ಹುಬ್ಬಳ್ಳಿ | ಮರ್ಯಾದೆಗೇಡು ಹತ್ಯೆ ಅತ್ಯಂತ ಹೀನ ಕೃತ್ಯ – ಮಹೇಶ್‌ ಪತ್ತಾರ

ಹುಬ್ಬಳ್ಳಿ  : ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಗರ್ಭೀಣಿ ಯುವತಿ ಮಾನ್ಯಳ ಮರ್ಯಾದೆಗೇಡು ಹತ್ಯೆ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಯೆ ಖಂಡಿಸಿ, ಎಲ್ಲಾ ತಪ್ಪತಸ್ಥರನ್ನು ಬಂದಿಸಿ ಕಠಿಣ ಶಿಕ್ಷೆ ನೀಡಲು ಆಗ್ರಹಿಸಿ ಹಾಗೂ ಮರ್ಯಾದೆಗೇಡು ಹತ್ಯೆ ನಿಷೇಧ ಕಠಿಣ ಕಾನೂನು ತರಲು ಒತ್ತಾಯಿಸಿ ಇಂದು ಧಾರವಾಡದ ವಿವಿದ ಜನಪರ ಸಂಘಟನೆಗಳಿಂದ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಪ್ರತಿಭಟನೆಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್‌ ಪತ್ತಾರ ಅವರು ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣ ನಮ್ಮನ್ನು ಆಕ್ರೋಶ ಮತ್ತು ದಿಗ್ಭ್ರಮೆಗೀಡು ಮಾಡಿದೆ. ಮನೆಯ ಮಗಳು ತಮ್ಮ ಜಾತಿಗಿಂತ ಬೇರೆ ಜಾತಿಯ ಗಂಡನ್ನು ಪ್ರೀತಿಸಿ, ಮದುವೆಯಾದಳೆನ್ನುವ ಕಾರಣಕ್ಕೆ ಅವಳ ಜೀವಕ್ಕೇ ಕುತ್ತು ತಂದ ತಂದೆ ಮತ್ತು ಕುಟುಂಬದವರ ಕ್ರೌರ್ಯ ಅತ್ಯಂತ ಹೀನ ಕೃತ್ಯ ಎಂದು ಆಗ್ರಹಿಸಿದರು.

ಇದನ್ನೂ ಓದಿ : ಹುಬ್ಬಳ್ಳಿ | ಮರ್ಯಾದೆಗೇಡು ಹತ್ಯೆ: ಸಿಪಿಐ(ಎಂ) ನಿಯೋಗ ಭೇಟಿ ಕುಟುಂಬಕ್ಕೆ ಸಾಂತ್ವನ : ಕಠಿಣ ಶಿಕ್ಷೆಗೆ ಆಗ್ರಹ

ಭಾರತದ ಸ್ತ್ರೀಪುರುಷರೆಲ್ಲರಿಗೂ ಆಯ್ಕೆಯ ಸ್ವಾತಂತ್ರ‍್ಯವನ್ನೂ, ಸಮಾನತೆಯನ್ನೂ, ಘನತೆಯ ಬದುಕನ್ನೂ ನೀಡಿರುವ ಸಂವಿಧಾನ ಜಾರಿಯಾಗಿ ಮುಕ್ಕಾಲು ಶತಮಾನ ಕಳೆದರೂ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ತನಗಿಷ್ಟ ಬಂದವರನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವುದು ಅಪರಾಧ ಎನಿಸಿಕೊಂಡಿರುವುದೇಕೆ? ಈಗಲೂ ಹೆಣ್ಣು ತನ್ನ ಮನೆಯಲ್ಲಿ ಹಿರಿಯರು, ಅದರಲ್ಲೂ ಪುರುಷರು ನಿರ್ಧರಿಸಿದವನನ್ನೇ ಮದುವೆಯಾಗಬೇಕು ಎನ್ನುವ ಅಸ್ವತಂತ್ರ ಮುಂದುವರಿದಿರುವುದು ಹೇಗೆ? ಹೆಣ್ಣು ಸ್ವತಂತ್ರವಾಗಿ ಯೋಚಿಸಕೂಡದು, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಕೂಡದು ಎಂಬ ಧೋರಣೆ ಇನ್ನೂ ನಮ್ಮ ನಡುವೆ ಎದ್ದು ಕುಣಿಯುತ್ತಿರುವುದೇಕೆ? ಎಂದು ಪ್ರಶ್ನಿಸಿದರು.

