ನಮ್ಮ ನಡುವಿನ ಮನು ನಮ್ಮೊಳಗಿನ ಸ್ಮೃತಿ

ಡಾ ಅಂಬೇಡ್ಕರ್ ಮನುಸ್ಮೃತಿಯ ಮುದ್ರಿತ ಅಕ್ಷರಗಳನ್ನು ಸುಟ್ಟುಹಾಕುವ ಮೂಲಕ ತಮ್ಮ ಹಾಗೂ ತಾವು ಪ್ರತಿನಿಧಿಸುವ ಶೋಷಿತ ಸಮುದಾಯದ ಆಕ್ರೋಶವನ್ನು ಸಾಂಕೇತಿಕವಾಗಿ ವ್ಯಕ್ತಪಡಿಸಿದ್ದರು. ಈ ಘಟನೆ ನಡೆದು ಶತಮಾನ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ನಾವು ಸುಡಬೇಕಿರುವುದು ನಮ್ಮ ಮನಸಿನಲ್ಲಿ ಬೇರೂರಿರುವ ಆ ಸ್ಮೃತಿಯ ಬೇರುಗಳನ್ನು ,ಪಳೆಯುಳಿಕೆಗಳನ್ನು. ಸುಶಿಕ್ಷಿತ, ಆಧುನಿಕ, ಪಾಶ್ಚಾತ್ಯ ಚಿಂತನೆ ಮತ್ತು ದೇಸಿ ಸಂಸ್ಕೃತಿಯನ್ನು ಮೇಳೈಸಿಕೊಂಡಿರುವ ಮಧ್ಯಮ ವರ್ಗಗಳಲ್ಲಿ, ಹಿತವಲಯದ “ನಾಗರಿಕ ಪ್ರಜೆಗಳಲ್ಲಿ”, ಇವರ ಪ್ರಜ್ಞೆಯಲ್ಲಿ ಬೇರೂರಿರುವ ಮನು ನಿರ್ವಚಿಸಿದ ಸ್ಮೃತಿಯನ್ನು ಸುಡುವುದು ನಮ್ಮ ಆದ್ಯತೆಯಾಗಬೇಕಿದೆ. ಈ ಸ್ಮೃತಿಯಿಂದ ಹೊರತಾಗಿದ್ದೇವೆ ಎಂದು ಮೇಲ್ನೋಟಕ್ಕೆ ಪ್ರದರ್ಶಿಸಿಕೊಳ್ಳುತ್ತಲೇ ಮನುಸ್ಮೃತಿಯ ಆರಾಧಕರೊಡನೆ ಗುರುತಿಸಿಕೊಂಡಿರುವವರೂ ಇದನ್ನು ತಮ್ಮ ಆದ್ಯತೆ ಎಂದೇ ಪರಿಗಣಿಸಬೇಕಿದೆ.  ಇಲ್ಲವಾದಲ್ಲಿ ಇಂದು ಮದುವೆಯಾಗಲು ಮತಾಂತರ ನಿಷಿದ್ಧ ಎನ್ನುವ ವ್ಯವಸ್ಥೆ ನಾಳೆ ಜಾತಿ ದೌರ್ಜನ್ಯದಿಂದ ಬೇಸತ್ತು ಮತಾಂತರವಾಗುವುದನ್ನೂ ನಿಷೇಧಿಸುತ್ತದೆ. ಅಂತರ್ ಧರ್ಮೀಯ ವಿವಾಹಗಳಂತೆಯೇ ಅಂತರ್ ಜಾತಿ ವಿವಾಹಗಳೂ ಸಹ ಮಸಣದಲ್ಲಿ ನ್ಯಾಯ ಕೇಳಬೇಕಾದ ವಿದ್ಯಮಾನಗಳಾಗಿಬಿಡುತ್ತವೆ. ನಾವು ಗ್ರಂಥದತ್ತ ನೋಡುತ್ತಿದ್ದೇವೆ ಅವರು ಸ್ಮೃತಿಯನ್ನು ವ್ಯವಸ್ಥಿತವಾಗಿ ಬಿತ್ತುತ್ತಿದ್ದಾರೆ. ಇದು ಯೋಚಿಸಬೇಕಾದ ವಿಚಾರವಲ್ಲವೇ ?
                –  ನಾ ದಿವಾಕರ
ಭಾರತ ಮತ್ತೊಮ್ಮೆ ವಿಕೃತಿಯೆಡೆಗೆ ಹೊರಳುತ್ತಿರುವಂತಿದೆ. ಮನುಕುಲದ ಅಸ್ತಿತ್ವವನ್ನೇ ಇಲ್ಲವಾಗಿಸುವ  ಯುದ್ಧಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಮನಸುಗಳು ಹೆಚ್ಚಾಗುತ್ತಿವೆ. ಮತ್ತೊಂದೆಡೆ ಮಾನವ ಸಮಾಜದಲ್ಲಿ ಸಹಜೀವನವನ್ನು ಗಟ್ಟಿಗೊಳಿಸುವ ಪ್ರೀತಿ ಪ್ರೇಮ ಬಾಂಧವ್ಯಗಳನ್ನು ಯುದ್ಧ ಎಂದು ಬಣ್ಣಿಸಲಾಗುತ್ತಿದೆ. ಪ್ರೀತಿ ಎನ್ನುವುದು ಒಂದು ರೀತಿಯಲ್ಲಿ ಯುದ್ಧವೇ ಸರಿ ಆದರೆ ಜೀವಕಂಟಕ ಯುದ್ಧವಲ್ಲ, ಎರಡು ಜೀವಗಳನ್ನು ಬೆಸೆಯುವ ಯುದ್ಧ. ಎರಡು ಹೃದಯ ಸಾಮ್ರಾಜ್ಯಗಳ ನಡುವೆ ನಡೆಯುವ ಯುದ್ಧದಲ್ಲಿ ಅಂತಿಮವಾಗಿ ಗೆಲ್ಲುವುದು ಮಾನವನ ಆಂತರ್ಯದಲ್ಲಿರುವ ಸಂವೇದನೆ, ಸಹನೆ ಮತ್ತು ಮಾನವೀಯತೆ. ಈ ಮೂರು ಮೌಲ್ಯಗಳು ಇಲ್ಲದಾದಾಗ ಇದು ಜಿಹಾದ್‍ನಂತೆ (ಧರ್ಮಯುದ್ಧ) ಕಾಣುತ್ತದೆ. ಭಾರತದಲ್ಲಿ ಆಗುತ್ತಿರುವುದೂ ಇದೇ.
20ನೆಯ ಶತಮಾನ ಇಡೀ ಮನುಕುಲಕ್ಕೆ ಸಂವೇದನೆಯನ್ನು ಕಲಿಸಬೇಕಿತ್ತು. ಏಕೆಂದರೆ ಇದು ಆಧುನಿಕ ಜಗತ್ತಿನ ಕನ್ನಡಿಯಂತೆ. ಒಂದು ಶತಮಾನದ ಅವಧಿಯಲ್ಲಿ ಮಾನವ ಸಮಾಜ ಕಂಡ ಸಾವು, ನೋವು, ಹಿಂಸೆ, ಕ್ರೌರ್ಯ, ದೌರ್ಜನ್ಯ ಮತ್ತು ವಿನಾಶಕಾರಿ ಬೆಳವಣಿಗೆಗಳು ನಮ್ಮಲ್ಲಿ, ಅಂದರೆ ಮಾನವ ಸಮಾಜದಲ್ಲಿ, ಮಾನವ ಪ್ರೀತಿಯನ್ನು, ಸೂಕ್ಷ್ಮ ಸಂವೇದನೆಯನ್ನು ಹೆಚ್ಚಿಸಬೇಕಿತ್ತು. ಭೀಕರ ಯುದ್ಧದ ನಡುವೆಯೂ ಪ್ರೀತಿಯನ್ನು ಹುಡುಕುವ ಹೃದಯಗಳು ಆಗಲೂ ಇದ್ದವು. ವಿಯಟ್ನಾಂ ಯುದ್ಧದ ಸಂದರ್ಭದಲ್ಲಿ, ಹಿಟ್ಲರನ ಕ್ರೌರ್ಯದ ನಡುವೆ, ತೈಲ ಮಾರುಕಟ್ಟೆಗಾಗಿ ನಡೆದ ವಿಧ್ವಂಸಕ ಸಮರಗಳಲ್ಲಿ, ಸಾಮ್ರಾಜ್ಯಶಾಹಿ ಬೆಳೆಸಿದ ಭಯೋತ್ಪಾದನೆಯಲ್ಲಿ, ಮತಧರ್ಮಗಳು ಬೆಳೆಸಿದ ಮತಾಂಧತೆಯಲ್ಲಿ ಪ್ರೀತಿಯನ್ನು ಹೆಕ್ಕಿ ತೆಗೆಯುವ ಪ್ರಯತ್ನಗಳೂ ನಡೆದೇ ಇದ್ದವು.
ಆದರೆ ಕೊನೆಯಲ್ಲಿ ಗೆದ್ದಿದ್ದು ಹಿಂಸೆಯೇ, ವಿಕ್ರಮ ಸಾಧಿಸಿದ್ದು ಯುದ್ಧಪರಂಪರೆಯೇ. ಪ್ರೀತಿಸಲು ಕಾರಣ ಬೇಕಿಲ್ಲ ಎರಡು ಹೃದಯಗಳು ಸ್ಪಂದಿಸಿದರೆ ಪ್ರೀತಿ ಹುಟ್ಟುತ್ತದೆ, ಎರಡೂ ಹೃದಯಗಳನ್ನು ಸಾಯಲು ಬಿಡದೆ ಕಾಪಾಡುತ್ತದೆ. ಆದರೆ ಯುದ್ಧ ಮಾಡಲು ಕಾರಣ ಬೇಕು. ನಿಮಿತ್ತ ಬೇಕು. ಅದು ಭೌಗೋಳಿಕ ಹಸಿವು, ಸಂಪತ್ತಿನ ಮೋಹ, ಅಧಿಪತ್ಯದ ಹಪಹಪಿ, ಶ್ರೇಷ್ಠತೆಯ ಪಾರಮ್ಯ, ದಿಗ್ವಿಜಯದ ಅಹಮಿಕೆ ಹೀಗೆ ಹಲವು ಕಾರಣಗಳು ಇಲ್ಲದೆ ಯುದ್ಧ ಸಂಭವಿಸುವುದಿಲ್ಲ. ಈ ಕಾರಣಗಳನ್ನು ನಾವು ಇಸ್ಲಾಂ ಹೆಸರಿನಲ್ಲಿ ಸಾವಿರಾರು ಕೊಲೆ ಮಾಡಿರುವ ಭಯೋತ್ಪಾದಕರಲ್ಲಿ, ಹಿಂದುತ್ವದ ಹೆಸರಿನಲ್ಲಿ ಸಾವಿರಾರು ಶವಯಾತ್ರೆಗಳನ್ನು ಸಂಭ್ರಮಿಸಿರುವ ಮತಾಂಧರಲ್ಲಿ,  ಜಾತಿ ಶ್ರೇಷ್ಠತೆಗಾಗಿ ನೂರಾರು ಜೀವಗಳನ್ನು ದಹಿಸಿ ವಿಕೃತಿ ಮೆರೆದಿರುವ ಮೇಲ್ಜಾತಿಗಳಲ್ಲಿ ಮತ್ತು ವರ್ಣಬೇಧ ನೀತಿಯನ್ನು ಸಂರಕ್ಷಿಸಲು ಪಣತೊಟ್ಟಿರುವ ಮನಸುಗಳಲ್ಲಿ ಕಾಣಲು ಸಾಧ್ಯ. 21ನೆಯ ಶತಮಾನದ ಆಧುನಿಕ ಭಾರತ, ಸಾವಿರಾರು ವರ್ಷಗಳ ಸಾಂಸ್ಕøತಿಕ ಪರಂಪರೆಯನ್ನು ಹೊಂದಿರುವ ಭಾರತ ಈ ವಿಕೃತಿಯಿಂದ ಹೊರಬರಬೇಕಿತ್ತು. ಏಕೆಂದರೆ ಜಗತ್ತಿನ ಯಾವುದೇ ಒಂದು ದೇಶದಲ್ಲಿ ಕಾಣಲಾಗದಷ್ಟು ಸಮಾಜ ಸುಧಾರಣೆಯ ಪ್ರಯತ್ನಗಳು ಇಲ್ಲಿ ನಡೆದಿವೆ. ಚಾರ್ವಾಕನಿಂದ ಅಂಬೇಡ್ಕರ್ ವರೆಗೆ ಇದನ್ನು ಕಂಡಿದ್ದೇವೆ.
ಆದರೆ ಈ ಮನಸ್ಥಿತಿ ಬದಲಾಗದಿರುವಂತೆ ಈ ದೇಶದ ಸ್ಥಾಪಿತ ಜಾತಿ ವ್ಯವಸ್ಥೆ ಮತ್ತು ಮತಧಾರ್ಮಿಕ ನೆಲೆಗಳು ಇತಿಹಾಸದ ಪ್ರತಿಯೊಂದು ಕಾಲಘಟ್ಟದಲ್ಲೂ ಎಚ್ಚರವಹಿಸಿವೆ. ಸಮಾಜ ಸುಧಾರಕರನ್ನು ತನ್ನೊಳಗೆ ಸಮೀಕರಿಸಿಕೊಳ್ಳುವ ಮೂಲಕ ಅಥವಾ ಸಂಪೂರ್ಣವಾಗಿ ನಿರಾಕರಿಸುವ ಮೂಲಕ ಅಥವಾ ಪರಂಪರೆ ಮತ್ತು ಸಾಂಸ್ಕೃತಿಕ ಇತಿಹಾಸದ ನೆಲೆಯಲ್ಲಿ ಯಥಾಸ್ಥಿತಿಯನ್ನು ಸಂರಕ್ಷಿಸುವ ಮೂಲಕ ವಿಕೃತ ಮನಸ್ಥಿತಿಯನ್ನು ಉಳಿಸಿಕೊಳ್ಳಲಾಗಿದೆ. ಈ ಮನಸ್ಥಿತಿಯನ್ನೇ ಮನುಸ್ಮೃತಿ ಎನ್ನುವ ಪ್ರಾಚೀನ ಸಂಹಿತೆಗಳ ಗ್ರಂಥ ಪ್ರತಿಪಾದಿಸುತ್ತದೆ. ಪ್ರೀತಿಸಬೇಕಾದ ಎರಡು ಹೃದಯಗಳು ಮತಧಾರ್ಮಿಕ ಕಾರಣದಿಂದಲೋ, ಜಾತಿ ಬೇಧದ ಕಾರಣದಿಂದಲೋ ಅಥವಾ ಶ್ರೇಷ್ಠ-ಕನಿಷ್ಠದ ಅಸ್ಮಿತೆಗಳ ಕಾರಣದಿಂದಲೋ, ಪರಿಶುದ್ಧತೆ ಮತ್ತು ಮಾಲಿನ್ಯದ ಕಾರಣದಿಂದಲೋ ಏಕೆ ದೂರವೇ ಇರಬೇಕು, ಹೇಗೆ ದೂರ ಇರಬೇಕು ಮತ್ತು ಒಂದು ವೇಳೆ ಹತ್ತಿರ ಬಂದರೆ ಏನೇನು ಅನಾಹುತಗಳು ಸಂಭವಿಸುತ್ತವೆ ಎಂದು ವ್ಯಾಖ್ಯಾನಿಸುವ ಒಂದು ಕೃತಿ ಮನುಸ್ಮೃತಿ. ಇದಕ್ಕಿಂತಲೂ ಹೆಚ್ಚಿನದಾಗಿ ಏನೂ ಹೇಳದ ಒಂದು ಗ್ರಂಥ. ಆದರೆ ಇದನ್ನು ಹೇಳಲು ಧರ್ಮಶಾಸ್ತ್ರಗಳನ್ನು ಉಲ್ಲೇಖಿಸುವ ಮೂಲಕ ಮೇಲ್ಜಾತಿಗಳಲ್ಲಿ ಸಾರ್ವಕಾಲಿಕ ಮಾನ್ಯತೆ ಪಡೆದಿರುವ ಒಂದು ಗ್ರಂಥ.
ಮನುಸ್ಮೃತಿಯ ಅನುಸರಣೆಗೆ ದೊರೆಯುವ ಮಾನ್ಯತೆ, ಈ ಗ್ರಂಥವನ್ನು ಧಿಕ್ಕರಿಸುವ ಧೋರಣೆಗೆ ದೊರೆಯುವುದಿಲ್ಲ ಎನ್ನುವುದೇ ಭಾರತೀಯ ಸಮಾಜದ ದೌರ್ಬಲ್ಯ . ಏಕೆ ಹೀಗೆ ? ಏಕೆಂದರೆ ನಾವು ಮನುಸ್ಮೃತಿ ಎನ್ನುವ ಗ್ರಂಥವನ್ನು ಮಾತ್ರ ಸುಟ್ಟಿದ್ದೇವೆ, ಈ ಗ್ರಂಥ ನಮ್ಮ ಸಾಮಾಜಿಕ ವಲಯದಲ್ಲಿ, ಸಾಂಸ್ಥಿಕವಾಗಿ, ವ್ಯಕ್ತಿಗತವಾಗಿ, ಸಂಘಟನಾತ್ಮಕವಾಗಿ ಮತ್ತು ರಾಜಕೀಯವಾಗಿ ಗಟ್ಟಿಯಾದ ನೆಲೆ ಕಂಡುಕೊಂಡಿದೆ. ಗ್ರಂಥದ ಅಧ್ಯಯನದ ಅವಶ್ಯಕತೆಯೇ ಇಲ್ಲದೆ,ಮನು ಎಂಬ ಒಬ್ಬ ಸನಾತನಿ ಭಾರತದಲ್ಲಿ ಬ್ರಾಹ್ಮಣ್ಯದ ನೆಲೆಯನ್ನು ಗಟ್ಟಿಗೊಳಿಸಲು ರೂಪಿಸಿದ ಸಂಹಿತೆಗಳನ್ನು ಚಾಚೂತಪ್ಪದಂತೆ ಪಾಲಿಸಿಕೊಂಡು ಬರುವ ಒಂದು ಬೃಹತ್ ಜನಸಮುದಾಯ ನಮ್ಮ ನಡುವೆ ಇದೆ. ಒಂದು ಸಮಾಜೋ ಸಾಂಸ್ಕೃತಿಕ ಪರಂಪರೆ ವ್ಯವಸ್ಥೆಯಾಗಿ ರೂಪುಗೊಂಡು, ಇಡೀ ಭೌಗೋಳಿಕ ಪ್ರದೇಶದ ಜನತೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನಲು ಇದೊಂದು ನಿದರ್ಶನ.
ಹಾಗಾಗಿಯೇ ಟಿ ವಿ ವಾಹಿನಿಯಲ್ಲಿ ಬರುವ ಒಂದು ಕಾರ್ಯಕ್ರಮದಲ್ಲಿ ಮನುಸ್ಮೃತಿಯ ದಹನದ ಪ್ರಶ್ನೆ ಕೇಳಿಬಂದರೆ ಈ ಸಮಾಜೋ ಸಾಂಸ್ಕೃತಿಕ ವ್ಯವಸ್ಥೆ ಸಿಡಿದೇಳುತ್ತದೆ. ಕೌನ್ ಬನೇಗ ಕರೋಡ್‍ಪತಿ ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಪ್ರಶ್ನೋತ್ತರದ ಒಂದು ಭಾಗವಾಗಿ ಮೂಡಿಬಂದಿದೆ. ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ಅಂಬೇಡ್ಕರ್ ವಾದಿಯೇನಲ್ಲ. ವ್ಯಕ್ತಿಗತ ನೆಲೆಯಲ್ಲಿ ಮನುಸ್ಮೃತಿಯನ್ನು ಕುರಿತು ಅವರ ನಿಲುವು ಏನು ಎನ್ನುವುದೂ ಅಸ್ಪಷ್ಟವೇ. ಆದರೂ ಅವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅಂದರೆ ಮನುಸ್ಮೃತಿ ಪ್ರಶ್ನಾತೀತವಾಗಿದೆ ಎಂದರ್ಥ ಅಲ್ಲವೇ ? ಭಾರತದ ಮಧ್ಯಮ ವರ್ಗಗಳಿಗೆ, ದಲಿತರನ್ನೂ ಸೇರಿದಂತೆ ಇದೊಂದು ಕ್ಷುಲ್ಲಕ ಘಟನೆಯಾಗಿ ಮರೆಯಾಗಿಬಿಡುತ್ತದೆ. ಪ್ರಸ್ತುತ ಆಡಳಿತದ ಚುಕ್ಕಾಣಿ ಹಿಡಿರುವ ಸಾಂಸ್ಕೃತಿಕ ರಾಜಕಾರಣಕ್ಕೆ ಇದು ಮತ್ತೊಂದು ರಸ್ತೆ ವಿಭಜಕವಾಗಿ ಜನರನ್ನು ಕವಲುಹಾದಿಗಳಲ್ಲಿ ನಿಲ್ಲಿಸಲು ಸಹಾಯಕವಾಗುತ್ತದೆ.
ಆದರೆ ಭಾರತದ ಸಾಮಾಜಿಕ-ಸಾಂಸ್ಕೃತಿಕ ಬದುಕಿನಲ್ಲಿ ಈ ಪ್ರಶ್ನೆ ಇನ್ನೂ ಬಹಳ ವರ್ಷಗಳ ಕಾಲ ಕೇಳಿಬರುತ್ತಲೇ ಇರುತ್ತದೆ. ಮನುಸ್ಮೃತಿ ಏಕೆ ಪ್ರಶ್ನಾತೀತವಾಗಿರಬೇಕು ?       “ ಡಾ ಅಂಬೇಡ್ಕರ್ ಮನುಸ್ಮೃತಿಯನ್ನು ದಹಿಸಲು ಕಾರಣವೇನು ” ಎಂಬ ವಿಚಾರದ ಬಗ್ಗೆ ಈ ದೇಶದ ಎಷ್ಟು ಶಾಲೆಗಳಲ್ಲಿ ಪ್ರಬಂಧ ಅಥವಾ ಚರ್ಚಾಸ್ಪರ್ಧೆ ಆಯೋಜಿಸಲು ಸಾಧ್ಯ ? ಈ ಪ್ರಶ್ನೆಯೇ ಎಷ್ಟು ಚರ್ಚಾಸ್ಪದವಾಗಬಹುದು. ಯೋಚಿಸೋಣ. ಡಾ ಬಿ ಆರ್ ಅಂಬೇಡ್ಕರ್ ಮನುಸ್ಮೃತಿಯನ್ನು ದಹಿಸುವ ಮೂಲಕ, ಆ ಗ್ರಂಥ ಭಾರತೀಯ ಸಮಾಜಕ್ಕೆ ಎಷ್ಟು ಅಪಾಯಕಾರಿ ಎನ್ನುವುದನ್ನು ಶೋಷಿತ ಸಮುದಾಯಗಳಿಗೆ ಮನದಟ್ಟು ಮಾಡಿದ್ದರು. ಹಾಗೆಯೇ “ ನಾವು ಇಂದು ಕೇವಲ ಗ್ರಂಥವನ್ನು ಸುಡುತ್ತಿದ್ದೇವೆ ಮುಂದೊಂದು ದಿನ ಈ ಗ್ರಂಥದಲ್ಲಿನ ಜಾತಿ ಶ್ರೇಷ್ಠತೆಯ ವಿಕೃತ ಚಿಂತನೆಗಳನ್ನೂ ಹೀಗೆಯೇ ದಹಿಸುತ್ತೇವೆ ” ಎಂದು ಈ ದೇಶದ ಜಾತಿ ವ್ಯವಸ್ಥೆಯ ವಾರಸುದಾರರಿಗೂ ಎಚ್ಚರಿಕೆಯ ಸಂದೇಶ ನೀಡಿದ್ದರು.
