ನಿರ್ಗಮಿತ ರಾಜ್ಯಪಾಲ ವಜೂಭಾಯಿ ವಾಲಾರನ್ನು ಶುಭ ಕೋರಿದ ಹೊರಟ್ಟಿ

ಬೆಂಗಳೂರು: ನಾಲ್ಕು ದಶಕಗಳಿಂದ ಸತತವಾಗಿ 7 ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಪ್ರಸ್ತುತ ವಿಧಾನ ಮಂಡಲದ ಮೇಲ್ಮನೆಯಾಗಿರುವ ವಿಧಾನ ಪರಿಷತ್ತಿನ ಸಾರಥ್ಯ ವಹಿಸಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಾರ್ಯವೈಖರಿ ಅನುಕರಣೀಯವಾಗಿದ್ದು, ಎಲ್ಲಾ ಪೀಠಾಸೀನಾಧಿಕಾರಿಗಳಿಗೆ ಮಾದರಿಯಾಗಿದೆ ಎಂದು, ನಿರ್ಗಮಿತ ರಾಜ್ಯಪಾಲ ವಜೂಭಾಯಿ ರೂಢಾಬಾಯಿ  ವಾಲಾ ಶ್ಲಾಘಿಸಿದ್ದಾರೆ.

ಆರು ವರ್ಷ ಹತ್ತು ತಿಂಗಳ ಕಾಲ ನಿರಂತರವಾಗಿ ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿ ನಿರ್ಗಮಿಸುತ್ತಿರುವ ವಜೂಭಾಯಿ ವಾಲಾ ಅವರನ್ನು ರಾಜಭವನದಲ್ಲಿಂದು ಭೇಟಿ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ ನಿರ್ಗಮಿತ ರಾಜ್ಯಪಾಲರಿಗೆ ಶುಭ ಹಾರೈಸಿದರು.

ಇದನ್ನು ಓದಿ: ಕರ್ನಾಟಕ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ

ಈ ಸಂದರ್ಭದಲ್ಲಿ ಸಭಾಪತಿಗಳ ಸದನ ಕಲಾಪ ನಡೆಸುವ ಕಾರ್ಯ ಪದ್ಧತಿಯನ್ನು ಕೊಂಡಾಡಿದ ರಾಜ್ಯಪಾಲರು ನಾಲ್ಕು ದಶಕಗಳ ಸಮಾಜಮುಖಿ ಚಿಂತನೆಗಳು ಮತ್ತು ರಾಜಕೀಯ ಅನುಭವದಿಂದ ವಿಧಾನ ಪರಿಷತ್ತಿನ ಕಲಾಪಗಳನ್ನು ಅರ್ಥಪೂರ್ಣವಾಗಿ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು.

ಚಿಂತಕರ ಚಾವಡಿಯಾಗಿರುವ ವಿಧಾನ ಪರಿಷತ್ತಿನಲ್ಲಿ ವರ್ತಮಾನದ ಸಮಸ್ಯೆಗಳ ಕುರಿತು ಚಿಂತನ -ಮಂಥನ ನಡೆಯುತ್ತಿರುವುದರ ಜೊತೆಗೆ ಹಲವಾರು ಮೌಲ್ವಿಕ ವಿಚಾರಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಸುವ ಮೂಲಕ ಇಡೀ ಸಮಾಜಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳ ಸಾರ್ಥಕ್ಯದ ಕುರಿತು ಸ್ಪಷ್ಟ ಸಂದೇಶ ನೀಡುತ್ತಿರುವುದು ಸಂತಸದ ಸಂಗತಿ ಎಂದು ರಾಜ್ಯಪಾಲ ವಜೂಭಾಯಿ ವಾಲಾ ನುಡಿದರು.

ಹಿರಿಯ ಸದಸ್ಯರ ಅನುಭವ, ವಿಚಾರಧಾರೆ ಹಾಗೂ ಸದನದ ಘನತೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ನಡೆಸುತ್ತಿರುವ ನಿರಂತರ ಪ್ರಯತ್ನ ಎಲ್ಲರಿಗೂ ಮಾದರಿಯಾಗಿದೆ. ಆರು ವರ್ಷ ಹತ್ತು ತಿಂಗಳ ಕಾಲ ಕರ್ನಾಟಕದ ಜನತೆ ತಮಗೆ ನೀಡಿದ ಗೌರವ ಹಾಗೂ ಸಹಕಾರಕ್ಕೆ ರಾಜ್ಯಪಾಲರು ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.

Donate Janashakthi Media

Leave a Reply

Your email address will not be published. Required fields are marked *