ಇದಕ್ಕೆಲ್ಲ ಕಾರಣ ಭಾರತೀಯ ಸಮಾಜ ಇನ್ನೂ ಪುರುಷಪ್ರಧಾನ ಮೌಲ್ಯಗಳನ್ನೇ ಅಳವಡಿಸಿಕೊಂಡಿರುವುದು ಮತ್ತು ಸಂವಿಧಾನ ನಮ್ಮ ಬದುಕಿನಲ್ಲಿ ಮೌಲ್ಯವಾಗಿ ಅಳವಡದೇ ಇರುವುದು. ಅದರ ಜೊತೆಗೆ ಜಾತಿ ಮೇಲು ಕೀಳಿನ ತಾರತಮ್ಯ ವ್ಯವಸ್ಥೆಯೂ ಜೀವಂತವಾಗಿದ್ದು ಅದಕ್ಕೆ ಈ ಪ್ರಕರಣ ಕ್ರೂರ ಸಾಕ್ಷಿಯಾಗಿದೆ. ಮೇಲೆಂದುಕೊAಡ ಜಾತಿಯ ತಮ್ಮ ಮನೆ ಮಗಳು ಕೀಳೆಂದು ತಾವು ಕರೆಯುವ ದಲಿತ ಹುಡುಗನನ್ನು ಮದುವೆಯಾದದ್ದು, ಅಂತಹವನ ಮಗುವನ್ನು ಗರ್ಭದಲ್ಲಿಟ್ಟುಕೊಂಡದ್ದು ಆ ಹುಡುಗಿಯ ತಂದೆಯಲ್ಲಿ ಉದ್ದೀಪಿಸಿರುವ ಕ್ರೌರ್ಯ ಅಮಾನವೀಯವಾದದ್ದು. ಮಗಳ ಪ್ರಾಣಕ್ಕಿಂತ ಜಾತಿಯೇ ಮುಖ್ಯ ಎಂಬ ಅಮಾನುಷ ಧೋರಣೆಯು ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜಾತಿತಾರತಮ್ಯ, ಜಾತಿದ್ವೇಷವನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.

ಈ ಹೊತ್ತಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ನಾವು, ಕೊಲೆಗಡುಕ ಅಪ್ಪ ಮತ್ತು ಅವನಿಗೆ ಕುಮ್ಮಕ್ಕು ಕೊಟ್ಟವರ ಮೇಲೆ ಯಾವುದೇ ಒತ್ತಡಗಳಿಗೆ ಮಣಿಯದೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು; ಈ ಆಘಾತದಿಂದ ಚೇತರಿಸಿಕೊಳ್ಳಲು ದಲಿತ ಹುಡುಗ ಮತ್ತವನ ಕುಟುಂಬಕ್ಕೆ ಎಲ್ಲ ರೀತಿಯ ಬೆಂಬಲ ಕೊಡಬೇಕು; ಇಂತಹ ಕ್ರೌರ್ಯ ಮತ್ತೆ ಮತ್ತೆ ನಡೆಯದಂತೆ ಜಾತ್ಯತೀತ ಮನೋಭಾವ, ಲಿಂಗಸಮಾನತೆಯ ಜಾಗೃತಿಯನ್ನು ಶಾಲಾಕಾಲೇಜುಗಳಲ್ಲಿ ಮೂಡಿಸುವಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ವಿನಂತಿಸಿಕೊಳ್ಳುತ್ತೆವೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಪ್ರಭಾವತಿ ದೇಸಾಯಿ, ಸಾಧನಾ ಮಾನವ ಹಕ್ಕುಗಳ ವೇದಿಕೆಯ ಮುಖ್ಯಸ್ಥೆ ಡಾ. ಇಸಾಬೆಲ್ಲಾ ಝೇವಿಯರ್, ಖ್ಯಾತ ಕಲಾವಿದೆ ವಿಶ್ವೇಶ್ವರಿ ಹಿರೇಮಠ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಾಗರಾಜ ಚಲವಾದಿ, ರೈತ ಮುಖಂಡ ರವಿರಾಜ ಕಂಬಳಿ, ಒಂಟಿ ಮಹಿಳೆಯರ ಸಂಘದ ಜಿಲ್ಲಾಧ್ಯಕ್ಷೆ ಮಂಜುಳಾ ಪವಾರ, ಪ್ರಮಿಳಾ ಜಕ್ಕಣ್ಣವರ, ಬಿ.ಎನ್. ಪೂಜಾರಿ, ಲಿನೆಟ್ ಡಿಸೇಲ್ವ, ಸುಹಾಸಿನಿ, ಎ.ಎಂ. ಖಾನ್, ಎಚ್.ಜಿ. ದೇಸಾಯಿ, ಸಂಗೀತಾ ಗೌಡ, ಗುರುಸಿದ್ದಪ್ಪ ಅಂಬಿಗೇರ, ರಾಘವೇಂದ್ರ ಪಾಟೀಲ, ಪರಶುರಾಮ ಮಂದಾರ, ಶ್ರೀನಿವಾಸ ನಾಯಕ, ಸರ್ವೇಶ ಕಂಬದಾಳ ಮುಂತಾದವರಿದ್ದರು.

ಇದನ್ನೂ  ನೋಡಿ : ಹಾವೇರಿ | ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ ವಿದ್ಯಾರ್ಥಿನಿಯರು ಅಸ್ವಸ್ಥ Janashakthi Media

 

Donate Janashakthi Media