ಪಿಎಸ್ಐ ಪರೀಕ್ಷಾ ಅಕ್ರಮ : ಖಾಕಿಸ್ಟಾರ್‌ಗಳಿಂದಲೇ ನಡೆಯುತ್ತಿತ್ತು ಬ್ರೋಕರ್‌ಗಿರಿ

  • ಸಿಐಡಿ ತನಿಖೆಯಲ್ಲಿ ಬೆಚ್ಚಿ‌ಬೀಳಿಸುವ ಮಾಹಿತಿ
  • ಹಗರಣದಲ್ಲಿ ಡಿವೈಎಸ್ಪಿ, ಎಸಿಪಿ, ಸಿಪಿಐ ಭಾಗಿ
  • ಖಾಕಿಸ್ಟಾರ್‌ಗಳಿಂದಲೇ ಬ್ರೋಕರ್‌ಗಿರಿ!

ಬೆಂಗಳೂರು: ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳ ನೇಮಕಾತಿ ಅಕ್ರಮದ ವಹಿವಾಟು ನೇಮಕಾತಿ ವಿಭಾಗದ ಕಚೇರಿಯಲ್ಲೇ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಪರೀಕ್ಷೆಗೆ ಒಂದು ದಿನ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ ಜತೆಗೆ, ಡೀಲ್​ ಕುದುರಿದ ನಂತರ ಅಭ್ಯರ್ಥಿಗಳು ಬರೆದ ಒಎಂಆರ್​ ಶೀಟ್​ಗಳನ್ನು ಅಧಿಕಾರಿಗಳ ಕಚೇರಿಯಲ್ಲೇ ತಿದ್ದಿರುವುದಕ್ಕೆ ಸಿಐಡಿಗೆ ಪ್ರಾಥಮಿಕ ಸಾಕ್ಷಾಧಾರ ಸಿಕ್ಕಿದೆ.

ಹಗರಣ ಬೆಳಕಿಗೆ ಬಂದ ಕೂಡಲೇ ಎತ್ತಂಗಡಿಯಾದ ಪೊಲೀಸ್​ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್​ ಪೌಲ್​ ಸೇರಿ ಹಲವು ಅಧಿಕಾರಿಗಳ ವಿರುದ್ಧ ಅಕ್ರಮಕ್ಕೆ ಸಹಕಾರ ನೀಡಿರುವ ಆರೋಪ ಕೇಳಿಬಂದ ಬೆನ್ನಲ್ಲೇ, ಕಲಬುರಗಿ ವಿಭಾಗದ ಡಿವೈಎಸ್ಪಿ ಹಾಗೂ ಇನ್​ಸ್ಪೆಕ್ಟರ್​ ಒಬ್ಬರು ಬುಧವಾರ ಅಮಾನತುಗೊಂಡಿರುವುದು ಪ್ರಕರಣದಲ್ಲಿ ಅಧಿಕಾರಿಗಳ ಕಳ್ಳಾಟದ ಕುರಿತು ಮತ್ತಷ್ಟು ಬೆಳಕು ಚೆಲ್ಲಿದೆ.

