ಮದುವೆಗೆ ಕುಜ ದೋಷ ಅಡ್ಡಿ: ಜ್ಯೋತಿಷಿ ಮಾತು ಕೇಳಿ ಮದುವೆಗೆ ನಿರಾಕರಣೆ, ಮಹಿಳಾ ಪೊಲೀಸ್‌ ಪೇದೆ ಸಾವು

ಶಿವಮೊಗ್ಗ: ಕುಜ ದೋಷ ಇರುವುದರಿಂದಾಗಿ ಮದುವೆಯಾಗುತ್ತಿಲ್ಲವೆಂದು ಮಹಿಳಾ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತಳನ್ನು ಸುಧಾ ಎಂದು ಗುರುತಿಸಲಾಗಿದೆ. ಭದ್ರಾವತಿ ತಾಲೂಕಿನ ಕಲ್ಲಾಪುರ ನಿವಾಸಿಯಾದ ಈಕೆ ಪೊಲೀಸ್ ಪೇದೆ ಹಾಗೂ ಭದ್ರಾವತಿ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು.

ಸುಧಾ ಬೆಳಗಾವಿ ಮೂಲದ ಪ್ರವೀಣ್ ಆರು ವರ್ಷದಿಂದ ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಗೆ ಹೆತ್ತವರ ವಿರೋಧವಿತ್ತು. ಆರಂಭದಲ್ಲಿ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡಿಯಾಗಿತ್ತು. ಜಾತಿ ಅಡ್ಡಿಯ ನಡುವೆಯೂ ಇಬ್ಬರು ಮದುವೆಗೆ ಸಿದ್ಧರಾಗಿದ್ದರು. ಆದರೆ ಪ್ರವೀಣ್ ತಾಯಿ ಯುವತಿಯ ಜಾತಕವನ್ನು ಜ್ಯೋತಿಷಿಯೊಬ್ಬರಿಗೆ ತೋರಿಸಿದ್ದರು. ಜ್ಯೋತಿಷಿ ಈ ಯುವತಿಗೆ ಕುಜ ದೋಷ ಇದೆ. ಇವಳೊಂದಿಗೆ ವಿವಾಹವಾದರೆ ನಿಮ್ಮ ಮಗನ ಆಯಸ್ಸು ಕಡಿಮೆ ಎಂದಿದ್ದಾರೆ ಎನ್ನಲಾಗಿದೆ.

ಹೀಗಾಗಿ ಕುಜ ದೋಷ ಇರುವ ಹುಡುಗಿ ಜೊತೆ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಪ್ರವೀಣ್ ತಾಯಿ ತಿಳಿಸಿದ್ದರು. ಅಲ್ಲದೇ ಯುವತಿ ಸುಧಾಳಿಗೂ ಫೋನ್ ಮಾಡಿ ನನ್ನ ಮಗನ ಸಹವಾಸ ಬಿಟ್ಟು ಬಿಡು. ಈ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ಕೂಡ ಹಾಕಿದ್ದರಂತೆ. ಇದರಿಂದ ಮನನೊಂದ ಪ್ರೇಮಿಗಳು ಮೇ 31ರಂದು ಭದ್ರಾವತಿಯ ಎಪಿಎಂಸಿ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಯುವತಿ ಸುಧಾಳನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್‍ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನೆನ್ನೆ(ಜೂನ್‌ 17) ಮಧ್ಯ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಈ ರೀತಿ ಮೌಢ್ಯವನ್ನು ಬಿತ್ತುವ ಜ್ಯೋತಿಷಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ಜ್ಯೋತಿಷಿಯ ಮಾತು ನಂಬಿ ಸುಧಾಳನ್ನು ಅವಮಾನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಪ್ರವೀಣ್‌ ತಾಯಿಯ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮೌಡ್ಯತೆಯ ಮೂಲಕ ಸಮಾಜದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ, ಪ್ರಾಣಹಾನಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿ ಮಡಬೇಕು ಎಂಬ ಅಭಿಪ್ರಾಯಗಳು ಈ ವೇಳೆ ಕೇಳಿ ಬರುತ್ತಿವೆ.

Donate Janashakthi Media

Leave a Reply

Your email address will not be published. Required fields are marked *