ಜಾರ್ಖಂಡ್ : ಲತೇಹಾರ ಜಿಲ್ಲೆಯು ಅಪರಾಧ ಮುಕ್ತ ಗ್ರಾಮವನ್ನೂ ಕೂಡಾ ಹೊಂದಿದೆ ಎಂದರೆ ನೀವು ನಂಬಲೇ ಬೇಕು. ಲಾಲ್ಗಡಿ ಇದುವರೆಗೂ ಯಾವುದೇ ರೀತಿಯ ಅಪರಾಧ ಕೃತ್ಯಗಳನ್ನು ಕಂಡಿಲ್ಲ. ಇಲ್ಲಿನ ಜನರು ಶಾಂತಿಪ್ರಿಯರಾಗಿದ್ದು,ಯಾವುದೇ ವಿವಾದ ಇರಲಿ, ಅದು ದೊಡ್ಡದಿರಲಿ, ಸಣ್ಣದಿರಲಿ ಗ್ರಾಮದಲ್ಲಿ ಸಭೆ ನಡೆಸುವ ಮೂಲಕ ಇತ್ಯರ್ಥಪಡಿಸಲಾಗುತ್ತದೆ. ಜಾರ್ಖಂಡ್ನ ಲತೇಹಾರ ಬಹಳ ಹಿಂದಿನಿಂದಲೂ ಹಿಂಸಾಚಾರಕ್ಕೆ ಕುಖ್ಯಾತವಾಗಿದೆ. ಗ್ರಾಮಸ್ಥರ ಮನೋಭಾವ ಮತ್ತು ಪ್ರಾಮಾಣಿಕತೆಗೆ ಪೊಲೀಸ್ ಅಧಿಕಾರಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲತೇಹಾರದ ಸದರ್ ಬ್ಲಾಕ್ನ ಪೋಚ್ರಾ ಪಂಚಾಯತ್ನಲ್ಲಿರುವ ಈ ಗ್ರಾಮದಲ್ಲಿ ಖಾರ್ವಾರ್ ಬುಡಕಟ್ಟು ಜನಾಂಗಕ್ಕೆ ಸೇರಿದ ಸುಮಾರು 200 ಕುಟುಂಬಗಳಿವೆ. ಜಿಲ್ಲಾ ಕೇಂದ್ರದಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಲಾಲ್ಗಡಿಯ ನಿವಾಸಿಗಳು ಮುಖ್ಯವಾಗಿ ಕೃಷಿ ಕಾಯಕ ಮಾಡಿಕೊಂಡಿದ್ದಾರೆ. ಪರಸ್ಪರ ಸಹಾಯ ಮಾಡಿಕೊಂಡು ಸಹ ಜೀವನ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ದೌರ್ಜನ್ಯದ ವಿರುದ್ಧದ ಹೋರಾಟಕ್ಕೆ ದೀರ್ಘ ಇತಿಹಾಸ ಇದೆ

ಈ ಹಳ್ಳಿಗಿದೆ ಮುಕ್ತ ಸ್ವಾಗತ (ಜನಶಕ್ತಿ ಮೀಡಿಯಾ)
ಕೊಲೆ ಮತ್ತು ದರೋಡೆಯಂತಹ ಯಾವುದೇ ಪ್ರಕರಣಗಳು ವರದಿಯಾದ ಉದಾಹರಣೆ ಇಲ್ಲ: ಜನರು ತಮ್ಮ ವಿವಾದಗಳನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಲು ಒಲವು ತೋರುವುದಿಲ್ಲ ಮತ್ತು ಬದಲಿಗೆ ಗ್ರಾಮದಲ್ಲಿಯೇ ಸಭೆಯಲ್ಲಿ ಅವುಗಳನ್ನು ಪರಿಹರಿಸಲು ಬಯಸುತ್ತಾರೆ. ಈ ಗ್ರಾಮದ ಇತಿಹಾಸದಲ್ಲಿ ಕಳ್ಳತನದ ಒಂದೇ ಒಂದು ಪ್ರಕರಣವೂ ನಡೆದಿಲ್ಲ ಎಂದು ಜನರು ಹೇಳಿಕೊಳ್ಳುತ್ತಾರೆ. ಕೊಲೆ ಮತ್ತು ದರೋಡೆಯಂತಹ ಘೋರ ಅಪರಾಧಗಳು ಇಲ್ಲಿ ಕೇಳಿಬರುವುದಿಲ್ಲ.
ಗ್ರಾಮದ ಈ ಗುಣದಿಂದಾಗಿ, ಜಾರ್ಖಂಡ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳು 2012 ರಲ್ಲಿ ನನ್ನನ್ನು ಗೌರವಿಸಿದ್ದರು ಎಂದು ಗ್ರಾಮದ ಪ್ರಧಾನ್ ರಾಮೇಶ್ವರ ಸಿಂಗ್ ಹೇಳಿದ್ದಾರೆ. ಇತರ ಗ್ರಾಮಸ್ಥರು ಸಹ ಲಾಲ್ಗಡಿ ಗ್ರಾಮದಿಂದ ಕಲಿಯಬೇಕಾಗಿದೆ ಎಂದು ನ್ಯಾಯಮೂರ್ತಿಗಳು ವೇದಿಕೆಯಿಂದಲೇ ಹೇಳಿದ್ದರು. ಲಾಲ್ಗಡಿ ಗ್ರಾಮದ ಜನರು ತುಂಬಾ ಮುಗ್ಧರು ಮತ್ತು ಸ್ನೇಹಪರರು ಎಂದು ರಾಮೇಶ್ವರ ಸಿಂಗ್ ಹೇಳಿದ್ದಾರೆ.

ರಾಮೇಶ್ವರ್ ಸಿಂಗ್ ಅವರಿಗೆ ಈಗ ಸುಮಾರು 65 ವರ್ಷ ವಯಸ್ಸಾಗಿದೆ. ಅವರು ತಮ್ಮ ಗ್ರಾಮದಲ್ಲಿ ಯಾವುದೇ ಅಪರಾಧ ಘಟನೆ ನಡೆಯುವುದನ್ನು ನೋಡಿಲ್ಲವಂತೆ. ಗ್ರಾಮವು ತನಗಾಗಿ ಒಂದು ವಿಶಿಷ್ಟ ಗುರುತನ್ನು ಕೆತ್ತಿಕೊಂಡಿದೆ ಮತ್ತು ಅದಕ್ಕಾಗಿಯೇ ಅದರ ನಿವಾಸಿಗಳನ್ನು ಪಕ್ಕದ ಪ್ರದೇಶಗಳಲ್ಲಿ ಗೌರವದಿಂದ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ಅವರು ಇದೇ ವೇಳೆ ನೆನಪಿಸಿಕೊಳ್ಳುತ್ತಾರೆ.
ಯಾವುದೇ ಇತರ ಹಳ್ಳಿ ಅಥವಾ ಪಕ್ಕದ ವಸಾಹತುಗಳಿಗೆ ಭೇಟಿ ನೀಡಿದಾಗಲೆಲ್ಲಾ ಅಲ್ಲಿ ವಾಸಿಸುವ ಜನರಿಂದ ಈ ಗ್ರಾಮದ ಜನರಿಗೆ ಹೆಚ್ಚಿನ ಗೌರವ ಸಿಗುತ್ತದೆ ಎಂದು ಸ್ಥಳೀಯರು ನೆನಪಿಸಿಕೊಂಡಿದ್ದಾರೆ. ಈಟಿವಿ ಭಾರತ್ ಸಂಪರ್ಕಿಸಿದ ಹೆಚ್ಚಿನ ಸಂಖ್ಯೆಯ ಜನರು ಕೃಷಿ ಮತ್ತು ಪಶುಸಂಗೋಪನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೃಷಿ ಮತ್ತು ಜಾನುವಾರ ಸಾಕಣೆಯಿಂದ ಸಂತೃಪ್ತ ಜೀವನ ನಡೆಸುತ್ತಿದ್ದು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಶ್ರಮಿಸುತ್ತಿದ್ದಾರೆ.
ಅವರಿಗಿರುವ ಒಂದೇ ಒಂದು ದೂರು ಎಂದರೆ ಈ ಗ್ರಾಮದಲ್ಲಿ ಉತ್ತಮ ಶೈಕ್ಷಣಿಕ ಸೌಲಭ್ಯಗಳ ಕೊರತೆಯಿದೆ.ಇದರಿಂದಾಗಿ ಅವರ ಮಕ್ಕಳು ಹೊರಗೆ ಹೋಗಿ ಓದಬೇಕಾಗದ ಪರಿಸ್ಥಿತಿ ಇದೆ.
ಆರಕ್ಷಕರಿಂದಲೇ ಶಹಬ್ಬಾಶ್ಗಿರಿ: ಪೊಲೀಸರೂ ಸಹ ಈ ಗ್ರಾಮದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತಾರೆ. ಲತೇಹಾರ್ ಪೊಲೀಸ್ ಠಾಣೆಯ ಉಸ್ತುವಾರಿ ಸುರೇಂದ್ರ ಮಹಾತೋ ಅವರು ಮಾತನಾಡಿ, ಇಲ್ಲಿನ ನಿವಾಸಿಗಳು ಅಪರಾಧದಿಂದ ದೂರವಿರುತ್ತಾರೆ ಮತ್ತು ಸಮಾಜದಲ್ಲಿ ಸಕಾರಾತ್ಮಕ ಭಾವನೆಯನ್ನು ಮೂಡಿಸಲು ಯಾವಾಗಲೂ ಸಿದ್ಧರಿರುತ್ತಾರೆ ಎಂದು ಗುಣಗಾನ ಮಾಡಿದ್ದಾರೆ.
ಜಿಲ್ಲೆಯ ಅಭಿವೃದ್ಧಿಗೆ ಸಹಾಯ ಮಾಡಲು ಇತರ ಗ್ರಾಮಗಳು ಲಾಲ್ಗಡಿಯಿಂದ ಕಲಿಯಬೇಕಾಗಿರುವುದು ಬಹಳಷ್ಟಿದೆ. ಶಾಂತಿ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಇವರಿಂದ ನಾವೆಲ್ಲ ಕಲಿತುಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ನೋಡಿ: ಸೌಹಾರ್ದತೆಯ ತಾಣ, ಮೊಹಮ್ಮದ್ ಗವಾನ್ ಮದರಸಾ Janashakthi Media
