ನಾವು ನಿಮ್ಮಂತೆ ಮನುಷ್ಯರೇ, ಕುಟುಂಬ ನಿರ್ವಹಣೆಗೆ ಬೇಕಾದ ಕನಿಷ್ಠ ಸೌಲಭ್ಯ ನೀಡಿ

ಬೆಂಗಳೂರು : ಕಳೆದ 10 ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಇಂದು ಕೂಡ ಮುಂದುವರೆದಿದೆ. ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಈಶಾನ್ಯ, ವಾಯುವ್ಯ ಸಾರಿಗೆ ನೌಕರರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ, ಅಲ್ಲದೆ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 146 ಕೋಟಿ ರೂ. ನಷ್ಟವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇದು ಶುದ್ದ ಸುಳ್ಳು ಎಂದು ಬಿಎಂಟಿಸಿ ನೌಕರರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನಲೆಯಲ್ಲಿ ರಾಜ್ಯ ಸಾರಿಗೆ ನಿಗಮಗಳಿಗೆ ಕೋಟಿ ಕೋಟಿ ಆದಾಯ ನಷ್ಟವಾಗಿದೆ. ಕಳೆದ 10 ದಿನದಿಂದ ಸಾರಿಗೆ ನಿಗಮಗಳಿಗೆ ಬರೋಬ್ಬರಿ 146 ಕೋಟಿ ಆದಾಯ ನಷ್ಟವಾಗಿದೆ. ನಾಲ್ಕು ಸಾರಿಗೆ ನಿಗಮಗಳಿಂದ ಪ್ರತಿದಿನ 17 ಕೋಟಿ ರೂ. ಆದಾಯ ಸಿಗುತ್ತಿತ್ತು. ಕೆಎಸ್ಆರ್​ಟಿಸಿಗೆ ನಿತ್ಯ ಪ್ರತಿದಿನ 7 ಕೋಟಿ ರೂ. ಆದಾಯ ಹರಿದುಬರುತ್ತಿತ್ತು. ಯುಗಾದಿ ಹಬ್ಬಕ್ಕೆ ಹೆಚ್ಚುವರಿ ಆದಾಯ ಸಿಗುತ್ತಿತ್ತು. ಆದರೆ, ಯುಗಾದಿ ಹಬ್ಬದ ಸಮಯದಲ್ಲೇ ನೌಕರರು ಮುಷ್ಕರ ಹೂಡಿರುವುದರಿಂದ ಸರ್ಕಾರಕ್ಕೆ ಕಳೆದ ಎರಡು ದಿನಗಳಲ್ಲಿ 44 ಕೋಟಿ ನಷ್ಟವಾಗಿದೆ ಎಂದು ಪುಂಕಾನುಪುಕವಾಗಿ ಸರ್ಕಾರಗಳು ನಮ್ಮ ಮೇಲೆ ಇಲ್ಲಸಲ್ಲದ ಆರೋಗಪಗಳ ಹೇರಿ ಸಾರ್ವಜನಿಕರ ಮುಂದೆ ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಹುಟ್ಟುಹಾಕುವು ಹುನ್ನಾರವನ್ನು ಹೋಡಿದೆ.

ದೊಡ್ಡ ಪ್ರಮಾಣದಲ್ಲಿ ಸರ್ಕಾರಕ್ಕೆ ಆದಾಯ ಬರುತ್ತಿರುವುದು ಈ ಸಾರಿಗೆ ಇಲಾಖೆಯಿಂದ. ಈ ಇಲಾಖೆಗೆ ಈ ಹಣ ಸಂಗ್ರಹವಾಗುದುದಕ್ಕೆ ನಮ್ಮ ಶ್ರಮವಿದೆ. ಹಗಲು ರಾತ್ರಿ ಎನ್ನದೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡಿದ್ದೇವೆ, ಸಂಬಳ ಸಾಲದೇ ಹಬ್ಬ ಹರಿದಿನಗಳಲ್ಲಿಯೂ ಹೆಚ್ಚಿಗೆ ಕೆಲಸಮಾಡಿದ್ದೇವೆ. ಇದು ಸರಕಾರಕ್ಕೂ ಗೊತ್ತಿರುವ ವಿಚಾರ.

ಆದರೆ ಸರಕಾರ ಹೆದರಿಸಿ ಬೇದರಿಸಿ 3 ಸಾವಿರ ನೌಕರರನ್ನು (ಸಾರಿಗೆ ನೌಕರರು, ಸೆಕ್ಯೂರಿಟಿಗಳು, ನಿರ್ಹವಾಹಕರು ಒಳಗೊಂಡಂತೆ ಬಲವಂತವಾಗಿ ಕೆಲಸಕ್ಕೆ ಕರೆಸಿದ್ದಾರೆ. ಆದರೆ ಇನ್ನೂ 1 ಲಕ್ಷ ನೌಕರರು ಸರಕಾರದ ಯಾವುದೇ ಗೊಡ್ಡು ಬೇದರಿಕೆಗೆ ಜಗ್ಗದೇ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಕಾರಣ ಇಷ್ಟೆ ಸರಕಾರದ ಬೊಕ್ಕಸಕ್ಕೇ ಇದರಿಂದ ಲಾಭವಿದೆ. ಹಾಗಾಗಿ ನಾವು ಕಳೆದ 10 ದಿನಗಳಿಂದ ಬಜ್ಜಿ, ಬೋಂಡ, ಟೀ ಮಾರಿ ಪ್ರತಿಭಟನೆ ಮಾಡಿದ್ದೇವೆ, ಉಪವಾಸ ಸತ್ಯಾಗ್ರಹ ಮಾಡಿದೇವೆ, ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟಿಸಿದ್ದೇವೆ, ತಟ್ಟೆ ಭಾರಿಸಿದರೇ ಕೋರೊನಾ ಹೋಗುತದೆ ಎಂದು ಹೇಳುವ ಪ್ರಧಾನಿ ಮೋದಿಯವರಂತೆ ನಾವು ತಟ್ಟೆ ಭಾರಿಸಿ ನೋಡಿದ್ದೇವೆ, ಏನೇ ಮಾಡಿದರೂ ಸರಕಾರ ತಮ್ಮ ಹಠಮಾರಿ ಧೋರಣೆಯನ್ನು ಬಿಡುತ್ತಿಲ್ಲ. ನಾವು ನಿಮ್ಮಂತೆ ಮನುಷ್ಯರು ನಮ್ಮನ್ನೂ ಬದುಕಲು ಅವಕಾಶ ಕೊಡಿ.

ನಿಮಗೆ ಒಂದು ವಿಚಾರ ತಿಳಿಸಲು ಇಚ್ಚಿಸುತ್ತೇವೆ ನಾವು ಬಿಸಿಲು, ಮಳೆ, ಚಳಿ ಎನ್ನದೇ ಪ್ರಯಾಣಿಕರನ್ನೂ ಒಂದೂರಿಂದ ಒಂದೂರಿಗೆ ಸುರಕ್ಷಿತವಾಗಿ ತಲುಪಿಸುತ್ತೇವೆ. ನಮ್ಮ ವೈಯಕ್ತಿ ಕೆಲಸವನೆಲ್ಲಾ ಬಿಟ್ಟು ಕಾಯಕವೇ ಕೈಲಾಸವೆಂದು ಕೆಲಸಕ್ಕೆ ಹಾಜರಾಗುತ್ತೇವೆ. ನಾವು ಕೆಲಸಕ್ಕಾಗಿ ಮನೆ ಮಕ್ಕಳನೆಲ್ಲಾ ಬಿಟ್ಟು ಕೆಲಸ ನಿರ್ವಹಿಸಿದ್ದೇವೆ. ಆದರೆ ನಮ್ಮ ಯಾವ ಶ್ರಮಕ್ಕೂ ಸರಕಾರ ಮರುಕಪಡುತ್ತಿಲ್ಲ, ವೇತನ ಹೆಚ್ಚಳಕ್ಕೆ ಮುಂದಾಗುತ್ತಿಲ್ಲ. ಆದರೇ ಅದೇ ಶಾಸಕರು, ಸಚಿವರಿಗೆ ಸಂಬಳ ಹೆಚ್ಚಿಸಲು ಇವರ ಬಳಿ ಹಣವಿದೆ ಇದು ಯಾವ ನ್ಯಾಯ ಸ್ವಾಮಿ? ಎಂಬ ಪ್ರಶ್ನೆಯನ್ನು ಸಾರಿಗೆ ನೌಕರರು ಕೇಳುತ್ತಿದ್ದಾರೆ.

ನಮ್ಮನ್ನೂ ಹೆದರಿಸಿ ಬೆದರಿಸಿ ಕೆಲಸಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ನಮಗೂ ಮಕ್ಕಳಿದ್ದಾರೆ, ಅವರ ಮುಂದಿನ ಶಿಕ್ಷಣ ನಿರ್ವಹಣೆ ಹೇಗೆ? ಕೋವಿಡ್‌ ನಿಂದಾಗಿ ಸಾಲ ಮಾಡಿದ್ದೇವೆ, ಹಲವಾರು ರೀತಿಯಲ್ಲಿ ನಾವು ಈಗಾಗಲೇ ಕಷ್ಟದಲ್ಲಿದ್ದೇವೆ ದಯವಿಟ್ಟು ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ನಮ್ಮ ಕಷ್ಟಕ್ಕೆ ಸ್ಪಂದಿಸಿಬೇಕು ಎಂಬ ಅಭಿಪ್ರಾಯ ಎಚ್.ಡಿ. ರೇವಪ್ಪ ಅವರದ್ದು.

ಬೇರೆ ರಾಜ್ಯಗಳ ಅಂದರೆ ಆಂಧ್ರದಲ್ಲಿ ಚಾಲಕ ನಿರ್ವಾಹಕರಿಗೆ ಮೂಲ ವೇತನ 19500 (22000), ತೆಂಗಾಣ 17000 ಆದರೆ ನಮ್ಮ ಕರ್ನಾಟಕ ಸಾರಿಗೆ ನೌಕರರಿಗೆ 11600 ವೇತನ ನೀಡುತ್ತಿದ್ದಾರೆ. ಈ ಸಂಬಳದಿಂದ ನಮ್ಮ ಜೀವನ ನಡೆಸುವುದಾದರೂ ಹೇಗೆ? ಮಕ್ಕಳ ಶಿಕ್ಷಣ, ಮನೆ ನಿರ್ವಹಣೆ ಎಲ್ಲವೂ ನಿರ್ವಹಿಸಿಲು ಕಷ್ಟವಾಗುತ್ತಿದೆ. ಹಾಗಾಗಿ ನಮ್ಮ ಬೇಡಿಕೆ ಈಡೇರಿಸುವರೆಗೂ ನಾವು ಹೋರಾಟವನ್ನು ಮುಂದುವರೆಸುತ್ತೇವೆ. ಸೋಮುವಾರದಂದು ಜೈಲ್‌ಭರೋ ಚಳುವಳಿ  ಕೈಗೊಂಡಿದ್ದೇವೆ ಎಂದು ಸಾರಿಗೆ ನೌಕರರು ತಿಳಿಸಿದ್ದಾರೆ.

ವರದಿ : ಲಕ್ಷ್ಮೀದೇವಿ ಇಟಗಿ

Donate Janashakthi Media

Leave a Reply

Your email address will not be published. Required fields are marked *