ಪಕ್ಷ ಸಂಘಟನೆಗೆ ಆರ್​ಎಸ್​ಎಸ್ ಮಾದರಿ ಮೊರೆ ಹೋದ ಕಾಂಗ್ರೆಸ್

  • ಆರ್​ಎಸ್​ಎಸ್ ಮಾದರಿಯಲ್ಲಿ ಕಾರ್ಯಕರ್ತರಿಗೆ  ತರಬೇತಿ ನೀಡಲು ಕಾಂಗ್ರೆಸ್ ಸಿದ್ದತೆ

ಬೆಳಗಾವಿಬಿಜೆಪಿಯ ಅಧಿಕಾರದ ಹಿಂದಿನ ಶಕ್ತಿ ಅಂದರೆ ಅದು ಆರ್ಎಸ್ಎಸ್ಎಂಬುದು ಜಗಜ್ಜಾಹೀರಾಗಿದೆ.‌ ಈಗ ಅದೇ ಮಾದರಿಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೂಡ ತಮ್ಮ ಕಾರ್ಯಕರ್ತರಿಗೆ ತರಬೇತಿ ನೀಡಲು ಮುಂದಾಗಿದೆ. ಸದ್ಯಕ್ಕೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಸೃಷ್ಟಿಸಿರುವ ಹವಾ ಅಂತಿಂಥದ್ದಲ್ಲ. ಬಿಜೆಪಿ ಮಾಡಿರುವ ಪಕ್ಷ ಸಂಘಟನೆ, ಚಾಕ್ಯಚಕ್ಯತೆ, ಅದು ನಡೆದು ಹೋಗುತ್ತಿರುವ ದಾರಿಯನ್ನು ನೋಡಿ ವಿರೋಧ ಪಕ್ಷಗಳೂ ಸಹ ಅದರ ಹಾದಿಯಲ್ಲೆ ತಮ್ಮ ಪಕ್ಷ ಸಂಘಟಿಸಲು ಮಾರ್ಗ ಹುಡುಕುತ್ತಿವೆ.

ಸತೀಶ್‌ ಜಾರಕಿಹೊಳಿ

ರಾಷ್ಟಮಟ್ಟದ ತರಬೇತಿ ಕೇಂದ್ರವನ್ನು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ತೆರೆಯಲಾಗಿದ್ದು, ಇಲ್ಲಿಂದಲೇ ರಾಷ್ಟ್ರವ್ಯಾಪಿ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ನೀಡಲು ಸಿದ್ದತೆ ನಡೆಸಿದೆ.  ಘಟಪ್ರಭಾ ಪಟ್ಟಣದ ಹೊರವಲಯದಲ್ಲಿ ಎಸ್ ಎಸ್ ಹರ್ಡಿಕರ್ ತರಬೇತಿ ಕಟ್ಟಡದಲ್ಲಿ ಅಕ್ಟೋಬರ್ 2ರಿಂದ ಹೊಸದೊಂದು ಕೆಲಸ ಶುರು ಮಾಡಲು ಕಾಂಗ್ರೆಸ್ ಕೈಹಾಕಿದೆ. ಅದು ಏನೆಂದರೆ ಆರ್​ಎಸ್​ಎಸ್​ ಮಾದರಿಯಲ್ಲೇ ತನ್ನ ಕಾರ್ಯಕರ್ತರಿಗೆ ತರಬೇತಿ ನೀಡಿ, ಪಕ್ಷ ಸಂಘಟನೆಯಲ್ಲಿ ತೊಡಗಿಸೋದು. ಇನ್ನು ಈ ಜವಾಬ್ದಾರಿಯನ್ನ ಕೆಪಿಸಿಸಿ ಕಾರ್ಯಾಧ್ಯಕ್ಷ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ವಹಿಸಿಕೊಂಡಿದ್ದಾರೆ.

ಕಾಂಗ್ರೆಸ್​ ಪಕ್ಷದಲ್ಲಿ ರಾಜ್ಯದ ಮೊದಲ ತರಬೇತಿ ಕೇಂದ್ರ ಸ್ಥಾಪನೆಯಾಗಿದ್ದು, ಸತೀಶ್ ಜಾರಕಿಹೊಳಿ ಸಂಪೂರ್ಣ ಹೊಣೆ ಹೊತ್ತಿದ್ದಾರೆ. ಸ್ವತಃ ಸತೀಶ್ ಜಾರಕಿಹೊಳಿಯವರೇ ಆರ್​ಎಸ್​ಎಸ್​ ಒಂದು ಶಿಸ್ತುಬದ್ಧ ಸಂಘಟನೆ. ಅದರ ಮಾದರಿಯಲ್ಲೇ ನಾವು ಸೇವಾದಳದ ಮೂಲಕ ನಮ್ಮ ಕಾರ್ಯಕರ್ತರಿಗೆ ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನಗಳ ಬಗ್ಗೆ ಹೇಳಲಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ, ಇದೇ  ಗಾಂಧಿ ಜಯಂತಿಯಂದು ಘಟಪ್ರಭಾ ಬಳಿ ಸ್ಥಾಪಿಸಲಾಗಿರುವ ತರಬೇತಿ ಕೇಂದ್ರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಅದಾದ ಬಳಿಕ ಕೈ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳು ನಡೆಯಲಿವೆ.

ಒಟ್ಟಿನಲ್ಲಿ ಪಕ್ಷ ಸಂಘಟನೆಯ ವಿಚಾರವಾಗಿ ಎರಡು ಪಕ್ಷಗಳು ತಲೆ ಕೆಡಿಸಿಕೊಂಡು ಅಧಿಕಾರದ ಗದ್ದುಗೆ ಹಿಡಿಯಲು ಇನ್ನಿಲ್ಲದ ಮಾದರಿಯ ಕಸರತ್ತುಗಳನ್ನು ಮಾಡುತ್ತಿರುವುದು ತಪ್ಪೇನಲ್ಲ. ಆದರೆ ಸಂಘಟನೆ ಮಾಡಿ ಅಧಿಕಾರಕ್ಕೆ ಬಂದ ಮೇಲೆ ಜನರ ಆಶೋತ್ತರಗಳಿಗೆ ಕಿವಿಗೊಟ್ಟು ಅವುಗಳನ್ನು ಈಡೇರಿಸುವಂತಾಗಲಿ ಎನ್ನವುದು ಜನರ ಆಶಯ.

 

 

 

Donate Janashakthi Media

Leave a Reply

Your email address will not be published. Required fields are marked *