ಖಾಕಿಸ್ಟಾರ್‌ಗಳಿಂದಲೇ ನಡೆಯುತ್ತಿತ್ತು ಬ್ರೋಕರ್‌ಗಿರಿ! : ಪಿಎಸ್ಐ ಅಕ್ರಮ ನೇಮಕ ಪ್ರಕರಣದಲ್ಲಿ ಡಿವೈಎಸ್‌ಪಿ, ಎಸಿಪಿ, ಸಿಪಿಐ ದರ್ಜೆಯ ಕೆಲವು ಅಧಿಕಾರಿಗಳೇ ಬ್ರೋಕರ್‌ ಆಗಿ ಕಾರ್ಯನಿರ್ವಹಿಸಿರುವ ಸಂಗತಿಯನ್ನು ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್‌ ಸಿಐಡಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಕೆಲವು ಪೊಲೀಸ್‌ ಅಧಿಕಾರಿಗಳೇ ನನ್ನ ಬಳಿಗೆ ಪಿಎಸ್‌ಐ ಗಿರಾಕಿಗಳನ್ನು ಕಳುಹಿಸಿ, ಇವರಿಗೆ ಎಲ್ಲ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಆ ಗಿರಾಕಿಗಳು ನೇರವಾಗಿ ನನಗೆ ಹಣ ನೀಡಿರಲಿಲ್ಲ. ಬದಲು, ಪೊಲೀಸ್‌ ಅಧಿಕಾರಿಗಳ ಮೂಲಕವೇ ಸಂದಾಯ ಮಾಡಿದ್ದರು,” ಎಂಬ ಸಂಗತಿಯನ್ನು ಆರೋಪಿ ರುದ್ರಗೌಡ ತನಿಖೆ ವೇಳೆ ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಏನೆಲ್ಲ ಸಾಕ್ಷ್ಯ ಲಭ್ಯ?: ಬೆಂಗಳೂರಿನ ಸಿಐಡಿ ಕಚೇರಿ ಆವರಣದಲ್ಲಿರುವ ಪೊಲೀಸ್​ ನೇಮಕಾತಿ ವಿಭಾಗದಲ್ಲೇ ಅಕ್ರಮ ನಡೆದಿರುವುದಕ್ಕೆ ಕೆಲ ಸಾಕ್ಷ್ಯಗಳು ಲಭಿಸಿವೆ. 12 ಅಭ್ಯರ್ಥಿಗಳ ತೀವ್ರ ವಿಚಾರಣೆ ಸಂದರ್ಭದಲ್ಲಿ ನೇಮಕಾತಿ ವಿಭಾಗದಲ್ಲಿರುವ ಕೆಲ ಹಿರಿಯ ಪೊಲೀಸ್​ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಪುತ್ರರ ಹೆಸರನ್ನು ಹೇಳಿದ್ದಾರೆ. ಅಭ್ಯರ್ಥಿಗಳ ಹೇಳಿಕೆ ಆಧರಿಸಿ ತನಿಖೆ ಮುಂದುವರಿದಿದೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ ಎಲ್ಲ ಅಭ್ಯರ್ಥಿಗಳ ಒಎಂಆರ್​ ಶೀಟ್​ ಕಾರ್ಬನ್​ ಪ್ರತಿ ಹಾಗೂ ಮೂಲ ಉತ್ತರ ಪತ್ರಿಕೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಭ್ಯರ್ಥಿಗಳಿಂದ ತೆಗೆದುಕೊಂಡಿರುವ ಒಎಂಆರ್​ ಶೀಟ್​ ಕಾರ್ಬನ್​ ಪ್ರತಿಯಲ್ಲಿರುವ ಪ್ರಶ್ನೆಗಳ ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಮೂಲ ಉತ್ತರ ಪತ್ರಿಕೆಯಲ್ಲಿ ಉತ್ತರ ತಿದ್ದಿರುವುದು ಬೆಳಕಿಗೆ ಬಂದಿದೆ.

ಅಧಿಕಾರಿಗಳು ಭಾಗಿ: ಅರ್ಜಿ ಆಹ್ವಾನಿಸಿದ ಬಳಿಕ ಏಜೆಂಟ್​ಗಳು ಡೀಲ್​ ಕುದುರಿಸಿದ್ದಾರೆ. ನಂತರ ರಾಜಕೀಯ ಮುಖಂಡರು , ಅಧಿಕಾರಿಗಳ ಮುಖೇನ ಅಕ್ರಮ ಎಸಗಿದ್ದಾರೆ. ಹಣ ಕೊಟ್ಟವರ ಹೆಸರು, ನೋಂದಣಿ ಸಂಖ್ಯೆ, ಮೊಬೈಲ್​ ನಂಬರ್​ ಪಡೆದ ಏಜೆಂಟ್​ಗಳು ನೇಮಕಾತಿ ವಿಭಾಗದ ಪ್ರಧಾನ ಕಚೇರಿಗೆ ಪಟ್ಟಿ ಕಳುಹಿಸಿದ್ದಾರೆ. ಬೇಕಾದ ಪರೀಾ ಕೇಂದ್ರಕ್ಕೆ ಅಭ್ಯರ್ಥಿ ನೋಂದಣಿ ಸಂಖ್ಯೆ ಬರುವಂತೆ ಮಾಡಿದ್ದಾರೆ. ಪರೀಕ್ಷೆಯ ಹಿಂದಿನ ದಿನವೇ ಅಧಿಕಾರಿಗಳೇ ಪ್ರಶ್ನೆ ಪತ್ರಿಕೆಯನ್ನು ಮೊಬೈಲ್​ನಲ್ಲಿ ಸೆರೆಹಿಡಿದು ಏಜೆಂಟ್​ಗಳಿಗೆ ಕಳುಹಿಸಿದ್ದಾರೆ. ಅದಕ್ಕೆ ಸರಿ ಉತ್ತರ ಕೊಟ್ಟು ಮಾರನೇ ದಿನ ನಿಗದಿತ ಪರೀಕ್ಷಾ ಕೊಠಡಿಯಲ್ಲಿ ಅಭ್ಯರ್ಥಿಗಳಿಗೆ ಬ್ಲೂಟೂತ್​ನಲ್ಲಿ ಉತ್ತರ ಬರೆಸಿರುವುದು ಗೊತ್ತಾಗಿದೆ.

ಒಎಂಆರ್ ಶೀಟ್ ತಿದ್ದಿದ್ದು ಪ್ರಧಾನ ಕಚೇರಿಯಲ್ಲಿ​: ಮೊದಲೇ ಸೂಚಿಸಿರುವಂತೆ ಅಭ್ಯರ್ಥಿಗಳು ಒಎಂಆರ್​ ಶೀಟ್​ ಖಾಲಿ ಬಿಟ್ಟು ಬಂದಿದ್ದಾರೆ. ಕೇಂದ್ರದ ಮೇಲ್ವಿಚಾರಕರು ಶೀಟ್​ ಪ್ಯಾಕ್​ ಮಾಡಿ ಸೀಲ್​ ಮಾಡಿ ಪ್ರಧಾನ ಕಚೇರಿಗೆ ರವಾನಿಸಬೇಕು. ಆದರೆ, ಕೆಲವು ಸೆಂಟರ್​ಗಳಲ್ಲಿ ಮೇಲ್ವಿಚಾರಕರೇ ಅಭ್ಯರ್ಥಿಯ ಒಎಂಆರ್​ ಶೀಟ್​ ತೆಗೆದು ಸರಿ ಉತ್ತರ ಬರೆದು ನಂತರ ಕಳುಹಿಸಿದ್ದಾರೆ. ಕೆಲ ಕೇಂದ್ರಗಳಲ್ಲಿ ಖಾಲಿ ಉತ್ತರ ಪತ್ರಿಕೆ ನೇಮಕಾತಿ ವಿಭಾಗಕ್ಕೆ ಬಂದ ಮೇಲೆ ನಿಗದಿತ ಅಭ್ಯರ್ಥಿಗಳ ಒಎಂಆರ್​ ಶೀಟ್​ ಬದಲಾವಣೆ ಮತ್ತು ತಿದ್ದುಪಡಿ ಮಾಡಿದ್ದಾರೆ. ಪ್ರತಿ ಅಭ್ಯರ್ಥಿಗಳ ಕಾರ್ಬನ್​ ಶೀಟ್​, ಒಎಂಆರ್​ ಶೀಟ್​ ಪಡೆದು ತಾಳೆ ಮಾಡಿದಾಗ ಸಾಕಷ್ಟು ವ್ಯತ್ಯಾಸ ಕಂಡು ಬಂದಿವೆ. ಬೇರೆ ಪೆನ್​ ಬಳಸಿರುವುದು, ಬರವಣಿಗೆ ಬದಲಾಗಿರುವುದು, ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಿರುವುದರಿಂದ ಸಿಕ್ಕಿಬಿದ್ದಿದ್ದಾರೆ.

ಹಲವು ವರ್ಷಗಳಿಂದ ಠಿಕಾಣಿ: ನೇಮಕಾತಿ ವಿಭಾಗದಲ್ಲಿ 50 & 60 ಸಿಬ್ಬಂದಿ ಇದ್ದಾರೆ. ಈ ಹಿಂದೆ ಕಾನ್​ಸ್ಟೇಬಲ್​ ಹುದ್ದೆ ನೇಮಕ ಹಗರಣ ಬೆಳಕಿಗೆ ಬಂದಾಗ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದ ಎಸ್​ಡಿಎ ಮತ್ತು ಎ​ಡಿಎ ಸಿಬ್ಬಂದಿ ಎತ್ತಂಗಡಿ ಮಾಡಲಾಗಿತ್ತು. ಆದರೆ, ಪೊಲೀಸ್​ ಅಧಿಕಾರಿ ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಿರಲಿಲ್ಲ. ಕೆಲ ಅಧಿಕಾರಿಗಳು ರಾಜಕೀಯ ಪ್ರಭಾವ ಬೀರಿ ಅಲ್ಲೇ ಉಳಿದುಕೊಂಡಿದ್ದರು. 12 ವರ್ಷಗಳಿಂದ ನೇಮಕಾತಿ ವಿಭಾಗ ದಲ್ಲೇ ಸೇವೆ ಸಲ್ಲಿಸುತ್ತಿದ್ದ ಡಿವೈಎಸ್​ಪಿ ಶಾಂತಕುಮಾರ್​ ಎಲ್ಲ ರಾಜಕಾರಣಿಗಳಿಗೂ ಆತ್ಮೀಯರಾಗಿದ್ದರು ಎಂದು ಹೇಳಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *