ಏನಾದರೂ ಮಾಡಿಕೊಳ್ಳಿ-ಆದರೆ ಯಾರೂ ಬಾಳಾಸಾಹೇಬ್ ಠಾಕ್ರೆ ಹೆಸರು ಬಳಸಬಾರದು

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಗುಂಪು ತಮ್ಮ ಗುಂಪಿಗೆ ‘ಶಿವಸೇನಾ ಬಾಳಾಸಾಹೇಬ್’ ಎಂದು ಹೆಸರಿಡುವುದಾಗಿ ಘೋಷಿಸಿದ ನಂತರ ಯಾರೂ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಳಸಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಇಂದು ಮುಂಜಾನೆ, ಮಾಜಿ ಗೃಹ ಖಾತೆ ರಾಜ್ಯ ಸಚಿವ ಮತ್ತು ಬಂಡಾಯ ಶಾಸಕ ದೀಪಕ್ ಕೇಸರ್ಕರ್ ಏಕನಾಥ್ ಶಿಂಧೆ ನೇತೃತ್ವದ ಶಾಸಕರು ‘ಶಿವಸೇನಾ ಬಾಳಾಸಾಹೇಬ್’ ಎಂದು ಹೊಸ ಗುಂಪನ್ನು ರಚಿಸಿದ್ದಾರೆ ಎಂದು ಹೇಳಿದ್ದರು. ಮಹಾರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ ನೇತೃತ್ವದಲ್ಲಿ 50 ಶಾಸಕರು ಗುರುತಿಸಿಕೊಂಡಿದ್ದು, ಉದ್ಧವ್‌ ಠಾಕ್ರೆ ವಿರುದ್ಧ ಬಂಡಾಯ ಎದ್ದಿದ್ದಾರೆ.

ಮಾತೋಶ್ರೀಯಿಂದ ಉದ್ಧವ್ ಸಭೆಯ ಅಧ್ಯಕ್ಷತೆ ವಹಿಸಬೇಕಾಗಿತ್ತು. ಆದರೆ ಅವರು ಸಭೆಗಾಗಿ ದಾದರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಬಂದಿದ್ದರು. ಕಳೆದ ಎರಡು ದಿನಗಳಲ್ಲಿ ಉದ್ಧವ್‌ ಠಾಕ್ರೆ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಹಲವಾರು ಬಾರಿ ಸಂವಾದ ನಡೆಸಿದ್ದು ತಮ್ಮ ಮತ್ತು ಅವರ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

“ಕೆಲವರು ಏನಾದರೂ ಹೇಳಿ ಎಂದು ನನ್ನಲ್ಲಿ ಕೇಳುತ್ತಿದ್ದಾರೆ. ಅವರ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಅವರು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಬಹುದು. ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ನಡುವೆ ಇಂದು(ಜೂನ್‌ 25) ಸಭೆ ಸೇರಿದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯು ಯಾವುದೇ ಗುಂಪು ‘ಶಿವಸೇನಾ’ ಮತ್ತು ‘ಬಾಳಾಸಾಹೇಬ್ ಠಾಕ್ರೆ’ ಹೆಸರನ್ನು ಬಳಸಲು ಅವಕಾಶ ನೀಡದಂತೆ ನಿರ್ಣಯವನ್ನು ಅಂಗೀಕರಿಸಿತು. ಈ ವಿಷಯದಲ್ಲಿ ಪಕ್ಷವು ಚುನಾವಣಾ ಆಯೋಗವನ್ನು ಸಂಪರ್ಕಿಸಲಿದೆ.

ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಾಸಕರು ಈಗಲೂ ಶಿವಸೇನಾ ಸದಸ್ಯರಾಗಿದ್ದು, ವಿಧಾನಸಭೆಯಲ್ಲಿ ಪಕ್ಷಕ್ಕೆ ಮೂರನೇ ಎರಡರಷ್ಟು ಬಹುಮತವಿದೆ ಎಂದು ಶಿವಸೇನಾ ಬಂಡಾಯ ಪಾಳಯದ ವಕ್ತಾರ ದೀಪಕ್ ಕೇಸರ್ಕರ್ ಹೇಳಿದ್ದಾರೆ. ಏಕನಾಥ್ ಶಿಂಧೆ ಶಾಸಕಾಂಗ ಪಕ್ಷದ ನಾಯಕರಾಗಿ ಉಳಿದಿದ್ದಾರೆ ಎಂದು ಕೇಸರ್ಕರ್  ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *