ಕೋಲ್ಕತಾ: “ಸಿಎಂ ಮಮತಾ ಬ್ಯಾನರ್ಜಿಯವರ ಕಾರಣದಿಂದಾಗಿ ಆರ್ಎಸ್ಎಸ್ ರಾಜ್ಯದಲ್ಲಿ ನೆಲೆಯೂರುತ್ತಿದೆ ಎಂದು CPIM ಪಾಲಿಟ್ ಬ್ಯೂರೋ ಸದಸ್ಯ ಮತ್ತು ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಮುಹಮ್ಮದ್ ಸಲೀಂ ಆರೋಪಿಸಿದ್ದಾರೆ.
ಮಮತಾ
ಸಿಐಟಿಯು, ಕಿಸಾನ್ ಸಭಾ ಮತ್ತು ಸ್ಲಂ ನಿವಾಸಿಗಳ ಸಂಘಟನೆಗಳು ಜಂಟಿಯಾಗಿ ರವಿವಾರ ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶ ವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪಶ್ಚಿಮ ಬಂಗಾಳದಲ್ಲಿ ಸಾಮಾಜಿಕ ಸಾಮರಸ್ಯವನ್ನು ಭಂಗಗೊಳಿಸುವ ಪ್ರಯತ್ನ ನಡೆಯುತ್ತಿದೆ. ಅಂಥವರನ್ನು ಅಹಿತಕರ ಘಟನೆಗಳಿಗೆ ನೇರವಾಗಿ ಹೊಣೆಗಾರರನ್ನಾಗಿ ಮಾಡಬೇಕು. ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ರಾಜ್ಯಾದ್ಯಂತ ಲಕ್ಷಾಂತರ ಜನರು ಬೀದಿಗಿಳಿದಿದ್ದಾರೆ. ಈ ಆಂದೋಲನವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಮೋದಿ ಸರ್ಕಾರ ತಂದ ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕಾನೂನನ್ನು ದೇಶಾದ್ಯಂತ ತಿದ್ದುಪಡಿ ಮಾಡಲಾಗಿದೆ. ಇದಕ್ಕಾಗಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಮುರ್ಷಿದಾಬಾದ್ ಹೊರತುಪಡಿಸಿ ಎಲ್ಲಿಯೂ ಹಿಂಸಾಚಾರ ನಡೆದಿಲ್ಲ. ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ” ಎಂದು ಟಿಎಂಸಿ ಮತ್ತು ಬಿಜೆಪಿಯನ್ನು ಟೀಕಿಸಿದರು.
“ಸತ್ಯವನ್ನು ಬಯಲು ಮಾಡಲು ನಾವು ಮುರ್ಷಿದಾಬಾದ್ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆಯನ್ನು ಬಯಸುತ್ತೇವೆ. ಟಿಎಂಸಿ ಮತ್ತು ಬಿಜೆಪಿ ಪಕ್ಷಗಳು ಕೋಮುವಾದದಲ್ಲಿ ತೊಡಗಿವೆ, ಇದು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ನೈಜ ಸಮಸ್ಯೆಗಳಿಂದ ಗಮನವನ್ನು ಬದಲಾಯಿಸುವ ಹತಾಶ ತಂತ್ರವಾಗಿದೆ” ಎಂದು ಸಲೀಂ ಅಭಿಪ್ರಾಯಪಟ್ಟರು.
ಸಿಪಿಐಎಂ ಪಾಲಿಟ್ ಬ್ಯೂರೋ ಸದಸ್ಯ ಮತ್ತು CITU ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ತಪನ್ ಸೇನ್, AIAWU ರಾಜ್ಯ ಅಧ್ಯಕ್ಷ ಕಾಮ್ರೇಡ್ ತುಷಾರ್ ಘೋಷ್ ಮತ್ತು ಇತರ ನಾಯಕರು ರ್ಯಾಲಿಯಲ್ಲಿ ಭಾಗವಹಿಸಿದ್ದರು.