ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣೆ ಸಮಿತಿ ರದ್ದುಪಡಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

  • ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ
  • ರೋಹಿತ್ ಚಕ್ರತೀರ್ಥ ಸಮಿತಿಯ ಪರಿಷ್ಕ್ರತ ಪಠ್ಯ ಜಾರಿ ಮಾಡದೆ ಹಿಂದಿನ ಪಠ್ಯಗಳನ್ನೇ ಮುಂದುವರೆಸುವಂತೆ ಒತ್ತಾಯ

ಬೆಂಗಳೂರು:  ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣೆ ಸಮಿತಿ ರದ್ದುಪಡೆಸುವಂತೆ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಎಡ ಮತ್ತು ಪ್ರಗತಿಪರ ವಿದ್ಯಾರ್ಥಿ ಸಂಘಟೆನೆಗಳು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಪಠ್ಯಪುಸ್ತಕಗಳನ್ನು ತರಾತುರಿಯಲ್ಲಿ ಮರುಪರಿಷ್ಕರಣೆ ಮಾಡಿದ್ದು, ಈ ಹಿಂದೆ ಶಾಲಾ ಪಠ್ಯಪುಸ್ತಕಗಳಲ್ಲಿದ್ದ ಕನ್ನಡದ ಹಲವು ಪ್ರಮುಖ ಲೇಖಕರು ಮತ್ತು ಸಾಹಿತಿಗಳ ರಚನೆಗಳನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮರುಪರಿಷ್ಕರಣೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಪಠ್ಯಪುಸ್ತಕಗಳಲ್ಲಿ ಜಾತೀಯತೆ, ಮತೀಯವಾದ ಮತ್ತು ಸಂವಿಧಾನ ವಿರೋಧಿ ವಿಚಾರಗಳನ್ನು ತುರುಕಲಾಗುತ್ತಿದೆ. ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣ ಸಮಿತಿಯು ಹಲವಾರು ವಿಷಯಗಳ ತಜ್ಞರು ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡಿದ್ದ ಉಪಸಮಿತಿಗಳ ಅಧ್ಯಯನ ಮತ್ತು ಶಿಫ಼ಾರಸ್ಸುಗಳ ಆಧಾರದಲ್ಲಿ ವೈಜ್ಞಾನಿಕವಾಗಿ ಪರಿಷ್ಕರಣೆ ಮಾಡಿದ್ದ ಶಾಲಾ ಪಠ್ಯಪುಸ್ತಕಗಳನ್ನು ಇದುವರೆಗೂ ರಾಜ್ಯದ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದಾರೆ. ಈಗ ಏಕಾಏಕಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಸ್ವಲ್ಪವೂ ಅನುಭವವಿಲ್ಲದ, ಯಾವುದೇ ವಿಷಯದಲ್ಲಿಯೂ ತಜ್ಞನಲ್ಲದ ನಾಡದ್ರೋಹಿ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಬಹುತೇಕ ಒಂದೇ ಜಾತಿಗೆ ಸೇರಿದ ಪರಿಷ್ಕರಣೆ ಸಮಿತಿ ಮತ್ತು ಸಿದ್ಧಾಂತದ, 9 ಜನರ ಪಠ್ಯಪುಸ್ತಕಗಳ ಮರು ಪರಿಷ್ಕರಣೆ ಶಿಫಾರಸ್ಸು  ಸಮಿತಿಯನ್ನು ಸಾಮಾಜಿಕ ನ್ಯಾಯವನ್ನು ಕಡೆಗಣಿಸಿ ಪಠ್ಯ ರಚಿಸಲಾಗಿದೆ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ್‌ ಕಡಗದ್‌ ಆರೋಪಿಸಿದರು.

ಸಂವಿಧಾನದ ಆಶಯಗಳಾದ ಮತಧರ್ಮ ನಿರಪೇಕ್ಷತೆ, ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆಯಂತಹ ಸಂವಿಧಾನಾತ್ಮಕ ಮೌಲ್ಯಗಳನ್ನು ಒಳಗೊಂಡ ಪಾಠಗಳನ್ನು ಕೈಬಿಟ್ಟು ಜಾತೀಯತೆ, ಮತೀಯವಾದ, ಲಿಂಗ ತಾರತಮ್ಯ, ಮೂಢನಂಬಿಕೆ ಮತ್ತು ಕಂದಾಚಾರವನ್ನು ಪ್ರೇರೇಪಿಸುವ ಮತ್ತು ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಯ ಆಶಯವನ್ನೇ ಅಪಮಾನ ಮಾಡುವ ವಿಚಾರಗಳಿರುವ ಪಾಠಗಳನ್ನು ಸೇರಿಸಲಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದ ವಿರುದ್ಧವಾಗಿ ಬ್ರಿಟಿಷರ ಪರವಾಗಿದ್ದ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಸಂಭ್ರಮಿಸಿದ ಆರ್‌ಎಸ್‌ಎಸ್‌ನವರು ಅದರ ಸ್ಥಾಪಕ ಹೆಡ್ಗೇವಾರ್ ಭಾಷಣವನ್ನು ಸೇರಿಸುವ ಮುಖಾಂತರ ದೇಶದ ಸ್ವಾತಂತ್ರ್ಯ ಚಳುವಳಿ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಅವಮಾನ ಮಾಡಲಾಗಿದೆ ಎಂದು ಹಿರಿಯ ಚಿಂತಕ ಜಿ. ರಾಮಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ಭಗತ್ ಸಿಂಗ್, ಬಸವಣ್ಣ, ನಾರಾಯಣ ಗುರು, ಪೆರಿಯಾರರ ವಿಚಾರಗಳು ಮತ್ತು ಪಿ. ಲಂಕೇಶ,ಸಾರ ಅಬೂಬಕ್ಕರ್ ಇತರರ ಲೆಖನವನ್ನು ಕೈಬಿಡಲಾಗಿದೆ. ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಸಂವಿಧಾನ ವಿರೋಧಿಯಾದ ಪ್ರತಿಗಾಮಿ ಮತ್ತು ಮನುವಾದಿ ವಿಚಾರಗಳನ್ನು ಸೇರಿಸಲಾಗಿದೆ. ಇತಿಹಾಸದ ಹೆಸರಿನಲ್ಲಿ ಪುರಾಣವನ್ನು ಸೇರಿಸುವ ಪ್ರಯತ್ನ ನಡೆಯುತ್ತಿದೆ. ಸುಳ್ಳು ಮತ್ತು ತಿರುಚಿದ ಮಾಹಿತಿಗಳನ್ನು ಒಳಗೊಂಡಿರುವ ದ್ವೇಷಪೂರಿತ ಕೋಮುವಾದಿ ಭಾಷಣಗಳನ್ನು ಮಾಡುವ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆಯ ಲೇಖನವನ್ನು ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ಪಠ್ಯಪುಸ್ತಕಗಳ ಪಾಠಗಳಲ್ಲಿ ಬಹುತೇಕ ಬ್ರಾಹ್ಮಣರಿಗೇ ಆಧ್ಯತೆ ನೀಡಲಾಗಿದೆ. ಮಕ್ಕಳಲ್ಲಿ ಸಂವಿಧಾನದ ಮೌಲ್ಯಗಳಾದ ಜಾತ್ಯಾತೀತತೆ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಬದಲಾಗಿ ಜಾತಿವಾದಿ ಮತ್ತು ಕಂದಾಚಾರದ ವಿಚಾರಗಳನ್ನು ತುಂಬುವ ಮುಖಾಂತರ ಮಕ್ಕಳಿಗೆ ಮತೀಯವಾದದ ವಿಷವನ್ನು ತುಂಬುವ ಪ್ರಯತ್ನ ಎದ್ದು ಕಾಣುತ್ತಿದೆ. ಇದು ಸಂವಿಧಾನ ವಿರೋಧಿಯಾದ ಕೃತ್ಯವಾಗಿದೆ. ಹಾಗೂ ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಲಾಗಿದ್ದು ಪಠ್ಯಪುಸ್ತಕಗಳ ಮರುಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿರುವ ಸ್ವತಃ ರೋಹಿತ್ ಚಕ್ರತೀರ್ಥ ಎಂಬ ಬ್ರಾಹ್ಮಣ್ಯವಾದಿ ವ್ಯಕ್ತಿಯು ಕುವೆಂಪು ಅವರ ಬಗ್ಗೆ ಶೂದ್ರ ಎನ್ನುವ ಕಾರಣಕ್ಕೆ ಅವರ ಪ್ರತಿಭೆಯನ್ನು ಅಪಹಾಸ್ಯ ಮಾಡಿ ಹಾಗೂ ಕುವೆಂಪು ಅವರ ರಚನೆಯ ನಾಡಗೀತೆಯನ್ನು ಅತೀ ಕೆಟ್ಟ ಶಬ್ಧಗಳನ್ನು ಬಳಸಿ ತಿರುಚಿ ಬರೆದಿರುವ ಬರಹಗಳನ್ನು ಪ್ರಕಟಿಸಿ ಅವಮಾನಿಸಲಾಗಿದೆ. ಇದು ನಾಡಗೀತೆಗೆ ಅಷ್ಟೇ ಅಲ್ಲದೆ ಇಡೀ ಕನ್ನಡನಾಡಿಗೆ ಮಾಡಿದ ಅಪಚಾರವಾಗಿದೆ ಎಂದು ಅವರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಮಾಜಿ ರಾಷ್ಟ್ರ ನಾಯಕ ವಿಜೂ ಕೃಷ್ಣನ್‌, ಮಾಜಿ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಗೌರಮ್ಮ, ಎಐಎಸ್‌ಎಫ್‌ನ ರಮೇಶ್‌, ಎನ್‌ಎಸ್‌ಯುಐನ ಲಕ್ಷಯ್ಯ,  ಐಸಾಸ ಕಿಶನ್‌, ಕೆವಿಎಸ್‌ ನ ಮನೋಜ್‌, ವಿಜೆಡಿಎಸ್‌ನ ಹರಿಪ್ರಸಾದ್‌ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಇದ್ದರು.

ಪ್ರತಿಭಟನೆಯ ಬೇಡಿಕೆಗಳನ್ನು ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಅಸುದೇವರೆಡ್ಡಿ ಬಿಡುಗಡೆ ಮಾಡಿದರು. ಆ ಬೇಡಿಕೆಗಳು ಈ ಕೆಳಗಿನಂತಿವೆ.

1. ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣೆಯ ಕೂಡಲೇ ನಿಲ್ಲಿಸಬೇಕು.

2.ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣಾ ಸಮಿತಿಯನ್ನು ಕೂಡಲೇ ರದ್ದುಪಡಿಸಬೇಕು.

3. ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರೂಪಿಸಿರುವ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕು ಹಾಗೂ ಕೂಡಲೇ ಶಾಲೆಗಳಿಗೆ ಹಿಂದಿನ ಪಠ್ಯಪುಸ್ತಕಗಳನ್ನು ವಿತರಣೆ ಮಾಡಬೇಕು.

4. ರಾಷ್ಟ್ರಕವಿ ಕುವೆಂಪು ಅವರನ್ನು ಹಾಗೂ ಕರ್ನಾಟಕದ ನಾಡಗೀತೆಯನ್ನು ಅಪಮಾನಿಸಿರುವ ನಾಡದ್ರೋಹಿ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯ ವಿರುದ್ಧ ಕಾನೂನಾತ್ಮಕ ಪ್ರಕರಣ ದಾಖಲಿಸಬೇಕು ಹಾಗೂ ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು.

5. ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಶಾಲೆ ಆರಂಭವಾಗಿ ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಠ್ಯಪುಸ್ತಕ, ಸಮವಸ್ತ್ರ ಪೂರೈಸಲು ವಿಫಲವಾಗಿರುವ, ಪಠ್ಯಪುಸ್ತಕಗಳ ಮರುಪರಿಷ್ಕರಣೆಯ ವಿವಾದವನ್ನು ಸಂವಿಧಾನಾತ್ಮಕವಾಗಿ ನಿಭಾಯಿಸದ, ಅತ್ಯಂತ ಬೇಜವಾಬ್ದಾರಿಯುತ ವರ್ತನೆಯ ಮತ್ತು ಮಕ್ಕಳ ಶಿಕ್ಷಣದ ಜೊತೆಗೆ ಚೆಲ್ಲಾಟವಾಡುತ್ತಾ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗಿರುವ ರಾಜ್ಯದ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ವಜಾಮಾಡಬೇಕು.

6. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ನಾಡಗೀತೆ, ನಾಡಧ್ವಜ, ರಾಷ್ಟ್ರಕವಿ ಕುವೆಂಪು, ಹಾಗೂ ಸಾಹಿತಿಗಳಾದ ದೇವನೂರು ಮಹಾದೇವ, ಪ್ರೊ. ಬರಗೂರು ರಾಮಚಂದ್ರಪ್ಪ ಮುಂತಾದ ಸಾಹಿತಿಗಳು ಮತ್ತು ಪಠ್ಯಪುಸ್ತಕಗಳ ಮರುಪರಿಷ್ಕರಣೆಯನ್ನು ವಿರೋಧಿಸುವವರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಅಸಭ್ಯ ಮತ್ತು ಅಶ್ಲೀಲವಾದ ರೀತಿಯಲ್ಲಿ ಸಂಘಟಿತವಾದ ದಾಳಿ ನಡೆಸುತ್ತಿರುವ ಸಂಘ ಪರಿವಾರ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರ ವಿರುದ್ಧ ಕಾನೂನು ಪ್ರಕರಣ ದಾಖಲಿಸಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು.

7. ಪಠ್ಯ ಪುಸ್ತಕ ಕೇಸರೀಕರಣ ಹಾಗೂ ಶಿಕ್ಷಣದ ಕೋಮುವಾದೀಕರಣ ನೀತಿಗಳನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು ಎಂಬ ಆಗ್ರಹಗಳನ್ನು ಪ್ರತಿಭಟನಾಕಾರರು ಸರ್ಕಾರದ ಮುಂದೆ ಇಟ್ಟಿದ್ಧಾರೆ.

ಈ ಮೇಲಿನ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಶಾಲಾ ,ಕಾಲೇಜು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಬೀದಿಗಿಳಿಯಬೇಕಾಗುತ್ತದೆ ಎಂದು ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಸಿವೆ.

Donate Janashakthi Media

Leave a Reply

Your email address will not be published. Required fields are marked *