ಅವರ ಮೊದಲನೆಯ ಸಂದೇಶವನ್ನು ಈಗಲೂ ಭಾರತದ ಜಾತಿಪೀಡಿತ ಮನಸುಗಳು, ಶ್ರೇಷ್ಠತೆಯ ಪ್ರತಿಪಾದಕ ಸಮುದಾಯಗಳು ಪಠಿಸುತ್ತಿವೆ. ಆದರೆ ಎರಡನೆಯ ಸಂದೇಶ ಬಹುಶಃ ನೇಪಥ್ಯಕ್ಕೆ ಸರಿದಿದೆ. ಏಕೆಂದರೆ ಮನುಸ್ಮೃತಿ ಮತಧರ್ಮದ ಹೆಸರಿನಲ್ಲಿ ಆಚರಣಾತ್ಮಕವಾಗಿ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ನವ ಬ್ರಾಹ್ಮಣ್ಯ ಎಲ್ಲ ಜಾತಿಗಳಲ್ಲೂ ಆವರಿಸಿದೆ. ಜಾತಿ ಶ್ರೇಣೀಕರಣ ಮತ್ತು ಶ್ರೇಷ್ಠತೆಯನ್ನು ಪ್ರತಿಪಾದಿಸುವ ಮತ್ತು ಇದನ್ನು ಸಂರಕ್ಷಿಸುವ ಮೂಲಕವೇ ಜಾತಿಗಳ ಮೂಲಕ ಜನಸಾಮಾನ್ಯರನ್ನು ವಿಭಜಿಸುತ್ತಾ ಬ್ರಾಹ್ಮಣ್ಯದ ಪ್ರಾಬಲ್ಯವನ್ನು ಉಳಿಸಿಕೊಂಡು ಹೋಗುವ ಮನುಸ್ಮೃತಿಯ ಧ್ಯೇಯ ಸಾಧಿಸಲು ಸಂಘಪರಿವಾರ ತನ್ನದೇ ಆದ ವ್ಯೂಹ ರಚಿಸಿರುವುದನ್ನು ಹಿಂದುತ್ವ ರಾಜಕಾರಣದಲ್ಲಿ ನಾವು ಕಾಣಬೇಕಲ್ಲವೇ ?  ರಾಮಮಂದಿರ ಮತ್ತು ಕಾಶ್ಮೀರ ಈ ವ್ಯೂಹದ ಎರಡು ಧೃವಗಳು ಎನ್ನುವುದನ್ನು ಹಿಂದುತ್ವದೊಡನೆ ಗುರುತಿಸಿಕೊಂಡಿರುವ ಅಂಬೇಡ್ಕರ್ ಅನುಯಾಯಿಗಳಿಗೆ ಅರ್ಥವಾಗಬೇಕಲ್ಲವೇ ?
ಕಂಬಾಲಪಲ್ಲಿಯಿಂದ ಹಥ್ರಾಸ್‍ವರೆಗಿನ ಬೆಳವಣಿಗೆಗಳನ್ನು ಖೈರ್ಲಾಂಜಿಯ ಮೂಲಕ ಸೂಕ್ಷ್ಮವಾಗಿ ಗಮನಿಸಿದರೆ ಇದರ ಒಳಸುಳಿಗಳನ್ನು ನಾವು ಅರ್ಥಮಾಡಿಕೊಳ್ಳಬಹುದು. 20 ವರ್ಷಗಳ ಹಿಂದೆ, ಗತ ಶತಮಾನದ ಕೊನೆಯ ವರ್ಷದಲ್ಲಿ, ಕಂಬಾಲಪಲ್ಲಿಯಲ್ಲಿ ಒಂದು ದಲಿತ ಕುಟುಂಬದ ಸಜೀವ ದಹನವಾಗಿತ್ತು. ಏಳು ಜೀವಗಳು ಸುಟ್ಟುಹೋಗಿದ್ದವು. ಇಡೀ ದೇಶದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ದಲಿತ ಅಸ್ಮಿತೆ ಮತ್ತು ಜಾತಿ ಶ್ರೇಷ್ಠತೆಯ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಆರು ವರ್ಷಗಳ ನಂತರ 2006ರಲ್ಲಿ ಖೈರ್ಲಾಂಜಿಯಲ್ಲಿ ಇಬ್ಬರು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಸಾರ್ವಜನಿಕವಾಗಿಯೇ ಸಂಭವಿಸಿತ್ತು. ದಲಿತ ಹೆಣ್ಣುಮಕ್ಕಳ ಸಾರ್ವಜನಿಕ ಬೆತ್ತಲೆ ಮೆರವಣಿಗೆ ಮತ್ತು ಕೊಲೆ ಸದ್ದಿಲ್ಲದೆ ಅಡಗಿಹೋಯಿತು. 2020ರಲ್ಲಿ ಹಥ್ರಾಸ್‍ನಲ್ಲಿ ಒಂದು ಹೆಣ್ಣು ಮಗು ಮೇಲ್ಜಾತಿಯವರಿಂದ ಅತ್ಯಾಚಾರಕ್ಕೊಳಗಾಗಿ ಅಸುನೀಗಿದಳು. ಆಕೆಯ ಶವವನ್ನು ಸದ್ದಿಲ್ಲದೆ ಆಡಳಿತ ವ್ಯವಸ್ಥೆಯ ಮೇಲ್ವಿಚಾರಣೆಯಲ್ಲೇ ದಹಿಸಲಾಯಿತು.
ಕಂಬಾಲಪಲ್ಲಿಗೂ ಹಥ್ರಾಸ್‍ಗೂ ಇರುವ ವ್ಯತ್ಯಾಸವಾದರೂ ಏನು ? ಸುಟ್ಟವರು ಯಾರು ಎಂಬುದಷ್ಟೇ. ಎರಡೂ ಪ್ರಕರಣಗಳಲ್ಲಿ ಮತ್ತು ಖೈರ್ಲಾಂಜಿಯಲ್ಲೂ ಸಹ ದೌರ್ಜನ್ಯಕ್ಕೆ ಕಾರಣವಾಗಿದ್ದು ಮನುಸ್ಮೃತಿಯಲ್ಲಿ ಹೇಳಲಾಗುವ ಜಾತಿ ಶ್ರೇಷ್ಠತೆಯ ಪಾರಮ್ಯ ಮತ್ತು ಪ್ರಾಬಲ್ಯ . ಮನು ಅಪರಾಧಗಳನ್ನು ಶ್ರೇಣೀಕರಣಗೊಳಿಸುವಂತೆಯೇ ಅಪರಾಧಿಗಳನ್ನೂ ಶ್ರೇಣೀಕರಣಗೊಳಿಸುತ್ತಾನೆ. ಮನುಷ್ಯನ ಹುಟ್ಟು ಅವನ ಅಪರಾಧಿ ಸ್ಥಾನವನ್ನೂ ನಿರ್ಧರಿಸುತ್ತದೆ. ಮನುಸ್ಮೃತಿಯನ್ನು ರಚಿಸಿದ ಕಾಲಘಟ್ಟದಲ್ಲಿ ಭಾರತೀಯ ಸಮಾಜ ಇನ್ನೂ ನಾಗರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರಲಿಲ್ಲ ಎಂದು ಹೇಳಬಹುದಾದರೆ, ಇಂದಿನ ಪರಿಸ್ಥಿತಿಯಲ್ಲಿ ಏನು ಹೇಳಬಹುದು ? ಹಥ್ರಾಸ್ ಘಟನೆಯಲ್ಲೂ ಇದೇ ಅನಾಗರಿಕ ಪ್ರಜ್ಞೆ ಅನಾವರಣವಾಗಿರುವುದನ್ನು ಕಂಡಿದ್ದೇವೆ ಅಲ್ಲವೇ ?
ಈ ಮೂರೂ ಘಟನೆಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವುದಿಲ್ಲ ಎನ್ನುವುದು ನಿಶ್ಚಿತ. ಎರಡು ಘಟನೆಗಳನ್ನು ನಾವು ಮರೆತಿದ್ದೇವೆ. ನಡುವೆ ಊನ ಗ್ರಾಮದಲ್ಲಿ ನಡೆದ ಘಟನೆಯನ್ನು ಒಂದು ಸಿನೆಮಾದ ಚಿತ್ರೀಕರಣದಂತೆ ನೇಪಥ್ಯಕ್ಕೆ ಸರಿಸಿಬಿಟ್ಟಿದ್ದೇವೆ. ಹಥ್ರಾಸ್ ಸಹ ಮೆಲ್ಲನೆ ಬದಿಗೆ ಸರಿದುಬಿಡುತ್ತದೆ. ಇಷ್ಟರ ನಡುವೆ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ಒಂದು ಸಂದೇಶ ಮನುಸ್ಮೃತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತರುವಂತಿದೆ. ಅಸ್ಪೃಶ್ಯ ಸಮುದಾಯಗಳು, ದಲಿತರು ನಾಲ್ಕು ಗೋಡೆಗಳ ನಡುವೆ ಅನುಭವಿಸುವ ಜಾತಿ ನಿಂದನೆಯ ಅಪಮಾನಗಳು ಎಸ್‍ಸಿ/ಎಸ್‍ಟಿ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ದೇಶದ ಸರ್ವೋಚ್ಚ ನ್ಯಾಯಾಲಯವೇ ಹೇಳಿರುವುದನ್ನು ಗಮನಿಸಿದರೆ ಈ ದೇಶ ಸಂವಿಧಾನಕ್ಕಿಂತಲೂ ಹೆಚ್ಚು ಮನುಸ್ಮೃತಿಯನ್ನೇ ಅನುಸರಿಸುತ್ತಿದೆ ಎಂಬ ಶಂಕೆ ಕಾಡುತ್ತದೆ.
ಖೈರ್ಲಾಂಜಿ, ಕಂಪಾಲಪಲ್ಲಿ ಘಟನೆಗಳು “ಖುಲೇ ಆಕಾಶ್ ಕೆ ನೀಚೆ” ಎಂದು ಹಿಂದಿಯಲ್ಲಿ ಹೇಳುವಂತೆ ಎಲ್ಲರ ಕಣ್ಣೆದುರಿನಲ್ಲೇ ನಡೆಯಿತಲ್ಲವೇ ? ಅಲ್ಲಿ ಸಂತ್ರಸ್ತರಿಗೆ ನ್ಯಾಯ  ದೊರಕಿತೇ ? ಈ ದೇಶದ ಅಸ್ಪೃಶ್ಯ ಸಮುದಾಯದ ಅಮಾಯಕರು ನಾಲ್ಕು ಗೋಡೆಗಳ ನಡುವೆ ದೌರ್ಜನ್ಯ ಅಪಮಾನಗಳನ್ನು ಮೌನವಾಗಿ ಸಹಿಸುತ್ತಲೇ ಬಂದಿದ್ದಾರೆ. ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲೂ, ವಿದ್ಯಾಸಂಸ್ಥೆಗಳಲ್ಲೂ, ಪ್ರತ್ಯಕ್ಷವಾಗಿ ಪರೋಕ್ಷವಾಗಿ, ಬೌದ್ಧಿಕವಾಗಿ ಇದು ನಡೆಯುತ್ತಲೇ ಇರುತ್ತದೆ. ಅಪಮಾನ ಅಥವಾ ಮಾನಸಿಕ ಚಿತ್ರಹಿಂಸೆ ಎನ್ನುವುದು ವ್ಯಕ್ತಿಗತ ನೆಲೆಯಲ್ಲಿ ಒಂದು ನೊಂದ, ದಮನಿತ ಮನಸು ಅನುಭವಿಸುವ ಯಾತನೆಯೇ ಹೊರತು, ಸಾರ್ವಜನಿಕವಾಗಿ ನಿರ್ವಚಿಸಬಹುದಾದ ವಿದ್ಯಮಾನವಲ್ಲ. ನ್ಯಾಯ ವಿತರಣಾ ವ್ಯವಸ್ಥೆ ಸಾಕ್ಷಿ ಪುರಾವೆಗಳನ್ನು ಅವಲಂಬಿಸುವುದರಿಂದ ಈ ಸೂಕ್ಷ್ಮ ಅರ್ಥವಾಗದಿರಬಹುದು. ಆದರೆ ಕಾರ್ಯಾಂಗ ಮತ್ತು ಶಾಸಕಾಂಗಕ್ಕೆ ಅರ್ಥವಾಗಬೇಕಲ್ಲವೇ ?
ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಅಸ್ಪೃಶ್ಯ ಸಮುದಾಯವನ್ನು, ಶೋಷಿತರನ್ನು ಮತ್ತು ದಲಿತರನ್ನು ಪ್ರತಿನಿಧಿಸುವ ದೇಹಗಳು ಹೇರಳವಾಗಿವೆ. ಮನಸುಗಳು ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಏಕೆಂದರೆ ಅಧಿಕಾರ ಕೇಂದ್ರಗಳು ಈ ಮನಸುಗಳಲ್ಲಿ ಮನುಸ್ಮೃತಿಯ ಚಿಂತನೆಗಳನ್ನೇ ಬಿತ್ತುತ್ತವೆ. ಮನುಸ್ಮೃತಿ ಕೇವಲ ಒಂದು ಮತಧಾರ್ಮಿಕ ಸಂಹಿತೆಯಲ್ಲ. ಅಧಿಕಾರ ರಾಜಕಾರಣದ ಒಂದು ನೀತಿ ಸಂಹಿತೆಯೂ ಹೌದು. ಇದು ಕಳೆದ 20-30 ವರ್ಷಗಳ ರಾಜಕಾರಣದಲ್ಲಿ, ವಿಶೇಷವಾಗಿ ಹಿಂದುತ್ವ ರಾಜಕಾರಣ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯ ನೆಲೆಯಲ್ಲಿ ಸ್ಪಷ್ಟವಾಗಿದೆ. ಸುಪ್ರೀಂಕೋರ್ಟ್‍ನ ತೀರ್ಪು, ಹಥ್ರಾಸ್ ಘಟನೆಯ ಬಗ್ಗೆ ಶೋಷಿತ ಸಮುದಾಯಗಳ ಮೌನ ಮತ್ತು ಈ ಸಮುದಾಯವನ್ನು ಪ್ರತಿನಿಧಿಸುವವರ ಜಾಣ ಕುರುಡು ಇದನ್ನು ಮತ್ತಷ್ಟು ದೃಢಪಡಿಸುತ್ತದೆ.
ಮನುಸ್ಮೃತಿ ಇಲ್ಲಿ ತನ್ನ ಅಸ್ತಿತ್ವ ಮತ್ತು ಪ್ರಾಬಲ್ಯವನ್ನು ತೋರುತ್ತದೆ. ಅಪರಾಧದ ಶ್ರೇಣೀಕರಣ ಮತ್ತು ಅಪರಾಧಿಗಳ ಶ್ರೇಣೀಕರಣವನ್ನೂ ಸಹ ಮನುಸ್ಮೃತಿಯ ನೆಲೆಯಲ್ಲೇ ಇಂದಿನ ಆಡಳಿತ ವ್ಯವಸ್ಥೆ ನಿರೂಪಿಸುತ್ತಿದೆ.  ನಾವು ಮತಧಾರ್ಮಿಕ ಅಸ್ಮಿತೆ, ಜಾತಿ ಅಸ್ಮಿತೆ ಮತ್ತು ರಾಜಕೀಯ ನಿಷ್ಠೆಯ ಹೆಸರಿನಲ್ಲಿ ಇದನ್ನು ಗಮನಿಸುತ್ತಿಲ್ಲ. ಸ್ಟಾನ್ ಸ್ವಾಮಿ, ಆನಂದ ತೇಲ್ತುಂಬ್ಡೆ, ಸುಧಾ ಭರದ್ವಾಜ್, ಗೌತಮ್ ನವಲಖಾ, ವರಾವರರಾವ್, ಪ್ರೊ. ಸಾಯಿಬಾಬಾ ಇವರೆಲ್ಲರನ್ನೂ ಒಂದೆಡೆ ನಿಲ್ಲಿಸಿ ಅರ್ನಾಬ್ ಗೋಸ್ವಾಮಿಯನ್ನು ಮುಖಾಮುಖಿಯಾಗಿಸಿದಾಗ ನಮಗೆ ಮನುಸ್ಮೃತಿಯ ಶ್ರೇಣೀಕೃತ ವ್ಯವಸ್ಥೆಯ ವಿಕೃತ ಸ್ವರೂಪ ಸ್ಪಷ್ಟವಾಗಿ ಗೋಚರಿಸುತ್ತದೆ. ನವ ಬ್ರಾಹ್ಮಣ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಆಳವಾಗಿ ಬೇರೂರಿರುವಂತೆಯೇ ಆಡಳಿತ ವ್ಯವಸ್ಥೆಯಲ್ಲೂ ಬೇರೂರಿರುವುದನ್ನು ಈಗಲೂ ಗಮನಿಸದೆ ಹೋದರೆ ನಾವು ಸಂವಿಧಾನವನ್ನು ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು.
ಡಾ ಅಂಬೇಡ್ಕರ್ ಮನುಸ್ಮೃತಿಯ ಮುದ್ರಿತ ಅಕ್ಷರಗಳನ್ನು ಸುಟ್ಟುಹಾಕುವ ಮೂಲಕ ತಮ್ಮ ಹಾಗೂ ತಾವು ಪ್ರತಿನಿಧಿಸುವ ಶೋಷಿತ ಸಮುದಾಯದ ಆಕ್ರೋಶವನ್ನು ಸಾಂಕೇತಿಕವಾಗಿ ವ್ಯಕ್ತಪಡಿಸಿದ್ದರು. ಈ ಘಟನೆ ನಡೆದು ಶತಮಾನ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ನಾವು ಸುಡಬೇಕಿರುವುದು ನಮ್ಮ ಮನಸಿನಲ್ಲಿ ಬೇರೂರಿರುವ ಆ ಸ್ಮೃತಿಯ ಬೇರುಗಳನ್ನು ,ಪಳೆಯುಳಿಕೆಗಳನ್ನು. ಸುಶಿಕ್ಷಿತ, ಆಧುನಿಕ, ಪಾಶ್ಚಾತ್ಯ ಚಿಂತನೆ ಮತ್ತು ದೇಸಿ ಸಂಸ್ಕೃತಿಯನ್ನು ಮೇಳೈಸಿಕೊಂಡಿರುವ ಮಧ್ಯಮ ವರ್ಗಗಳಲ್ಲಿ, ಹಿತವಲಯದ “ನಾಗರಿಕ ಪ್ರಜೆಗಳಲ್ಲಿ”, ಇವರ ಪ್ರಜ್ಞೆಯಲ್ಲಿ ಬೇರೂರಿರುವ ಮನು ನಿರ್ವಚಿಸಿದ ಸ್ಮೃತಿಯನ್ನು ಸುಡುವುದು ನಮ್ಮ ಆದ್ಯತೆಯಾಗಬೇಕಿದೆ. ಈ ಸ್ಮೃತಿಯಿಂದ ಹೊರತಾಗಿದ್ದೇವೆ ಎಂದು ಮೇಲ್ನೋಟಕ್ಕೆ ಪ್ರದರ್ಶಿಸಿಕೊಳ್ಳುತ್ತಲೇ ಮನುಸ್ಮೃತಿಯ ಆರಾಧಕರೊಡನೆ ಗುರುತಿಸಿಕೊಂಡಿರುವವರೂ ಇದನ್ನು ತಮ್ಮ ಆದ್ಯತೆ ಎಂದೇ ಪರಿಗಣಿಸಬೇಕಿದೆ.
ಇಲ್ಲವಾದಲ್ಲಿ ಇಂದು ಮದುವೆಯಾಗಲು ಮತಾಂತರ ನಿಷಿದ್ಧ ಎನ್ನುವ ವ್ಯವಸ್ಥೆ ನಾಳೆ ಜಾತಿ ದೌರ್ಜನ್ಯದಿಂದ ಬೇಸತ್ತು ಮತಾಂತರವಾಗುವುದನ್ನೂ ನಿಷೇಧಿಸುತ್ತದೆ. ಅಂತರ್ ಧರ್ಮೀಯ ವಿವಾಹಗಳಂತೆಯೇ ಅಂತರ್ ಜಾತಿ ವಿವಾಹಗಳೂ ಸಹ ಮಸಣದಲ್ಲಿ ನ್ಯಾಯ ಕೇಳಬೇಕಾದ ವಿದ್ಯಮಾನಗಳಾಗಿಬಿಡುತ್ತವೆ. ನಾವು ಗ್ರಂಥದತ್ತ ನೋಡುತ್ತಿದ್ದೇವೆ ಅವರು ಸ್ಮೃತಿಯನ್ನು ವ್ಯವಸ್ಥಿತವಾಗಿ ಬಿತ್ತುತ್ತಿದ್ದಾರೆ. ಇದು ಯೋಚಿಸಬೇಕಾದ ವಿಚಾರವಲ್ಲವೇ ?

 

Donate Janashakthi Media

One thought on “ನಮ್ಮ ನಡುವಿನ ಮನು ನಮ್ಮೊಳಗಿನ ಸ್ಮೃತಿ

Leave a Reply

Your email address will not be published. Required fields are marked *