ಎಪಿಎಂಸಿ ತಿದ್ದುಪಡಿ ಮಸೂದೆ 2023ಕ್ಕೆ ವಿಧಾನ ಸಭೆ ಅಂಗೀಕಾರ-ರೈತರ ಹೋರಾಟಕ್ಕೆ ಸಿಕ್ಕ ಜಯ ಕೆಪಿಆರ್‌ಎಸ್‌ ಸ್ವಾಗತ

ಬೆಂಗಳೂರು: ಕಳೆದ ಬಿಜೆಪಿ ಸರ್ಕಾರ ತಂದಿದ್ದ ಎಪಿಎಂಸಿ ಮಾರುಕಟ್ಟೆ ಗಳನ್ನು ನಾಶ ಮಾಡುವ ಎಪಿಎಂಸಿ ತಿದ್ದುಪಡಿ ಕಾಯ್ದೆ 2020 ಅನ್ನು ರದ್ದುಪಡಿಸಿ ಹಿಂದಿನ ಕಾಯ್ದೆ ಜಾರಿ ಮಾಡಿರುವ ಸಿದ್ದರಾಮಯ್ಯ ಸರ್ಕಾರದ ಕ್ರಮವನ್ನು ,ರೈತರ ಹೋರಾಟಕ್ಕೆ ಸಿಕ್ಕ ಜಯ ಎಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ಬಣ್ಣಿಸಿದೆ.

ಇದೇ ರೀತಿ ಉಳಿದ ರೈತ ವಿರೋಧಿ ಕೃಷಿ ಕಾಯ್ದೆಗಳಾದ ಕರ್ನಾಟಕ ರಾಜ್ಯ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020, ಕರ್ನಾಟಕ ಜಾನುವಾರು ಸಂರಕ್ಷಣಾ ಹಾಗೂ ಹತ್ಯೆ ನಿಷೇಧ ಕಾಯ್ದೆ 2020, ಕರ್ನಾಟಕ ರಾಜ್ಯ ಭೂ ಸ್ವಾಧೀನ ಕಾಯ್ದೆ 2019 ಅನ್ನು ಕೂಡ ರದ್ದುಪಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ರೈತರ ಭೂಮಿ ಕಿತ್ತು ರಿಯಲ್ ಎಸ್ಟೇಟ್ ದಂಧೆ!: ನೈಸ್ ಸಂಸ್ಥೆ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜು

ರೈತಾಪಿ ಕೃಷಿ ನಾಶ ಮಾಡಿ ,ಕಾರ್ಪೊರೇಟ್ ಕೃಷಿ ಉತ್ತೇಜಿಸುವ ಉದ್ದೇಶ ಸಾಧನೆಗೆ ತಂದಿದ್ದ ಕೇಂದ್ರ ಕೃಷಿ ಕಾಯ್ದೆಗಳು ರದ್ದಾದ ನಂತರವೂ ಅದೇ ಉದ್ದೇಶದ ರಾಜ್ಯ ಕೃಷಿ ಕಾಯ್ದೆಗಳು ಮುಂದುವರೆಸಿದ್ದನ್ನು ರಾಜ್ಯದ ರೈತರು ಪ್ರಬಲವಾಗಿ ವಿರೋಧಿಸಿದ್ದರು. ಕೃಷಿ ಬಿಕ್ಕಟ್ಟು ನ್ನು ತೀವ್ರಗೊಳಿಸುವ ,ರಾಜ್ಯದ ರೈತರಿಗೆ ಬೆಂಬಲ ಬೆಲೆ ನಿರಾಕರಿಸುವ ವ್ಯಾಪಾರಿಗಳ ಮರ್ಜಿಗೆ ರೈತರನ್ನು ದಯನೀಯವಾಗಿ ನೂಕುವ ಎಪಿಎಂಸಿ ತಿದ್ದುಪಡಿ ಕಾಯ್ದೆ 2020 ರದ್ದತಿ ರೈತ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ದುರ್ಬಲ ಗೊಂಡಿರುವ ಎಪಿಎಂಸಿ ಯನ್ನು ಬಲಪಡಿಸಲು ,ರೈತ ಸ್ನೇಹಿಯಾಗಿಸಲು ,ಎಪಿಎಂಸಿ ಸೆಸ್ ಮೂಲಕ ಸಂಗ್ರಹವಾಗುವ ಅವರ್ಥ ನಿಧಿ ಯನ್ನು ಸಮರ್ಥವಾಗಿ ರೈತರ ಹಿತ ರಕ್ಷಣೆಗೆ ಬಳಸಬೇಕು ಎಂದು ತಿಳಿಸಿದ್ದಾರೆ.

ಪೂರ್ಣ ವ್ಯಾಪ್ತಿಗೆ ಎಪಿಎಂಸಿ ಸಮಿತಿಗಳ ಅಧಿಕಾರವನ್ನು ಪುನರ್ ಸ್ಥಾಪಿಸುವ ಈ ರದ್ದತಿ ಒಂದೇ ಎಪಿಎಂಸಿ ಬಲಪಡಿಸಲು ಸಾಕಾಗುವುದಿಲ್ಲ. ಉದಾರೀಕರಣ ನೀತಿಗಳ ಒತ್ತಡಕ್ಕೆ ತಂದಿರುವ ಖಾಸಗೀ ಕಂಪನಿಗಳ ಪರವಾದ ಈ ಹಿಂದಿನ ತಿದ್ದಪಡಿಗಳಾದ ಆನ್ ಲೈನ್ ಮಾರಾಟ ,ಕೋಲ್ಡ್ ಸ್ಟೋರೇಜ್ ,ಹಣ್ಣು-ತರಕಾರಿ ಮಾರುಕಟ್ಟೆ ಯಲ್ಲಿ ಎಪಿಎಂಸಿ ಯನ್ನು ಬೈ ಪಾಸ್ ಮಾಡುವ ರೈತ ವಿರೋಧಿ ತಿದ್ದುಪಡಿ ಗಳು ಕೂಡ ರದ್ದಾಗಬೇಕು ಹಾಗೂ ನಾಯಿಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಕೃಷಿ ಮಾರುಕಟ್ಟೆಗಳಿಗೆ ಕಡಿವಾಣ ಹಾಕಿ ರೈತರ ಉತ್ಪನ್ನಗಳಿಗೆ ಸೂಕ್ತ ಕನಿಷ್ಠ ಬೆಂಬಲ ಬೆಲೆ ಸಿಗುವಂತಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *