ಆಪತ್ತಿನ ಕಾಲಕ್ಕೆಂದು ಕೂಡಿಡುವ ಮೀಸಲು ನಿಧಿಗೂ ಕೈ ಹಾಕಿದ ಮೋದಿ ಸರ್ಕಾರ
ಆರ್ಬಿಐ ನ ಕೇಂದ್ರ ಮಂಡಳಿಯು 2024-25ರ ಹಣಕಾಸು ವರ್ಷಕ್ಕೆ 2.69 ಲಕ್ಷ ಕೋಟಿ ರೂ.ಗಳ ಮಿಗುತೆ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಅನುಮೋದನೆ ನೀಡಿದೆ. ಇದು ಇದುವರೆಗಿನ ಅತ್ಯಂತ ಹೆಚ್ಚಿನ ಮೊತ್ತ ಎನ್ನಲಾಗಿದೆ. ಈ ದಾಖಲೆ ವರ್ಗಾವಣೆಗೆ ಕಾರಣವೇನು? ‘ಮಿಗುತೆ ಹಣ’ ಆಗಿದ್ದು ಹೇಗೆ? “ರಿಸರ್ವ್ ಬ್ಯಾಂಕ್ ಮೀಸಲನ್ನು ಅತ್ಯಂತ ತಳಮಟ್ಟದಲ್ಲಿ ಇಡುವುದು ಒಳ್ಳೆಯದಲ್ಲ, ಇಂತಹ ಕ್ರಮ ಅದರ ಸ್ವಾಯತ್ತತೆಗೆ ಧಕ್ಕೆ ತರುತ್ತದೆ, ಈ ಮೀಸಲು ನಿಧಿ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ನೆರವಿಗೆ ಬರುತ್ತದೆ, ಇದನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದು ಬೇಡ” ಎಂದು ಆರ್ಥಿಕ ತಜ್ಞರು ಮತ್ತು ಕೆಲವು ವಿರೋಧ ಪಕ್ಷಗಳ ನಾಯಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಈ ಪ್ರಕ್ರಿಯೆಯಲ್ಲಿ ಇಬ್ಬರು ಉನ್ನತ ಆರ್ಬಿಐ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಆದರೂ ಕೇಂದ್ರ ಸರ್ಕಾರ ಎಲ್ಲ ಎಚ್ಚರಿಕೆಗಳನ್ನು ಮೀರಿ ಆರ್ಬಿಐ ನ ಮೀಸಲು ನಿಧಿಯಿಂದ ಹಣ ಪಡೆದುಕೊಳ್ಳುತ್ತಿದೆ.
-ಸಂಗ್ರಹ : ಸಿ.ಸಿದ್ದಯ್ಯ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೇ 23ರಂದು 2025ರ ಆರ್ಥಿಕ ವರ್ಷಕ್ಕೆ ಸರ್ಕಾರಕ್ಕೆ 2.68 ಲಕ್ಷ ಕೋಟಿ ರೂಪಾಯಿಗಳ ಗಣನೀಯ ಲಾಭಾಂಶವನ್ನು ವರ್ಗಾಯಿಸಲು ಅನುಮೋದನೆ ನೀಡಿದೆ. ಡಾಲರ್ ಮಾರಾಟದಲ್ಲಿನ ಹೆಚ್ಚಳ ಮತ್ತು ವಿದೇಶಿ ವಿನಿಮಯದಿಂದ ಬಂದ ಲಾಭವು ಈ ಪಾವತಿಗೆ ಕಾರಣವಾಗಿದೆ. 2023-24ರಲ್ಲಿ ‘ಆಕಸ್ಮಿಕ ಆಪತ್ತು ಸಂಗ್ರಹ’’(ಸಿಆರ್ ಬಿ) ಅನ್ನು ರಿಸರ್ವ್ ಬ್ಯಾಂಕಿನ ಬ್ಯಾಲೆನ್ಸ್ ಶೀಟ್ ನ ಶೇ. 5.5 ರಲ್ಲಿ ಕಾಯ್ದುಕೊಳ್ಳುವ ಮೂಲಕ ಅದುವರೆಗಿನ ದಾಖಲೆಯ ರೂ. 2.1 ಲಕ್ಷ ಕೋಟಿ ವರ್ಗಾವಣೆಯನ್ನು ಸಾಧ್ಯವಾಗಿಸಿತ್ತು. 2025 ರಲ್ಲಿ, ಇದನ್ನು ಶೇ. 7.5 ರಲ್ಲಿ ಕಾಯ್ದುಕೊಳ್ಳುವ ಮೂಲಕ ಸರ್ಕಾರಕ್ಕೆ 2.68 ಲಕ್ಷ ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದೆ. ಬಿಮಲ್ ಜಲನ್ ನೇತೃತ್ವದ ತಜ್ಞರ ಸಮಿತಿ ನೀಡಿದ ಪರಿಷ್ಕೃತ ‘ಆರ್ಥಿಕ ಬಂಡವಾಳ ಚೌಕಟ್ಟಿನ’ (ECF) ಪ್ರಕಾರ, ‘ಆಕಸ್ಮಿಕ ಆಪತ್ತು ಸಂಗ್ರಹ’ (CRB) ಅನ್ನು ಬ್ಯಾಲೆನ್ಸ್ ಶೀಟ್ ನ ಗಾತ್ರದ 4.5-7.5 ಪ್ರತಿಶತದಷ್ಟು
ವ್ಯಾಪ್ತಿಯಲ್ಲಿ ನಿರ್ವಹಿಸಬೇಕಾಗಿದೆ.
ಏನಿದು ರಿಸರ್ವ್ ಬ್ಯಾಂಕ್ ಮೀಸಲು ನಿಧಿ?
ಮೊದಲಿಗೆ, ರಿಸರ್ವ್ ಬ್ಯಾಂಕ್ ಮೀಸಲು ನಿಧಿ ಎಂದರೇನು ನೋಡೋಣ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ದಲ್ಲಿರುವ ಎಲ್ಲಾ ಮೀಸಲುಗಳು ಒಂದೇ ರೀತಿಯದ್ದಲ್ಲ. ಎರಡು ವಿಧದ ಪ್ರಸ್ತುತತೆಗಳಿವೆ. ಕರೆನ್ಸಿ ಮತ್ತು ಚಿನ್ನದ ಮರುಮೌಲ್ಯಮಾಪನ ಖಾತೆ (Currency & Gold Revaluation Account- CGRA ಸಿಜಿಆರ್ಎ) ಅತಿದೊಡ್ಡ ಪಾಲನ್ನು ಹೊಂದಿದೆ. ಇದು ಭಾರತದ ಪರವಾಗಿ ಆರ್ಬಿಐ ಹೊಂದಿರುವ ಚಿನ್ನ ಮತ್ತು ವಿದೇಶಿ ಕರೆನ್ಸಿಯ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಸರಳವಾಗಿ ಹೇಳುವುದಾದರೆ, ಇದರಲ್ಲಿನ ವ್ಯತ್ಯಾಸಗಳು ಈ ಸ್ವತ್ತುಗಳ ಬದಲಾಗುತ್ತಿರುವ ಮಾರುಕಟ್ಟೆ ಮೌಲ್ಯವನ್ನು ಪ್ರತಿನಿಧಿಸುತ್ತವೆ. ಹೀಗಾಗಿ, ಮಾರುಕಟ್ಟೆ ಚಲನೆಗಳ ಪ್ರಕಾರ ಆರ್ಬಿಐ ಈ ಲೆಕ್ಕದಲ್ಲಿ ಕಾಲ್ಪನಿಕವಾಗಿ ಲಾಭ ಅಥವಾ ನಷ್ಟವನ್ನು ಅನುಭವಿಸುತ್ತದೆ. ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತ ಮತ್ತು ಚಿನ್ನದ ಬೆಲೆಯಲ್ಲಿನ ಹೆಚ್ಚಳವು ಸಿಜಿಆರ್ಎ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಇನ್ನೊಂದು, ಆಕಸ್ಮಿಕ ನಿಧಿ (ಕಂಟಿಂಜೆಂಸಿ ಫಂಡ್-ಸಿಎಫ್). ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತುರ್ತು ಹೊಂದಾಣಿಕೆಗಳನ್ನು ಮಾಡಲು, ಸಂಸ್ಥೆಯ ಹೂಡಿಕೆಗಳಲ್ಲಿನ ನಷ್ಟವನ್ನು ತಡೆಗಟ್ಟಲು ಅಥವಾ ಭಾರತೀಯ ಕರೆನ್ಸಿ ಮೌಲ್ಯವನ್ನು ಹೆಚ್ಚಿಸಲು ಬಳಸುವ ‘ಆಕಸ್ಮಿಕ ನಿಧಿ’ಯಾಗಿದೆ. ಇನ್ನೂ ಸರಳವಾಗಿ ಹೇಳುವುದಾದರೆ, ಇದು ಭವಿಷ್ಯದ ಅನಿರೀಕ್ಷಿತ ವೆಚ್ಚಗಳನ್ನು ಸರಿದೂಗಿಸಲು ಮೀಸಲಿಟ್ಟ ಹಣ. ಇದು ಅನಿರೀಕ್ಷಿತ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಮತ್ತೊಂದು ನಿಬಂಧನೆಯಾಗಿದೆ.
ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದ ಇಬ್ಬರು ಸಿಬ್ಬಂದಿಗಳ ಬಂಧನ
ಎರಡೂ ಸಂದರ್ಭಗಳಲ್ಲಿ, ಆರ್ಬಿಐ ದ್ರವ್ಯತೆಯನ್ನು(ಅಂದರೆ ಹಣವನ್ನು ಸಲೀಸಾಗಿ) ಸರಿಹೊಂದಿಸಲು ಅಥವಾ ಕರೆನ್ಸಿ ಮೌಲ್ಯದಲ್ಲಿನ ದೊಡ್ಡ ಏರಿಳಿತಗಳನ್ನು ತಡೆಯಲು ಸಂಬಂಧಿತ ಮಾರುಕಟ್ಟೆಗಳಲ್ಲಿ ಮಧ್ಯಪ್ರವೇಶಿಸುತ್ತದೆ. 2017-18 ರಲ್ಲಿ CF ಸಿಎಫ್ ರೂ. 2.32 ಲಕ್ಷ ಕೋಟಿ ಅಥವಾ ಸ್ವತ್ತುಗಳ ಶೇ. 6.4 ರಷ್ಟಿತ್ತು. ಸಿಜಿಆರ್ಎ ಮತ್ತು ಸಿಎಫ್ ಒಟ್ಟಾಗಿ ಶೇ. 26 ರಷ್ಟು ಸ್ವತ್ತುಗಳನ್ನು ಒಳಗೊಂಡಿತ್ತು (ಬ್ಯಾಲೆನ್ಸ್ ಶೀಟ್ ನಲ್ಲಿ ಸ್ವತ್ತುಗಳು ಮತ್ತು ಬಾಧ್ಯತೆಗಳು ವ್ಯಾಖ್ಯಾನದಿಂದ ಹೊಂದಿಕೆಯಾಗಬೇಕು, ಅದರ ಹೊಣೆಗಾರಿಕೆಗಳ ಅನುಪಾತವೂ ಸಹ).
ಆರ್ಬಿಐ ಹೊಂದಿರುವ ಸೆಕ್ಯುರಿಟಿಗಳ ಮೇಲಿನ ಬಡ್ಡಿಯ ಮೂಲಕ ಹೆಚ್ಚುವರಿ ಆದಾಯ ಬರುತ್ತದೆ. ಇದರಿಂದ ಬಂದ ಆದಾಯವನ್ನು ತನ್ನ ಸ್ವಂತ ವೆಚ್ಚಗಳನ್ನು ಪೂರೈಸಿದ ನಂತರ ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ. ರಿಸರ್ವ್ ಬ್ಯಾಂಕ್ ತನ್ನ ಗಳಿಕೆಯ ಒಂದು ಭಾಗವನ್ನು ಆಕಸ್ಮಿಕ ನಿಧಿ (ಸಿಎಫ್)ಗೆ ವರ್ಗಾಯಿಸುತ್ತದೆ.
ರಘುರಾಂ ರಾಜನ್ ಅವರು ಆರ್ ಬಿಐ ಗವರ್ನರ್ ಆಗಿದ್ದಾಗ, ರಿಸರ್ವ್ ಬ್ಯಾಂಕಿನಲ್ಲಿರುವ ರೂ. 9 ಲಕ್ಷ ಕೋಟಿ ಮೀಸಲು ಹಣದಲ್ಲಿ ಆಕಸ್ಮಿಕ ನಿಧಿ (contingency fund- ಭವಿಷ್ಯದ ಅನಿರೀಕ್ಷಿತ ವೆಚ್ಚಗಳನ್ನು ಸರಿದೂಗಿಸಲು ಮೀಸಲಿಟ್ಟ ಹಣ)ಯ ಮೂರನೇ ಒಂದು ಭಾಗ ಹಣವನ್ನು ಸರ್ಕಾರಕ್ಕೆ ವರ್ಗಾವಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಮಾಡಿದ ಸಲಹೆಯನ್ನು ರಘುರಾಂ ರಾಜನ್ ಒಪ್ಪಲಿಲ್ಲ. ಅದೇ ಸಮಯದಲ್ಲಿ, ವಸೂಲಾಗದ ಆಸ್ತಿ’ (NPA- Non-Performing Asset) ಎಂದು ದೊಡ್ಡ ಪಟ್ಟಿಯನ್ನು ನಮ್ಮ ಬಳಿ ತರಬೇಡಿ. ಅಂತಹ ಸಾಲ ವಸೂಲಿ ಮಾಡಿ, ಇಲ್ಲಾ ರೈಟ್ ಆಫ್ ಮಾಡಿ (Write off ಎಂದರೆ, ವಸೂಲಾಗದ ಸಾಲದ ಲೆಕ್ಕದ ಪುಸ್ತಕದಿಂದ ಅಳಿಸಿಹಾಕುವುದು) ಎನ್ನುತ್ತಾ ರಾಜನ್ ರಾಷ್ಟ್ರೀಯ ಬ್ಯಾಂಕುಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಾರೆ. ರಾಜನ್ ಅವರ ನಂತರ 2016ರ ಸೆಪ್ಟೆಂಬರ್ 4 ರಂದು ಉರ್ಜಿತ್ ಪಟೇಲರನ್ನು ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಗೆ ಸರ್ಕಾರ ನೇಮಕ ಮಾಡುತ್ತದೆ.
ನೋಟು ರದ್ದತಿ
ಉರ್ಜಿತ್ ಪಟೇಲ್ ಅವರು ಗವರ್ನರ್ ಆದ ನಂತರ, ಉದ್ಯಮಿಗಳಿಂದ ಸಾಲ ವಸೂಲಿ ಮಾಡುವ ಬದಲಾಗಿ ವಸೂಲಾಗದ ಸಾಲದ ಲೆಕ್ಕದ ಪುಸ್ತಕದಿಂದ ಲಕ್ಷಾಂತರ ಕೋಟಿ ರೂ.ಗಳ ಸಾಲವನ್ನು ರೈಟ್ ಆಫ್ ಮಾಡುವ ಅಥವಾ ಮನ್ನಾ ಮಾಡುವ ಕೆಲಸ ಮುಂದುವರಿಯುತ್ತದೆ. ಬ್ಯಾಂಕುಗಳು ದಿವಾಳಿಯತ್ತ ಸಾಗುತ್ತಿದ್ದಂತೆ ಅದನ್ನು ತಪ್ಪಿಸಲು, ನೋಟು ರದ್ದತಿ ಮೂಲಕ ಜನಸಾಮಾನ್ಯರ ಬಳಿ ಇದ್ದ ಹಣ ಬ್ಯಾಂಕುಗಳಿಗೆ ಬಂದು ಬೀಳುವಂತೆ ಮೋದಿ ಸರ್ಕಾರ ತಂತ್ರ ರೂಪಿಸುತ್ತದೆ. 2016ರ ನವೆಂಬರ್ 8ರಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿಯವರು ಐನೂರು ಮತ್ತು ಸಾವಿರ ಮುಖಬೆಲೆಯ ನೋಟುಗಳನ್ನು ಅಮಾನ್ಯಮಾಡಿ ಘೋಷಣೆ ಮಾಡುತ್ತಾರೆ.
ಬದಲಾವಣೆಗೂ ಅವಕಾಶ ಕೊಡದೆ, ಮಧ್ಯರಾತ್ರಿಯಿಂದಲೇ ಈ ನೋಟುಗಳು ಮಾನ್ಯತೆ ಕಳೆದುಕೊಳ್ಳುತ್ತವೆ. ಈ ವಿಷಯದಲ್ಲಿ ಅಂದು ರಿಸರ್ವ್ ಬ್ಯಾಂಕ್ ಗವರ್ನರ್ ಅವರನ್ನು ಪಕ್ಕಕ್ಕೆ ಸರಿಸಿ ತಾವೇ ರಿಸರ್ವ್ ಬ್ಯಾಂಕಿನ ನೀತಿ ನಿಲುವುಗಳನ್ನು ರೂಪಿಸುತ್ತಾರೆ. ನೋಟು ರದ್ದತಿ ವಿಷಯದಲ್ಲಿ ಬಹಿರಂಗವಾಗಿ ಏನನ್ನೂ ಮಾತನಾಡದಂತೆ ತಿಂಗಳು ಕಾಲ ಗವರ್ನರ್ ಉರ್ಜಿತ್ ಪಟೇಲ್ ಅವರ ಬಾಯಿ ಮುಚ್ಚಿಸಲಾಗುತ್ತದೆ. ಉರ್ಜಿತ್ ಪಟೇಲ್ ಕೆಲ ಕಾಲ ಎಲ್ಲವನ್ನೂ ಸಹಿಸಿಕೊಂಡು ತಮ್ಮ ಹುದ್ದೆಯಲ್ಲಿ ಮುಂದುವರಿಯುತ್ತಾರೆ.
ಮೀಸಲು ಹಣದ ಮೇಲೆ ಕಣ್ಣು
ನೋಟು ರದ್ದತಿಯ ಕಾರ್ಯ ಮುಗಿದು, ಜನಸಾಮಾನ್ಯರ ಬಳಿ ಇದ್ದ ಹಣ ಬ್ಯಾಂಕುಗಳಿಗೆ ಹರಿದು ಬರುತ್ತದೆ. ಆ ನಂತರ ಮೋದಿ ಸರ್ಕಾರದ ದೃಷ್ಟಿ ಅಂದು ರಿಸರ್ವ್ ಬ್ಯಾಂಕಿನಲ್ಲಿದ್ದ ರೂ. 9.59 ಲಕ್ಷ ಕೋಟಿ (ಜೂನ್ 2018ರಲ್ಲಿ ಇದ್ದಂತೆ) ಆಕಸ್ಮಿಕ ನಿಧಿ (CF)ಯ ಮೇಲೆ ಬೀಳುತ್ತದೆ. ಆಕಸ್ಮಿಕ ನಿಧಿಯಾಗಿ ಮೀಸಲಿಟ್ಟಿದ್ದ ಹಣದಲ್ಲಿ ಮೂರನೇ ಒಂದು ಭಾಗದಷ್ಟು ಹಣವನ್ನು (3 ಲಕ್ಷ ಕೋಟಿಗೂ ಹೆಚ್ಚು) ಕೇಂದ್ರ ಸರ್ಕಾರದ ಖಜಾನೆಗೆ ವರ್ಗಾವಣೆ ಮಾಡುವಂತೆ ರಿಸರ್ವ್ ಬ್ಯಾಂಕಿನ ಮೇಲೆ ಕೇಂದ್ರ ಸರ್ಕಾರ ಒತ್ತಡ ತರುತ್ತದೆ.
ಇಂತಹ ಕ್ರಮ ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ಉರ್ಜಿತ್ ಪಟೇಲ್ ಹೇಳುವ ಮೂಲಕ, ಮೀಸಲು ಹಣದಲ್ಲಿನ ಒಂದು ಭಾಗವನ್ನು ಕೇಂದ್ರದ ಖಜಾನೆಗೆ ವರ್ಗಾವಣೆ ಮಾಡಲು ನಿರಾಕರಿಸುತ್ತಾರೆ. ‘ಈ ಮೀಸಲು ನಿಧಿ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ನೆರವಿಗೆ ಬರುತ್ತದೆ, ಇದನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದು ಬೇಡ’ ಎಂದು ಕೆಲವು ವಿರೋಧ ಪಕ್ಷಗಳ ನಾಯಕರು ಮತ್ತು ಆರ್ಥಿಕ ತಜ್ಞರು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಾರೆ. ಭಾರತದ ಮಾಜಿ ಮುಖ್ಯ ಆರ್ಥಿಕ ತಜ್ಞ ಪ್ರಣಬ್ ಸೇನ್ ಅವರು “ಆರ್ಬಿಐ ಅನ್ನು ‘ರಾಕ್-ಬಾಟಮ್’ ಮಟ್ಟದಲ್ಲಿ ಇಡುವುದು ಒಳ್ಳೆಯದಲ್ಲ” ಎನ್ನುತ್ತಾರೆ.
ಸರ್ಕಾರದ ಈ ಕ್ರಮಕ್ಕೆ ಸಮರ್ಥನೆ ಏನು?
ಆರ್ಥಿಕ ತಜ್ಞರ ಎಚ್ಚರಿಕೆಗಳನ್ನು ಪರಿಗಣಿಸದ ಸರ್ಕಾರ, “ಮಿಗುತೆ ಮೀಸಲು ವರ್ಗಾವಣೆಯು ಕ್ಷೀಣಿಸುತ್ತಿರುವ ಆರ್ಥಿಕ ಬೆಳವಣಿಗೆಯನ್ನು ಸ್ಥಿರಗೊಳಿಸಲು ಸರ್ಕಾರಕ್ಕೆ ಒಂದಷ್ಟು ಆಯ್ಕೆಗಳನ್ನು ನೀಡುತ್ತದೆ” ಎಂದು ಸಮರ್ಥಿಸಿಕೊಂಡಿತು.
ಭಾರತೀಯ ರಿಸರ್ವ್ ಬ್ಯಾಂಕಿನ ಮೀಸಲು ತುಂಬಾ ದೊಡ್ಡದಾಗಿದೆ, ಅಷ್ಟೊಂದು ಮೀಸಲು ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿತು.’ ದಿ ಟೆಲಿಗ್ರಾಫ್’ ನಲ್ಲಿನ ಒಂದು ವರದಿಯಂತೆ, ಭಾರತೀಯ ರಿಸರ್ವ್ ಬ್ಯಾಂಕ್ ನಿರ್ವಹಿಸುವ ಒಟ್ಟು ಆಸ್ತಿಯ ಶೇ. 28 ರ ಬಫರ್ ಸುಮಾರು ಶೇ. 14 ರ ಜಾಗತಿಕ ಮಾನದಂಡಕ್ಕಿಂತ ಹೆಚ್ಚಿದೆ ಎಂಬುದು ಸರ್ಕಾರದ ವಾದವಾಗಿತ್ತು.
2018 ರಲ್ಲಿ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣ್ಯಂ ಅವರು ‘ಭಾರತೀಯ ರಿಸರ್ವ್ ಬ್ಯಾಂಕ್ ವಿಶ್ವದ ಕೇಂದ್ರ ಬ್ಯಾಂಕುಗಳಲ್ಲಿ ಅತಿ ಹೆಚ್ಚು ಮೀಸಲುಗಳನ್ನು ಹೊಂದಿದೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಬಹುದಾದ ಹೆಚ್ಚುವರಿ ಬಂಡವಾಳವು ರೂ. 4.5 ಲಕ್ಷ ಕೋಟಿ ಮತ್ತು ರೂ. 7 ಲಕ್ಷ ಕೋಟಿ ನಡುವೆ ಇದೆ’ ಎಂದು
ವಾದಿಸಿದ್ದರು.
ಇನ್ನೊಂದು ಅಭಿಪ್ರಾಯದ ಪ್ರಕಾರ, ರಿಸರ್ವ್ ಬ್ಯಾಂಕ್ ಹೆಚ್ಚಿನ ಬಂಡವಾಳ ಮೀಸಲುಗಳನ್ನು ಹೊಂದಿದ್ದರೂ, ಇದರಲ್ಲಿ ಹೆಚ್ಚಿನವು ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತದಿಂದ ಉದ್ಭವಿಸುವ ಕಾಲ್ಪನಿಕ ಮೌಲ್ಯವಾಗಿದೆ. ಇದರ ನಿಜವಾದ ನಗದು ಮೀಸಲು ತುಂಬಾ ಹೆಚ್ಚಿಲ್ಲ. ಅಮರ್ತ್ಯ ಲಾಹಿರಿ, ಆರ್ಬಿಐ ಅನುದಾನಿತ ‘ಸೆಂಟರ್ ಫಾರ್ ಅಡ್ವಾನ್ಸ್ಡ್ ಫೈನಾನ್ಶಿಯಲ್ ರಿಸರ್ಚ್ ಅಂಡ್ ಲರ್ನಿಂಗ್’ನ ನಿರ್ದೇಶಕ ಮತ್ತು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು 2018 ರಲ್ಲಿ ಆರ್ಬಿಐ ವಾಸ್ತವವಾಗಿ ವಿಶ್ವದ ಅತ್ಯಂತ ಕಡಿಮೆ ಬಂಡವಾಳದ ಕೇಂದ್ರ ಬ್ಯಾಂಕುಗಳಲ್ಲಿ ಒಂದಾಗಿದೆ ಎಂದು ಬರೆದಿದ್ದಾರೆ.
ಉರ್ಜಿತ್ ಪಟೇಲ್ ರಾಜಿನಾಮೆ
ಮೀಸಲು ವರ್ಗಾವಣೆ ಮತ್ತು ಆರ್ಬಿಐನ ಆರ್ಥಿಕ ಬಂಡವಾಳದ ಚೌಕಟ್ಟಿನ ಕುರಿತು ಸಮಾಲೋಚನೆಗಳನ್ನು ಪ್ರಾರಂಭಿಸಲು ಸರ್ಕಾರದ ಒತ್ತಡ ಮತ್ತು ಸರ್ಕಾರದ ನಿಯಂತ್ರಣವು ಸಂಘರ್ಷಕ್ಕೆ ಕಾರಣವಾಯಿತು. ಸರ್ಕಾರದ ಈ ನಡೆ ಭಾರೀ ಆಕ್ರೋಶವನ್ನು ಸೃಷ್ಟಿಸಿತು. ಈ ಪರಿಸ್ಥಿತಿಯಲ್ಲಿ ಆರ್ಬಿಐ ತನ್ನ 2018ರ ನವೆಂಬರ್ 19ರ ಸಭೆಯಲ್ಲಿ ಸರ್ಕಾರದೊಂದಿಗೆ ಸಮಾಲೋಚನೆಗಾಗಿ ತಜ್ಞರ ಸಮಿತಿಯನ್ನು ಸ್ಥಾಪಿಸಲು ಒಪ್ಪಿಕೊಂಡಿತು. ಆದರೆ, ಆರ್ಬಿಐನ ಮೀಸಲು ವಿಷಯಕ್ಕೆ ಸಂಬಂದಿಸಿದಂತೆ ಸರ್ಕಾರದ ಸಮರ್ಥನೆಯನ್ನು ಉರ್ಜಿತ್
ಪಟೇಲ್ ಒಪ್ಪಲಿಲ್ಲ. ಸರ್ಕಾರದ ಕ್ರಮವು ಕೇಂದ್ರ ಬ್ಯಾಂಕಿನ ರೇಟಿಂಗ್ ಗಳನ್ನು ಕಡಿಮೆ ಮಾಡಲು ಕಾರಣವಾಗಬಹುದು ಎಂದು ಪಟೇಲ್ ಆತಂಕ ವ್ಯಕ್ತಪಡಿಸಿದರು.
ರಿಸರ್ವ್ ಬ್ಯಾಂಕಿನ ನೀತಿ ನಿರ್ಧಾರ ಕೈಗೊಳ್ಳುವ ಸಮಿತಿಯಲ್ಲಿ ಮೋದಿ ಸರ್ಕಾರದ ಪರ ಇರುವ ಅಧಿಕಾರಿಗಳು ಬಹುಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳಲಾಯಿತು. ಆ ಮೂಲಕ, ಸಭೆಯ ಬಹುಮತದ ತೀರ್ಮಾನದ ಜಾರಿಯ ಹೆಸರಿನಲ್ಲಿ ಮೀಸಲು ಹಣದ ಒಂದಷ್ಟು ಅಂಶವನ್ನು ಕೇಂದ್ರ ಸರ್ಕಾರದ ಖಜಾನೆಗೆ ವರ್ಗಾವಣೆ ಮಾಡುವ ಒತ್ತಡ ಹೆಚ್ಚಾಯಿತು. ಇದರಿಂದ ಬೇಸತ್ತ ಉರ್ಜಿತ್ ಪಟೇಲ್ 2018ರ ಡಿಸೆಂಬರ್ 10 ರಂದು ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದರು. ನಂತರ, 15ನೇ ಹಣಕಾಸು ಆಯೋಗದ ಸದಸ್ಯರಾಗಿದ್ದ ಶಕ್ತಿಕಾಂತ ದಾಸ್ ಅವರನ್ನು ಆರ್ಬಿಐ ಗವರ್ನರ್ ಆಗಿ ಸರ್ಕಾರ ನೇಮಿಸಿತು.
