ಹಸುವಿನ ಸಗಣಿ, ಮೂತ್ರದಿಂದ ಕೊರೊನಾ ಹೋಗಲ್ಲ

ಅಹಮದಾಬಾದ್: ಹಸುವಿನ ಸಗಣಿಯಲ್ಲಿ ಕೋವಿಡ್‌–19 ನಿವಾರಿಸುವ ಗುಣ ಇದೆ ಎಂದು ನಂಬಿಕೆ ಗುಜರಾತ್‌ನ ಹಲವು ಕಡೆಗಳಲ್ಲಿ ಜನರು ಗೋಶಾಲೆಗಳಿಗೆ ಹೋಗುತ್ತಿದ್ದು, ಮೈಗೆಲ್ಲ ಸಗಣಿ ಹಾಗೂ ಗೋಮೂತ್ರ ಸವರಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಎಚ್ಚರಿಕೆ ನೀಡಿರುವ ವೈದ್ಯರು ಸಗಣಿ ಬಳಕೆಯಿಂದ ಕೊರೊನಾ ವೈರಸ್‌ ಸೋಂಕನ್ನು ಹೋಗಲಾಡಿಸಬಹುದು ಎಂಬ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರಗಳು ಇಲ್ಲ. ಸಗಣಿಯ ಬಳಕೆಯಿಂದ ಕೋವಿಡ್‌ ನ ಬದಲಾಗಿ ಇತರ ರೋಗಗಳು ಹರಡುವ ಸಾಧ್ಯತೆ ಇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ: ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ!

ಗುಜರಾತ್‌ನ ಕೆಲವೆಡೆ ಜನರು ವಾರಕ್ಕೊಮ್ಮೆ ಮೈಗೆಲ್ಲ ಸಗಣಿ ಹಾಗೂ ಗೋಮೂತ್ರ ಸವರಿಕೊಳ್ಳುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆಯಿಂದ ಈ ರೀತಿ ಮಾಡುತ್ತಿದ್ದಾರೆ. ಜನರು ಗೋಶಾಲೆಗಳಿಗೆ ತೆರಳಿ, ಸಗಣಿ ಹಾಗೂ ಗೋಮೂತ್ರವನ್ನು ಮೈಗೆ ಹಚ್ಚಿಕೊಳ್ಳುತ್ತಿರುವುದು, ಕೆಲವರು ಅದರಿಂದಲೇ ಸ್ನಾನ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ಗುಜರಾತ್‌ನ ಅಹಮದಾಬಾದ್‌ ಬಳಿಯ ಛರೋಡಿ ಎಂಬಲ್ಲಿ ಶ್ರೀ ಸ್ವಾಮಿ ನಾರಾಯಣ ಗುರುಕುಲ ವಿಶ್ವವಿದ್ಯಾ ಪ್ರತಿಷ್ಠಾನದ ಗೋಶಾಲೆಯೊಂದನ್ನು ನಡೆಸುತ್ತಿದ್ದು ಇಲ್ಲಿಗೆ ಸಾಕಷ್ಟು ಜನರು ಭೇಟಿ ನೀಡುತ್ತಿದ್ದಾರೆ.

ಕೋವಿಡ್‌–19 ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಝೈಡಸ್‌–ಕ್ಯಾಡಿಲಾ ಕಂಪನಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿರುವ ಗೌತಮ್ ಮಣಿಲಾಲ್‌ ಬೋರಿಸಾ ಅವರೂ ಈ ಗೋಶಾಲೆಗೆ ಭೇಟಿ ನೀಡಿ, ಸಗಣಿ–ಗೋಮೂತ್ರದ ಚಿಕಿತ್ಸೆ ಪಡೆದಿದ್ದಾರೆ.

ಇದನ್ನು ಓದಿ: ಮೋದಿ ಸರ್ಕಾರವೇ ಒಂದು ದೊಡ್ಡ ಹಗರಣ

‘ಕಳೆದ ವರ್ಷ ನನಗೂ ಕೊರೊನಾ ಸೋಂಕು ತಗುಲಿತ್ತು. ನಾನೂ ಸಗಣಿ–ಗೋಮೂತ್ರ ಚಿಕಿತ್ಸೆ ಪಡೆದೆ. ಕೋವಿಡ್‌ನಿಂದ ಚೇತರಿಸಿಕೊಳ್ಳಲು ಈ ಚಿಕಿತ್ಸೆ ನೆರವಾಯಿತು. ಈ ಗೋಶಾಲೆಗೆ ವೈದ್ಯರು ಸೇರಿದಂತೆ ಸಾಕಷ್ಟು ಜನರು ಬರುತ್ತಾರೆ. ಸಗಣಿ–ಗೋಮೂತ್ರ ಬಳಸಿ ನೀಡುವ ಚಿಕಿತ್ಸೆಯಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಂತರ ನಾವು ಯಾವುದೇ ಹೆದರಿಕೆ ಇಲ್ಲದೆ ಕೋವಿಡ್‌ ರೋಗಿಗಳ ಬಳಿ ತೆರಳಿ ಅವರಿಗೆ ಚಿಕಿತ್ಸೆ ನೀಡಬಹುದು ಎಂಬ ನಂಬಿಕೆ ಅವರಲ್ಲಿದೆ’ ಎಂದು ಗೌತಮ್‌ ಹೇಳಿದರು.

‘ಸಗಣಿ, ಗೋಮೂತ್ರ ಬಳಕೆಯಿಂದ ರೋಗ ನಿರೋಧಶಕ್ತಿ ಹೆಚ್ಚುತ್ತದೆ ಎಂಬ ಕುರಿತು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದು ನಂಬಿಕೆ ಮಾತ್ರ’ ಎಂದು ಭಾರತೀಯ ವೈದ್ಯಕೀಯ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಎ.ಜಯಲಾಲ್‌ ಹೇಳಿದರು.

‘ಸಗಣಿ, ಗೋಮೂತ್ರದಿಂದ ಮಾಡಿದ ಉತ್ಪನ್ನಗಳ ವಾಸನೆ ತೆಗೆದುಕೊಳ್ಳುವುದರಿಂದ ಇಲ್ಲವೇ ಅವುಗಳನ್ನು ಸೇವಿಸುವುದರಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ’ ಎಂದೂ ಎಚ್ಚರಿಸಿದರು.

Donate Janashakthi Media

Leave a Reply

Your email address will not be published. Required fields are marked *