ಬೆಂಗಳೂರು: ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಕರ್ನಾಟಕವು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ಡಿಜಿಟಲ್ ವ್ಯವಸ್ಥೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ ಎಂದು ಮಾರ್ಚ್ 7ರಂದು ನಗರದಲ್ಲಿ ಸಿಐಡಿ ಹಾಗೂ ಸೈಬರ್ ಕ್ರೈಂ ಇನ್ವೆಸ್ಟಿಗೇಶನ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್ ಆಯೋಜಿಸಿದ್ದ ಮೂರನೇ ವಾರ್ಷಿಕ ಸೈಬರ್ ಅಪರಾಧ ತನಿಖಾ ಶೃಂಗಸಭೆ ‘CIDECODE’ ಅನ್ನು ಉದ್ಘಾಟಿಸಿ ಸಚಿವರು ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು. ಕರ್ನಾಟಕ
ಕರ್ನಾಟಕವು ಕೇವಲ ಒಂದು ರಾಜ್ಯವಲ್ಲ, ಅದು ಜಾಗತಿಕ ಬ್ರ್ಯಾಂಡ್. ಜಗತ್ತು ಬೆಂಗಳೂರು ನಗರವನ್ನು ಭವಿಷ್ಯದ ನವೀನತೆಗಳ ಕೇಂದ್ರವಾಗಿ ನೋಡುತ್ತಿದೆ. ಇಲ್ಲಿ ಬಲಿಷ್ಠ ಹಾಗೂ ಅತ್ಯಂತ ಸುರಕ್ಷಿತ ಡಿಜಿಟಲ್ ಪರಿಸರವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಸೈಬರ್ ಅಪರಾಧಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ವಿಶೇಷ ಘಟಕಗಳನ್ನು ಸ್ಥಾಪಿಸಿದ್ದು, ಅವುಗಳಿಗೆ ಅಗತ್ಯ ಕೌಶಲ್ಯ, ತರಬೇತಿ ಹಾಗೂ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಜೊತೆಗೆ ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತಾ ಅನುಸರಣೆ ಮತ್ತು ಅಪಾಯ ನಿರ್ವಹಣೆ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಕಂಪನಿಗಳೊಂದಿಗೆ ಸಹಭಾಗಿತ್ವದ ಮೂಲಕ ಸೈಬರ್ ಭದ್ರತಾ ನವೀನತೆಗಳಿಗೆ ಅನುಕೂಲಕರ ಪರಿಸರವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: 5 ಲಕ್ಷ ರೂ. ಲಂಚ ಪ್ರಕರಣ: ಚಂದ್ರು ಲಮಾಣಿ ಜಾಮೀನು ಅರ್ಜಿಗೆ ಮಾ.11ರಂದು ತೀರ್ಪು
ಡಾರ್ಕ್ ವೆಬ್ ಚಟುವಟಿಕೆಗಳು, ಕ್ರಿಪ್ಟೋಕರೆನ್ಸಿ ಹಾದಿ ಪತ್ತೆ, ಹಣಕಾಸು ವಂಚನೆ ತಡೆ ಮತ್ತು ಡಿಜಿಟಲ್ ಫರೆನ್ಸಿಕ್ ಪ್ರಯೋಗಾಲಯಗಳ ಬಲವರ್ಧನೆ ಕುರಿತ ಚರ್ಚೆಗಳು ಇಂದಿನ ಪರಿಸ್ಥಿತಿಯಲ್ಲಿ ಅತ್ಯಂತ ಸೂಕ್ತವಾಗಿವೆ. ಸೈಬರ್ ಅಪರಾಧಗಳು ಭೌಗೋಳಿಕ ಮಿತಿಗಳನ್ನು ಮೀರಿ ತಂತ್ರಜ್ಞಾನ ಆಧಾರಿತವಾಗಿ ನಿರಂತರವಾಗಿ ರೂಪಾಂತರಗೊಳ್ಳುತ್ತಿರುವ ಅಪರಾಧಗಳಾಗಿವೆ.
ಹಣಕಾಸು ವಂಚನೆಗಳಿಂದ ಹಿಡಿದು ಕ್ರಿಪ್ಟೋಕರೆನ್ಸಿ ಸಂಬಂಧಿತ ಅಪರಾಧಗಳು, ಡಾರ್ಕ್ ವೆಬ್ ಮೂಲಕ ನಡೆಯುವ ಮಾದಕ ದ್ರವ್ಯ ಜಾಲಗಳು ಹಾಗೂ ಡೇಟಾ ಸೋರಿಕೆಗಳಂತಹ ಸವಾಲುಗಳು ವೇಗವಾಗಿ ಹೆಚ್ಚುತ್ತಿವೆ. ಇವುಗಳನ್ನು ಎದುರಿಸಲು ತಂತ್ರಜ್ಞಾನ ಸಾಮರ್ಥ್ಯ ಮಾತ್ರವಲ್ಲ, ಕಾನೂನು ವ್ಯವಸ್ಥೆಯನ್ನೂ ಮತ್ತಷ್ಟು ಬಲಪಡಿಸುವುದು ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಸೈಬರ್ ಕಮಾಂಡ್ ಡಿಜಿಪಿ ಪ್ರಣಬ್ ಮೊಹಂತಿ, ಇನ್ಫೋಸಿಸ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಮಾರ್ ಧರೆಶ್ವರ್ ಹಾಗೂ ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾದ ಸಿಇಒ ವಿನಾಯಕ್ ಗೋಡ್ಸೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಪಿಚ್ಚರ್ ಪಯಣ -169 | ಸಿನೆಮಾ : ಕೈರೋ ಸ್ಟೇಷನ್ : ವಿಶ್ಲೇಷಣೆ : ಬಿ. ಶ್ರೀಪಾದ ಭಟ್ Janashakthi Media
