ವಿವಾದಾತ್ಮಕ ಹೇಳಿಕೆ : ಕಲ್ಲಡ್ಕ ಪ್ರಭಾಕರ್ ಭಟ್‌ನನ್ನು ಬಂಧಿಸಲ್ಲವೆಂದ ಸರ್ಕಾರ

ಬೆಂಗಳೂರು : ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತುಗಳ ಮೂಲಕ ಕೋಮು ಪ್ರಚೋದನೆ ನೀಡಿದ್ದ ಉಗ್ರ ಭಾಷಣಕಾರ ಕಲ್ಲಡ್ಕ ಪ್ರಭಾಕರ್ ಭಟನನ್ನು ಬಂಧಿಸಲ್ಲ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಮುಸ್ಲಿಂ ಮಹಿಳೆಯರಿಗೆ ‘ಪರ್ಮನೆಂಟ್‌ ಗಂಡನನ್ನು ಕೊಟ್ಟಿದ್ದು ಮೋದಿ ಸರ್ಕಾರ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್‌ ವಿರುದ್ಧ ಶ್ರೀರಂಗಪಟ್ಟಣ ಸೇರಿ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಇದರ ಬೆನ್ನಲ್ಲಿಯೇ ಕಲ್ಲಡ್ಕ ಪ್ರಭಾಕರ್ ಭಟ್‌ ತಮ್ಮ ವಿರುದ್ಧ ದಾಖಲಾದ ಮೊಕದ್ದಮೆ ರದ್ದತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯದ ಮುಂದೆ ಸ್ವತಃ ಸರ್ಕಾರವೇ ಪ್ರಭಾಕರ್ ಭಟ್ ನನ್ನು ಬಂಧಿಸುವುದಿಲ್ಲ ಎಂದು ಹೇಳಿದೆ.

ಈ ಅರ್ಜಿ ವಿಚಾರಣೆ ವೇಳೆ ಪ್ರಭಾಕರ್ ಭಟ್ ಪರ ವಕೀಲರು, ಇದು ರಾಜಕೀಯ ಪ್ರೇರಿತ ದೂರು. ಆರೋಪಿ ವಯೋ ವೃದ್ದರು. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ಬಂಧಿಸುವ ಸಾಧ್ಯತೆಯಿದೆ. ಹಾಗಾಗಿ ಎಫ್ಐಆರ್ ಗೆ ತಡೆ ನೀಡಬೇಕು ಎಂದು ವಾದ ಮಂಡಿಸಿದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದೂರುದಾರರ ಪರ ವಕೀಲ ಎಸ್ ಬಾಲನ್ ಅವರು, “ಆರೋಪಿ ಹೇಳಿಕೆಯನ್ನು ನ್ಯಾಯಾಲಯ ಗಮನಿಸಬೇಕು. ಮುಸ್ಲಿಂ ಮಹಿಳೆಯರಿಗೆ ಒಬ್ಬ ಗಂಡ ಅಲ್ಲ. ದಿನಕ್ಕೊಬ್ಬ ಗಂಡಂದಿರು ಎಂದಿದ್ದಾರೆ. ಇದು ಸಮಾಜದಲ್ಲಿ ಅಶಾಂತಿ ಹುಟ್ಟಿಸುತ್ತಿದೆ. ಎಲ್ಲಾ ಕಡೆ ಪ್ರತಿಭಟನೆಗಳು ನಡೆಯುತ್ತಿದೆ. ಆರೋಪಿ ಈ ಹಿಂದೆಯೂ ಇಂತಹ ಕೃತ್ಯ ಮಾಡಿದ್ದಾನೆ. ಹಾಗಾಗಿ ಕಾನೂನು ಅದರ ಕೆಲಸ ಮಾಡಲಿ” ಎಂದರು.

ಪ್ರಭಾಕರ ಭಟ್ ಪರ ವಕೀಲರು, “ಮುಂದಿನ ದಿನಾಂಕದ ವರೆಗೆ ಬಂಧಿಸದಂತೆ ನಿರ್ದೇಶನ ಕೊಡಿ. ಪ್ರಭಾಕರ ಭಟ್ ವಿರುದ್ದ ಸರ್ಕಾರ ರೌಡಿ ಶೀಟ್ ತೆರೆಯುವ ಸಾಧ್ಯತೆಯಿದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ದೂರುದಾರರ ಪರ ವಕೀಲ ಎಸ್ ಬಾಲನ್, “ಆರೋಪಿ ಪ್ರಭಾಕರ ಭಟ್ ವಿರುದ್ದ ರೌಡಿಶೀಟ್ ಮಾತ್ರವಲ್ಲ, ಯುಎಪಿಎ ಸೇರಿದಂತೆ ದೇಶದ್ರೋಹದ ಕೇಸು ಹಾಕಬೇಕು. ಸಮಾಜದಲ್ಲಿ ಭಯವನ್ನು ಉತ್ಪಾದಿಸುವ ಭಯೋತ್ಪಾದಕರು ಇವರು. ಸುಪ್ರಿಂ ಕೋರ್ಟ್ ಈ ರೀತಿ ದ್ವೇಷಭಾಷಣ ಮಾಡುವವರ ವಿರುದ್ದ ಹಲವು ತೀರ್ಪು ಕೊಟ್ಟಿದೆ. ಈಗ ಆರೋಪಿ ಬಗ್ಗೆ ಇನ್ನಷ್ಟೂ ತನಿಖೆ ಆಗಬೇಕಿದೆ. ಪೊಲೀಸರು ಹಾಕಿರುವ ಎಲ್ಲಾ ಸೆಕ್ಷನ್ ಗಳು ಸರಿಯಾಗಿವೆ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಯಬೇಕು. ಇದರ ಹಿಂದೆ ಕೋಮುಗಲಭೆಯ ಹುನ್ನಾರ ಇದೆ. ಹಾಗಾಗಿ ಇದು ಸರಳ ಪ್ರಕರಣ ಅಲ್ಲ” ಎಂದು ಪ್ರಕರಣದ ಗಂಭೀರತೆಯ ಬಗ್ಗೆ ಗಮನ ಸೆಳೆದರು.

ಸರಕಾರದ ಪರವಾಗಿ ಹಾಜರಿದ್ದ ವಕೀಲರು, “ಈ ಪ್ರಕರಣದಲ್ಲಿ ನಾವು ಪ್ರಭಾಕರ ಭಟ್ಟರನ್ನು ಬಂಧಿಸಲ್ಲ. ಹಾಗಾಗಿ ವಿಚಾರಣೆಗೆ ಮುಂದಿನ ದಿನಾಂಕ ಕೊಡಿ” ಎಂದು ನ್ಯಾಯಾಲಯದ ಗಮನ ಸೆಳೆದರು. ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು ಕೂಡಲೇ, ” ಸರ್ಕಾರವೇ ಆರೋಪಿಯನ್ನು ಬಂಧಿಸಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದೆ. ಹಾಗಾಗಿ ಈ ಪ್ರಕರಣದಲ್ಲಿ ತಡೆ ನೀಡುವ ಅಗತ್ಯ ಇಲ್ಲ” ಎಂದರು.

ದೂರುದಾರರ ಪರ ವಕೀಲ ಬಾಲನ್ ಅವರು, “ಆರೋಪಿಯನ್ನು ಬಂಧಿಸಿ ತನಿಖೆ ನಡೆಸುವ ಅಗತ್ಯ ಇದೆ. ಆರೋಪಿ ಕೋಮುಗಲಭೆ ಮಾಡುವ ಹುನ್ನಾರ ಹೊಂದಿದ್ದಾನೆ” ಎಂದರು.

ಆಗ ನ್ಯಾಯಾಧೀಶರು, “ಸರ್ಕಾರಕ್ಕೆ ಬಂಧನದ ಅಗತ್ಯ ಇಲ್ಲ ಅಂದ ಮೇಲೆ ಈ ವಿಚಾರದಲ್ಲಿ ಚರ್ಚೆ ಬೇಡ” ಎಂದು ವಿಚಾರಣೆಯನ್ನು ಜನವರಿ 09, 2024 ಕ್ಕೆ ಮುಂದೂಡಿದರು.

 

Donate Janashakthi Media

Leave a Reply

Your email address will not be published. Required fields are marked *