ನೈಟ್​ಕರ್ಫ್ಯೂ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ

  • ಡಿಸೆಂಬರ್ 28 ರಿಂದ ನೈಟ್ ಕರ್ಫ್ಯೂ ಜಾರಿ
  • ನೈಟ್ ಕರ್ಫ್ಯೂಗೆ ರೆಸಾರ್ಟ್ ಮಾಲೀಕರ ವಿರೋಧ 
  • ನೈಟ್‌ ಕರ್ಫ್ಯೂಗೆ ಓಲಾ, ಉಬರ್ ಚಾಲಕರು ವಿರೋಧ
  • ನೈಟ್​ಕರ್ಫ್ಯೂಗೆ ಬೀದಿಬದಿ ವ್ಯಾಪಾರಿಗಳ ಕಿಡಿ 
  • ಥಿಯೇಟರ್, ಖಾಸಗಿ ಬಸ್​​ ಮಾಲೀಕರ ಆಕ್ರೋಶ

ಬೆಂಗಳೂರು: ಓಮಿಕ್ರಾನ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಡಿಸೆಂಬರ್ 28 ರಿಂದ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೆ ನೈಟ್‌ ಕರ್ಫ್ಯೂಗೆ ಉದ್ಯಮ ಕ್ಷೇತ್ರದಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ನೈಟ್‌ ಕರ್ಪ್ಯೂಗೆ ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಹೋಟೆಲ್ ಉದ್ಯಮಿಗಳು, ಬಾರ್, ಪಬ್‌ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನೈಟ್‌ ಕರ್ಫ್ಯೂ ಜಾರಿಗೊಳಿಸಿದ್ದಲ್ಲಿ ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.

ನೈಟ್ ಕರ್ಫ್ಯೂ ಜಾರಿ ಮಾಡಿದರೆ ನಾವು ಸಾಯಬೇಕಷ್ಟೇ. ಈಗಾಗಲೇ ನಾವು 2 ವರ್ಷದಿಂದ ನಷ್ಟ ಅನುಭವಿಸಿದ್ದೇವೆ. ನಮಗೆ ರಾತ್ರಿ ವೇಳೆಯೇ ಹೆಚ್ಚು ಬಾಡಿಗೆಗಳು ಬರುವುದು. ನೈಟ್ ಕರ್ಫ್ಯೂ ಜಾರಿಯಾದರೆ ನಮಗೆ ಲಾಸ್ ಆಗುತ್ತದೆ. ಹೀಗಾಗಿ ದಯವಿಟ್ಟು ನೈಟ್ ಕರ್ಫ್ಯೂ ಜಾರಿ ಮಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಓಲಾ, ಉಬರ್ ಚಾಲಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿ : ಅನಗತ್ಯವಾಗಿ ಹೊರಗೆ ಬರುವಂತಿಲ್ಲ

ನೈಟ್ ಕರ್ಫ್ಯೂನಿಂದ ಥಿಯೇಟರ್ ಗೆ ಸಂಕಷ್ಟ ಆಗಲಿದೆ. ರಾತ್ರಿ 10 ಗಂಟೆ ನಂತರ ಪ್ರದರ್ಶನ ನಡಿಸೋಕೆ ಆಗಲ್ಲ. ಹೆಚ್ಚು ಕಡಿಮೆ ಸಂಜೆ 6 ರಿಂದ ಶೋ ನಡೆಯಲ್ಲ. ಈಗಾಗಲೇ ಎರಡು ವರ್ಷದಿಂದ ಸಂಕಷ್ಟ ಅನುಭವಿಸಿದ್ದೇವೆ. ಮತ್ತೆ ಈಗ ನೈಟ್‌ ಕರ್ಫ್ಯೂ ಜಾರಿಯಾದ್ರೆ ನಾವು ಬೀದಿಗೆ ಬರ್ತೇವೆ. ನೈಟ್‌ ಕರ್ಪ್ಯೂ ವಾಪಸ್‌ ತೊಗೊಳ್ಳಿ ಎಂದು ಥಿಯೇಟರ್‌ ಮಾಲೀಕರು ಮನವಿ ಮಾಡಿದ್ದಾರೆ.

“ನೈಟ್ ಕರ್ಫ್ಯೂ ಜಾರಿಗೊಳಿಸುವುದರಿಂದ ವೈಜ್ಞಾನಿಕವಾಗಿ ಕೋವಿಡ್ ತಡೆಯಲು ಸಾಧ್ಯವಿಲ್ಲ. ರಾತ್ರಿ ವೇಳೆ ಕೇವಲ ಶೇಕಡಾ ಐದರಿಂದ ಎಂಟರಷ್ಟು ಮಾತ್ರ ಜನಸಂದಣಿ ಇರುತ್ತದೆ.ಶೇ. 90 ರಷ್ಟು ಜನರು ಮನೆಯಲ್ಲೇ ಇರುತ್ತಾರೆ. ನೈಟ್ ಕರ್ಫ್ಯೂ ಮೂಲಕ ರಾತ್ರಿಯಲ್ಲಿ ಜನರ ಓಡಾಟಕ್ಕೆ ನಿಯಂತ್ರಣ ಹೇರಿದರೆ ಹಗಲು ಹೊತ್ತಿನಲ್ಲಿ ಜನಸಂದಣಿ ಜಾಸ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ನೈಟ್‌ ಕರ್ಫ್ಯೂ ಅಗತ್ಯವಿದ್ದರೆ ರಾತ್ರಿ 10 ಗಂಟೆಯ ಬದಲಾಗಿ 11 ಗಂಟೆ ಅಥವಾ 11.30 ಯಿಂದ ಆರಂಭಿಸಿ” ಎಂದು ಬೆಂಗಳೂರು ಹೋಟೆಲ್‌ ಸಂಘದ ಅಧ್ಯಕ್ಷ ಪಿ.ಸಿ ರಾವ್ ಆಗ್ರಹಿಸಿದ್ದಾರೆ.

ಇನ್ನು ನೈಟ್‌ ಕರ್ಫ್ಯೂ ಜಾರಿ ಹೆಸರಿನಲ್ಲಿ ಕೆಲವು ಪೊಲೀಸರು ಹೋಟೆಲ್, ಬಾರ್, ಪಬ್ ಮಾಲೀಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. 10 ಗಂಟೆಯಿಂದ ನೈಟ್ ಕರ್ಫ್ಯೂ ಇದ್ದರೂ ಒಂಬತ್ತು ಗಂಟೆಯಿಂದಲೇ ಪೊಲೀಸರು ಅಂಗಡಿ ಮುಚ್ಚಲು ಸೂಚನೆ ನೀಡುತ್ತಾರೆ. ಇನ್ನು ಅಂಗಡಿ, ಹೋಟೆಲ್‌ ಮುಚ್ಚಿದರೂ ಕೆಲಸಗಾರರು ಮನೆಗೆ ಹೋಗುವ ಸಂದರ್ಭದಲ್ಲೂ ಪೊಲೀಸರ ಕಿರಿಕಿರಿ ಎದುರಿಸಬೇಕಾಗುತ್ತದೆ. ಕೆಲವು ಬಾರ್ ಹಾಗೂ ರೆಸ್ಟೋರೆಂಟ್, ಪಬ್‌ಗಳು 11 ರ ವರೆಗೂ ತೆರೆದಿರುತ್ತದೆ. ಹಣ ವಸೂಲಿ ಮಾಡಿ ಪಬ್, ಬಾರ್ ತೆರೆದಿಡಲು ಪೊಲೀಸರು ಅವಕಾಶ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಹಾಗಾಗಿ ರಾಜ್ಯ ಸರಕಾರ ಅನಗತ್ಯವಾಗಿ ನೈಟ್‌ ಕರ್ಫ್ಯೂನ್ನು ಜನರ ಮೇಲೆ ಹೇರುತ್ತಿದೆ.  ಆರೋಗ್ಯಕ್ಕೆ ಬೇಕಾದ ಎಚ್ಚರಿಕೆಗಳನ್ನು ವಹಿಸದೆ, ಈ ರೀತಿಯ ಪ್ರಯತ್ನಗಳು ರಾಜ್ಯದ ಜನರ ಸಂಕಷ್ಟಗಳನ್ನು ಹೆಚ್ಚಿಸುತ್ತಿವೆ. ನೈಟ್‌ ಕರ್ಫ್ಯೂ ಆದೇಶದ ಕುರಿತು ಸರಕಾರ ಇನ್ನೊಮ್ಮೆ ಚರ್ಚೆಯನ್ನು ನಡೆಸಬೇಕಿದೆ.

Donate Janashakthi Media

Leave a Reply

Your email address will not be published. Required fields are marked *