ರಿ-ಸೈಕಲ್ ದಿ ಲಾಂಜ್ ಪಬ್ ಮೇಲಿನ ದಾಳಿಯ ನಿಜವಾದ ಆರೋಪಿಗಳು ಭಜರಂಗದಳದವರಲ್ಲ…!

ನವೀನ್ ಸೂರಿಂಜೆ

ಸೋಮವಾರ ರಾತ್ರಿ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ರಿ-ಸೈಕಲ್ ದಿ ಲಾಂಜ್ ಪಬ್ (ಹಳೇ ಅಮ್ನೇಶಿಯಾ ಪಬ್) ಮೇಲೆ ಭಜರಂಗದಳ ದಾಳಿ ನಡೆಸಿತ್ತು. ಟಿವಿ ಅ್ಯಂಕರ್ ಗಳು, ಶ್ರೀಮಂತರ ಮಕ್ಕಳು, ಸಚಿವರು, ಶಾಸಕರ ಮಕ್ಕಳು ಹಾಕುವ ರೀತಿಯ ಡ್ರೆಸ್ ಅನ್ನು ತೊಟ್ಟುಕೊಂಡು ವಿದ್ಯಾರ್ಥಿನಿಯರು ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂಬ ಕಾರಣಕ್ಕಾಗಿ ಭಜರಂಗದಳ ಪಬ್ ಮೇಲೆ ದಾಳಿ ನಡೆಸಿತ್ತು. ದಾಳಿ ಆರೋಪಿಗಳು ಭಜರಂಗದಳದ ಕಾರ್ಯಕರ್ತರಾದರೂ ಪಬ್ ನಿಂದ ಹೊರದಬ್ಬಿಸಲ್ಪಟ್ಟ ವಿದ್ಯಾರ್ಥಿನಿಯರನ್ನೇ ಅರೋಪಿ ಸ್ಥಾನದಲ್ಲಿ ನಿಲ್ಲಿಸಲಾಯ್ತು.

ಸೋಮವಾರ ರಾತ್ರಿ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ಮಂಗಳೂರಿಗೆ ಬಂದು ದಾಳಿಗೊಳಗಾದ ಪಬ್ ಸುತ್ತಮುತ್ತ ಅಡ್ಡಾಡಿದೆ. ಸ್ಥಳೀಯರ ಜೊತೆ ಮಾತನಾಡಿದೆ. ಭಜರಂಗದಳದಿಂದ ದಾಳಿಗೊಳಗಾದ ರಿ-ಸೈಕಲ್ ದಿ ಲಾಂಜ್ ಪಬ್ ಕಾನೂನು ಪ್ರಕಾರ ನಡೆಯುತ್ತಿರುವ ಪಬ್. ಇಲ್ಲಿ ಎಲ್ಲಾ ವಯಸ್ಸಿನ ವ್ಯಕ್ತಿಗಳಿಗೆ ಮುಕ್ತ ಪ್ರವೇಶವಿದೆ. ಕೆಲವಡೆ ಇರುವಂತೆ ಹುಡುಗ ಹುಡುಗಿ ಜೋಡಿಗೆ ಮಾತ್ರ ಪ್ರವೇಶ ಎಂಬ ನಿರ್ಬಂಧಗಳು ಇಲ್ಲ. ಸೋಮವಾರ ರಾತ್ರಿ 30ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ತರಗತಿ ವಿದಾಯ ಕೂಟವನ್ನು ಆಯೋಜಿಸಿದ್ದರು. ಈ ವಿದ್ಯಾರ್ಥಿಗಳೇನು ಇಡೀ ಪಬ್ ಅನ್ನು ಬುಕ್ ಮಾಡಿರಲಿಲ್ಲ. ಅಲ್ಲಿ ಇನ್ನಿತರ ಫ್ಯಾಮಿಲಿ ಗ್ರಾಹಕರೂ ಇದ್ದರು. ವಿದ್ಯಾರ್ಥಿನಿಯರ ಪೈಕಿಯೇ ಕೆಲವು ಪೋಷಕರೂ ಈ ಕೂಟದಲ್ಲಿ ಭಾಗಿಯಾಗಿದ್ದರು. ದಿಢೀರನೆ ಭಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ವಿದ್ಯಾರ್ಥಿನಿಯರನ್ನು ಹೊರಕಳಿಸುವಂತೆ ಪಬ್ ಮ್ಯಾನೇಜರ್ ಗೆ ಆಗ್ರಹಿಸಿದ್ದಾರೆ.‌ ಪಬ್ ಮ್ಯಾನೇಜರ್ ಹೆದರಿ ವಿದ್ಯಾರ್ಥಿನಿಯರನ್ನು ಹೊರಕಳಿಸಿದ್ದಾರೆ. ಶ್ರೀಮಂತ ಹುಡುಗಿಯರು ಧರಿಸುವ ಬಟ್ಟೆಗಳನ್ನು ಮೊದಲ ಬಾರಿ ಕಂಡಿದ್ದೇವೆ ಎನ್ನುವ ರೀತಿಯಲ್ಲಿ ಭಜರಂಗಿಗಳು ಮೊಬೈಲ್ ನಲ್ಲಿ ಫೋಟೋ, ವಿಡಿಯೋ ಸೆರೆ ಹಿಡಿದಿದ್ದಾರೆ. ಮಾಧ್ಯಮಗಳು ಅದನ್ನು ತುಂಡುಡುಗೆ ಎಂದು ಕರೆದಿದ್ದಾರೆ. ಇದಿಷ್ಟು ವಿಷಯ.‌

ಈ ಪಬ್ ದಾಳಿಯ ನಿಜವಾದ ಆರೋಪಿಗಳು ಯಾರು ಎಂದು ಗೊತ್ತಾಗಬೇಕಾದರೆ ದಾಳಿ ನಡೆಸಿದ ಭಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರರ ಮಾತುಗಳನ್ನು ಕೇಳಬೇಕು.

ಪುನೀತ್ ಅತ್ತಾವರ ದಾಳಿ ಬಗ್ಗೆ ಮಾಧ್ಯಮದ ಜೊತೆ ಮಾತನಾಡುತ್ತಾ “ಇದನ್ನು ನಾವು ಇಲ್ಲಿಗೇ ಬಿಡುವುದಿಲ್ಲ. ನಮ್ಮದು ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ” ಎಂದಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆ ಎಂಬ ಮಾತನ್ನು ಮೊದಲು ಬಳಸಿದ್ಯಾರು ? ಈಗ ಸರ್ಕಾರದ ನೇತೃತ್ವದ ವಹಿಸಿದ್ಯಾರು ಎಂಬುದನ್ನು ನೆನಪಿಸಿಕೊಂಡರೆ ದಾಳಿ ನಡೆಸಿದ ಭಜರಂಗದಳದ ಸಂಚಾಲಕ ಪುನೀತ್ ಅತ್ತಾವರಗೆ ಯಾರು ಪ್ರೇರಣೆ ಎಂಬುದು ತಿಳಿಯುತ್ತದೆ. ಕ್ರಿಯೆಗೆ ಪ್ರತಿಕ್ರಿಯೆ ಎಂದು ಅಂದು ಹೇಳಿಕೆ ನೀಡಿ ಭಜರಂಗಿಗಳನ್ನು ಪ್ರಚೋದಿಸಿದ ವ್ಯಕ್ತಿಯೇ ಈ ಪಬ್ ದಾಳಿಯ ಮೊದಲ ಆರೋಪಿ.

