ಬೆಂಗಳೂರು: ರೈತ, ಕಾರ್ಮಿಕ, ದಲಿತ, ಮಹಿಳಾ ಹಾಗೂ ವಿದ್ಯಾರ್ಥಿ – ಯುವಜನರ ಜಂಟಿ ವೇದಿಕೆಯಾದ ಸಂಯುಕ್ತ ಹೋರಾಟದ ಆಶ್ರಯದಲ್ಲಿ ಇಂದು ಈ ಜನಾಗ್ರಹ ಸಮಾವೇಶ ನಡೆಯಿತು. ವಾಸ್ತವದಲ್ಲಿ ಇಂದು ನಾವು ಬೀದಿಗಳಲ್ಲಿರಬೇಕಿತ್ತು. ಕರ್ನಾಟಕದ 31 ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚಿನ ಆಯಕಟ್ಟಿನ ಜಾಗಗಳಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳ ನೀತಿಗಳನ್ನು ಪ್ರತಿಭಟಿಸಿ ಒಂದು ಲಕ್ಷಕ್ಕೂ ಹೆಚ್ಚಿನ ಜನ ಸಾಮೂಹಿಕ ಬಂಧನಕ್ಕೆ ಒಳಗಾಗುವ ತೀರ್ಮಾನವಾಗಿ ಎಲ್ಲಾ ಸಿದ್ಧತೆಗಳೂ ನಡೆದಿದ್ದವು. ದೇಶದಲ್ಲಿ ಮೂಡಿದ ಸಂಧಿಗ್ದ ಪರಿಸ್ಥಿತಿಯ ಕಾರಣಕ್ಕಾಗಿ ಅಖಿಲ ಭಾರತ ಮುಷ್ಕರವನ್ನು ಜುಲೈ 9ಕ್ಕೆ ಮುಂದೂಡುವ ತೀರ್ಮಾನವಾಯಿತು ಎಂದು ಸಂಯುಕ್ತ ಹೋರಾಟ ಕರ್ನಾಟಕದ ನಾಯಕರು ತಿಳಿಸಿದ್ದಾರೆ.
ಇಂದು ಆಯೀಜಿಸಿದ್ದ ಸಮಾವೇಶದಲ್ಲಿ ಈ ಕೆಳಕಂಡ ಜನಾಗ್ರಹವನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಯಾವುದೇ ಆಳ್ವಿಕೆಯ ಸಾಧನೆಯನ್ನು ಅಳೆಯಬೇಕಾದ್ದು, ಅದು ಜನತೆಗೆ ಕೊಟ್ಟ ಮಾತನ್ನು ಎಷ್ಟು ಮಟ್ಟಕ್ಕೆ ಈಡೇರಿಸಿದೆ? ರಾಜ್ಯವನ್ನು ಯಾವೆಲ್ಲಾ ಸಂಕಷ್ಟಗಳಿಂದ ಪಾರು ಮಾಡಿದೆ? ಜನ ಸಾಮಾನ್ಯರ ಬದುಕನ್ನು ಯಾವೆಲ್ಲಾ ರೀತಿಯಲ್ಲಿ ಹಸನುಗೊಳಿಸಿದೆ? ಎಂಬ ಮಾನ ದಂಡಗಳ ಮೇಲೆ. ನೀವು ಎರಡು ವರ್ಷ ಅಧಿಕಾರದಲ್ಲಿ ಉಳಿದದ್ದೇ ಒಂದು ಸಾಧನೆ ಅಲ್ಲ. ಎರಡು ವರ್ಷದಲ್ಲಿ ಏನು ಮಾಡಿದಿರಿ ಎಂಬುದರ ಮೇಲೆ ಸಾಧನೆಯಾ, ವೈಫಲ್ಯವಾ ಎಂಬುದು ತೀರ್ಮಾನವಾಗುತ್ತದೆ. ಈ ಎರಡು ವರ್ಷಗಳಲ್ಲಿ ಸರ್ಕಾರ ತುಳಿದ ಹಾದಿಯ ಕುರಿತು ಕೆಲವು ನಿಷ್ಟೂರ ಸತ್ಯಗಳನ್ನು ಜನತೆಯ ಮುಂದಿಡಲು ಈ ಸಮಾವೇಶ ಬಯಸುತ್ತದೆ.
ಇದನ್ನೂ ಓದಿ: ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸುಟ್ಟು ಪ್ರತಿಭಟಿಸಿದ ಕಾರ್ಮಿಕರು
1. ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಒಂದು ಮಟ್ಟಕ್ಕೆ ಜಾರಿಮಾಡಿದ್ದು ಸರ್ಕಾರ ಮಾಡಿದ ಒಂದು ಸಣ್ಣ ಸಾಧನೆ ಎಂದು ಹೇಳಬಹುದು. ವಿರೋಧ ಪಕ್ಷಗಳು ಏನೇ ಹೇಳಲಿ, ಗ್ಯಾರಂಟಿಗಳು ಸಂಕಷ್ಟದಲ್ಲಿರುವ ಬಡ ಹಾಗೂ ಜನಸಾಮಾನ್ಯರಿಗೆಒಂದಷ್ಟುಅಸರೆಯಾಗಿವೆ. ಇದನ್ನು ಈ ಸಮಾವೇಶ ಸ್ವಾಗತಿಸುತ್ತದೆ. ಅದೇ ಸಂದರ್ಭದಲ್ಲಿ ಈ ಗ್ಯಾರಂಟಿಗಳು ಈ ರಾಜ್ಯದ ವಿವಿಧ ಜನವರ್ಗಗಳು ಎದುರಿಸುತ್ತಿರುವ ಸಂಕಷ್ಟಗಳನ್ನು ಬಗೆಹರಿಸುವುದಿಲ್ಲ ಎಂದು ಒತ್ತಿಹೇಳ ಬಯಸುತ್ತೇವೆ. ಸರ್ಕಾರ ಗ್ಯಾರಂಟಿಗಳ ಗುಂಗಿನಲ್ಲಿ ಮುಳುಗಿ ತಾನು ಮಾಡಬೇಕಿರುವ ಕೆಲಸಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
2. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾರ್ಪೋರೇಟ್ ಶಕ್ತಿಗಳ ಹಿತಕಾಯಲು ಅಥವಾ ತಮ್ಮ ಧರ್ಮಾಂದ ರಾಜ ಕಾರಣಕ್ಕೆ ದಾಳವಾಗಿ ಬಳಸಿಕೊಳ್ಳಲು ಅನೇಕ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ತಂದಿತ್ತು. “ಭೂತಿ ದ್ದುಪಡಿ ನೀತಿ”, “ಎಪಿಎಂಸಿ ತಿದ್ದುಪಡಿ ನೀತಿ”, “ಜಾನುವಾರು ನೀತಿ”, “ನಾಲಕ್ಕು ಲೇಬರ್ ಕೋಡ್ ಗಳು”, “ಕಾರ್ಮಿಕರ ದುಡಿಮೆಯ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಸುವ ನಿಯಮ” ಇತ್ಯಾದಿ. ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಇವನ್ನು ಬಲವಾಗಿ ವಿರೋಧಿಸಿತ್ತು. ಜನ ಚಳವಳಿಗಳಾಗಿ ನಾವು ಬೀದಿಯಲ್ಲಿ ಹೋರಾಡುತ್ತಿದ್ದೆವು. ಕಾಂಗ್ರೆಸ್ ಮುಖಂಡರು ಬೀದಿಯಲ್ಲಿ ನಮ್ಮ ಜೊತೆ ಬಂದು ಕೂತು ಇಬ್ಬರೂ ಸೇರಿ ಹೋರಾಡೋಣ ಎಂದು ಮಾತನಾಡಿದ್ದರು. ವಿಧಾನ ಸಭಾ ಚುನಾವಣೆಗಳಿಗೂ ಮುನ್ನ ಏಪ್ರಿಲ್ 26ನೇ ತಾರೀಕಿನಂದು ಇದೇ ಬಾಪು ಸಭಾಂಗಣದಲ್ಲಿ ನಡೆದ “ಕಿಸಾನ್ ಪಂಚಾಯತ್” ನಲ್ಲಿ ಭಾಗವಹಿಸಿ ತಾವು ಅಧಿಕಾರಕ್ಕೆ ಬಂದರೆ ಈ ಎಲ್ಲಾಕಾಯ್ದೆಗಳನ್ನು ರದ್ದು ಮಾಡುವುದಾಗಿ ಪ್ರಮಾಣ ಪತ್ರಕ್ಕೆ ಸಹಿಮಾಡಿ ಹೋಗಿದ್ದರು ಆದರೆ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಕಿಮಿಕ್ ಎನ್ನದೆ ಬಿಜೆಪಿ ತಂದಿದ್ದ ಎಲ್ಲಾ ನೀತಿಗಳನ್ನು ಕಾಂಗ್ರೆಸ್ ಸರ್ಕಾರ ಮುಂದುವರೆಸುತ್ತಿದೆ. “ನಿಮ್ಮದು ಕೊಟ್ಟಮಾತ ತಪ್ಪಿದ ಸರ್ಕಾರವಲ್ಲವೇ?”, “ನೀವು ಸಹ ಬಿಜೆಪಿಯಂತೆ ಕಾರ್ಪೋರೇಟ್ ಹಿತಕಾಯುವ ಕೆಲಸವನ್ನೇ ಮಾಡುತ್ತಿಲ್ಲವೇ?” ಎಂದು ಕೇಳಲೇ ಬೇಕಿದೆ. ಬಿಜೆಪಿ ರಾಜ್ಯದ ಮೇಲೆ ಹೇರಿದ್ದ ಈ ಎಲ್ಲಾಕಾಯ್ದೆಗಳನ್ನು ಈ ಕೂಡಲೇ ರದ್ದು ಮಾಡಬೇಕೆಂದು ಈ ಸಮಾವೇಶ ಆಗ್ರಹಿಸುತ್ತದೆ.
3. ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರ ಮತ್ತು ಸರ್ಕಾರದ ಭೂಮಿಯನ್ನೆಲ್ಲಾ ಬಲಾಢ್ಯರತೆಕ್ಕೆಗೆ ಒಪ್ಪಿಸಲು ಅನೇಕ ಷಡ್ಯಂತ್ರಗಳನ್ನು ರೂಪಿಸಿತ್ತು. ಬಗರ್ ಹುಕುಂ ರೈತರಿಗೆ ಹಕ್ಕು ಪತ್ರ ನೀಡದೆ, ಬಡವರ ಮನೆಗಳನ್ನು ಸಕ್ರಮಗೊಳಿಸದೆ ಕಾಡಿಸಿತ್ತು. ದೇವನಹಳ್ಳಿಯ ಚನ್ನ ರಾಯಪಟ್ಟಣದ ಫಲವತ್ತಾದ 1777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ನೋಟೀಸ್ ಹೊರಡಿಸಿತ್ತು. ಜಿಂಡಾಲಿಗೆ 4 ಸಾವಿರ ಎಕೆರೆ ಭೂಮಿ ಕೊಡಲು ಹೊರಟಿತ್ತು. ಬಲಾಢ್ಯರು ಇನ್ನೂ ಹೆಚ್ಚೆಚ್ಚು ಭೂಮಿ ಕಬಳಿಸಲು “ಭೂ ತಿದ್ದುಪಡಿ ಕಾಯ್ದೆ”ಯನ್ನೂ ತಂದಿತ್ತು. ಇದನ್ನೆಲ್ಲಾ ನೀವು ವಿರೋಧಿಸಿದ್ದಿರಿ. ಆದರೆ ಅಧಿಕಾರಕ್ಕೆ ಬಂದ ಮೇಲೆ ನೀವು ಮಾಡಿದ್ದೇನು? ಜಿಂಡಾಲಿಗೆ 4 ಸಾವಿರ ಎಕರೆ ಭೂಮಿ ಒಪ್ಪಿಸಿಬಿಟ್ಟಿರಿ. ಚನ್ನರಾಯ ಪಟ್ಟಣದ ಹೋರಾಟಗಾರರಿಗೆ ಕೊಟ್ಟ ಮಾತಿಗೆ ದ್ರೋಹಬಗೆದು ಬಲವಂತದ ಭೂಸ್ವಾಧೀನ ಮಾಡಲು ಹೊರಟಿದ್ದೀರಿ. 15 ಲಕ್ಷ ಬಗರ್ ಹುಕುಂ ರೈತರ ಅರ್ಜಿಗಳನ್ನು ತಿರಸ್ಕರಿಸಲು ಹೊರಟಿದ್ದೀರಿ. ಬಡವರ ಮನೆಗಳನ್ನು ಸಕ್ರಮಗೊಳಿಸದೆ ಕಾಡಿಸುತ್ತಿದ್ದೀರಿ. ನೆಲೆಇಲ್ಲದವರಿಗೆನಿವೇಶನಹಂಚುವಮಾತೇನಿಮ್ಮಸರ್ಕಾರದಿಂದಬರುತ್ತಿಲ್ಲ. ಬದಲಿಗೆಕಾರ್ಪೋರೇಟ್ ಗಳತಣಿಯದಭೂದಾಹವನ್ನುತೃಪ್ತಿಗೊಳಿಸಲು
“ಭೂ ಬ್ಯಾಂಕ್” ರೂಪಿಸಲು ಹೊರಟಿದ್ದೀರಿ. ದೇವರಾಜು ಅರಸ್ ರವರ ಪರಂಪರೆಗೆ ಕಳಂಕ ತರುವ ಕೆಲಸವನ್ನುಬಿಜೆಪಿಯಂತೆ ನೀವೂ ಮಾಡುತ್ತಿದ್ದೀರಿ. ಈ ಭೂ ಬಾಕ ಧೋರಣೆಯನ್ನು ಈ ಜನಾಗ್ರಹ ಸಮಾವೇಶ ತೀವ್ರವಾಗಿ ಖಂಡಿಸುತ್ತದೆ. ಬಲವಂತದ ಭೂ ಸ್ವಾಧೀನ ಕೈ ಬಿಡಬೇಕು. ಎಲ್ಲಾ ಬಡ ಬಗರ್ ಹುಕುಂ ರೈತರಿಗೆ “ಒನ್ ಟೈಂ ಸೆಟಲ್ಮೆಂಟ್” ಅಡಿ ಹಕ್ಕುಪತ್ರ ನೀಡಬೇಕು ಮತ್ತು ರಾಜ್ಯದ ಬಡಕುಟುಂಬಗಳಿಗೆ ಸೂರು ಒದಗಿಸಲು ಬೃಹತ್ ನಿವೇಶನ ಅಭಿಯಾನವನ್ನು ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸುತ್ತದೆ.
4. ರೈತರ ಬೆಳೆಗಳಿಗೆ ನ್ಯಾಯ ಯುತ ಬೆಲೆ ಒದಗಿಸಲು ಸೂಕ್ತಕಾಯ್ದೆ ಮತ್ತು ಕ್ರಮವನ್ನು ರೂಪಿಸಬೇಕು ಎಂಬುದು ರೈತ ಚಳವಳಿಯ ಸುದೀರ್ಘ ಹಕ್ಕೊತ್ತಾಯ. ಈ ವಿಚಾರವನ್ನು ಮುಂದಿಟ್ಟುಕೊಂಡು ಐತಿಹಾಸಿಕ ದೆಹಲಿ ರೈತಾಂದೋಲನವೂ ಆಯಿತು. ಕೊನೆಗೆ ಬಗ್ಗೆ ಲಿಖಿತವಾಗಿ ಮಾತುಕೊಟ್ಟ ಮೋದಿಯವರು ರೈತ ಕುಲಕ್ಕೆ ಮತ್ತೆ ದ್ರೋಹ ಬಗೆದಿದ್ದಾರೆ. “National Policy Frame work on Agricultural Marketing [NPFAM]” ಎಂಬ ಹೊಸ ನೀತಿ ತಂದು ರೈತರ ಬೆಳೆಯ ಸುರಕ್ಷತೆಗಿದ್ದ ಕ್ರಮಗಳನ್ನೆಲ್ಲಾ ರದ್ದುಗೊಳಿಸಿ ಖಾಸಗೀಯವರಿಗೆ ರೈತರ ಬೆಳೆಯ ಮೇಲೆ ನಿಯಂತ್ರಣ ಸಾಧಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ. ರಾಜ್ಯ ಸರ್ಕಾರ ಅದನ್ನು ತಿರಸ್ಕರಿಸುವ ಬದಲು ಕರ್ನಾಟಕದ ಬೆಲೆ ಆಯೋಗಕ್ಕೆ ಕಳಿಸಿ, ಇದನ್ನು ಅನುಷ್ಟಾನ ಗೊಳಿಸಲು ತೆಗೆದು ಕೊಳ್ಳಬೇಕಾದ ಕ್ರಮಗಳನ್ನು ಶಿಫಾರಸು ಮಾಡಿ ಎಂದು ಸೂಚಿಸುತ್ತದೆ. ಇದು ರೈತರ ಬೆನ್ನಿಗೆ ಚೂರಿಹಾಕುವ ಕೆಲಸವಾಗಿದೆ. ಈ ಸಮಾವೇಶ ಇದನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು NPFAM ಕರಡು ನೀತಿಯನ್ನು ಸಾರಾಸಗಟು ತಿರಸ್ಕರಿಸುವಂತೆ ಒತ್ತಾಯಿಸುತ್ತದೆ.
5. ಕೃಷಿ ಸಂಕಷ್ಟವನ್ನು ತಾಳಲಾರದೆ, ಹಳ್ಳಿಗಳಲ್ಲಿ ಸೂಕ್ತ ಜೀವನಾಧಾರವಿಲ್ಲದೆ ಹಳ್ಳಿಯಗಳನ್ನು ತೊರೆಯುವ ವಿದ್ಯಮಾನ ಭರದಿಂದ ನಡೆದಿದೆ. ನಗರಕ್ಕೆ ಬಂದರೂ ಭದ್ರತೆಯ ಕೆಲಸವಾಗಲೀ, ನೆಮ್ಮದಿಯ ನೆಲೆಯಾಗಲೀ ಇಲ್ಲದೆ ಪರದೇಶಿಗಳಾಗುವ ಪರಿಸ್ತಿತಿ ಇದೆ. ನರೇಗಾ ಯೋಜನೆ ಕೃಷಿ ಕೂಲಿಗಳಿಗೆ ಒಂದಷ್ಟು ಜೀವನಾಧಾರವಾಗಿತ್ತು. ಕೇಂದ್ರ ಸರ್ಕಾರ ಈಗ ಅದನ್ನೂ ಕೊಲ್ಲುತ್ತಿದೆ. ಅನುದಾನವನ್ನು ಅರ್ಧಕ್ಕರ್ಧ ಕಡಿತಗೊಳಿಸಿದೆ. ರಾಜ್ಯ ಸರ್ಕಾರ ಇದರ ಕುರಿತು ಒಂದು ಮಾತೂ ಆಡದೆಮೌನ ಸಮ್ಮತಿ ಸೂಚಿಸುತ್ತಿದೆ. ಸರ್ಕಾರದ ಈ ಬೇಜವಬ್ದಾರಿ ನಡೆಯನ್ನು ಈ ಸಮಾವೇಶ ಖಂಡಿಸುತ್ತದೆ. ನರೇಗಾ ಯೋಜನೆಯನ್ನು ಉಳಿಸಲು ಮತ್ತು ವಿಸ್ತರಿಸಲು ಕ್ರಮ ವಹಿಸುವಂತೆ ಆಗ್ರಹಿಸುತ್ತದೆ.
6. ಕಾರ್ಮಿಕ ವರ್ಗಕ್ಕೆ ಇದ್ದ ಎಲ್ಲಾ ಹಕ್ಕುಗಳನ್ನೂ ಗಂಟು ಮೂಟೆ ಕಟ್ಟಿ ಬಿಸಾಕಲು ಮತ್ತು ಮುಂದಿನ ಯುವ ಪೀಳಿಗೆಯನ್ನು ಅಗ್ಗದ ಕೂಲಿ ಕೊಟ್ಟು, ಯಾವುದೇ ಭದ್ರತೆ ಇಲ್ಲದೆ, 12 ಗಂಟೆಯ ವರೆಗೂ ಹಿಂಡಿ ಹಿಪ್ಪೆ ಮಾಡಲು “4 ಲೇಬರ್ ಕೋಡ್”ಗಳನ್ನು ತರಲಾಗುತ್ತಿದೆ. ಹೋರಾಡುವ ಹಕ್ಕನ್ನು, ವೇತನದ ಹಕ್ಕನ್ನು, ಕೆಲಸ ಅವಧಿಯ ಹಕ್ಕನ್ನು, ಸಾಮಾಜಿಕ ಭದ್ರತೆಯ ಹಕ್ಕನ್ನು, ಮಹಿಳಾ ಕಾರ್ಮಿಕರ ಸುರಕ್ಷತೆಯ ಹಕ್ಕನ್ನು ಕಸಿದು ಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ವರಿಷ್ಟ ರಾಹುಲ್ ಗಾಂಧಿಯವರು ಈ ಕಾಯ್ದೆಗಳವಿರುದ್ಧಕಿಡಿಕಾರುತ್ತಾರೆ. ಆದರೆಕರ್ನಾಟಕದಲ್ಲಿಕಾಂಗ್ರೆಸ್ ಸರ್ಕಾರಅವನ್ನುಉತ್ಸುಕತೆಯಜೊತೆಜಾರಿಮಾಡಲುಹೊರಟಿದೆ. ದುಡಿಮೆಯ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಸಲು, ಮಹಿಳೆಯರನ್ನು ಅನಾಹುತಕಾರಿ ಕಾರ್ಖಾನೆಗಳಲ್ಲೂ ದುಡಿಸಲು, ರಾತ್ರಿ ಪಾಳಿಯಲ್ಲೂ ಕೆಲಸ ಮಾಡಿಸಲು ನಿಯಮ ರೂಪಿಸಿದೆ. ಇದು ಬಂಡವಾಳಿಗರ ಹಿತ ಕಾಯಲು ಬಡವರ ಬದುಕನ್ನು ಬಲಿ ಕೊಡುವ ಕೆಲಸವಲ್ಲವೇ ಎಂಬುದನ್ನು ಸರ್ಕಾರವೇ ಹೇಳಬೇಕಿದೆ. 4 ಲೇಬರ್ ಕೋಡ್ ಗಳನ್ನು ತಿರಸ್ಕರಿಸ ಬೇಕು ಮತ್ತು ಈ ನಿಯಮ ಬದಲಾವಣೆಯನ್ನು ರದ್ದುಗೊಳಿಸಬೇಕು. ದುಡಿಯುವ ವರ್ಗದ ರಕ್ಷಣೆಗೆ ಮಾನವೀಯ ಕ್ರಮಗಳನ್ನು ಕೈಗೊಳ್ಳ ಬೇಕೆಂದು ಈ ಸಮಾವೇಶವು ಆಗ್ರಹಿಸುತ್ತದೆ.
7. SCSP/TSP ನೀತಿಯನ್ನು ರೂಪಿಸಿ, ಅತ್ಯಂತ ಶೋಷಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಶೇ. 40 ರಷ್ಟು ಬಜೆಟ್ ಅನ್ನು ಮೀಸಲಿಡುವ ಕ್ರಾಂತಿಕಾರಿ ತೀರ್ಮಾನವನ್ನು ಕಾಂಗ್ರೆಸ್ ಸರ್ಕಾರವೇ ತೆಗೆದುಕೊಂಡಿತ್ತು. ಆದರೆ ಕ್ರಾಂತಿಕಾರಿ ನಿರ್ಣಯ ಕಾಗದದ ಮೇಲಷ್ಟೇ ಉಳಿದು, ಅನ್ಯ ಉದ್ದೇಶಗಳಿಗೇ ಎಲ್ಲಾ ಹಣಹರಿದು ಹೋಗಿ, ದಲಿತ ಸಮುದಾಯದ ಅಭಿವೃದ್ಧಿಗೇ ಏನೂ ಉಳಿಯದಂತೆ ಮಾಡಲಾಗುತ್ತಿದೆ. ಹಣ ಇಲ್ಲವೆಂದು ಖಾಸಗೀ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ ಮಕ್ಕಳಿಗೆ ಸ್ಕಾಲರ್ ಶಿಪ್ ಮತ್ತುಹಾಸ್ಟೆಲ್ ಸೌಲಭ್ಯವನ್ನು ನಿಲ್ಲಿಸಲಾಗಿದೆ. ಇದು ಅಕ್ಷಮ್ಯ ಅಪರಾಧ ಎಂದು ಸಮಾವೇಶವು ಬಾವಿಸುತ್ತದೆ. ದಲಿತ ಸಮುದಾಯದ ಅಭಿವೃದ್ಧಿಗೆ ಈ ಹಣ ಸದ್ಬಳಕೆಯಾಗುವುದನ್ನು ಖಾತ್ರಿ ಪಡಿಸಿಕೊಳ್ಳಲು ಒಂದು ಮೇಲ್ವಿಚಾರಣಾಕೋಶ ರಚಿಸಬೇಕೆಂದು ಮತ್ತು ಖಾಸಗೀ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಇದರ ಸೌಲಭ್ಯ ಲಭ್ಯವಾಗುವಂತೆ ಮಾಡಬೇಕೆಂದು ಒತ್ತಾಯಿಸುತ್ತದೆ.
8. ಕೇಂದ್ರ ಸರ್ಕಾರವು, ತೆರಿಗೆಯ ಹೆಚ್ಚಿನ ಪಾಲನ್ನು ರಾಜ್ಯಗಳಿಗೆ ನೀಡದೆ ತಾನೇ ಬಾಚಿಕೊಳ್ಳುತ್ತಿರುವುದು, ಕರ್ನಾಟಕ ರಾಜ್ಯಕ್ಕೆ ಸೂಕ್ತ ಅನುದಾನ ನೀಡದೆ ವಂಚಿಸುತ್ತಿರುವುದು ಸತ್ಯ. ಕೇಂದ್ರದ ಈ ರಾಜ್ಯ ವಿರೋಧಿ ನಡೆಯನ್ನೂ ಈ ಸಮಾವೇಶ ಖಂಡಿಸುತ್ತದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಜೊತೆ ನಿಂತು ಹೋರಾಡಲು ಸಿದ್ಧವಿದೆ. ಆದರೆ ಸಂಪನ್ಮೂಲವನ್ನು ಕ್ರೂಢೀಕರಿಸಲು ಕಂಪನಿಗಳ ಮೇಲೆ ಮತ್ತು ಅತಿ ಶ್ರೀಮಂತ ವರ್ಗದ ಮೇಲೆ ರಾಜ್ಯ ಸೆಸ್ ಹಾಕುವ ಬದಲು ಜನಸಾಮಾನ್ಯರಿಂದ ಹಣ ಹಿಂಡಲು ನೀವು ಹೊರಟಿದ್ದೀರಿ. ಸ್ಟಾಂಪ್ ಪೇಪರ್ ಡ್ಯೂಟಿ, ಪಾಣಿ, ಪೋಡಿಶಲ್ಕ, ವಿದ್ಯುತ್ ದರ, ಸಾರಿಗೆ ದರ, ಎಲ್ಲವನ್ನೂ ಏರಿಸುತ್ತಿದ್ದೀರಿ ಮತ್ತು ರೈತರಿಗಿದ್ದ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಕಡಿತಗೊಳಿಸಲು, ಹೊಸ ಸಂಪರ್ಕ ತೆಗೆದು ಕೊಂಡರೆ ಅದಕ್ಕೆ ರೈತರೇ ವೆಚ್ಚ ಭರಿಸ ಬೇಕು ಎಂಬ ನೀತಿಗಳನ್ನು ರೂಪಿಸಿದ್ದೀರಿ. ಕೇಂದ್ರ ಸರ್ಕಾರ ತರುತ್ತಿರುವ ವಿದ್ಯುತ್ ಖಾಸಗೀಕರಣವನ್ನು ವಿರೋಧಿಸದೆ ಒಳಗೊಳಗೇ ಜಾರಿಮಾಡುತ್ತಿದ್ದೀರಿ. ಜನರ ಜೇಬುಗಳಿಗೆ ಕತ್ತರಿ ಹಾಕುವ ಈ ವಿಧಾನಗಳನ್ನು ಸಮಾವೇಶವು ಖಂಡಿಸುತ್ತದೆ. ಸಂಪನ್ಮೂಲ ಕ್ರೂಢೀಕರಣಕ್ಕಾಗಿ ಬಲಾಢ್ಯರ ಲಾಭದಿಂದ ಸಂಗ್ರಹಿಸುವ ಹಾಗೂ ಕೇಂದ್ರದಿಂದ ಗುದ್ದಾಡಿ ಪಡೆಯುವ ವಿಧಾನ ಅಳವಡಿಸ ಬೇಕೆಂದು ಆಗ್ರಹಿಸುತ್ತದೆ.
9. ಭ್ರಷ್ಟಾಚಾರ ಸರ್ಕಾರದ ಎಲ್ಲಾ ಹಂತಗಳಲ್ಲೂ ಮಿತಿ ಮೀರಿ ನಡೆಯುತ್ತಿದೆ. ಸಾರ್ವಜನಿಕರಲ್ಲಿ ಸರ್ಕಾರದ ಬಗ್ಗೆ ಅಸಮಧಾನ ಬೆಳೆಯಲು ವ್ಯಾಪಕ ಭ್ರಷ್ಟಾಚಾರ ಒಂದು ಮುಖ್ಯ ಕಾರಣವಾಗಿದೆ. ನಮಗೆಲ್ಲಾ ಕಂಡದ್ದು ಮುಖ್ಯ ಮಂತ್ರಿಗಳಿಗೆ ಕಾಣುತ್ತಿಲ್ಲವೋ ಅಥವಾ ಇದು ಜಾಣ ಕುರುಡೋ ಎಂಬುದನ್ನು ಅವರೇ ಉತ್ತರಿಸಬೇಕಿದೆ. ಸರ್ಕಾರ ದೊಳಗೆ ಕ್ಯಾನ್ಸರಿನಂತೆ ಹಬ್ಬುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಈ ಜನಾಗ್ರಹ ಸಮಾವೇಶವು ಒತ್ತಾಯಿಸುತ್ತದೆ.
10. ಜನ ಚಳವಳಿಗಳ ಎಚ್ಚರಿಕೆಯನ್ನು ಸರ್ಕಾರ ನಿರ್ಲಿಕ್ಷಿಸುತ್ತಲೇ ಹೋದರೆ ಜನಾಕ್ರೋಶದ ಕಟ್ಟೆ ಬಹುಬೇಗನೆ ಒಡೆಯಲಿದೆ. ಅದು ತಮ್ಮ ಸರ್ಕಾರದ ಮುಳುಗುವಿಕೆಗೂ ಕಾರಣವಾಗಲಿದೆ ಎಂಬ ಕಾಲದ ಸತ್ಯವನ್ನು ಈ ಸಮಾವೇಶವು ನೆನಪಿಸಲು ಬಯಸುತ್ತದೆ.ಈಗಾದರೂ ಸರ್ಕಾರ ಕಣ್ಣುತೆರೆಯ ಬೇಕು. ಬಿಜೆಪಿ ಹಾಕಿ ಕೊಟ್ಟ ಹಾದಿಯಿಂದ ಹೊರಬರಬೇಕು ಎಂದು ಒತ್ತಾಯಿಸುತ್ತದೆ. ಸರ್ಕಾರ ಈಗಲೂ ಸ್ಪಂದಿಸದೇ ಹೋದರೆ ರಾಜ್ಯದ ಎಲ್ಲಾನಿಷ್ಟೂರ ಮನಸ್ಸುಗಳನ್ನು ಒಟ್ಟುಗೂಡಿಸಿ ಅನಿರ್ಧಿಷ್ಟ ಸ್ವರೂಪದ ತೀವ್ರ ಹೋರಾಟಕ್ಕೆ ಸಜ್ಜಾಗುವ ತೀರ್ಮಾನವನ್ನು ಜನಾಗ್ರಹ ಸಮಾವೇಶವು ಧೃಡ ಸಂಕಲ್ಪದ ಜೊತೆಗೆ ತೆಗೆದುಕೊಳ್ಳುತ್ತದೆ.
ಸಮಾವೇಶದಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಮುಖಂಡರಾದ ಚಾಮರಸ ಮಾಲೀಪಾಟೀಲ್, ವೆಂಕಟಾಚಲಯ್ಯ, ಕಾರ್ಮಿಕ ನಾಯಕ ಅಪ್ಪಣ್ಣ, ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್ ಸೇರಿದಂತೆ ಅನೇಕರಿದ್ದರು.
ಇದನ್ನೂ ನೋಡಿ: ಪಹಲ್ಗಾಮ ಹತ್ಯೆ ಮತ್ತು ಸೇನಾ ಸಂಘರ್ಷ, ಯುದ್ಧೋನ್ಮಾದ ಮತ್ತು ಉನ್ಮಾದ ರಾಷ್ಟ್ರೀಯತೆ…Janashakthi Media