ಕೇರಳ ರಾಜ್ಯಪಾಲರ ಸಂವಿಧಾನ-ವಿರೋಧಿ, ಪ್ರಜಾಪ್ರಭುತ್ವ-ವಿರೋಧಿ ಹೇಳಿಕೆಗಳು ತಡೆಯಲು ರಾಷ್ಟ್ರಾಧ್ಯಕ್ಷರು ಮಧ್ಯಪ್ರವೇಶಿಸಬೇಕು-ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಕೇರಳದ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್ ಅವರು ತಾವು ಹೊಂದಿರುವ ಸಾಂವಿಧಾನಿಕ ಹುದ್ದೆಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ಇದರಲ್ಲಿ ಇತ್ತೀಚಿನದು, ಕೇರಳ ರಾಜ್ಯಪಾಲರ ಅಧಿಕೃತ ಹ್ಯಾಂಡಲ್‌ನಿಂದ ಬಂದಿರುವ ಟ್ವೀಟ್. ಇದರಲ್ಲಿ ಕೇರಳ ರಾಜಭವನದ ಸಾರ್ವಜನಿಕ ಸಂಪರ್ಕ ಅಧಿಕಾರಿಯು ರಾಜ್ಯಪಾಲರನ್ನು ಉಲ್ಲೇಖಿಸಿ, ಮಂತ್ರಿಗಳ ಹೇಳಿಕೆಗಳು ರಾಜ್ಯಪಾಲರ ಹುದ್ದೆಯ ಘನತೆಯನ್ನು ಇಳಿಸಿದರೆ, ಅದು “ಇಷ್ಟವನ್ನು ಹಿಂತೆಗೆದುಕೊಳ್ಳುವುದು” ಸೇರಿದಂತೆ ಕ್ರಮಗಳನ್ನು ಕೈಗೊಳ್ಳಲು ಆಹ್ವಾನವಾಗಬಹುದು ಎಂದಿದ್ದಾರೆ.

ಅಂದರೆ ರಾಜ್ಯಪಾಲರು ತಮ್ಮ ಇಷ್ಟವನ್ನು ಹಿಂತೆಗೆದುಕೊಂಡು ಸಚಿವರನ್ನು ವಜಾಗೊಳಿಸಬಹುದು ಎಂದು ಹೇಳಿದಂತಾಗುತ್ತದೆ. ಇಂತಹ ನಿರಂಕುಶ ಅಧಿಕಾರಗಳನ್ನು ಸಂವಿಧಾನದಲ್ಲಿ  ರಾಜ್ಯಪಾಲರಿಗೆ ನೀಡಲಾಗಿಲ್ಲ. ಇಂತಹ ಹೇಳಿಕೆ ನೀಡುವ ಮೂಲಕ ಶ್ರೀ ಖಾನ್ ತಮ್ಮ ರಾಜಕೀಯ ಪಕ್ಷಪಾತ ಮತ್ತು ಎಲ್‌ಡಿಎಫ್ ಸರ್ಕಾರದ ಬಗ್ಗೆ ಹಗೆತನವನ್ನು ಬಹಿರಂಗಪಡಿಸಿದ್ದಾರಷ್ಟೇ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಕೇರಳ ರಾಜ್ಯಪಾಲರು ಇಂತಹ ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಗಳನ್ನು ನೀಡುವುದನ್ನು ತಡೆಯಲು ಭಾರತದ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದೆ.

75 ವರ್ಷಗಳ ನಂತರವೂ ಅಜ್ಞಾನದ ಪ್ರದರ್ಶನ-ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿ

ತನ್ನನ್ನು ಟೀಕಿಸಿದರೆ ಸಚಿವ ಸ್ಥಾನದಿಂದ ವಜಾ ಮಾಡುವುದಾಗಿ ರಾಜ್ಯಪಾಲರು ಬೆದರಿಕೆ ಹಾಕಿರುವುದು ಭಾರತದ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಅಜ್ಞಾನವನ್ನು ತೋರಿಸುತ್ತದೆ ಎಂದು ಎಂ.ವಿ.ಗೋವಿಂದನ್‍ ಮಾಸ್ಟರ್, ಸಿಪಿಐ(ಎಂ)ನ ಕೇರಳ ರಾಜ್ಯ ಕಾರ್ಯದರ್ಶಿ ಟಿಪ್ಪಣಿ ಮಾಡಿದ್ದಾರೆ.

‘ಇಷ್ಟವನ್ನು ಹಿಂಪಡೆಯುವ’ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಅವರು ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ಮಾತ್ರ ಸಚಿವರನ್ನು ನೇಮಿಸಬಹುದು ಮತ್ತು ತೆಗೆದುಹಾಕಬಹುದು ಎಂದು ನೆನಪಿಸಿರುವ ಅವರು  ರಾಜ್ಯಪಾಲರ ಪಿಆರ್‌ಒ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟಿಪ್ಪಣಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲು ಹಾಕುತ್ತಿದೆ ಎಂದು ಟೀಕಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕೇರಳದ ರಾಜ್ಯಪಾಲರಿಗೆ ನೆನಪಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಅವರ ಇತ್ತೀಚಿನ ಹಸ್ತಕ್ಷೇಪವನ್ನು ಜನರು, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಭಾರತೀಯ ಸಂವಿಧಾನದ ಮೂಲಭೂತ ತತ್ವಗಳ ಮೇಲಿನ ಆಕ್ರಮಣವಾಗಿ ಮಾತ್ರ ನೋಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.

“ರಾಜ್ಯಪಾಲರು ಪ್ರಜಾಪ್ರಭುತ್ವಕ್ಕೆ ಕಳಂಕ ತರುವ ಇಂತಹ ಪ್ರಯತ್ನಗಳಿಂದ ಹಿಂದೆ ಸರಿಯಬೇಕು. ನೀವು ಸಂವಿಧಾನದ 163,164 ನೇ ವಿಧಿಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಓದಬೇಕೆಂದು ವಿನಂತಿಸುತ್ತೇವೆ. ಸಹಿ ಹಾಕದೆ ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳನ್ನು ತಡೆಹಿಡಿಯುತ್ತಿರುವುದು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವುದು ಘನತೆಯೇ ಎಂಬುದನ್ನು ರಾಜ್ಯಪಾಲರು ಸ್ಪಷ್ಟಪಡಿಸಬೇಕು. ಮಂತ್ರಿಗಳು ರಾಜ್ಯದ ಜನರಿಂದ ಚುನಾಯಿತರಾಗುತ್ತಾರೆ, ಅವರು ಜನರಿಗೆ ಜವಾಬ್ದಾರರು, ವಸಾಹತುಶಾಹಿ ಕಾಲದ ಪಳೆಯುಳಿಕೆಗಳಾದ ಹುದ್ದೆಗಳಿಗೆ ಅಲ್ಲ ಎಂದು ಅವರಿಗೆ ಮತ್ತೊಮ್ಮೆ ನೆನಪಿಸಬೇಕಾಗುತ್ತದೆ” ಎನ್ನುತ್ತ ಗೋವಿಂದನ್‍ ಮಾಸ್ಟರ್ ಟ್ವೀಟ್ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರಿಗೆ ಮನವಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *