ಕೇರಳದ ವಯನಾಡ್‌ನಿಂದ ಮತ್ತೆ ಸ್ಪರ್ಧಿಸಲಿರುವ ರಾಹುಲ್ ಗಾಂಧಿ!

ತಿರುವನಂತಪುರಂ: ಕಾಂಗ್ರೆಸ್‌ನ ಪ್ರಮುಖ ನಾಯಕ ರಾಹುಲ್ ಗಾಂಧಿ ಅವರು ಮತ್ತೆ ವಯನಾಡಿನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಕೇರಳದ ಉಸ್ತುವಾರಿ ವಹಿಸಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಬುಧವಾರ ಹೇಳಿದ್ದಾರೆ. ಪ್ರಮುಖ ಟಿವಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ಅವರು ಈ ಘೋಷಣೆ ಮಾಡಿದ್ದಾರೆ.

“ರಾಹುಲ್ ಗಾಂಧಿ ಅವರು ವಯನಾಡ್ ಜನರ ಮೇಲೆ ತುಂಬಾ ಪ್ರೀತಿ ಹೊಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಖಂಡಿತವಾಗಿಯೂ ಅವರು ವಯನಾಡ್‌ನಿಂದ ಸ್ಪರ್ಧಿಸುತ್ತಾರೆ” ಎಂದು ಅನ್ವರ್ ಹೇಳಿದ್ದಾರೆ.

ಇದನ್ನೂ ಓದಿ: ಸ್ವಚ್ಚತೆ, ನೈರ್ಮಲ್ಯ ಸಂರಕ್ಷಣೆಗೆ 2 ಸಾವಿರ ಕೋಟಿ ರೂ.ಮೀಸಲು| ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವುದಾದರೆ ಅವರು ಉತ್ತರ ಭಾರತದಿಂದ ಎರಡನೇ ಸ್ಥಾನಕ್ಕೆ ಸ್ಪರ್ಧಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನನಗೆ ಹಾಗನ್ನಿಸುವುದಿಲ್ಲ, ಆದರೆ ಪಕ್ಷದ ಹಿರಿಯ ನಾಯಕನಾಗಿರುವುದರಿಂದ ಅದನ್ನು ಅವರು ನಿರ್ಧರಿಸುತ್ತಾರೆ” ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಕಾಸರಗೋಡು ಲೋಕಸಭಾ ಸದಸ್ಯ ಮತ್ತು ಹಿರಿಯ ಕಾಂಗ್ರೆಸ್ ನಾಯಕ ರಾಜ್‌ಮೋಹನ್ ಉನ್ನಿತಾನ್ ಅವರು, “ಕೇರಳದಿಂದ ಪಕ್ಷದ 15 ಹಾಲಿ ಸಂಸದರು ಮತ್ತೆ ಸ್ಪರ್ಧಿಸುತ್ತಾರೆ ಎಂದು ಎಐಸಿಸಿ ಅನಧಿಕೃತವಾಗಿ ಸೂಚಿಸಿದೆ” ಎಂದು ಹೇಳಿದ್ದಾರೆ. ವಿರೋಧ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಕಟ್ಟಿಕೋಂಡಿರುವ ಇಂಡಿಯಾ  ಕೂಟದಲ್ಲಿ ಕೇರಳದ ಆಡಳಿತರೂಢ ಸಿಪಿಐ(ಎಂ) ಕೂಡಾ ಪ್ರಮುಖ ಪಕ್ಷವಾಗಿ ಗುರುತಿಸಿಕೊಂಡಿದೆ. ಆದರೆ ಲೋಕಸಭೆ ಚುನಾವಣೆ ವೇಳೆ ಕೇರಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪರಸ್ಪರ ಸ್ಪರ್ಧಿಸಬೇಕಾಗುತ್ತದೆ.

ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಡಿಕೆಶಿ ಮೇಲ್ಮನವಿ ಹಿಂಪಡೆಯಲು ಹೈಕೋರ್ಟ್ ಅನುಮತಿ

ಕೇರಳ 20 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, 2019 ರ ಚುನಾವಣೆಯಲ್ಲಿ ಅಲಪ್ಪುಳವನ್ನು ಹೊರತುಪಡಿಸಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ 19 ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಮಧ್ಯದಲ್ಲಿ ಕಾಂಗ್ರೆಸ್ ಮಿತ್ರಪಕ್ಷ ಕೇರಳ ಕಾಂಗ್ರೆಸ್ (ಮಣಿ) ಪಕ್ಷವು ಸಿಪಿಐ(ಎಂ) ನೇತೃತ್ವದ ಎಡಪಕ್ಷಗಳಿಗೆ ಸೇರಿಕೊಂಡಿದೆ. ಹೀಗಾಗಿ ಕೊಟ್ಟಾಯಂ ಲೋಕಸಭಾ ಸದಸ್ಯ ಥಾಮಸ್ ಚಾಜಿಕಡನ್ ಅವರು ಈಗ ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ಫ್ರಂಟ್ (ಎಲ್‌ಡಿಎಫ್) ಸಂಸದರಾಗಿದ್ದಾರೆ.

ಈ ನಡುವೆ ಐದು ರಾಜ್ಯಗಳಾದ ತೆಲಂಗಾಣ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ಭಾರಿ ಚುನಾವಣಾ ಪ್ರಚಾರವನ್ನು ಮುನ್ನಡೆಸಿದ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರವಾದ ವಯನಾಡ್‌ಗೆ ನಾಲ್ಕು ದಿನಗಳ ಪ್ರವಾಸಕ್ಕಾಗಿ ಮಂಗಳವಾರ ರಾತ್ರಿ ತಲುಪಿದ್ದಾರೆ. ರಾಹುಲ್ ಡಿಸೆಂಬರ್ 1ರವರೆಗೆ ಅಲ್ಲಿಯೇ ಇದ್ದು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ವಿಡಿಯೊ ನೋಡಿ: ದುಡಿಯುವ ಜನರ ಐಕ್ಯ ಹೋರಾಟ ರೂಪಗೊಂಡಿದ್ದು ಹೇಗೆ? – ಎಚ್.ಆರ್. ನವೀನ್ ಕುಮಾರ್ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *