊಂಡ 700 ರೈತರನ್ನು ಹುತಾತ್ಮರೆಂದು ಘೋಷಿಸಬೇಕು” ಎಂದು ಹೇಳಿದರು.

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಒಕ್ಕೂಟ ಸರ್ಕಾರದ ನಿರ್ಧಾರದ ನಂತರ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ರದ್ದುಗೊಳಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದಕ್ಕೆ ರಾಕೇಶ್ ಟಿಕಾಯತ್ ವ್ಯಂಗ್ಯವಾಡಿದ್ದಾರೆ.

’ಓವೈಸಿ ಮತ್ತು ಬಿಜೆಪಿ ನಡುವಿನ ಸಂಬಂಧ ಚಿಕ್ಕಪ್ಪ- ಸಹೋದರನ ಮಗ ಇದ್ದಂತೆ ಎಂದು ಹೇಳಿದ್ದಾರೆ. ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆಯನ್ನು ರದ್ದುಗೊಳಿಸಲು ಓವೈಸಿ ಟಿವಿಯಲ್ಲಿ ಮಾತನಾಡಬಾರದು. ಅದರ ಬದಲು ನೇರವಾಗಿ ಬಿಜೆಪಿಯೊಂದಿಗೆ ಮಾತನಾಡಬೇಕು’ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *