ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೀನಿ, ಪುನೀತ್‍ಗೆ ಕೆಟ್ಟ ಹೆಸರು ತರಬೇಡಿ: ರಾಘವೇಂದ್ರ ರಾಜಕುಮಾರ್

ಬೆಂಗಳೂರು: ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ ಮನವಿ ಮಾಡುತ್ತೇನೆ. ನಾವು ನೋವಿನಲ್ಲಿದ್ದೇವೆ, ಪುನೀತ್‍ಗೆ ಕೆಟ್ಟ ಹೆಸರು ತರಬೇಡಿ ಎಂದು ನಟ ರಾಘವೇಂದ್ರ ರಾಜ್‍ಕುಮಾರ್ ಮನವಿ ಮಾಡಿದ್ದಾರೆ.

ಕನ್ನಡ ಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿಕೆಯಿಂದಾಗಿ ಮನನೊಂದು ಅಭಿಮಾನಿಗಳು ಆತ್ಮಹತ್ಯೆಗೆ ಮುಂದಾಗುತ್ತಿರುವ ಅಭಿಮಾನಿಗಳಿಗೆ ನಟ ರಾಘವೇಂದ್ರ ರಾಜ್‍ಕುಮಾರ್ ಅವರು ʻಅಪ್ಪಾಜಿ ಅಭಿಮಾನಿಗಳ ದೇವರು ಅಂತ ಹೇಳುತ್ತಾರೆ. ದೇವರುಗಳಾದ ನೀವು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ ಮನವಿ ಮಾಡಿಕೊಳ್ಳುತ್ತೇನೆʼ ಎಂದಿದ್ದಾರೆ.

ಇದನ್ನು ಓದಿ: ʻಬೆಟ್ಟದ ಹೂವುʼ ನಂತೆಯೇ ಯಾರೂ ಎಟುಕಲಾರದ ಸ್ಥಾನಕ್ಕೇರಿದ ʻಯುವರತ್ನʼ

ನಾವು ಈಗಾಗಲೇ ನೋವಿನಲ್ಲಿ ಇದ್ದೇವೆ, ಪುನೀತ್‌ಗೂ ಕೆಟ್ಟ ಹೆಸರು ತರಬೇಡಿ, ನಿಮ್ಮ ತಂದೆ-ತಾಯಿಗೆ ನೋವು ಕೊಡಬೇಡಿ. ಒಬ್ಬರ ಹಿಂದೆ ಒಬ್ಬರು ಹೋದರೆ ಭೂಮಿ ಮೇಲೆ ಯಾರು ಇರಲ್ಲ. ಸಣ್ಣ ಮಕ್ಕಳಿಗೆ ಇದನ್ನೇ ಹೇಳಿಕೊಡ್ತೀರಾ ಎಂದು ಹೇಳಿದ್ದಾರೆ.

ನಿಮ್ಮ ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ, ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಪುನೀತ್ ಪತ್ನಿ ಹಾಗೂ ಕುಟುಂಬಸ್ಥರು ಇದರಿಂದ ತೀವ್ರ ನೊಂದುಕೊಂಡಿದ್ದಾರೆ. ಅಪ್ಪು ನಿಧನ ಇಷ್ಟು ಜನರ ಸಾವಿಗೆ ಕಾರಣವಾಗಿದ್ದಕ್ಕೆ ಎಲ್ಲರಿಗೂ ಅಪಾರ ನೋವಾಗಿದೆ. ದಯವಿಟ್ಟು ಯಾರೂ ಅಂತಹ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳಿದರು.

ಪುನೀತ್ ರಾಜಕುಮಾರ್ ಸಾವಿನಿಂದ ಆಘಾತಗೊಂಡಿರುವ ಅವರ ಅಭಿಮಾನಿಗಳು ಸಾವಿಗೀಡಾಗುತ್ತಿದ್ದು, ಕಳೆದ ಐದು ದಿನಗಳಲ್ಲಿ ಆತ್ಮಹತ್ಯೆ ಮತ್ತು ಹೃದಯಾಘಾತ ಪ್ರಕರಣಗಳೂ ಸೇರಿದಂತೆ ಕನಿಷ್ಠ 13 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

Donate Janashakthi Media

Leave a Reply

Your email address will not be published. Required fields are marked *