ದಾಳಿ ನಡೆಸಿದ ಬಳಿಕ ಭಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಇನ್ನೂ ಒಂದು ಮಾತು ಹೇಳುತ್ತಾರೆ. “ನಾವು ಪೊಲೀಸರಿಗೆ ಮಾಹಿತಿ ನೀಡಿಯೇ ದಾಳಿ ಮಾಡಿದ್ದೇವೆ” ಎನ್ನುತ್ತಾರೆ. ದಾಳಿಯ ಮಾಹಿತಿ ನೀಡಿದರೂ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಯಾಕೆ ಪುನೀತ್ ಅತ್ತಾವರ ಮತ್ತು ಸಂಗಡಿಗರನ್ನು ಬಂಧಿಸಿಲ್ಲ? ದಾಳಿ ನಡೆಯುವವರೆಗೆ ಯಾಕೆ ಪೊಲೀಸರು ಕಾದರು ? ಪಬ್ ನಿಂದ ವಿದ್ಯಾರ್ಥಿನಿಯರನ್ನು ಹೊರಕಳುಹಿಸಿದಾಗ ಯಾಕೆ ಪೊಲೀಸರು ತಡೆಯಲಿಲ್ಲ ? ಯಾಕೆ ವಿದ್ಯಾರ್ಥಿನಿಯರ ಗ್ರಾಹಕ ಹಕ್ಕುಗಳು, ಅಭಿವ್ಯಕ್ತಿಯ ಹಕ್ಕುಗಳನ್ನು ಪ್ರಾಥಮಿಕವಾಗಿ ರಕ್ಷಿಸಲಿಲ್ಲ ? ಪಬ್ ಮಾಲೀಕ ದೂರು ಕೊಡದೇ ಇದ್ದರೆ ಪೊಲೀಸರೇಕೆ ಸುಮೊಟೋ ಕೇಸ್ ದಾಖಲಿಸಲಿಲ್ಲ ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ದಾಳಿಯ ಎರಡನೇ ಆರೋಪಿ ಸಿಗುತ್ತಾರೆ.

ಪೊಲೀಸ್ ಕಮಿಷನರ್ ಅವರು ಪತ್ರಿಕಾ ಪ್ರಕಟನೆ ಕೊಡುತ್ತಾ “8 of the boys and girls of 18 verified among those who participated in party are found To be under aged as per act ie Karnataka exice and general conditions rules 1967. Report has been sent to Exise department for necessary action” ಎಂದಿದ್ದಾರೆ. ಅಬಕಾರಿ ಕಾಯ್ದೆ ಉಲ್ಲಂಘನೆ ಬಗ್ಗೆ ತನಿಖೆ ಪ್ರತ್ಯೇಕ ನಡೆಯಲಿ. ಆದರೆ ಪೊಲೀಸ್ ಕಮಿಷನರ್ ಅವರೇ ಗುರುತಿಸಿದಂತೆ ಅಪ್ರಾಪ್ತ ಹೆಣ್ಣು ಮಕ್ಕಳು ಪಬ್ ನೊಳಗೆ ಇದ್ದಿದ್ದರೆ, ಅವರ ಮೇಲೆ ಹೆಣ್ಣೆಂಬ ಕಾರಣಕ್ಕಾಗಿ, ಅವರ ವಸ್ತ್ರದ ಕಾರಣಕ್ಕಾಗಿ ದೌರ್ಜನ್ಯ ನಡೆಸಿದ ಭಜರಂಗದಳದ ಕಾರ್ಯಕರ್ತರ ಮೇಲೆ ಫೋಕ್ಸೋ ಕಾಯ್ದೆಯಡಿ ಪ್ರಕರಣ ಯಾಕೆ ದಾಖಲಿಸಿಲ್ಲ ? ಇಷ್ಟೊಂದು ಗಂಭೀರ ಪ್ರಕರಣವನ್ನು ಪೊಲೀಸರು ನಿರ್ಲಕ್ಷಿಸಿದ್ದು ಯಾಕೆ ?

ಇವೆಲ್ಲಾ ಪ್ರಶ್ನೆಗಳನ್ನು ಕೇಳಿಕೊಂಡಾಗ ಜುಲೈ 25 ರ ಸೋಮವಾರ ರಾತ್ರಿ ರಿ-ಸೈಕಲ್ ದಿ ಲಾಂಜ್ ಪಬ್ ಮೇಲೆ ನಡೆದ ದಾಳಿಯ ಆರೋಪಿಗಳು ಕೇವಲ ಭಜರಂಗದಳದವರಲ್ಲ ಎಂಬುದು ಖಚಿತವಾಗುತ್ತದೆ. ಯಾರು ನಿಜವಾದ ಆರೋಪಿಗಳು ಎಂಬುದೂ ಸಾಭೀತಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *