ಕಲಬುರಗಿಯಲ್ಲಿ ನಿರಂತರ ಮಳೆ: 400ಕ್ಕೂ ಹೆಚ್ಚು ಜನರ ಸ್ಥಳಾಂತರ

ಕಲಬುರಗಿ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಲವೆಡೆ ರಸ್ತೆ ಸಂಚಾರ ಬಂದ್‌ ಆಗಿದ್ದೂ, ನೀರು ನುಗ್ಗಿದ ಹಲವು ಗ್ರಾಮಗಳ 400ಕ್ಕೂ ಹೆಚ್ಚು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ. ಕಲಬುರಗಿ

ಬೆಣ್ಣೆತೊರಾ ನದಿ ನೀರು ನುಗ್ಗಿದ ಪರಿಣಾಮ ಕಾಳಗಿ ತಾಲೂಕಿನ ಹಳೇ ಹೆಬ್ಬಾಳ ಗ್ರಾಮದ ಸುಮಾರು 250 ಜನರನ್ನು ಹಾಗೂ ಕಣಸೂರು ಗ್ರಾಮದ ಸುಮಾರು 150 ಜನರನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಕಾಳಗಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಾದ ಹೆಬ್ಬಾಳ, ಕಣಸೂರು, ಕಲಗುರ್ತಿ, ಮಲಘಾಣ ಹಾಗೂ ಟೆಂಗಳಿ ಗ್ರಾಮಗಳಲ್ಲಿ ರಾತ್ರಿಯಿಂದಲೇ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಕುಡಿಯುವ ನೀರು, ಊಟ, ಬೆಳಗಿನ ಉಪಹಾರ ಒದಗಿಸಲಾಗಿದೆ.

ಕಾಳಗಿ ತಾಲೂಕು ಕಣಸೂರು ಗ್ರಾಮದ ಬ್ರಿಡ್ಜ್‌ ಮೇಲೆ ನೀರು ಬಂದಿರುವ ಪ್ರಯುಕ್ತ ಕಲಬುರಗಿ – ಚಿಂಚೋಳಿ(ಕಾಳಗಿ ಮಾರ್ಗವಾಗಿ) ರಸ್ತೆ ಸಂಪೂರ್ಣ ಬಂದ್‌ ಆಗಿದೆ. ಹೆಬ್ಬಾಳ, ಕಲಗುರ್ತಿ ಹಾಗೂ ಟೆಂಗಳಿ ಬ್ರಿಜ್‌ಗಳು ನದಿ ನೀರಿನಿಂದ ಮುಳುಗಿವೆ.

ಇದನ್ನೂ ಓದಿ: ಸಾರಿಗೆ ನಿಗಮಗಳ ಬಸ್ ದರ ಪರಿಷ್ಕರಣೆಗೆ ಸಮಿತಿ ರಚನೆ

ಜಿಲ್ಲೆಯಲ್ಲಿ ಕಾಳಗಿ ಮತ್ತು ಚಿತ್ತಾಪುರ ತಾಲೂಕಿನಲ್ಲಿಮನೆಗಳಿಗೆ ಹಾನಿಯಾಗಿದೆ ಎನ್ನಲಾಗಿದ್ದು, ಹೆಬ್ಬಾಳ ಗ್ರಾಮವೊಂದರಲ್ಲೇ ಸುಮಾರು 100 ಮನೆಗಳಿಗೂ ಹೆಚ್ಚು ಹಾನಿ ಸಂಭವಿಸಿದೆ ಎನ್ನಲಾಗಿದೆ.

ನೋಡಲ್‌ ಅಧಿಕಾರಿಗಳು

1. ಹೆಬ್ಬಾಳ: ಅಣವೀರಭದ್ರೇಶ್ವರ ಸಮುದಾಯ ಭವನ ಹಾಗೂ ಹಿರಿಯ ಪ್ರಾಥಮಿಕ ಶಾಲೆ (ಕಾಳಜಿ ಕೇಂದ್ರ ಗಳು) ತಾಲೂಕು ನೋಡೆಲ್‌ ಆಫೀಸರ್‌: ಬಸಲಿಂಗಪ್ಪ ಡಿಗ್ಗಿ, ಮೊ.ನಂ. 95907 09252.

2. ಕಣಸೂರು: ತಾಲೂಕು ನೋಡೆಲ್‌ ಆಫೀಸರ್‌: ಪಂಕಜಾ, ಮೊ.ನಂ.94488 58285.

3. ಟೆಂಗಳಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಲೂಕು ನೋಡಲ್‌ ಆಫೀಸರ್‌: ಪ್ರಜ್ಞಾ ಎಇಇ, ಲೋಕೋಪಯೋಗಿ ಇಲಾಖೆ- ಮೊ.9902120046.

4. ಕಾಳಗಿ: ತಹಸೀಲ್ದಾರ್‌ ಪೃಥ್ವಿರಾಜ್‌ ಪಾಟೀಲ್‌- ಮೊ.ನಂ.99006 17871, ಚಿತ್ತಾಪುರ ತಹಸೀಲ್ದಾರ್‌ ನಾಗಯ್ಯ ಹಿರೇಮಠ ಮೊ.ನಂ. 99003 41212.

ಪ್ರವಾಹ ಗ್ರಾಮಗಳಲ್ಲಿ ಪರಿಹಾರಕ್ಕೆ ಸೂಚನೆ: ತುರ್ತುಕ್ರಮಕ್ಕೆ ಜಿಲ್ಲಾಡಳಿತಕ್ಕೆ ನಿರ್ದೇಶನ

ಜಿಲ್ಲೆಯಲ್ಲಿ ನಿರಂತರವಾಗಿ ಧಾರಾಕಾರ ಮಳೆ  ಸುರಿಯುತ್ತಿದ್ದು, ಮಳೆ ಹಾಗೂ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಬೆಣ್ಣೆತೊರಾ ನದಿ ತುಂಬಿ ಹರಿಯುತ್ತಿದ್ದು, ಕಾಳಗಿ ಹಾಗೂ ಚಿತ್ತಾಪುರ ತಾಲೂಕಿನ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಸರಕಾರಿ ಶಾಲೆಗಳು, ಸಮುದಾಯ ಭವನಗಳು ಸೇರಿ ದೇವಸ್ಥಾನಗಳನ್ನು ಕಾಳಜಿ ಕೇಂದ್ರಗಳನ್ನಾಗಿ ಮಾಡಿ ಪ್ರವಾಹ ಪೀಡಿತ ಗ್ರಾಮಗಳ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕಾಳಗಿ ತಾಲೂಕಿನ ಹಳೇ ಹೆಬ್ಬಾಳ, ಕಣಸೂರು, ಕಲಗುರ್ತಿ ಹಾಗೂ ಟೆಂಗಳಿ ಗ್ರಾಮಗಳಿಗೆ ನೀರು ನುಗ್ಗಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಹದಿಂದ ನೀರು ನುಗ್ಗಿರುವ ಮನೆಗಳ ನಿವಾಸಿಗಳಿಗೆ ತೊಂದರೆಯಾಗದಂತೆ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದ್ದು, ಅವರಿಗೆ ಊಟದ ವ್ಯವಸ್ಥೆ, ಕುಡಿಯುವ ನೀರು ಹಾಗೂ ಬೆಡ್‌ಶೀಟ್‌ ಸೇರಿ ಅಗತ್ಯ ಸೌಲಭ್ಯ ಒದಗಿಸಲಾಗಿದ್ದು, ನಿನ್ನೆ ತಡರಾತ್ರಿವರೆಗೆ ಸಿಇಒ ಭಂವರ್‌ ಸಿಂಗ್‌ ಮೀನಾ ಹಾಗೂ ಎಸ್‌ ಪಿ ಅಡ್ಡೂರು ಶ್ರೀನಿವಾಸಲು ಸ್ಥಳದಲ್ಲೇ ಇದ್ದು ಅಗತ್ಯ ಕ್ರಮವಹಿಸಿದ್ದಾರೆ.

ಇಒ, ತಹಸೀಲ್ದಾರ್‌, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ಪೊಲೀಸ್‌ ಸಿಬ್ಬಂದಿ ಸೇರಿ ಸರಕಾರಿ ಇಲಾಖೆ ಅಧಿಕಾರಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಮನೆ ಹಾನಿ ಬಗ್ಗೆ ಕೂಡಲೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಜಿಲ್ಲಾಧಿಕಾರಿ ಹಾಗೂ ಸಿಇಒಗೆ ಅಗತ್ಯ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಗುಂಡಗುರ್ತಿ ಗ್ರಾಮಕ್ಕೆ ನೀರು:

ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಹಲವು ಮನೆಗಳಿಗೆ ನೀರು ನುಗ್ಗಿದ್ದು ಸ್ಥಳಕ್ಕೆ ತಹಸೀಲ್ದಾರ್‌, ಇಒ ಸೇರಿ ಅಧಿಕಾರಿಗಳು ಭೇಟಿ ನೀಡಿದ್ದು, ಅಗತ್ಯ ಕ್ರಮವಹಿಸುತ್ತಿದ್ದಾರೆ. ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು ಗ್ರಾಮಸ್ಥರಿಗೆ ಅಗತ್ಯ ಅನುಕೂಲ ಮಾಡಿಕೊಡಲಾಗಿದೆ.

ದಂಡೋತಿ, ಕದ್ದರಗಿ ಹಾಗೂ ಮುಗಟಾ ಗ್ರಾಮದ ಬಳಿಯ ಸೇತುವೆಗಳು ಮುಳುಗಡೆ ಭೀತಿ ಎದುರಿಸುತ್ತಿದ್ದು ಸಾರ್ವಜನಿಕರಿಗಾಗಿ ಸೂಕ್ತ ಕ್ರಮವಹಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | ಅಸಹಜ ಸಾವುಗಳಿಗೂ, ಭೂ ಕಬಳಿಕೆ, ಮೈಕ್ರೋಫೈನಾನ್ಸ್‌ಗೂ ಲಿಂಕ್‌ ಇದೆಯಾ?

Donate Janashakthi Media

Leave a Reply

Your email address will not be published. Required fields are marked *