ಕೃಷ್ಣಾ ಜಲ ವಿವಾದ: ನಾಳೆಗೆ ವಿಚಾರಣೆ ಮುಂದೂಡಿದ ಸರ್ವೋಚ್ಚ ನ್ಯಾಯಾಲಯ

ನವದೆಹಲಿ: ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣ-2 (ಬ್ರಿಜೇಶ್ ಕುಮಾರ್ ಆಯೋಗ) ಅಂತಾರಾಜ್ಯ ಜಲವಿವಾದ ಕಾಯ್ದೆಯಡಿಯಲ್ಲಿ ನೀಡಿರುವ ತೀರ್ಪನ್ನು ಕೇಂದ್ರ ಸರ್ಕಾರದ ಅಧಿಕೃತ ಗೆಜೆಟೆಡ್‌ ನಲ್ಲಿ ಪ್ರಕಟಿಸುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಇಂದು(ಜನವರಿ 10) ನಡೆಸಿದ ಸರ್ವೋಚ್ಚ ನ್ಯಾಯಾಲಯ ನಾಳೆಗೂ ವಿಚಾರಣೆಯನ್ನು ಮುಂದೂಡಿದೆ.

ಇದನ್ನು ಓದಿ: ಜಲ ವಿವಾದವನ್ನು ಬಗೆಹರಿಸಲು ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲು ಪ್ರಧಾನಿ ಮುಂದಾಗಬೇಕು – ಸಿಪಿಐಎಂ ಆಗ್ರಹ

ಕರ್ನಾಟಕ ರಾಜ್ಯದ ಪರವಾಗಿ ಹಿರಿಯ ನ್ಯಾಯವಾದಿ ಶ್ಯಾಮ್​ ದಿವಾನ್  ಇಂದು ತಮ್ಮ ವಾದವನ್ನು ಸುಮಾರು 1 ಗಂಟೆ 10 ನಿಮಿಷ ಕಾಲ ವಿವರವಾಗಿ ಮಂಡಿಸಿದರು. ಐತೀರ್ಪಿನ ಗೆಜೆಟ್ ಪ್ರಕಟಣೆಗೆ ಇರುವ ಅಗತ್ಯತೆಗಳನ್ನು ಮತ್ತು ಅವಶ್ಯಕತೆಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

14955 ಕೋಟಿ ವೆಚ್ಚದಲ್ಲಿ ಯೋಜನೆ:

ಕರ್ನಾಟಕ ರಾಜ್ಯ ಈಗಾಗಲೇ 14,955 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಲುವೆ ಜಾಲ ನಿರ್ಮಾಣ ಮಾಡುವ ಮೂಲಕ ರಾಜ್ಯದ ಪಾಲಿಗೆ ಹಂಚಿಕೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯಡಿ 130 ಟಿ.ಎಂ.ಸಿ. ನೀರಿನ ಬಳಕೆಗೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ. ಈ ಸೌಕರ್ಯವು ವ್ಯರ್ಥವಾಗಬಾರದು ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳು ಇದ್ದಾಗಲೂ ಸಹ ನ್ಯಾಯಾಲಯವೇ ಅಂತಾ​ರಾಜ್ಯ ಜಲ ವಿವಾದ ಕಾಯ್ದೆಯನ್ವಯ ಗೆಜೆಟ್ ಪ್ರಕಟಣೆಗೆ ಅವಕಾಶ ನೀಡಿತ್ತು. ಅಂತಹದೇ ಸ್ಥಿತಿ ಇಂದೂ ಇದೆ. ಗೆಜೆಟ್ ಪ್ರಕಟಣೆಗೆ ಸರ್ವೋಚ್ಚ ನ್ಯಾಯಾಲಯವು ನಿಯಂತ್ರಣ ಹೇರಿದಾಗ ಅಂತಾರಾಜ್ಯ ಜಲ ವಿವಾದ ಕಾಯ್ದೆಯ 5(3)ರಡಿಯಲ್ಲಿ ಮುಂದುವರೆದ ವರದಿ ಸಲ್ಲಿಕೆಯಾಗಿರಲಿಲ್ಲ. ಎಲ್ಲಾ ರಾಜ್ಯಗಳು ನ್ಯಾಯಾಧೀಕರಣದ ಮುಂದೆ ಸ್ಪಷ್ಟೀಕರಣ ಉಲ್ಲೇಖದ ಆದೇಶಗಳ ನಿರೀಕ್ಷಣೆಯಲ್ಲಿದ್ದಾಗ ಅಂತಿಮ ವರದಿ ಸಲ್ಲಿಕೆಯಾಗುವವರೆಗೆ ಗೆಜೆಟ್ ಪ್ರಕಟಣೆಗೆ ನಿಯಂತ್ರಣ ಹೇರಿತ್ತೇ ಹೊರತು ಗೆಜೆಟ್ ಪ್ರಕಟಣೆ ಮಾಡಬಾರದು ಎಂದು ಹೇಳಿರಲಿಲ್ಲ ಎಂದರು.

ಇದನ್ನು ಓದಿ: ಅಂತರರಾಜ್ಯ ಜಲವಿವಾದ ಕಾಯ್ದೆ ತಿದ್ದುಪಡಿ ಅಗತ್ಯವಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಈಗ 29/11/2013ರಂದೇ ನ್ಯಾಯಾಧೀಕರಣದ ಅಂತಿಮ ವರದಿ ಸಲ್ಲಿಕೆಯಾಗಿದೆ. ಈ ಮೊದಲು 30/12/2010 ರಂದು ನ್ಯಾಯಾಧೀಕರಣದ ಐತೀರ್ಪು ಸಲ್ಲಿಕೆಯಾಗಿದೆ. ನ್ಯಾಯಾಧೀಕರಣದ ಐತೀರ್ಪನ್ನು ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್​​​ನಲ್ಲಿ ಪ್ರಕಟಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್​ ನಿಯಂತ್ರಣವನ್ನು ಸಡಿಲಗೊಳಿಸಬೇಕು ಮತ್ತು ಕರ್ನಾಟಕ ತನ್ನ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು. ಕರ್ನಾಟಕದ ವಾದ ಮಂಡನೆಯ ನಂತರ ಮತ್ತೆ ಕಲಾಪವನ್ನು ನಾಳೆಗೆ ಮುಂದುವರೆಸುವುದಾಗಿ ತಿಳಿಸಿ, ವಿಚಾರಣೆಯನ್ನು ಮುಂದೂಡಲಾಯಿತು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *