ನೌಕರರ ಒಕ್ಕೂಟ ಮಂಜುಳಾ ಹವಾಲ್ದಾರ್ ಇನ್ನಿಲ್ಲ

ಬಳ್ಳಾರಿ: ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಮಂಜುಳಾ ರವರು ನಿಧನರಾಗಿದ್ದಾರೆ.

ಮೇ 5ರಂದು ಮಂಜುಳಾ ರವರಿಗೆ ಶ್ವಾಸಕೋಶದ ಸೋಂಕಿನ ಕಾರಣ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಪಾಸಿಟಿವ್‌ ಆಗಿ ಆರೋಗ್ಯ ತುಂಬಾ ಹದಗೆಟ್ಟಿತು. ಸಕಾಲದಲ್ಲಿ ಹಾಸಿಗೆ ಮತ್ತು ಆಕ್ಸಿಜನ್ ಸಿಗದೇ ಹರಪನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ.

ಇದನ್ನು ಓದಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೈಚಾರಿಕ ಸಾಹಿತಿ ಡಾ. ಭಾಸ್ಕರ್ ಮಯ್ಯ ನಿಧನ

ಹಗರಿಬೊಮ್ಮನಹಳ್ಳಿಯ ತಂಬ್ರಹಳ್ಳಿಯವರಾದ ಅವರು ವಿದ್ಯಾರ್ಥಿ ಜೀವನದಿಂದಲೂ ಹಲವು ಹೋರಾಟಗಳಲ್ಲಿ ಭಾಗಿಯಾಗುತ್ತಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಯೊಂದಿಗೆ ಜನವಾದಿ ಮಹಿಳಾ ಸಂಘಟನೆಯಲ್ಲಿ ಜನಪರ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದಲ್ಲಿ ದಶಕಕ್ಕೂ ಹೆಚ್ಚು ಕಾಲ ಹಗರಿಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಸಂಘಟನೆ ಕಟ್ಟಲು ಶ್ರಮಿಸಿದ್ದರು.

ರಾಜ್ಯ ಮಹಿಳಾ ಉಪಸಮಿತಿ ಸದಸ್ಯರಾಗಿದ್ದ ಅವರು ಇತ್ತೀಚೆಗೆ ದಾವಣಗೆರೆ ಕೊಂಡಜ್ಜಿಯಲ್ಲಿ ನಡೆದ ರಾಜ್ಯ ಸಮ್ಮೇಳನದಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಮಂಜುಳಾ ರವರ ಮೊದಲ ಮಗಳು ಅನುಪಮಾ ಹಾಗೂ ಪೂರ್ಣಿಮಾ ವ್ಯಾಸಂಗ ಮುಗಿಸಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಂಜುಳಾರವರ ಅಕಾಲಿಕ ಮರಣ ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ, ನೌಕರರ ಒಕ್ಕೂಟ ಮತ್ತು ಜನಪರ ಚಳುವಳಿಗೆ ತುಂಬಲಾರದ ನಷ್ಟವಾಗಿದೆ.  ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಮಂಜುಳಾ ರವರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಬಯಸುತ್ತದೆ ಮತ್ತು ಕ್ರಾಂತಿಕಾರಿ ನಮನಗಳನ್ನು ಸಲ್ಲಿಸಿದೆ.

Donate Janashakthi Media

Leave a Reply

Your email address will not be published. Required fields are marked *