ಎಲ್‌ಪಿಜಿ ಕೊರತೆ ಹೊಡೆತ: ಹೋಟೆಲ್‌ ಉದ್ಯಮಕ್ಕೆ ಸಂಕಷ್ಟ

ನವದೆಹಲಿ: ಅಮೆರಿಕಾ ಹಾಗೂ ಇಸ್ರೇಲ್‌ ನಡೆಸುತ್ತಿರುವ ಇರಾನ್‌ ವಿರುದ್ಧದ ಯುದ್ಧದ ಹಿನ್ನೆಲೆ ವಾಣಿಜ್ಯ ಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ಸರಬರಾಜಿನಲ್ಲಿ ಉಂಟಾಗಿರುವ ಕೊರತೆ ಬೆಂಗಳೂರು ಹಾಗೂ ಚೆನ್ನೈ ಸೇರಿದಂತೆ ಹಲವು ನಗರಗಳ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಿಗೆ ದೊಡ್ಡ ಹೊಡೆತ ನೀಡಿದೆ. ಪರಿಣಾಮವಾಗಿ ಕೆಲ ಊಟಗೃಹಗಳು ತಮ್ಮ ಮೆನು ಪಟ್ಟಿಯನ್ನು ಕಡಿತಗೊಳಿಸಿದ್ದು, ಇನ್ನೂ ಕೆಲವು ಸಂಸ್ಥೆಗಳು ಮುಚ್ಚುವ ಪರಿಸ್ಥಿತಿಗೆ ತಲುಪಿವೆ. ಕೊರತೆ

ಮಾರ್ಚ್‌ 10ರಂದು ಬೆಂಗಳೂರು ಮತ್ತು ಚೆನ್ನೈ ನಗರಗಳ ಹಲವು ಊಟಗೃಹಗಳಿಗೆ ಬಂದ ಗ್ರಾಹಕರು ತಮ್ಮ ಮೆಚ್ಚಿನ ಹಲವು ಪದಾರ್ಥಗಳು ಮೆನು ಪಟ್ಟಿಯಲ್ಲಿ ಕಾಣಿಸದಿರುವುದನ್ನು ಗಮನಿಸಿದರು. ಕೆಲಡೆ ಮೆನು ಪಟ್ಟಿಯನ್ನು ಸಣ್ಣದಾಗಿಸಿದ್ದು, ಇನ್ನೂ ಕೆಲವು ದಿನಗಳಲ್ಲಿ ಸಂಸ್ಥೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಕೊರತೆ

ಮಾರ್ಚ್‌ 9ರಂದು ಬೆಂಗಳೂರು ಹೋಟೆಲ್‌ ಅಸೋಸಿಯೇಶನ್‌ ಹಾಗೂ ಚೆನ್ನೈ ಹೋಟೆಲ್‌ ಅಸೋಸಿಯೇಶನ್‌ ಪ್ರಕಟಣೆ ಹೊರಡಿಸಿ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಹಲವಾರು ಊಟಗೃಹಗಳು ಕಾರ್ಯಾಚರಣೆ ನಿಲ್ಲಿಸುವ ಪರಿಸ್ಥಿತಿ ಎದುರಿಸಬಹುದು ಎಂದು ತಿಳಿಸಿವೆ. ಈ ಸರಬರಾಜು ವ್ಯತ್ಯಯ ಈಗಾಗಲೇ ವ್ಯಾಪಾರಕ್ಕೆ ಪರಿಣಾಮ ಬೀರಿದ್ದು, ಮುಂಬೈ ಮತ್ತು ಹೈದರಾಬಾದ್‌ ನಗರಗಳಲ್ಲೂ ಇದೇ ಸಮಸ್ಯೆ ಕಾಣಿಸುತ್ತಿದೆ ಎಂದು ರೆಸ್ಟೋರೆಂಟ್‌ ಸಂಘಟನೆಗಳು ತಿಳಿಸಿವೆ. ಕೊರತೆ

ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿತ; 7 ಮಂದಿ ಕಾರ್ಮಿಕರು ಸಾವು

ಅಪೂರ್ವ ಸಂಕಷ್ಟ

ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪ್ರಸಿದ್ಧ ಅನ್ನಪೂರ್ಣ ಹೋಟೆಲ್‌ ಪ್ರಕಟಣೆ ನೀಡಿದ್ದು, ಸಂಪೂರ್ಣ ಮುಚ್ಚುವ ಪರಿಸ್ಥಿತಿ ತಪ್ಪಿಸಲು ಮೆನು ಪಟ್ಟಿಯನ್ನು ಕಡಿತಗೊಳಿಸಿ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ. “ಪೂರ್ಣ ಸರಬರಾಜು ಮರುಸ್ಥಾಪನೆಗಾಗಿ ಸರ್ಕಾರ ಹಾಗೂ ಸರಬರಾಜುದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ” ಎಂದು ತಿಳಿಸಿದೆ. ಕೊರತೆ

ಚೆನ್ನೈಯ ಅನಂದ ಹೋಟೆಲ್‌ ಕೂಡ ಇಂಧನ ಕೊರತೆಯ ಹಿನ್ನೆಲೆಯಲ್ಲಿ ಮೆನು ಪಟ್ಟಿಯನ್ನು ಸೀಮಿತಗೊಳಿಸಿದೆ. ಚೆನ್ನೈಯ ಕ್ರೆಸೆಂಟ್‌ ಹೋಟೆಲ್‌ನಲ್ಲಿ ಶಾವರ್ಮಾ, ಪೊರಿಕಡಿ, ಪರೋಟಾ ಸೇರಿದಂತೆ ಹಲವು ಪದಾರ್ಥಗಳನ್ನು ತಾತ್ಕಾಲಿಕವಾಗಿ ಮೆನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

“ನಾವು ಹಲವು ಪದಾರ್ಥಗಳನ್ನು ಕಡಿತಗೊಳಿಸಬೇಕಾಯಿತು. ಗ್ರಾಹಕರು ನಮಗೆ ಬೆಂಬಲ ನೀಡುತ್ತಾರೆ. ಆದರೆ ಯಾರಾದರೂ ನಿರ್ದಿಷ್ಟ ಪದಾರ್ಥ ತಿನ್ನುವ ನಿರೀಕ್ಷೆಯಿಂದ ಬಂದಾಗ ಅದು ಇಲ್ಲ ಎಂದು ಹೇಳಬೇಕಾದರೆ ನಮಗೂ ಬೇಸರವಾಗುತ್ತದೆ” ಎಂದು ಕ್ರೆಸೆಂಟ್‌ ಹೋಟೆಲ್‌ನ ಮೇಲ್ವಿಚಾರಕ ರಾಜು ತಿಳಿಸಿದ್ದಾರೆ.

ಈ ಹೋಟೆಲ್‌ಗೆ ಪ್ರತಿದಿನ ಸುಮಾರು 10 ಸಿಲಿಂಡರ್‌ಗಳು ಅಗತ್ಯವಿದ್ದು, ಸರಬರಾಜುದಾರರು ಈಗ ಎಲ್‌ಪಿಜಿ ಸಂಪೂರ್ಣವಾಗಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಸೋಮವಾರ ಸರಬರಾಜು ಸಿಗದಿದ್ದರೂ ಮಂಗಳವಾರ ಕೆಲ ಸಿಲಿಂಡರ್‌ಗಳನ್ನು ಪಡೆದುಕೊಂಡಿದ್ದು, ಅವು ಕೂಡ ಬೇಗ ಖಾಲಿಯಾಗಿವೆ.

ಬೆಲೆ ಏರಿಕೆಯ ಹೊರೆ

ಸಿಲಿಂಡರ್‌ಗಳು ಲಭ್ಯವಾದರೂ ಬೆಲೆ ಗಗನಕ್ಕೇರಿದೆ. ಚೆನ್ನೈಯ ಮಿಶ್ವಾರ್‌ ಹೋಟೆಲ್‌ ವ್ಯವಸ್ಥಾಪಕ ಜೋಮ್ಸ್‌ ಪ್ರಕಾರ, ಮೊದಲು 47 ಕಿಲೋ ತೂಕದ ವಾಣಿಜ್ಯ ಸಿಲಿಂಡರ್‌ ಬೆಲೆ ₹4,600 ಇತ್ತು. ಈಗ ಅದೇ ಸಿಲಿಂಡರ್‌ ₹5,200 ಆಗಿದೆ.

“ಈ ಹೆಚ್ಚಿದ ದರ ಎರಡು ದಿನಗಳ ಹಿಂದಷ್ಟೇ ಆರಂಭವಾಗಿದೆ. ಹೋಟೆಲ್‌ಗಳಿಗೆ ನೀಡುತ್ತಿದ್ದ ರಿಯಾಯಿತಿಗಳನ್ನು ರದ್ದುಪಡಿಸಿದ್ದು, ಈಗ ನಾವು ಗರಿಷ್ಠ ಚಿಲ್ಲರೆ ದರದಲ್ಲಿ (ಎಂಆರ್‌ಪಿ) ಖರೀದಿಸಬೇಕಾಗಿದೆ. ಆದರೆ ಆಹಾರದ ಬೆಲೆ ಹೆಚ್ಚಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಹೋಟೆಲ್‌ ಈಗ ಮುಂಚಿತವಾಗಿ ತಯಾರಿಸಿದ ಆಹಾರವನ್ನಷ್ಟೇ ನೀಡುತ್ತಿದ್ದು, ಆರ್ಡರ್‌ ಬಂದ ನಂತರ ತಯಾರಿಸುವ ‘ಲೈವ್‌’ ಅಡುಗೆ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.

ಬೆಂಗಳೂರಿನಲ್ಲೂ ಸಂಕಷ್ಟ

ಬೆಂಗಳೂರು ನಗರದಲ್ಲಿಯೂ ಹೋಟೆಲ್‌ಗಳು ಎಲ್‌ಪಿಜಿ ಸರಬರಾಜು ಪಡೆಯಲು ಸಂಕಷ್ಟ ಎದುರಿಸುತ್ತಿವೆ. “ಪಿಜ್ಜಾ ಬೇಕರಿ”, “ಸ್ಮ್ಯಾಶ್‌ ಗೈಸ್‌” ಹಾಗೂ “ಪ್ಯಾರಿಸ್‌ ಪಾನಿನಿ” ಸಂಸ್ಥೆಗಳ ಶೆಫ್‌ ಪಾಲುದಾರ ಗುರುದತ್‌ ಪ್ರಕಾರ, ನಗರದೆಲ್ಲೆಡೆ ಈ ಸಮಸ್ಯೆ ಕಾಣಿಸುತ್ತಿದೆ.

“ಇದು ನಮ್ಮಷ್ಟೇ ಅಲ್ಲ, ಇಡೀ ನಗರವೇ ಪರಿಣಾಮಕ್ಕೊಳಗಾಗಿದೆ. ಮಾರುಕಟ್ಟೆಯಲ್ಲಿ ಎಲ್‌ಪಿಜಿ ಬಹುತೇಕ ಲಭ್ಯವಿಲ್ಲ. ಸಾಮಾನ್ಯವಾಗಿ ಹೋಟೆಲ್‌ಗಳು ಎರಡು ಅಥವಾ ಮೂರು ವಾರಗಳ ಸ್ಟಾಕ್‌ ಇಟ್ಟುಕೊಳ್ಳುವುದಿಲ್ಲ. ಈಗ ಸರಬರಾಜು ಅಚಾನಕ್‌ ನಿಂತಿರುವುದರಿಂದ ದಿನ ಕಳೆಯುವುದೇ ಸವಾಲಾಗಿದೆ” ಎಂದು ಅವರು ಹೇಳಿದ್ದಾರೆ.

ಗ್ಯಾಸ್‌ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. “ನಮ್ಮ ಪಿಜ್ಜಾಗಳು ಮರದ ಇಂಧನದಿಂದ ತಯಾರಾಗುವವು. ಆದ್ದರಿಂದ ಉಳಿದಿರುವ ಗ್ಯಾಸ್‌ ಉಳಿಸಲು ಮರವನ್ನು ಹೆಚ್ಚು ಬಳಸುತ್ತಿದ್ದೇವೆ” ಎಂದು ಗುರುದತ್‌ ತಿಳಿಸಿದ್ದಾರೆ.

ಹೋಟೆಲ್‌ ಮುಚ್ಚುವ ಆತಂಕ

ಬೆಂಗಳೂರು ಹೋಟೆಲ್‌ ಅಸೋಸಿಯೇಶನ್‌ ಕಾರ್ಯದರ್ಶಿ ಹಾಗೂ ಕಾಮತ್‌ ಆಹಾರ ಸರಣಿಯ ವೀರೇಂದ್ರ ಕಾಮತ್‌ ಪ್ರಕಾರ, ಗ್ಯಾಸ್‌ ಸರಬರಾಜು ಸಂಪೂರ್ಣ ನಿಂತರೆ ಹೋಟೆಲ್‌ಗಳನ್ನು ನಡೆಸುವುದು ಅಸಾಧ್ಯ.

“ಐದು ಸಿಲಿಂಡರ್‌ ಕೇಳಿದರೆ ಎರಡು ಅಥವಾ ಮೂರು ನೀಡಬಹುದಿತ್ತು. ಆಗ ಮೆನು ಕಡಿತಗೊಳಿಸಿ ನಾವು ನಿರ್ವಹಿಸಬಹುದಿತ್ತು” ಎಂದು ಅವರು ಹೇಳಿದ್ದಾರೆ.

ಹೋಟೆಲ್‌ಗಳು ಮುಚ್ಚಿದರೆ ರೈತರಿಗೆ ಕೂಡ ಹೊಡೆತ ಬೀಳುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. “ಬೆಂಗಳೂರು ನಗರದಲ್ಲಿನ ಹೋಟೆಲ್‌ಗಳಿಗೆ ಪ್ರತಿದಿನ ಸುಮಾರು 14 ಲಕ್ಷ ಲೀಟರ್‌ ಹಾಲು, ತರಕಾರಿ, ಮೊಟ್ಟೆ, ಮಾಂಸ ಮತ್ತು ಸೊಪ್ಪುಗಳನ್ನು ರೈತರು ಸರಬರಾಜು ಮಾಡುತ್ತಾರೆ. ಹೋಟೆಲ್‌ಗಳು ಮುಚ್ಚಿದರೆ ಈ ಉತ್ಪನ್ನಗಳೆಲ್ಲ ವ್ಯರ್ಥವಾಗುತ್ತವೆ” ಎಂದು ಅವರು ಹೇಳಿದ್ದಾರೆ.

ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಹೊಡೆತ

ಸಣ್ಣ ಅಂಗಡಿಗಳು ಮತ್ತು ಊಟಗೃಹಗಳು ಹೆಚ್ಚು ಸಂಕಷ್ಟ ಅನುಭವಿಸುವ ಸಾಧ್ಯತೆ ಇದೆ. ಚೆನ್ನೈಯ ತಿರುಮೂರ್ತಿನಗರದ ಟೀ ಅಂಗಡಿ ಮಾಲೀಕ ಅಲಿ ಹುಸೇನ್‌ ಪ್ರಕಾರ, ಅವರಿಗೆ ತಿಂಗಳಿಗೆ ಸುಮಾರು 12 ಸಿಲಿಂಡರ್‌ಗಳು ಬೇಕಾಗುತ್ತವೆ. ಆದರೆ ಕಳೆದ ಮೂರು ದಿನಗಳಿಂದ ಯಾವುದೇ ಸರಬರಾಜು ಸಿಗಿಲ್ಲ.

“ಇಂದು ಒಂದು ಸಿಲಿಂಡರ್‌ ಮಾತ್ರ ಉಳಿದಿದೆ. ಅದು ಮುಗಿದರೆ ಟೀ ಅಂಗಡಿ ಮುಚ್ಚಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಸರಬರಾಜು ವ್ಯತ್ಯಯದ ಕಾರಣ

ವಿಶ್ವದ ಮೂರನೇ ಅತಿ ದೊಡ್ಡ ಎಲ್‌ಪಿಜಿ ಬಳಕೆದಾರ ದೇಶವಾದ ಭಾರತ ತನ್ನ ಎಲ್‌ಪಿಜಿ ಆಮದುಗಳಲ್ಲಿ 90%ಕ್ಕಿಂತ ಹೆಚ್ಚು ಪಶ್ಚಿಮ ಏಷ್ಯಾದಿಂದ ಪಡೆಯುತ್ತದೆ. ಈ ಸರಬರಾಜು ಬಹುತೇಕ ಹೋರ್ಮುಜ್‌ ಸಮುದ್ರಸಂಧಿ ಮೂಲಕ ಸಾಗುತ್ತದೆ. ಯುದ್ಧದ ಪರಿಣಾಮವಾಗಿ ಈ ಮಾರ್ಗ ವ್ಯತ್ಯಯಗೊಂಡಿದ್ದು, ಅಡುಗೆ ಅನಿಲ ಸರಬರಾಜಿನ ಮೇಲೆ ಒತ್ತಡ ಉಂಟಾಗಿದೆ.

ಈ ನಡುವೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಗೃಹ ಬಳಕೆಯ ಎಲ್‌ಪಿಜಿ ಸರಬರಾಜಿಗೆ ಆದ್ಯತೆ ನೀಡುವಂತೆ ತೈಲ ಶುದ್ಧೀಕರಣ ಘಟಕಗಳಿಗೆ ಸೂಚಿಸಿದೆ. ಗೃಹ ಬಳಕೆಯ ಸಿಲಿಂಡರ್‌ಗಳಲ್ಲಿ ಸಂಗ್ರಹಣೆ ಮತ್ತು ಕಾಳಬಜಾರ್‌ ತಡೆಯಲು 25 ದಿನಗಳ ಮಧ್ಯಂತರ ಬುಕ್ಕಿಂಗ್‌ ನಿಯಮವೂ ಜಾರಿಗೊಳಿಸಲಾಗಿದೆ.

ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಂತಹ ಅಗತ್ಯ ವಲಯಗಳಿಗೆ ವಾಣಿಜ್ಯ ಎಲ್‌ಪಿಜಿ ಸರಬರಾಜಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಬೆಲೆ ಏರಿಕೆ

ಸರಬರಾಜು ವ್ಯತ್ಯಯದ ನಡುವೆ ಅಡುಗೆ ಅನಿಲ ಬೆಲೆಯನ್ನೂ ಹೆಚ್ಚಿಸಲಾಗಿದೆ. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ನವದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆಯ ಸಿಲಿಂಡರ್‌ ಬೆಲೆಯನ್ನು ಸುಮಾರು 7% ಹೆಚ್ಚಿಸಿ ₹913ಕ್ಕೆ ಏರಿಸಿದೆ. ಭಾರತ್‌ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಕೂಡ ಇದೇ ರೀತಿಯ ಹೆಚ್ಚಳ ಜಾರಿಗೆ ತಂದಿವೆ.

ಕಡಿಮೆ ಆದಾಯದ ಕುಟುಂಬಗಳಿಗೆ ಸಿಲಿಂಡರ್‌ಗೆ ₹300 ಸಬ್ಸಿಡಿ ಮುಂದುವರಿದಿದ್ದರೂ, ಅವರಿಗೆ ಈಗ ಸುಮಾರು ₹60 ಹೆಚ್ಚಾಗಿ ಪಾವತಿಸಬೇಕಾಗಿದೆ. ಪರಿಣಾಮವಾಗಿ ಬಡ ಕುಟುಂಬಗಳಿಗೆ ಸಿಲಿಂಡರ್‌ ಬೆಲೆ ಸುಮಾರು ₹613 ಆಗಿದೆ.

ಈ ಬೆಲೆ ಏರಿಕೆ ಭಾರತದಲ್ಲಿನ ಸುಮಾರು 33.3 ಕೋಟಿ ಎಲ್‌ಪಿಜಿ ಬಳಕೆದಾರ ಕುಟುಂಬಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನೂ ಸುಮಾರು 6.5% ಹೆಚ್ಚಿಸಿ ₹1,883ಕ್ಕೆ ಏರಿಸಲಾಗಿದೆ ಎಂದು ಇಂಡಿಯನ್‌ ಆಯಿಲ್‌ ತಿಳಿಸಿದೆ.

ಇದನ್ನೂ ನೋಡಿ: ಪಿಚ್ಚರ್‌ ಪಯಣ -169 | ಸಿನೆಮಾ : ಕೈರೋ ಸ್ಟೇಷನ್ : ವಿಶ್ಲೇಷಣೆ : ಬಿ. ಶ್ರೀಪಾದ ಭಟ್ Janashakthi Media

Donate Janashakthi Media

Leave a Reply

Your email address will not be published. Required fields are marked *