ಐಎನ್‌ಎಸ್ ದೇಣಿಗೆ ವಂಚನೆ: ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ-ಪುತ್ರನ ವಿರುದ್ಧ ಪ್ರಕರಣ ದಾಖಲು

ನವದೆಹಲಿ: ಐಎನ್‌ಎಸ್ ವಿಕ್ರಾಂತ್ ಉಳಿಸಲು ಕ್ರೌಡ್ ಫಂಡಿಂಗ್ ಅಭಿಯಾನಕ್ಕೆ ಸಂಬಂಧಿಸಿದಂತೆ ಶಿವಸೇನೆ ಹಾಗೂ ಬಿಜೆಪಿ ನಡುವೆ ನಡೆಯುತ್ತಿರುವ ವಾಕ್ಸಮರದ ಸಂದರ್ಭದಲ್ಲಿಯೇ ಐಎನ್‌ಎಸ್ ವಿಕ್ರಾಂತ್ ಹೆಸರಲ್ಲಿ ಸಂಗ್ರಹಿಸಿದ್ದ ದೇಣಿಗೆಯನ್ನು ದುರುಪಯೊಗಪಡಿಸಿಕೊಂಡ ಆರೋಪದಡಿ ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಮಾಜಿ ಸೇನಾ ಸಿಬ್ಬಂದಿ ಏ.06ರ ಬುಧವಾರ ಸಂಜೆ ಉಪನಗರ ಮನ್‌ಖುರ್ದ್ ನಲ್ಲಿರುವ ಟ್ರಾಂಬೆ ಪೊಲೀಸ್ ಠಾಣೆಯಲ್ಲಿ 57 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ದುರುಪಯೋಗ ಮಾಡಿಕೊಂಡಿರುವುದನ್ನು ಆರೋಪಿಸಿ ದೂರನ್ನು ನೀಡಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 406 (ನಂಬಿಕೆಗೆ ವಂಚಿಸಿ ಅಪರಾಧ), 420 (ಆಸ್ತಿ ವಿತರಣೆ ವಂಚನೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಟ್ರಾಂಬೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

1961ರಲ್ಲಿ ಕಾರ್ಯಾರಂಭ ಮಾಡಿದ ಭಾರತೀಯ ನೌಕಾಪಡೆಯ ಮೆಜೆಸ್ಟಿಕ್-ಕ್ಲಾಸ್ ವಿಮಾನವಾಹಕ ನೌಕೆ ಎಎನ್‌ಎಸ್ ವಿಕ್ರಾಂತ್, 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪೂರ್ವ ಪಾಕಿಸ್ತಾನದ ನೌಕಾ ದಿಗ್ಬಂಧನವನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದನ್ನು 1997ರಲ್ಲಿ ರದ್ದುಗೊಳಿಸಲಾಯಿತು. ಜನವರಿ 2014ರಲ್ಲಿ, ಹಡಗನ್ನು ಆನ್‌ಲೈನ್ ಹರಾಜಿನ ಮೂಲಕ ಮಾರಾಟ ಮಾಡಲಾಯಿತು ಮತ್ತು ಅದೇ ವರ್ಷದ ನವೆಂಬರ್‌ನಲ್ಲಿ ರದ್ದುಗೊಳಿಸಲಾಯಿತು. ಆದ್ದರಿಂದ ಐಎನ್‌ಎಸ್ ವಿಕ್ರಾಂತ್ ಗೆ ನಿಧಿ ಸಂಗ್ರಹಿಸಲು ಕಿರಿತ್ ಸೋಮಯ್ಯ ಅಭಿಯಾನ ಆರಂಭಿಸಿದ್ದರು ಎಂದು ದೂರುದಾರರು ಉಲ್ಲೇಖಿಸಿದ್ದಾರೆ.

ಹಡಗು ಉಳಿಸಲು ಕಿರಿತ್ ಸೋಮಯ್ಯ ಅವರಿಗೆ ದೇಣಿಗೆ ನೀಡಿದ್ದೇನೆ ಮತ್ತು ಬಿಜೆಪಿ ನಾಯಕರು ಇದೇ ಉದ್ದೇಶಕ್ಕಾಗಿ 57 ಕೋಟಿಗೂ ಹೆಚ್ಚು ಸಂಗ್ರಹಿಸಿದ್ದಾರೆ. ಆದರೆ, ಮೊತ್ತವನ್ನು ಮಹಾರಾಷ್ಟ್ರ ರಾಜಭವನಕ್ಕೆ ಠೇವಣಿ ಮಾಡದೇ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.

ಈ ಆರೋಪವನ್ನು ತಳ್ಳಿಹಾಕಿದ ಕಿರಿತ್ ಸೋಮಯ್ಯ, ವಿಕ್ರಾಂತ್ ನಿಧಿ ಸಂಗ್ರಹದಲ್ಲಿ ಯಾವುದೇ ಹಗರಣ ನಡೆದಿಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ. ಸಂಜಯ್ ರಾವತ್ ಆರೋಪ ಮಾಡುತ್ತಿದ್ದಾರೆ, ಆದರೆ ಅವುಗಳನ್ನು ಸಾಬೀತುಪಡಿಸಲು ಪುರಾವೆಗಳನ್ನು ನೀಡಿಲ್ಲ. ಎಫ್‌ಐಆರ್ ಪ್ರತಿಯನ್ನೂ ನಾನು ಸ್ವೀಕರಿಸಿಲ್ಲ. ನಾನು ತನಿಖೆ ಎದುರಿಸಲು ಸಿದ್ಧನಿದ್ದೇನೆ. ರಾವತ್ ಅವರ ಬಳಿ ಸಾಕ್ಷ್ಯವಿದ್ದರೆ ಅದನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಹಸ್ತಾಂತರಿಸಲಿ ಎಂದು ತಿರುಗೇಟು ನೀಡಿದ್ದಾರೆ.

ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ತನಿಖೆ‌ ಎದುರಿಸುತ್ತಿರುವ ಸಂಜಯ್ ರಾವುತ್ ಬುಧವಾರದಂದು ಸೋಮಯ್ಯ ವಿರುದ್ಧ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಮಾಡಿದ್ದರು.

Donate Janashakthi Media

Leave a Reply

Your email address will not be published. Required fields are marked *