ನೋಟಿಸ್‌ ನೀಡದೆ ಯಾವುದೇ ಕಾರ್ಯಾಚರಣೆ ನಡೆಸಬಾರದು : ಸುಪ್ರೀಂ ಕೋರ್ಟ್ ಗೆ ಜಮೀಯತ್ ಉಲಾಮ-ಇ-ಹಿಂದ್ ಅರ್ಜಿ

  • ಯಾವುದೇ ಪ್ರಕರಣದ ಆರೋಪಿಗಳ ಮನೆಗಳನ್ನು ನೆಲಸಮಗೊಳಿಸುವ ಕಾನೂನು ಇಲ್ಲಾ
  • ಈ ರಿತಿಯ ಕ್ರಮ ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾಗಿದ್ದು

ನವದೆಹಲಿ : ನೋಟಿಸ್‌ ನೀಡದೆ ಯಾವುದೇ ನೆಲಸಮ ಕಾರ್ಯಾಚರಣೆ ನಡೆಸಬಾರದು ಎಂದು ಉತ್ತರ ಪ್ರದೇಶ ಸರಕಾರಕ್ಕೆ ಸೂಚನೆ ನೀಡಬೇಕೆಂದು ಸೋಮವಾರ ಸುಪ್ರೀಂ ಕೋರ್ಟಿನಲ್ಲಿ ಜಮೀಯತ್ ಉಲಾಮ-ಇ-ಹಿಂದ್‌ ಎಂಬ ಸಂಘಟನೆ ಎರಡು ಅರ್ಜಿಗಳನ್ನು ಸಲ್ಲಿಸಿದೆ.

ಯಾವುದೇ ಪ್ರಕರಣದ ಆರೋಪಿಗಳ ಮನೆಗಳನ್ನು ಈ ರೀತಿ ನೆಲಸಮಗೊಳಿಸುವ ಅವಕಾಶ ದೇಶದ ಕಾನೂನಿನಡಿ ಇಲ್ಲ. ಆದರೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇಂತಹ ಕ್ರಮಕೈಗೊಳ್ಳಲಾಗುತ್ತಿದೆಯಲ್ಲದೆ ಬಿಜೆಪಿಯ ನಾಯಕರು ಪ್ರವಾದಿ ವಿರುದ್ಧ ನೀಡಿದ್ದ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಗಳಲ್ಲಿ ಭಾಗಿಯಾದವರ ವಿರುದ್ಧವೂ ರಾಜ್ಯದಲ್ಲಿ ಕಳೆದ ವಾರದಿಂದ ಈತರಹದ  ಕಾರ್ಯಾಚರಣೆ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಈ ರೀತಿ ಮನೆಗಳನ್ನು ನೆಲಸಮಗಳಿಸಲು ಕಾರಣರಾದ ಅಧಿಕಾರಿಗಳ  ವಿರುದ್ಧ ಕ್ರಮಕೈಗೊಳ್ಳಬೇಕೆಂದು ಜಮೀಯತ್‌ ಉಲಾಮ ತನ್ನ ಅರ್ಜಿಯಲ್ಲಿ ಕೋರಿದೆ.

ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹಾಗೂ ಪಕ್ಷದಿಂದ ಉಚ್ಛಾಟನೆಗೊಂಡಿರುವ ನವೀನ್ ಜಿಂದಾಲ್ ಪ್ರವಾದಿ ಮೊಹಮ್ಮದ್ ಕುರಿತಂತೆ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಉತ್ತರಪ್ರದೇಶ ಕಾನ್ಪುರದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ನಂತರ ಇದು ಹಿಂಸಾಚಾರಕ್ಕೆ ತಿರುಗಿದ್ದು ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದು ಹಲವು ಸಾರ್ವಜನಿಕ ಆಸ್ತಿ, ಪಾಸ್ತಿಗಳಿಗೆ ಹಾನಿ ಮಾಡಿದ್ದರು. ಹೀಗಾಗಿ ಯೋಗಿ ಸರ್ಕಾರ ಗಲಭೆಗೆ ಕುಮ್ಮಕ್ಕು ನೀಡಿದ್ದ ಮಾಸ್ಟರ್ ಮೈಂಡ್ ಗಳ ಮನೆಗಳನ್ನು ನೆಲಸಮಗೊಳಿಸುತ್ತಿದೆ. ಅಕ್ರಮ ನೆಲಸಮ ಕುರಿತಂತೆ ಸುಪ್ರೀಂ ಕೋರ್ಟ್ ಪ್ರಸ್ತುತ ವಿಷಯವನ್ನು ವಿಚಾರಣೆ ನಡೆಸುತ್ತಿರುವಾಗಲೇ ಇಂತಹ ಕಾನೂನುಬಾಹಿರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ನೈಸರ್ಗಿಕ ನ್ಯಾಯದ ತತ್ವಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಎಂದು ಜಮಿಯಾತ್ ಮನವಿಯಲ್ಲಿ ಆರೋಪಿಸಿದೆ.

ಇಂತಹ ಕ್ರಮ ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾಗಿದ್ದು, ದೇಶದ ನ್ಯಾಯಪರ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.

Donate Janashakthi Media

Leave a Reply

Your email address will not be published. Required fields are marked *