ದೇವನಹಳ್ಳಿ: ಮರ್ಯಾದೆಗೇಡು ಹತ್ಯೆ | ಮಗಳನ್ನು ಕೊಂದ ತಂದೆ

ದೇವನಹಳ್ಳಿ :ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳೆಂದು ತಂದೆಯೊಬ್ಬ ಮಗಳ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿದೆ.

20 ವರ್ಷದ ಕವನಾ ಮೃತ ಯುವತಿಯಾಗಿದ್ದು, ಮಂಜುನಾಥ್‌ (45) ಕೊಲೆ ಆರೋಪಿಯಾಗಿದ್ದಾನೆ. ಮಗಳನ್ನು ಅಪ್ಪನೇ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಪೊಲೀಸ್‌ ಠಾಣೆಗೆ ತೆರಳಿ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ತನ್ನದೇ ಗ್ರಾಮದ ಯುವಕನನ್ನು ಕವನಾ ಪ್ರೀತಿಸುತ್ತಿದ್ದರು. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವಿಷಯ ಯುವತಿಯ ಮನೆಯವರಿಗೂ ತಿಳಿದಿತ್ತು. ಯುವಕ ಬೇರೆ ಜಾತಿಯವನಾಗಿದ್ದರಿಂದ ಪ್ರೀತಿ ಸಂಬಂಧ ಮುಂದುವರಿಸದಂತೆ ಅಪ್ಪ, ಮಗಳಿಗೆ ಹೇಳಿದ್ದ. ಅಪ್ಪನ ಮಾತಿಗೆ ಮಗಳು ಸಮ್ಮತಿಸಿದ್ದರು. ಆದರೆ, ಈ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಮುಂದುವರಿದಿತ್ತು.

‘ಮಗಳು ಮತ್ತೆ ಯುವಕನ ಜತೆ ಓಡಾಡುತ್ತಿರುವುದನ್ನು ಗಮನಿಸಿದ ಮಂಜುನಾಥ್‌, ಇದೇ ವಿಚಾರವಾಗಿ ಬುಧವಾರ ರಾತ್ರಿ ಮಗಳನ್ನು ತರಾಟೆಗೆ ತೆಗೆದುಕೊಂಡಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ತಾರಕಕ್ಕೆ ಏರಿತ್ತು. ಸಿಟ್ಟಿಗೆದ್ದ ಮಂಜುನಾಥ್‌, ಕೈಗೆ ಸಿಕ್ಕ ಮುದ್ದೆ ಕೋಲಿನಿಂದ ಮಗಳ ತಲೆಗೆ ಹೊಡೆದಿದ್ದ. ಪ್ರಜ್ಞೆತಪ್ಪಿ ಬಿದ್ದಿದ್ದ ಮಗಳ ಕತ್ತಿನ ಭಾಗವನ್ನು ಬೆಳಗಿನ ಜಾವ ಚಾಕುವಿನಿಂದ ಸೀಳಿ ಹಾಕಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿ ಮಂಜುನಾಥ್ ಗುರುವಾರ ಬೆಳಗ್ಗೆ ವಿಶ್ವನಾಥಪುರ ಪೊಲೀಸ್ ಠಾಣೆಗೆ ಬಂದು ಮಗಳನ್ನು ತಾನೇ ಕೊಲೆ ಮಾಡಿರುವ ವಿಷಯ ತಿಳಿಸಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್‌ ತಿಳಿಸಿದ್ದಾರೆ.

 

 

Donate Janashakthi Media

Leave a Reply

Your email address will not be published. Required fields are marked *