ಡೆಪ್ಯೂಟಿ ಗೌರ್ನರ್ ವಿರಲ್ ಆಚಾರ್ಯ ರಾಜಿನಾಮೆ
ಆರ್ಬಿಐ ನ ಸ್ವಾಯತ್ತತ್ತೆಯನ್ನು ಕೇಂದ್ರ ಸರ್ಕಾರ ಗೌರವಿಸದೇ ಇದ್ದರೆ, ಇಂದಲ್ಲ ನಾಳೆ ಹಣಕಾಸು ಮಾರುಕಟ್ಟೆಯ ಆಕ್ರೋಶಕ್ಕೆ ಗುರಿಯಾಗಬೇಕಾದೀತು ಎಂದು ರಿಸರ್ವ್ ಬ್ಯಾಂಕಿನ ಡೆಪ್ಯೂಟಿ ಗೌವರ್ನರ್ ವಿರಲ್ ಆಚಾರ್ಯ ಎಚ್ಚರಿಸಿದರು. ಇಷ್ಟಾದರೂ ಕೇಂದ್ರ ಸರ್ಕಾರ ತನ್ನ ನಿಲುವು ಬದಲಾಯಿಸಲಿಲ್ಲ. ಇದೆಲ್ಲವನ್ನೂ ನೋಡಿ ಮತ್ತು ಸರ್ಕಾರದ ಒತ್ತಡ ಸಹಿಸಿಕೊಳ್ಳಲಾಗದೇ, ವಿರಲ್ ಆಚಾರ್ಯ ತಮ್ಮ ಅಧಿಕಾರದ ಅವದಿಯ 6 ತಿಂಗಳ ಮೊದಲೇ, ವೈಯಕ್ತಿಕ ಕಾರಣ ನೀಡಿ 2019 ರ ಜುಲೈ 23ರಂದು ತಮ್ಮ ಹುದ್ದೆಗೆ
ರಾಜೀನಾಮೆ ನೀಡಿದರು.
ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಯ ಪರ ದ್ವನಿ ಎತ್ತಿದ ಅಧಿಕಾರಿಗಳು ಒಬ್ಬೊಬ್ಬರೇ ನಿರ್ಗಮಿಸುತ್ತಿದ್ದಂತೆ, ಮೀಸಲು ಹಣ ದೋಚಲು ಮೋದಿ ಸರ್ಕಾರಕ್ಕೆ ಇದ್ದ ಅಡೆತಡೆಗಳು ಕಡಿಮೆಯಾದವು. ಅಂದಿನ ರಿಸರ್ವ್ ಬ್ಯಾಂಕಿನ ಮೀಸಲು ಹಣದಲ್ಲಿ 1.76 ಲಕ್ಷ ಕೋಟಿ ರೂ.ಗಳನ್ನು ತೆಗೆದು ಕೇಂದ್ರ ಸರ್ಕಾರದ ಖಾತೆಗೆ ಸೇರಿಸಿದರು. ಇಂದು, 2024-25ರ ಹಣಕಾಸು ವರ್ಷಕ್ಕೆ 2.69 ಲಕ್ಷ ಕೋಟಿ ರೂ.ಗಳನ್ನು ಪಡೆದುಕೊಳ್ಳುವ ಮೂಲಕ ಇದುವರೆಗಿನ ಅತ್ಯಧಿಕ ಹಣವನ್ನು ಪಡೆದುಕೊಂಡಿದೆ.
ಇದನ್ನೂ ನೋಡಿ: ಚರ್ಚೆ | ತ್ಯಾಗದ ಹಬ್ಬ ಬಕ್ರೀದ್- ಆಹಾರ ರಾಜಕಾರಣ – ಸೈಯದ್ ಶಫಿವುಲ್ಲಾ ಮತ್ತು ಕೆ ಎಸ್ ವಿಮಲಾ ಮಾತುಕತೆJanashakthi