ಚುನಾವಣೆಯ ನಿಖರ ಫಲಿತಾಂಶ ನುಡಿಯುವ ಜ್ಯೋತಿಷಿಗಳಿಗೆ 10 ಲಕ್ಷ ರೂ ಬಹುಮಾನ: ಡಾ.ನರೇಂದ್ರ ನಾಯಕ್ ಸವಾಲು!

  • ಜ್ಯೋತಿಷಿಗಳಿಗೆ 10 ಲಕ್ಷ ರೂ. ಬಹುಮಾನದ ಸವಾಲು.
  • ಈ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಸೇರಿ ಕೆಲವು ಪ್ರಶ್ನೆ.
  • ಮಂಗಳೂರಿನ ವಿಚಾರವಾದಿ ಡಾ. ನರೇಂದ್ರ ನಾಯಕ್ ಅವರಿಂದ ಸವಾಲು

ಮಂಗಳೂರು : ಕರ್ನಾಟಕ ಚುನಾವಣೆಯ ನಿಖರ ಫಲಿತಾಂಶ ನುಡಿಯುವ ಜ್ಯೋತಿಷಿಗಳಿಗೆ 10 ಲಕ್ಷ ರೂ ಬಹುಮಾನ ನೀಡಲಾಗುತ್ತದೆ ಎಂದು ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ (ಎಫ್‌ಐಆರ್‌ಎ) ಅಧ್ಯಕ್ಷ, ಮಂಗಳೂರಿನ ಡಾ.ನರೇಂದ್ರ ನಾಯಕ್‌ ಘೋಷಣೆ ಮಾಡಿದ್ದಾರೆ.

ಈ ಬಾರಿ ವಿಧಾನಸಭೆ ಚುನಾವಣಾ ಫಲಿತಾಂಶದ ವಿಚಾರದಲ್ಲಿ ಜ್ಯೋತಿಷಿಗಳಿಗೆ 10 ಲಕ್ಷ ರೂ. ಬಹುಮಾನದ ಸವಾಲು ಒಡ್ಡಿದ್ದು, ಸವಾಲಿನಲ್ಲಿ 20 ಪ್ರಶ್ನೆಗಳನ್ನು ನೀಡಿರುವ ಅವರು ಈ ಪ್ರಶ್ನೆಗಳಿಗೆ ನಿಖರ ಉತ್ತರ ಹೇಳುವ ಜ್ಯೋತಿಷಿಗಳಿಗೆ 10 ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಯಾವ ಪಕ್ಷ ಕರ್ನಾಟಕದಲ್ಲಿಸರಕಾರ ರಚಿಸುತ್ತದೆ? ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಎಷ್ಟು ಸೀಟು ಗೆಲ್ಲುತ್ತವೆ? ಪಕ್ಷೇತರರು ಗೆಲ್ಲುವ ಸೀಟೆಷ್ಟು? ಮಹಿಳಾ ಶಾಸಕರೆಷ್ಟು ಮಂದಿ ಆಯ್ಕೆಯಾಗುತ್ತಾರೆ…ಹೀಗೆ 20 ಪ್ರಶ್ನೆಗಳಿಗೆ ಉತ್ತರಿಸಬೇಕು. ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿದವರು ಬಹುಮಾನಕ್ಕೆ ಪಾತ್ರರಾಗುತ್ತಾರೆ ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.

ಇದನ್ನೂ ಓದಿಭವಿಷ್ಯ ಹೇಳಿ ಬಹುಮಾನ ಗೆಲ್ಲಿ:ನರೇಂದ್ರ ನಾಯಕ್

ಈ ಹಿಂದೆಯೂ ನರೇಂದ್ರ ನಾಯಕ್‌ ಜ್ಯೋತಿಷಿಗಳಿಗೆ ಸವಾಲು ಹಾಕಿದ್ದರು. 2009ರಿಂದಲೂ ಸವಾಲು ಹಾಕುತ್ತಾ ಬಂದಿದ್ದಾರೆ. ಈ ಹಿಂದೆ 25 ಪ್ರಶ್ನೆಗಳ ಸವಾಲನ್ನು ಆರಂಭಿಸಿದ್ದ ಅವರು ಇದೀಗ ತಮ್ಮ ಪ್ರಶ್ನೆಗಳ ಸಂಖ್ಯೆಯನ್ನು 20ಕ್ಕೆ ಇಳಿಸಿದ್ದು, ಮಾತ್ರವಲ್ಲದೇ ಬಹುಮಾನದ ಪ್ರಮಾಣವನ್ನು ಕೂಡ 1 ಲಕ್ಷ ರೂ. ನಿಂದ 10 ಲಕ್ಷ ರೂ.ಗಳಿಗೇರಿಸಿದ್ದಾರೆ.

ಜನರಲ್ಲಿ ಅದರಲ್ಲೂ ಮಕ್ಕಳು, ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದು ನನ್ನ ಗುರಿ. ಮುಕ್ತ ಮನಸ್ಸು ಹೊಂದಿದ್ದೇನೆ. ಜ್ಯೋತಿಷ್ಯವೂ ವಿಜ್ಞಾನವೆಂದು ಸಾಬೀತು ಮಾಡಿದರೆ ಒಪ್ಪಲು ತಯಾರಿದ್ದೇನೆ. ಜ್ಯೋತಿಷಿಗಳಿಂದ ಜನರು ವಂಚನೆಗೆ ಒಳಗಾಗಬಾರದು. ವೈಜ್ಞಾನಿಕ ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು, ಭವಿಷ್ಯ ರೂಪಿಸಬೇಕು ಎಂದು ನರೇಂದ್ರ ನಾಯಕ್‌ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *