ಮತ್ತೆ ಮುನ್ನಲೆಗೆ ಬಂದಿದೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ!

ಬೆಂಗಳೂರು : ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿ ಪಕ್ಷಕ್ಕೆ ಕಂಟಕ ರೀತಿಯಲ್ಲಿ ಕಾಡಲಾರಂಭಿಸಿದೆ. ಬಿಜೆಪಿ ಪಕ್ಷದ ಕೇಂದ್ರ ನಾಯಕರು ಈಗ ಮತ್ತೆ ಸರಣಿಯಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ಕುರಿತಾಗಿ ರಾಜ್ಯ ನಾಯಕರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪ್ರತಿಪಕ್ಷ ಕಾಂಗ್ರೆಸ್ ಪಕ್ಷವು ಸಹ ಬಿಜೆಪಿ ವಿರುದ್ಧ ತೀವ್ರವಾದ ತಂತ್ರಗಾರಿಕೆ ಹೆಣೆದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.

ಯಡಿಯೂರಪ್ಪ ಆಡಳಿತಾವಧಿಯಲ್ಲಿ ಸಚಿವ ಸಂಪುಟದ ಸಹೋದ್ಯೋಗಿಯೊಬ್ಬರು ಇಲ್ಲದ ವಿಚಾರ ತೇಲಿಬಿಟ್ಟು, ಅಪಪ್ರಚಾರಕ್ಕೆ ಗ್ರಾಸವಾಗಿ ಸರ್ಕಾರದ ಅಸ್ಥಿರತೆಗೆ ಕಾರಣರಾಗಿದ್ದರು. ಈಗಲೂ ಬೊಮ್ಮಾಯಿ ಸಂಪುಟದ ಸಹೋದ್ಯೋಗಿಯೊಬ್ಬರು ಬಿಟ್​ಕಾಯಿನ್ ಪ್ರಕರಣಕ್ಕೆ ಅತಿರೇಕದ ಸ್ಪರ್ಶ ನೀಡಿದ್ದಾರೆ ಎಂಬ ಮಾಹಿತಿ ಬಿಜೆಪಿ ವರಿಷ್ಠರಿಗೆ ಲಭ್ಯವಾಗಿದೆ ಎಂದು ಮೂಲಗಳು ಹೇಳಿವೆ.

ಈಗಾಗಲೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ ಕೆಲ ಮಾಹಿತಿಗಳನ್ನು ಪಡೆದಿರುವ ದೆಹಲಿ ನಾಯಕರು ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿ ಕೆಲವರನ್ನು ರಾಷ್ಟ್ರ ರಾಜಧಾನಿಗೆ ಕರೆಸಿಕೊಂಡು ಮಾಹಿತಿ ಪಡೆಯಲು ಮುಂದಾಗಿದ್ದಾರೆ.

ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲೇ ಬೆಂಗಳೂರು ಪ್ರತಿನಿಧಿಸುವ ಪ್ರಭಾವಿ ಸಚಿವರೊಬ್ಬರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಷಾ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದರು.

ಬಿಟ್​ಕಾಯಿನ್ ಚರ್ಚೆಗೆ ಶೀಘ್ರದಲ್ಲೇ ತೆರೆ ಎಳೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಹತ್ವದ ಸಲಹೆ-ಸೂಚನೆ ನೀಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಬಿಟ್ ಕಾಯಿನ್ ಪ್ರಕರಣದ ವಿಚಾರ ಹೆಚ್ಚು ವಿವಾದಕ್ಕೆ ಈಡಾಡುತ್ತಿದ್ದಂತೆಯೇ ಅಮಿತ್ ಷಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾರದಲ್ಲಿ ಎರಡನೇ ಬಾರಿ ಮುಖಾಮುಖಿಯಾಗಿದ್ದಾರೆ. ತಿರುಪತಿಯ ಹೋಟೆಲ್​ವೊಂದರಲ್ಲಿ ಭಾನುವಾರ ಮಧ್ಯಾಹ್ನ ನಡೆದ ಮಾತುಕತೆ ವೇಳೆ ಸರ್ಕಾರದ ಕೆಲವು ವಿಚಾರಗಳನ್ನು ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರಲ್ಲದೇ ಬಿಟ್​ಕಾಯಿನ್ ಮಸುಕು ಸರಿಸಲು ಕೋರಿದ್ದಾರೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಷಿ, ಭಗವಂತ ಖೂಬಾ, ಶೋಭಾ ಕರಂದ್ಲಾಜೆ, ಸಂಸದರು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮತ್ತಿತರ ನಾಯಕರಿಂದ ಸದ್ದಿಲ್ಲದೆ ಅಭಿಪ್ರಾಯಗಳನ್ನು ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ವಾರದಲ್ಲಿ ಇಬ್ಬರನ್ನು ದೆಹಲಿಗೆ ಬರುವಂತೆ ಮೌಖಿಕ ಸೂಚನೆ ನೀಡಿರುವ ವರಿಷ್ಠರು ಬಸವರಾಜ ಬೊಮ್ಮಾಯಿ ಅವರನ್ನು 2023ರವರೆಗೆ ಮುಂದುವರೆಸಬೇಕೆ ಇಲ್ಲವೇ ಯಾವುದಾದರೊಂದು ಪ್ರಬಲ ಕಾರಣವಿಟ್ಟುಕೊಂಡು ತಲೆದಂಡ ಮಾಡಬೇಕೆ ಎಂಬುದರ ಬಗ್ಗೆಯೂ ಅಭಿಪ್ರಾಯ ಸಂಗ್ರಹವಾಗುತ್ತದೆ.

ಕಳೆದ ಮೂರು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ವರಿಷ್ಠರನ್ನು ಭೇಟಿಯಾಗಿ ಬೆಂಗಳೂರಿಗೆ ಆಗಮಿಸಿದ್ದರು. ದೆಹಲಿ ನಾಯಕರ ಭೇಟಿ, ಅಲ್ಲಿ ನಡೆದಿರುವ ಮಾತುಕತೆ ವಿವರಗಳು ಇತ್ಯಾದಿಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶೀಘ್ರದಲ್ಲಿಯೇ ರಾಜ್ಯಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಪರಿಷತ್ ಚುನಾವಣೆ ರಣತಂತ್ರ ಪರಾಮರ್ಶೆಗೆ ಭೇಟಿ ನೀಡಲಿದ್ದಾರೆ ಎಂದು ಮೇಲ್ನೋಟಕ್ಕೆ ಬಿಂಬಿತವಾದರೂ ಅಪನಂಬಿಕೆ, ಗೊಂದಲ ನಿವಾರಣೆ ಪ್ರವಾಸದ ಮುಖ್ಯ ಉದ್ದೇಶವಾಗಿರಲಿದೆ. ಬೊಮ್ಮಾಯಿ ಸಂಪುಟದ ಸಹೋದ್ಯೋಗಿಗಳು ಸೇರಿದಂತೆ ಪ್ರಮುಖ ನಾಯಕರೊಂದಿಗೆ ಮುಖಾಮುಖಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಈಶ್ವರಪ್ಪ ಸಹ ದೆಹಲಿ ಭೇಟಿ

ಜಗದೀಶ್ ಶೆಟ್ಟರ್ ದೆಹಲಿ ಪ್ರವಾಸ ಮುಗಿಯುತ್ತಿದ್ದಂತೆಯೇ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸಹ ದೆಹಲಿ ವರಿಷ್ಠರನ್ನು ಶೀಘ್ರದಲ್ಲಿಯೇ ಭೇಟಿ ಮಾಡಲಿದ್ದಾರೆ ಎಂಬ ಮಾಹಿತಿಗಳಿವೆ. ವರಿಷ್ಠರ ಸೂಚನೆ ಮೇರೆಗೆ ಈಶ್ವರಪ್ಪ ದೆಹಲಿಗೆ ಹಾರಲಿದ್ದು, ಪಕ್ಷದ ಮುಖಂಡರನ್ನು ಭೇಟಿಯಾಗಿ ಕರ್ನಾಟಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸುವರು.

ಉಳಿದಂತೆ ಮುಂದಿನ ದಿನಗಳಲ್ಲಿ ಇನ್ನು ಕೆಲವು ಸಚಿವರು ಮತ್ತು ನಾಯಕರನ್ನು ದೆಹಲಿಗೆ ಕರೆಸಿಕೊಳ್ಳಲಿರುವ ವರಿಷ್ಠರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭವಿಷ್ಯದ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಣೆ ಮಾಡಲಿದ್ದಾರೆ. ಈಗಾಗಲೇ ಅವರ ಬಗ್ಗೆ ಇರುವ ಪರ ಮತ್ತು ವಿರೋಧದ ಅಭಿಪ್ರಾಯವು ರಾಜ್ಯ ಬಿಜೆಪಿ ಘಟಕದಿಂದ ವರದಿಗಳ ಸಮೇತ ದೆಹಲಿಗೆ ತಲುಪಿಸಲಾಗಿದೆ.

ಬೊಮ್ಮಾಯಿ ಅವರು ಪಕ್ಷದ ಮೂಲ ನಿವಾಸಿಗಳನ್ನು ಕಡೆಗಣಿಸಿ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಬಂದವರಿಗೆ ಮನ್ನಣೆ ನೀಡುತ್ತಿರುವುದನ್ನು ಬಿಜೆಪಿ ರಾಜ್ಯ ಘಟಕ ವರಿಷ್ಠರ ಗಮನಕ್ಕೆ ತಂದಿದೆ.

Donate Janashakthi Media

Leave a Reply

Your email address will not be published. Required fields are marked *