ಪಿಯು ಮದ್ಯ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆಯಾಗಿ ಪರಿವರ್ತನೆ: ಎಐಡಿಎಸ್‌ಒ ಖಂಡನೆ

‘16 ನವೆಂಬರ್ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಪ್ರತಿಭಟನಾ ದಿನ’ ಆಚರಿಸಲು ಸಂಘಟನೆ ಕರೆ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು, ದ್ವಿತೀಯ ಪಿಯು ಮದ್ಯ ವಾರ್ಷಿಕ ಪರೀಕ್ಷೆ-2021ರ ಮರು ವಿನ್ಯಾಸದ ಕುರಿತು ನವೆಂಬರ್‌ 12ರಂದು ಸುತ್ತೋಲೆ ಹೊರಡಿಸಿದೆ. ಆ ಸುತ್ತೋಲೆಯ ಪ್ರಕಾರ, ಈಗ ನಡೆಯುವ ಮದ್ಯವಾರ್ಷಿಕ ಪರೀಕ್ಷೆಯು ರಾಜ್ಯ ಬೋರ್ಡ್ ಪರೀಕ್ಷೆಯಾಗಿ ನಡೆಸಲಾಗುವುದೆಂದು ಇದೆ. ಇಲಾಖೆಯ ಈ ಕ್ರಮವನ್ನು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ(ಎಐಡಿಎಸ್‌ಓ) ಖಂಡಿಸಿದೆ.

ಸುತ್ತೋಲೆಯ ಪ್ರಕಾರ ಪ್ರಶ್ನೆಪತ್ರಿಕೆಗಳು ಕೇಂದ್ರ ಕಛೇರಿಯಿಂದ ಬರುತ್ತದೆ. ನವೆಂಬರ್‌ 29ರಿಂದ ಪರೀಕ್ಷೆ ನಡೆಸಲು ದಿನಾಂಕಗಳು ನಿಗದಿಯಾಗಿದೆ. ನವೆಂಬರ್‌ 29ರಿಂದ ಪರೀಕ್ಷೆ ನಡೆಯಲಿದೆ. ಕೇವಲ 15 ದಿನಗಳಲ್ಲಿ ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಏಕಾಏಕಿ, ಯಾವುದೇ ಪೂರ್ವ ಸೂಚನೆ ಇಲ್ಲದೇ, ಪೂರ್ವ ತಯಾರಿ ಇಲ್ಲದೇ ಬೋರ್ಡ್ ಪರೀಕ್ಷೆಯೊಂದನ್ನು ಎದುರಿಸಲು ಸಿದ್ಧರಾಗಬೇಕು!! ರಾಜ್ಯ ಸರ್ಕಾರದ ಈ ನಡೆ ಅತ್ಯಂತ ಅವೈಜ್ಞಾನಿಕವಾಗಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗು ಉಪನ್ಯಾಸಕರು  ಅತ್ಯಂತ ಉಗ್ರವಾಗಿ ಖಂಡಿಸುತ್ತೇವೆ ಎಂದು ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಪ್ರಸ್ತುತ ದ್ವಿತೀಯ ಪಿಯುಸಿ ವಿಭಾಗದ ವಿದ್ಯಾರ್ಥಿಗಳು ತಮ್ಮ ಮೊದಲ ಪಿಯು ಪರೀಕ್ಷೆಗಳನ್ನು ಬರೆಯದೆ ಬಡ್ತಿ ಹೊಂದಿದ್ದಾರೆ. ಎರಡು ವರ್ಷಗಳು ಪರೀಕ್ಷೆಗಳನ್ನು ಬರೆಯಲು ಆಗದೆ, ಬರವಣಿಗೆ ಅಭ್ಯಾಸ ಇರದೆ ಪ್ರಸ್ತುತ ಎರಡನೇ ಪಿಯುಸಿಗೆ ತೇರ್ಗಡೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಕಲಿಕಾ ಪ್ರಕ್ರಿಯೆ ಹಾಗು ಕಲಿಕಾ ವಿಧಾನ ಸ್ವಲ್ಪಮಟ್ಟಿಗೆ ನಿಧಾನವಾಗಿದೆ ಮತ್ತು ಪರೀಕ್ಷೆಗೆ ಸಜ್ಜಾಗಲು ಹೆಚ್ಚಿನ ಸಮಯದ ಅಗತ್ಯವಿದೆ.

ದ್ವಿತೀಯ ಪಿಯು ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ, ಮೇ 3ನೇ ವಾರ ತರಗತಿಗಳು ಆರಂಭವಾಗಿ, ಮಾರ್ಚ್ 3ನೇ ವಾರಕ್ಕೆ ಅಂತಿಮ ಪರೀಕ್ಷೆಗಳು ನಡೆಯುತ್ತದೆ. ಈಗ ಕೋವಿಡ್ ಹಿನ್ನೆಲೆಯಲ್ಲಿ, ತರಗತಿಗಳು ಆರಂಭವಾಗಿದ್ದೇ ಆಗಸ್ಟ್ 3ನೇ ವಾರದಿಂದ. ಏಪ್ರಿಲ್‌ಗೆ ಅಂತಿಮ ಪರೀಕ್ಷೆಗಳು ನಡೆಯುತ್ತವೆ ಎಂದು ಹೇಳಲಾಗಿದೆ. ಅಂದರೆ, ಕಾಲೇಜು ಪುನರಾರಂಭ ಮೂರು ತಿಂಗಳು ವಿಳಂಬವಾಗಿದೆ. ಇದರಿಂದ ತಯಾರಿ ಸಮಯ, ಪಾಠದ ಸಮಯ ಎಲ್ಲವೂ ಕುಗ್ಗಿದೆ. ಹೀಗಾಗಿ ರಾಜ್ಯದ ಹಲವು ಕಾಲೇಜುಗಳಲ್ಲಿ ಪಠ್ಯಕ್ರಮ ಪೂರ್ಣಗೊಂಡಿಲ್ಲ, ಪರೀಕ್ಷೆಗೆ ಸಮರ್ಪಕವಾದ ತಯಾರಿ ನಡೆಸಲು ಸಾಧ್ಯವಾಗಿಲ್ಲ. ಹೀಗಿರುವಾಗ, ರಾಜ್ಯ ಸರ್ಕಾರದ ಮದ್ಯ ವಾರ್ಷಿಕವು ಬೋರ್ಡ್ ಪರೀಕ್ಷೆ ರೀತಿ ನಡೆಸುತ್ತಿರುವುದು ಖಂಡನೀಯ ಎಂದು ಸಂಘಟನೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇಲಾಖೆಯ ಹಠಾತ್ ನಿರ್ಧಾರವು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪೋಷಕರಲ್ಲಿ ಅತೀವ ಆತಂಕ ಸೃಷ್ಟಿಸಿದ್ದು, ಈ ಹಠಾತ್ ಹೇರಿಕೆಯು ಆತಂಕ, ದುಗುಡ ಹಾಗೂ ಖಿನ್ನತೆಯನ್ನು ಸೃಷ್ಟಿಸಿ, ಮಾನಸಿಕ ಒತ್ತಡವನ್ನು ಹೇರಿದೆ. ಸಿಬಿಎಸ್‌ಇ ಅಥವಾ ಐಸಿಎಸ್‌ಸಿ ಮಂಡಳಿಗಳು, ಶೈಕ್ಷಣಿಕ ವರ್ಷ ಆರಂಭವಾಗುವ ಸಮಯದಲ್ಲೇ, ಪರೀಕ್ಷೆ/ ಮೌಲ್ಯಮಾಪನದಲ್ಲಿ ಅಳವಡಿಸಿಕೊಳ್ಳುವ ಬದಲಾವಣೆಗಳ ಕುರಿತು ಮುನ್ಸೂಚನೆ ನೀಡಿದ್ದರು. ಆದರೆ, ಪಿಯುಸಿ ಮಂಡಳಿ ಅಂತಹ ಯಾವುದೇ ನಿರ್ಣಯದ ಬಗ್ಗೆ ವರ್ಷ ಆರಂಭವಾಗುವಾಗ ಹೇಳದೆ ಈಗ ಹಠಾತ್ ಬದಲಾವಣೆ ಮಾಡುತ್ತೇವೆ ಎನ್ನುವುದು ಅತ್ಯಂತ ಅವೈಜ್ಞಾನಿಕ ಕ್ರಮವಾಗುತ್ತದೆ.

ಇಂತಹ ಬದಲಾವಣೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಹಲವು ಶಿಕ್ಷಣ ತಜ್ಞರು, ಉಪನ್ಯಾಸಕರ ಅಭಿಪ್ರಾಯ. ಹಾಗಾಗಿ, ರಾಜ್ಯ ಸರ್ಕಾರ, ವಿದ್ಯಾರ್ಥಿಗಳ ಭವಿಷ್ಯ, ಮಾನಸಿಕ ಆರೋಗ್ಯ ಹಾಗೂ ಪೋಷಕರು, ಉಪನ್ಯಾಸಕರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು, ಯಥಾಪ್ರಕಾರ ಪ್ರತಿ ವರ್ಷದಂತೆ ಅಂತಿಮ ಪರೀಕ್ಷೆಯನ್ನು ಮಾತ್ರ ಬೋರ್ಡ್‌ ಪರೀಕ್ಷೆಯಾಗಿ ಮಾಡಿ, ಮದ್ಯ ವಾರ್ಷಿಕ ಪರೀಕ್ಷೆಯನ್ನು ಕಾಲೇಜು ಮಟ್ಟದಲ್ಲಿ, ವಿಕೇಂದ್ರೀಕೃತ ಪ್ರಕ್ರಿಯೆಯಲ್ಲಿ ನಡೆಸಬೇಕು ಎಂದು ಎಐಡಿಎಸ್‌ಓ ಹಾಗೂ ರಾಜ್ಯದ ವಿದ್ಯಾರ್ಥಿಗಳು ಆಗ್ರಹಿಸುತ್ತೇವೆ.

ಈ ಹಿನ್ನೆಲೆಯಲ್ಲಿ ಎಐಡಿಎಸ್‌ಓ ರಾಜ್ಯ ಸಮಿತಿಯು 16 ನವೆಂಬರ್ 2021ರಂದು ‘ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಪ್ರತಿಭಟನಾ ದಿನ’ ಆಚರಿಸಲು ಕರೆ ನೀಡಿದೆ. ಬೇಡಿಕೆಗಳ ಅಂಗವಾಗಿ ಪ್ರಮುಖವಾದ ಯಥಾಪ್ರಕಾರದಂತೆ ಮದ್ಯ ವಾರ್ಷಿಕ ಪರೀಕ್ಷೆಯನ್ನು ಕಾಲೇಜು ಮಟ್ಟದಲ್ಲಿ, ವಿಕೇಂದ್ರೀಕೃತವಾಗಿ ನಡೆಸಿ. ಇದರ ಮೌಲ್ಯಮಾಪನ ಅಂತಿಮ ಪರೀಕ್ಷೆಗೆ ಒಳಪಡುವುದು ಬೇಡ ಮತ್ತು ಶೈಕ್ಷಣಿಕ ವೇಳಾಪಟ್ಟಿಯನ್ನು ವಿಸ್ತರಿಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಳನ್ನು ಜೂನ್ ತಿಂಗಳಿಗೆ ನಿಗದಿಪಡಿಸಲು ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *