ಶುಭಾಶಯ ಹೇಳಲಾರೆ 

ಎಸ್.ಜಿ.ಸಿದ್ದರಾಮಯ್ಯ

ಶುಭಾಶಯ ಹೇಳಲಾರೆ

ಮಗಳೇ ಸೌಜನ್ಯ

ಇಂದು ವಿಶ್ವ ಮಹಿಳಾ ದಿನಾಚರಣೆ

ಇದು ವಿಶ್ವ ಸಂಸ್ಥೆಯ ಘೋಷಣೆ.

ಹಾಗೆಯೇ ಸನಾತನಿಗಳು ಹೇಳುತ್ತಾರೆ

ಎಲ್ಲಿ ಮಹಿಳೆ ಪೂಜಿಸಲ್ಪಡುತ್ತಾಳೋ

ಅಲ್ಲಿ ಧರ್ಮ ಪಾಲಿತವಾಗುತ್ತದೆ.

 

ಯಾವ ಧರ್ಮದ ದೀಪ

ಎಲ್ಲಿ ಬೆಳಗಿದರೇನು

ದೀಪದ ಕೆಳಗೆ ಕತ್ತಲು

 

ದೀಪವೇ ಬೆಳಗದ ಧರ್ಮದ ಬೀಡಲಿ

ಯಾವ ನಾರಿಗೂ ಇಲ್ಲ ಪೂಜ್ಯಂತೇ

ಬಾಯಲ್ಲಿ ಬೆಣ್ಣೆ ಬಗಲಲ್ಲಿ ದೊಣ್ಣೆ

 

ಹೆಣ್ಣುಗಳ ಕಣ್ಣೀರಲ್ಲಿ

ತೇಲಿವೆ ಮನೆಮಾರು ತೆಪ್ಪ.

 

ನಿನ್ನ ತಿಂದು ಕೊಂದ ಮಕ್ಕಳ

ಅಪ್ಪಂದಿರಿಗೆ ಕೂಗಿ ಕೇಳು ಕಂದಾ

ಅಂಥಾ ಮಕ್ಕಳ ಬುದ್ಧಿಗೆ

ನಿಮ್ಮ ಬದುಕಿನ ಲದ್ದಿ ತಿನ್ನಿಸಿದ್ದು ಯಾಕೆ?

 

ಇಲ್ಲಿ ಸತ್ಯ ಸತ್ತಿದೆ ನ್ಯಾಯ ನಾರಿದೆ

ದೂರು ಕೇಳುವವರಾರೂ ಇಲ್ಲ ಮಗಳೇ

ಎಲ್ಲ ಶ್ರೀರಾಮಚಂದ್ರರೇ

ಹೆಚ್ಚೆಂದರೆ ಸುಮಿತ್ರಾತ್ಮಜರೇ.

 

ಕ್ಷಮಿಸು ಮಗಳೇ

ಇಂದು ವಿಶ್ವ ಮಹಿಳಾ ದಿನಾಚರಣೆ

ನಾನು ನಿನಗೆ

ಶುಭಾಶಯ ಹೇಳಲಾರೆ ಮಗಳೇ.

 

Donate Janashakthi Media

Leave a Reply

Your email address will not be published. Required fields are marked *