ಕಾವೇರಿಗಾಗಿ ಎರಡೂ ರಾಜ್ಯಗಳು ಕಲಹಕ್ಕಿಳಿದಿದ್ದು ಸಾಕು: ಹೆಚ್‌ ಡಿ ಕುಮಾರಸ್ವಾಮಿ

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರವಾಗಿ ಮತ್ತೆ ತಮಿಳುನಾಡು ಕರ್ನಾಟಕದ ಎರಡು ರಾಜ್ಯಗಳ ನಡುವಿನ ವಿವಾದ ಮತ್ತೆ ಮುನ್ನಲೆ ಬಂದಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕಾವೇರಿಗಾಗಿ ಎರಡೂ ರಾಜ್ಯಗಳು ಕಲಹಕ್ಕಿಳಿದಿದ್ದು ಸಾಕು. ದಕ್ಷಿಣ ಭಾರತೀಯರಾಗಿ ಈಗ ನಾವು ಕಲಹ ಮಾಡುವ ಸಂದರ್ಭವಿಲ್ಲ. ಸೋದರತೆ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು. ಈ ಮೂಲಕ ನಾವು ಒಗ್ಗಟ್ಟಾಗೇ ಉಳಿಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಪಕ್ಷದ ನಾಯಕ ಹೆಚ್‌ ಡಿ ಕುಮಾರಸ್ವಾಮಿ ಅವರು ಸರಕಾರದ ಕಾರ್ಯವೈಖರಿ ಬಗ್ಗೆ ತಿಳಿಸಿದ್ದಾರೆ.

ಇದನ್ನು ಓದಿ: ಮುಖ್ಯಮಂತ್ರಿಗಳಿಂದ ನಾಳೆ ಜಿಲ್ಲಾಧಿಕಾರಿಗಳೊಂದಿಗೆ ಮಹತ್ವದ ಸಭೆ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ತಮಿಳುನಾಡು ಸಿಎಂ ಸ್ಟ್ಯಾಲಿನ್ ಅವರು ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡದಂತೆಯೂ, ಈ ವರ್ಷ ತಮಿಳುನಾಡಿಗೆ ಸಿಗಬೇಕಾದ ನೀರಿನ ವಿಚಾರದಲ್ಲಿ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎಚ್. ಡಿ. ಕುಮಾರಸ್ವಾಮಿ ಸರಣಿ ಟ್ವೀಟ್‌ ಮಾಡಿ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ತಮಿಳುನಾಡು ಸರಕಾ ಮೇಕೆದಾಟು ಜಲಾಶಯ–ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಪ್ರತಿಕೂಲವಾಗುವಂಥ ಹೆಜ್ಜೆ ಇಟ್ಟಿದೆ. ಇದರ ಬಗ್ಗೆ ಗಮನಹರಿಸಬೇಕಿದ್ದ ರಾಜ್ಯದ ಬಿಜೆಪಿ ಸರ್ಕಾರ ಆಂತರಿಕ ಕಲಹದಿಂದ ಶರಶಯ್ಯೆಯಲ್ಲಿದೆ. ಸರ್ಕಾರವನ್ನೇ ನಡೆಸಲಾಗದೇ ನಲುಗಿ ಹೋಗಿರುವ ಬಿಜೆಪಿಗೆ ಇನ್ನು ನೆಲ–ಜಲ, ಭಾಷೆ–ನುಡಿಯ ಬಗ್ಗೆ ಅಕ್ಕರೆ ಇದ್ದೀತೆ? ಎಂದು ಹೆಚ್‌ ಡಿ ಕುಮಾರಸ್ವಾಮಿ ಅವರು ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಈ ಬಗ್ಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಬೇಕಿದ್ದ ಆಡಳಿತಾರೂಢ ಬಿಜೆಪಿ ಮೈಮರೆತು ಕುಳಿತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಮೇಕೆದಾಟು ಅಣೆಕಟ್ಟು ಯೋಜನೆ ರೂಪಿಸಲೂ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಆಗಿರಲಿಲ್ಲ. ನನ್ನ ಸರ್ಕಾರ ಅದನ್ನು ಜಾರಿಗೆ ತಂದು ಧೈರ್ಯ ತೋರಿತು. ಆದರೆ, ಅದನ್ನು ಉಳಿಸಿಕೊಳ್ಳಲೂ ಬಿಜೆಪಿಗೆ ಆಗುತ್ತಿಲ್ಲ. ರಾಜ್ಯ–ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಯೋಜನೆ ಅನಿಶ್ಚಿತತೆ ಎದುರಿಸುತ್ತಿದೆ. ಸ್ವರ್ಗ ಸೃಷ್ಟಿಸುವ ಬಿಜೆಪಿ ಮಾತು ಸುಳ್ಳಾಗಿದೆ ಎಂದು ಬಿಜೆಪಿಯ ವಿರುದ್ದ ಕುಮಾರಸ್ವಾಮಿ ಅವರು ಚಾಟಿ ಬೀಸಿದ್ದಾರೆ.

ಇದನ್ನು ಓದಿ: ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗಬಹುದೆಂದು ವರಿಷ್ಠರ ಗಮನಕ್ಕೆ ತಂದಿರುವೆ: ಹೆಚ್‌ ವಿಶ್ವನಾಥ್‌

ರಾಜ್ಯದ ಜನ ಗಮನಿಸಬೇಕು. ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವುದು ಪ್ರಾದೇಶಿಕ ಪಕ್ಷ. ಪ್ರಾದೇಶಿಕತೆ, ಅಸ್ಮಿತೆ ವಿಚಾರದಲ್ಲಿ ತಮಿಳುನಾಡು ಪ್ರಬಲವಾಗಿದೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳೇ ಹೆಚ್ಚು ಅಧಿಕಾರದಲ್ಲಿದ್ದರೂ ರಾಜ್ಯದ ಅಸ್ಮಿತೆ, ಪ್ರಾದೇಶಿಕತೆ ರಕ್ಷಣೆ ಸಾಧ್ಯವಾಗುತ್ತಿಲ್ಲ. ರಾಜ್ಯದ ಹಿತರಕ್ಷಣೆಗೆ ಪ್ರಾದೇಶಿಕ ಪಕ್ಷವೇ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಸ್ಟಾಲಿನ್‌ ಒಂದು ಮಾತು ಹೇಳಿದ್ದರು. ಸಂವಿಧಾನದ 8ನೇ ಪರಿಚ್ಛೇದದಡಿ ಮಾನ್ಯತೆ ನೀಡಲಾಗಿರುವ ಎಲ್ಲ ಭಾಷೆಗಳಿಗೆ ಅಧಿಕೃತ ಭಾಷೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದರು. ಈ ಪ್ರಯತ್ನದಲ್ಲಿ ನಾನೂ ಕೈಜೋಡಿಸುತ್ತೇನೆ. ಆದರೆ, ಅಣ್ಣತಮ್ಮಂದಿರಂತೆ ಇರಬೇಕಾದ ನಾವು ಕಾವೇರಿ ವಿಚಾರದಲ್ಲಿ ಕಲಹಕ್ಕಿಳಿಯುವುದರಲ್ಲಿ ಲಾಭವಿಲ್ಲ.

ದಕ್ಷಿಣ ಭಾರತದ ರಾಜ್ಯಗಳು, ಭಾಷೆ, ಸಂಸ್ಕೃತಿ ವಿಚಾರದಲ್ಲಿ ಈಗಿನ ಕೇಂದ್ರ ಸರ್ಕಾರ ಅತ್ಯಂತ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದೆ. ಇಂಥ ಹೊತ್ತಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಕಾವೇರಿ ವಿಚಾರದ ಮೂಲಕ ಒಡೆದು ಹೋಗಬಾರದು. ನಮ್ಮ ಅಸ್ಮಿತೆಗಳ ರಕ್ಷಣೆಗಾಗಿ ನಾವು ಈಗ ಒಗ್ಗಟ್ಟಿನಿಂದ ಇರಬೇಕಾದ ಕಾಲ ಎಂಬುದನ್ನು ಸ್ಟಾಲಿನ್‌ ಗಮನಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ತಮಿಳುನಾಡು ಸರ್ಕಾರ ಮೇಕೆದಾಟು ಜಲಾಶಯವನ್ನು ಆಗಲು ಬಿಡಲಿ. ಇದರಿಂದ ತಮಿಳುನಾಡಿಗೆ ಯಾವ ತೊಂದರೆಯೂ ಇಲ್ಲ ಎಂಬುದನ್ನು ಈಗಾಗಲೇ ವಿವರಿಸಲಾಗಿದೆ. ಇದು ನೀರಾವರಿ ಉದ್ದೇಶದ ಯೋಜನೆಯಲ್ಲ. ಬದಲಿಗೆ ಕುಡಿಯುವ ನೀರಿನ ಉದ್ದೇಶದ ಯೋಜನೆಯಾಗಿದೆ. ಈ ವಿಚಾರವನ್ನು ಸ್ಟಾಲಿನ್‌ ಅವರು ಗಮನಿಸಬೇಕು. ಜಲಾಶಯದ ವಿಚಾರದಲ್ಲಿ ಕರ್ನಾಟಕದೊಂದಿಗೆ ಸಹಕರಿಸಬೇಕು ಎಂದಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಕರ್ನಾಟಕ ರಾಜ್ಯವು ತಮಿಳುನಾಡಿಗೆ ನಿಗದಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ಕೊಟ್ಟಿದೆ. ಪಕೃತಿ ಸಹಕರಿಸಿದಾಗ ಹೆಚ್ಚಿನ ನೀರನ್ನು ಹರಿಸಿದೆ. ಬರಗಾಲದಂಥ ಸಂದರ್ಭದಲ್ಲೂ ಕರ್ನಾಟಕವು ತಮಿಳುನಾಡಿಗೆ ಎಂದೂ ದ್ರೋಹ ಬಗೆದಿಲ್ಲ. ಹೀಗಾಗಿ ನೀರಿನ ಹಂಚಿಕೆ ವಿಚಾರದಲ್ಲಿ ಸೋದರ ಸ್ಟಾಲಿನ್ ಅವರಿಗೆ ಯಾವ ಅನುಮಾನಗಳೂ, ಆತಂಕಗಳೂ ಬೇಡ ಎಂದು ಹೇಳಿದ್ದಾರೆ.

ತಮಿಳುನಾಡು ರೈತರನ್ನು ವಂಚಿಸಿ ಕರ್ನಾಟಕ ತನ್ನ ರೈತರನ್ನು ರಕ್ಷಿಸಿದ ಉದಾಹರಣೆ ಇಲ್ಲ. ರೈತರೆಂದರೆ ರೈತರೇ, ಭೂಮಿ ತಾಯಿಯ ಮಕ್ಕಳು. ನಮ್ಮ ಅಣ್ಣ ತಮ್ಮಂದಿರು. ಕಾವೇರಿ ವಿಚಾರದಲ್ಲಿ ಈಗ ನಾವಿಬ್ಬರು. ಅಂದರೆ ರಾಜಕಾರಣಿಗಳೂ ಅಣ್ಣ ತಮ್ಮಂದಿರಾಗೋಣ. ಸೋದರ ಭಾವನೆಯೊಂದಿಗೆ ಸ್ಟಾಲಿನ್ ಒಂದು ಹೆಜ್ಜೆ ಮುಂದೆ ಬಂದರೆ ನಾನಂತೂ ಎರಡು ಹೆಜ್ಜೆ ಮುಂದಿಡುವೆ ಎಂದು ಕುಮಾರಸ್ವಾಮಿ ಸ್ನೇಹ ಹಸ್ತ ಚಾಚಿದ್ದಾರೆ.

ಸ್ಟಾಲಿನ್ ಅವರ ಅಧಿಕಾರವಧಿಯಲ್ಲಿ ಈ ಪ್ರಯತ್ನ ಆಗಲಿ. ಅದಕ್ಕೆ ನನ್ನ ಬೆಂಬಲ ಇರಲಿದೆ. ಈ ರಾಜ್ಯಗಳ ಸೋದರತೆ ರಕ್ಷಣೆ ಈಗಿನ ಅಗತ್ಯ ಎಂದು ಕುಮಾರಸ್ವಾಮಿ ಅವರು ಕರೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *