ಬೆಂಗಳೂರು: ಲಿಂಗಾಯತ ಧರ್ಮದ ಪರಿಕಲ್ಪನೆ ‘ಬಸವಾದಿ ಶರಣರು ರೂಪಿಸಿದ ಈಗ ವೀರಶೈವವಾಗಿ ರೂಪುಗೊಂಡಿದೆ’ ಎಂದು ವಿದ್ವಾಂಸ ವೀರಣ್ಣ ರಾಜೂರ ಹೇಳಿದರು.
ನವಕರ್ನಾಟಕ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿ. ವೀರಣ್ಣ ಅವರ ‘ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ–3’ ಪುಸ್ತಕ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
ಇದನ್ನೂ ಓದಿ : ಮುಂಬೈ-ಗೋವಾ ಹೆದ್ದಾರಿಯಲ್ಲಿನ ಸಮಸ್ಯೆ ಮನವರಿಕೆ ಮಾಡಲು 490 ಕಿ.ಮೀ. ದೂರ ನಡೆದು ಪಾದಯಾತ್ರೆ
ಸಾಮಾಜಿಕ, ಸಾಹಿತ್ಯಿಕ ಅಂಶಗಳನ್ನು ಒಳಗೊಂಡಿರುವ ವಚನಗಳು ತಾತ್ವಿಕ ಬಂಧನಕ್ಕೆ ಒಳಪಟ್ಟಿವೆ. ಬಸವಾದಿ ಶರಣರನ್ನು ಒಳಗೊಂಡಂತೆ ಚಾರಿತ್ರಿಕ ವ್ಯಕ್ತಿಗಳನ್ನು ಪುರಾಣ ಪುರುಷರನ್ನಾಗಿಸಲಾಗಿದೆ. ವೀರಣ್ಣ ಅವರು ವಚನ ಸಾಹಿತ್ಯದಲ್ಲಿ ಆದ ಬದಲಾವಣೆಗಳನ್ನು ಬಹಳ ಸೂಕ್ಷ್ಮವಾಗಿ ಗುರುತಿಸಿದ್ದಾರೆ ಎಂದು ತಿಳಿಸಿದರು.
ಸಂಶೋಧಕ ಸಿ.ನಾಗಭೂಷಣ ಮಾತನಾಡಿ, ‘ಸಿ.ವೀರಣ್ಣ ಅವರು ಸಮಾಜ ಮತ್ತು ಸಾಹಿತ್ಯವನ್ನು ಸಮಾಜೋ ವೈಜ್ಞಾನಿಕ ಮನೋ ಭೂಮಿಕೆಯಲ್ಲಿ ವಿಶ್ಲೇಷಿಸುವ ಉದ್ದೇಶದಿಂದ ತಮ್ಮ ಕೃತಿಗಳನ್ನು ‘ಪ್ರಾಚೀನ ಸಾಹಿತ್ಯ’, ‘ಮಧ್ಯಕಾಲೀನ ಸಾಹಿತ್ಯ’, ‘ರಾಜಸತ್ತೆಯ ನಿಶ್ತೇಜದ ಕಾಲ’, ‘ವಸಾಹತು ಶಾಹಿಯ ಕಾಲ’, ‘ಬಂಡವಾಳಶಾಹಿಯ ಯುಗ’ ಎಂಬ ಐದು ವರ್ಗಗಳಾಗಿ ವಿಂಗಡಿಸಿದ್ದಾರೆ’ ಎಂದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಾವುಗಳು ಹೆಸರನ್ನೇ ಕೇಳಿರದ, ಮೈಸೂರು-ಬೆಂಗಳೂರು ವಿಶ್ವವಿದ್ಯಾಲಯದ ಸಾಂಸ್ಥಿಕ ಸಾಹಿತ್ಯ ಚರಿತ್ರೆಯಲ್ಲಿ ಚರ್ಚೆಯಾಗದಿರುವ ಅಲಕ್ಷಿತ ಸಾಹಿತ್ಯದ ಕವಿಗಳನ್ನು ಈ ಸಂಪುಟಗಳಲ್ಲಿ ಗುರುತಿಸುವ ಮೂಲಕ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದರು. ಮಧ್ಯಕಾಲೀನ ಸಾಹಿತ್ಯ ಕೃತಿಯಲ್ಲಿ ಕವಿಗಳ ಕುರಿತ ವಸ್ತುನಿಷ್ಠ ಪ್ರತಿಕ್ರಿಯೆ, ಚಾರಿತ್ರಿಕ ದೃಷ್ಟಿಕೋನ, ಪ್ರಮಾಣಬದ್ಧ ಅಭಿಪ್ರಾಯ ಅಡಕವಾಗಿದೆ.
ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಸಿದ್ದನಗೌಡ ಪಾಟೀಲ, ಕೃತಿಯ ಲೇಖಕ ಸಿ.ವೀರಣ್ಣ ಉಪಸ್ಥಿತರಿದ್ದರು.
ಇದನ್ನೂ ನೋಡಿ : ಏನಿದು ದ್ವೇಷ ಅಪರಾಧಗಳ ಮಸೂದೆ? ದ್ವೇಷಾಪರಾಧಕ್ಕೆ ಶಿಕ್ಷೆಯೇನು? Janashakthi Media
