ನಿಷೇಧಾಜ್ಞೆ ಜಾರಿ: ಮುಂಬೈ ರೈಲ್ವೆ ನಿಲ್ದಾಣದಲ್ಲಿ ನೂಕುನುಗ್ಗಲು

ಮುಂಬೈ: ಕೋವಿಡ್‌-19 ಸಾಂಕ್ರಾಮಿಕ ರೋಗ ನಿವಾರಣೆಗಾಗಿ ಮಹಾರಾಷ್ಟ್ರ ಸರ್ಕಾರವು ಇಡೀ ರಾಜ್ಯದಲ್ಲಿ ಸಾರ್ವಜನಿಕರ ನಿರ್ಬಂಧ ಹೇರಿ 144 ಸೆಕ್ಷನ್‌ ಜಾರಿ ಮಾಡಿದೆ. ಇದರ ಬೆನ್ನಲ್ಲೆ ತಮ್ಮ ತಮ್ಮ ಊರುಗಳಿಗೆ ಪ್ರಯಣಿಸುವುದಕ್ಕಾಗಿ ಜನತೆ ಇಂದು ಮುಂಬೈ ನಗರದ ಲೋಕಮಾನ್ಯ ತಿಲಕ್ ಟರ್ಮಿನಲ್‌‌ (ಎಲ್‌ಎಲ್‌ಟಿ) ರೈಲ್ವೆ ನಿಲ್ದಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ಜಮಾಯಿಸಿದ್ದಾರೆ.

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವದರಿಂದ ರಾಜ್ಯದಲ್ಲಿ ಸಂಪೂರ್ಣವಾಗಿ ಲಾಕ್‌ಡೌನ್‌ ಎದುರಾಗಬಹುದೆಂಬ ಭೀತಿಯಿಂದ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿನ ವಲಸೆ ಕಾರ್ಮಿಕರು ಮತ್ತೆ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ಇದನ್ನು ಓದಿ : ಇಂದು ದಾಖಲಾದ ಕೋವಿಡ್‌ ಪ್ರಕರಣಗಳ ವಿವರ

ಮುಂಬೈ ಮತ್ತು ಪುಣೆ ರೈಲ್ವೆ ನಿಲ್ದಾಣದ ಲೋಕಮಾನ್ಯ ತಿಲಕ್ ಟರ್ಮಿನಸ್ ಕಳೆದ ಕೆಲವು ದಿನಗಳಿಂದ ಭಾರಿ ಜನದಟ್ಟಣೆ ಉಂಟಾಗುತ್ತಿದೆ.

ಜನರನ್ನು ನಿಯಂತ್ರಣಕ್ಕೆ ತರಲು ರೈಲ್ವೆ ಸಂರಕ್ಷಣಾ ಪಡೆ ಮತ್ತು ರೈಲ್ವೆ ಪೊಲೀಸರು ನಿಲ್ದಾಣದ ಹೊರಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿದೆ. ಇದೇ ವೇಳೆ ಸಾರ್ವಜನಿಕರು ಭೀತಿಗೊಳ್ಳದಂತೆ ಜಾಗ್ರತೆ ವಹಿಸಬೇಕೆಂದು ಕೇಂದ್ರ ರೈಲ್ವೆ ಪೊಲೀಸರು ಮನವಿ ಮಾಡಿದರು.

ಮಹಾರಾಷ್ಟ್ರ ಸರ್ಕಾರ ಮುಂದಿನ 15 ದಿನಗಳ ಕಾಲ ರಾಜ್ಯದಲ್ಲಿ ಜನರ ಸಂಚಾರದ ಮೇಲೆ ತೀವ್ರ ನಿರ್ಬಂಧಗಳನ್ನು ವಿಧಿಸಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಇನ್ನೆಲ್ಲ ಚಟುವಟಿಕೆಗಳ ಮೇಲೆ ರಾತ್ರಿ 8 ರಿಂದ ಬೆಳಿಗ್ಗೆ 7 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ. ಇದು ಮೇ 1ರವರೆಗೆ ಜಾರಿಯಲ್ಲಿರುತ್ತದೆ. ಈಗಾಗಲೇ ಮಹಾರಾಷ್ಟ್ರದ ಕೆಲವು ನಗರಗಳಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಇದನ್ನು ಓದಿ: ಕೊರೊನಾ ನಿಯಂತ್ರಣ: ತಾಂತ್ರಿಕ ಸಲಹಾ ಸಮಿತಿಯಿಂದ 13 ಅಂಶಗಳ ಶಿಫಾರಸ್ಸು

‘ಈಗ ವಿಶೇಷ ರೈಲುಗಳಲ್ಲಿ ತೆರಳುವ, ಟಿಕೆಟ್ ಖಚಿತವಾಗಿರುವ ಪ್ರಯಾಣಿಕರಿಗಷ್ಟೇ ರೈಲ್ವೆ ನಿಲ್ದಾಣ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಅಂಥ ಪ್ರಯಾಣಿಕರು ರೈಲು ಹೊರಡುವ ಒಂದೂವರೆ ಗಂಟೆ ಮುನ್ನ ನಿಲ್ದಾಣವನ್ನು ತಲುಪುವಂತೆ ಸೂಚಿಸಲಾಗಿದೆ‘ ಎಂದು ಕೇಂದ್ರ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್‌ ‘ಸುದ್ದಿ ಸಂಸ್ಥೆ‘ಗೆ ಮಾಹಿತಿ ನೀಡಿದರು.

ಎಎನ್‌ಐ ಸುದ್ದಿಸಂಸ್ಥೆಯಿಂದಿಗೆ ಮಾತನಾಡಿದ ಉತ್ತರ ಪ್ರದೇಶದ ವಾರಣಾಸಿ ಮೂಲದ ಶಿವಂ ಪಾಂಡೆ ಅವರು ಮತ್ತೆ ಲಾಕ್‌ಡೌನ್ ನೋವನ್ನು ಅನುಭವಿಸಲು ಸಾಧ್ಯವಿಲ್ಲ. ಈಗ ಕರ್ಫ್ಯೂ ವಿಧಿಸಲಾಗಿದೆ. ನಾವು ಇಲ್ಲಿ ಏನು ಮಾಡುತ್ತೇವೆ? ನಾವು ಏನು ತಿನ್ನುತ್ತೇವೆ? ಲಾಕ್ ಡೌನ್ ಸಮಯದಲ್ಲಿ ನಾವು ಅನುಭವಿಸಿದ ನೋವನ್ನು ಮತ್ತೆ ಅನುಭವಿಸುವುದಿಲ್ಲ ಹಾಗಾಗಿ ನಾವು ನಗರವನ್ನು ತೊರೆಯುತ್ತಿದ್ದೇವೆ ಎಂದು ಹೇಳಿದರು.

ಕೋವಿಡ್‌ನಿಂದಾಗಿ ರಾಜ್ಯ ಸರ್ಕಾರವು ಹೊಸ ನಿರ್ಬಂಧಗಳನ್ನು ಘೋಷಿಸಿದಾಗಿನಿಂದ ಹೊರವಲಯದ ರೈಲುಗಳ ವಿಪರೀತ ಏರಿಕೆಯಾಗಿದ್ದರೂ, ಮಹಾನಗರದ ವಿವಿಧ ನಿಲ್ದಾಣಗಳಿಂದ ತಮ್ಮ ಸ್ವಂತ ಊರುಗಳಿಗೆ ತೆರಳಲು ಪ್ರಯಾಣಿಕರ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಳ್ಳುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *