ಪಿಎಸ್ಐ ಪರೀಕ್ಷಾ ಅಕ್ರಮ : ಬ್ಲೂಟೂತ್ ಡಿವೈಸ್ ಬಳಸಲು ತರಬೇತಿ! ಕೆಮ್ಮಿದರೆ ಉತ್ತರ !!?

ಬೆಂಗಳೂರು : ಪಿಎಸ್ಐ ನೇಮಕಾತಿ ಅಕ್ರಮದ ಇನ್ನಷ್ಟು ಒಳಸುಳಿ ಹೊರಬಿದ್ದಿದೆ. ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಈ ಪ್ರಕರಣ ಮೂರು ಹಂತಗಳಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಖಚಿತಪಡಿಸಿದೆ.

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಮೂರು ಹಂತಗಳಲ್ಲಿ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೊದಲನೆಯದಾಗಿ ಒಎಂಆರ್‌ ಶೀಟ್‌ನಲ್ಲಿ ಟಿಕ್‌ ಹಾಕುವುದು, ಎರಡನೆಯದ್ದು ಬ್ಲೂಟೂತ್‌ ಮೂಲಕ ಉತ್ತರಿಸಿರುವುದು ಹಾಗೂ ಪರೀಕ್ಷಾ ನಿರ್ವಹಣ ಘಟಕದಲ್ಲಿ ಆಯ್ಕೆ ಪಟ್ಟಿಯಲ್ಲಿ ಬರುವಂತೆ ಮಾಡುವುದು.

ಅಭ್ಯರ್ಥಿಗಳು ತಮಗೆ ಗೊತ್ತಿದ್ದ ಪ್ರಶ್ನೆಗಳಿಗೆ ಮಾತ್ರ ಟಿಕ್‌ ಮಾಡುತ್ತಿದ್ದರು. ಎಲ್ಲ ಅಭ್ಯರ್ಥಿಗಳು ಒಎಂಆರ್‌ ಶೀಟ್‌ ಕೊಟ್ಟು ಹೋದ ಅನಂತರ ಹಣ ಕೊಟ್ಟ ನಿರ್ದಿಷ್ಟ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳಲ್ಲಿ ಸರಿ ಉತ್ತರಗಳನ್ನು ಪರೀಕ್ಷಾ ಮೇಲ್ವಿಚಾರಕರೇ ಆಯ್ಕೆ ಮಾಡುತ್ತಿದ್ದರು. ಈ ರೀತಿ ಸರಿಯಾದ ಉತ್ತರ ಬರೆಯುವುದಕ್ಕಾಗಿ ಅಲ್ಲೂ ವ್ಯವಸ್ಥಿತ ಅಕ್ರಮ ನಡೆಸಿದ್ದು, ಪರೀಕ್ಷೆ ಆರಂಭಕ್ಕೆ 15 ನಿಮಿಷ ಮೊದಲೇ ಉತ್ತರದ ಚೀಟಿ ಪರೀಕ್ಷಾ ಮೇಲ್ವಿಚಾರಕರ ಕೈಸೇರುತ್ತಿತ್ತು. ಅದರ ಪ್ರಕಾರ ಒಎಂಆರ್‌ ಶೀಟ್‌ನಲ್ಲಿ ಉತ್ತರಗಳನ್ನು ಮೇಲ್ವಿಚಾರಕರೇ ಆಯ್ಕೆ ಮಾಡುತ್ತಿದ್ದರು. ಅಂದರೆ ಇಲ್ಲಿ ಪ್ರಶ್ನೆ ಪತ್ರಿಕೆ ಅರ್ಧ ಗಂಟೆ ಮುಂಚೆ ಒಡೆದು, ಅದರ ಪ್ರಶ್ನೆಗಳನ್ನು ನುರಿತರೊಬ್ಬರಿಗೆ ಕಳುಹಿಸಿ 15 ನಿಮಿಷದಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯುವ ತಂತ್ರಗಾರಿಕೆ ರೂಪಿಸಲಾಗುತ್ತಿತ್ತು. ಒಟ್ಟಾರೆ ಈ ಅಕ್ರಮದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಮೇಲ್ವಿಚಾರಕರು ಹಾಗೂ ಇತರರ ಸಹಾಯದಿಂದ ಅಚ್ಚುಕಟ್ಟಾಗಿ ನಡೆದಿತ್ತು ಎನ್ನಲಾಗಿದೆ.

ಪಿಎಸ್‌ಐ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಕೆ : ಅಕ್ರಮದ ಪ್ರಮುಖ ರೂವಾರಿ ಆರ್.ಡಿ ಪಾಟೀಲ್ ತಂಡ ಬ್ಲೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆಸುತ್ತಿದ್ದರು. ಅದಕ್ಕಾಗಿ ಅವರು ತರಬೇತಿಯನ್ನು ನೀಡಿದ್ದರು.

ಪರೀಕ್ಷಾ ಕೇಂದ್ರದ ಒಳಗೆ ಬ್ಲೂಟೂತ್‌ ಉಪಕರಣ ಒಯ್ಯುವುದು ಹೇಗೆ? ಅದನ್ನು ಎಲ್ಲಿ, ಹೇಗೆ ಇಟ್ಟುಕೊಳ್ಳಬೇಕು, ಅನುಮಾನ ಬಂದರೆ ಯಾವ ರೀತಿ ಶಬ್ದ ನೀಡಬೇಕು, ಉತ್ತರ ಸ್ಪಷ್ಟವಾಗಿ ಕೇಳಿಸುವಂತೆ ಹೊರಗಿನವರು ಹೇಳುವುದು ಹೇಗೆ?… ಹೀಗೆ ಎಲ್ಲ ರೀತಿಯ ತರಬೇತಿಯನ್ನೂ ಅಭ್ಯರ್ಥಿಗಳಿಗೆ ನೀಡಲಾಗಿತ್ತು!

ಹೌದು. ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮ ಆರೋಪದಡಿ ಸಿಕ್ಕಿಕೊಂಡ ಅಭ್ಯರ್ಥಿಗಳೇ ಈ ವಿಷಯ ಬಾಯಿ ಬಿಟ್ಟಿದ್ದಾರೆ. ಬ್ಲೂಟೂತ್‌ ಬಳಸುವ ಬಗ್ಗೆ ಮುಂಚಿತವಾಗಿಯೇ ರುದ್ರಗೌಡ ಡಿ. ಪಾಟೀಲ ತಂಡ ತರಬೇತಿ ಕೂಡ ನೀಡುತ್ತಿತ್ತು.

ಅಭ್ಯರ್ಥಿಗಳು ಒಳಉಡುಪಿನಲ್ಲಿ ಬ್ಲೂಟೂತ್‌ ಉಪಕರಣ ಇಟ್ಟುಕೊಂಡು ಹೋಗಿದ್ದರು. ಪರೀಕ್ಷೆ ಆರಂಭವಾದ ಮೇಲೆ ಒಮ್ಮೆ ಕೆಮ್ಮಿದರೆ ಅವರಿಗೆ ಉತ್ತರ ಕೇಳಿಸುತ್ತದೆ ಎಂದರ್ಥ. ಆಗ ಹೊರಗೆ ಮೊಬೈಲ್‌, ಪ್ರಶ್ನೆ ಪತ್ರಿಕೆ ಇಟ್ಟುಕೊಂಡು ಕುಳಿತಿರುತ್ತಿದ್ದ ವ್ಯಕ್ತಿ ಉತ್ತರ ಹೇಳಲು ಶುರು ಮಾಡಬೇಕು. ಮಧ್ಯದಲ್ಲಿ ಏನಾದರೂ ವ್ಯತ್ಯಾಸವಾದರೆ ಮತ್ತೆ ಕೆಮ್ಮಬೇಕು. ಆ ಶಬ್ದ ಕೇಳಲಿಸಿದ ತಕ್ಷಣ ಹೊರಗಿನ ವ್ಯಕ್ತಿ ಮತ್ತೆ ಸರಿಯಾಗಿ ಹೇಳಬೇಕು. ಪ್ರತಿಯೊಂದು ಪ್ರಶ್ನೆಯ ಸಂಖ್ಯೆಯನ್ನು ಮೂರು ಬಾರಿ, ಅದರ ಉತ್ತರವನ್ನೂ ಮೂರು ಬಾರಿ ಹೇಳುವುದನ್ನು ಚಾಚೂತಪ್ಪದಂತೆ ಪಾಲಿಸಬೇಕು ಎಂಬುದನ್ನು ತರಬೇತಿ ವೇಳೆ ಹೇಳಿಕೊಡಲಾಗಿತ್ತು.

ಪರೀಕ್ಷೆ ಮುಗಿದ ಬಳಿಕ ಉಪಕರಣಗಳನ್ನು ನಾಶ ಮಾಡಬೇಕು. ಪರೀಕ್ಷೆ ಅವಧಿಯಲ್ಲಿ ಅಭ್ಯರ್ಥಿಗಳ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿರಬೇಕು. ಬೇರೆ ಇಬ್ಬರು ವ್ಯಕ್ತಿಗಳ ಎರಡು ಮೊಬೈಲ್‌ಗಳನ್ನು ತಂದು ಕೊಡಬೇಕು ಎಂಬುದು ಕಡ್ಡಾಯವಾಗಿತ್ತು.

ಬ್ಲೂಟೂತ್‌ ಮೂಲಕ ಉತ್ತರ ರವಾನಿಸಲು ಎರಡು ಮೊಬೈಲ್‌ ಅನಿವಾರ್ಯವಾದ್ದರಿಂದ ಈ ಉಪಾಯ ಮಾಡಿದ್ದರು. ಒಂದು ವೇಳೆ ಸಿಕ್ಕಿಬಿದ್ದರೂ ಮೊಬೈಲ್‌ ತಮ್ಮದಲ್ಲ ಎಂದು ಹೇಳಿ ಜಾರಿಕೊಳ್ಳುವುದು ಇದರ ಹಿಂದಿನ ಉದ್ದೇಶ.

ಕೆಲಸ ಪಳಗಿಸಿದ್ದ ರುದ್ರಗೌಡ : ಈ ರೀತಿಯ ಅಕ್ರಮದಲ್ಲಿ ರುದ್ರಗೌಡ ಪಳಗಿದ ವ್ಯಕ್ತಿ ಎನ್ನುತ್ತವೆ ಮೂಲಗಳು. ಎಲ್ಲಾ ಯೋಜನೆಗಳನ್ನು ರೂಪಿಸಿ ತನ್ನದೇನು ತಪ್ಪಿಲ್ಲ ಎಂದು ಬಿಂಬಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದನಂತೆ.

ತರಬೇತಿ ನೀಡಿದ ಮೇಲೆ ರುದ್ರಗೌಡ ಡಿ. ಪಾಟೀಲ ಹೊರರಾಜ್ಯದತ್ತ ಪ್ರವಾಸಕ್ಕೆ ಹೋಗುತ್ತಿದ್ದರು. ಒಂದು ವೇಳೆ ಅಭ್ಯರ್ಥಿ ಸಿಕ್ಕಿಬಿದ್ದರೆ ಅದಕ್ಕೂ ತನಗೂ ಸಂಬಂಧವಿಲ್ಲ, ತಾನು ರಾಜ್ಯದಲ್ಲೇ ಇರಲಿಲ್ಲ ಎಂಬುದನ್ನು ದಾಖಲೆ ಸಮೇತ ಹೇಳಲು ಈ ಚಾಲಾಕಿತನ ಮಾಡಿದ್ದರು.

ಅಕ್ರಮದ ಬಗ್ಗೆ ಯಾರೊಂದಿಗೆ ಏನೇ ಮಾತನಾಡಿದರೂ ಸತ್ತ ವ್ಯಕ್ತಿಯ ಮೊಬೈಲ್‌ ಬಳಸಿಯೇ ಮಾತನಾಡುತ್ತಿದ್ದ ರುದ್ರಗೌಡ ಈ ಹಗರಣ ಬಯಲಿಗೆ ಬರುವುದಿಲ್ಲ ಎಂದು ಕೊಂಡಿದ್ದರಂತೆ. ‘ಕ್ರೈಮ್’ ಯಾವರೂಪದಲ್ಲಾದರೂ ಹೊರಗೆ ಬಂದು ಕೈಗೆ ಬೇಡಿ ಹಾಕುವುದು ಖಚಿತ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *