ಆರ್‌ಬಿಐ ಮಿಗುತೆ ವರ್ಗಾವಣೆಯನ್ನು ನಬಾರ್ಡ್‍, ಮನರೇಗಕ್ಕೆ ಮಾಡಿದ್ದರೆ ಕೋಟ್ಯಂತರ ರೈತರಿಗೆ, ಗ್ರಾಮೀಣ ಬಡವರಿಗೆ ಪ್ರಯೋಜನವಾಗುತ್ತಿತ್ತು: ಎಐಕೆಎಸ್

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನ ಕೇಂದ್ರ ಮಂಡಳಿಯು ಇತ್ತೀಚೆಗೆ 2024-25ನೇ ಹಣಕಾಸು ವರ್ಷಕ್ಕೆ 2.69 ಲಕ್ಷ ಕೋಟಿ ರೂ. ಮಿಗುತೆಯನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ನಿರ್ಧರಿಸಿದೆ. ಇದು ಇದುವರೆಗಿನ ದಾಖಲೆ ಮೊತ್ತ.  2023-24ರಲ್ಲಿ ಅದು ಸರಕಾರಕ್ಕೆ 2.11 ಲಕ್ಷ ಕೋಟಿ ರೂ. ಮಿಗುತೆಯನ್ನು ವರ್ಗಾಯಿಸಿದ್ದರೆ, 2024-25ನೇ ಸಾಲಿಗೆ ಕೇಂದ್ರ ಸರ್ಕಾರಕ್ಕೆ ಆರ್‌ಬಿಐನ ಲಾಭಾಂಶ ವರ್ಗಾವಣೆಯಲ್ಲಿ  ಶೇ.27 ರಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.

ಇದೊಂದು ಕಳವಳಕಾರಿ ಸಂಗತಿ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಹೇಳಿದೆ. ಏಕೆಂದರೆ,  ಆರ್‌ಎಸ್‌ಎಸ್-ಬಿಜೆಪಿ ನೇತೃತ್ವದ ಆಳ್ವಿಕೆಯ ದಿಕ್ಕನ್ನು ಗಮನಿಸಿದರೆ ಈ ಹೆಚ್ಚಿನ ಮಿಗುತೆ ವರ್ಗಾವಣೆಯಿಂದ ಪ್ರಯೋಜನ ದಕ್ಕುವುದು ಕೆಲವೇ ದೊಡ್ಡ ಉದ್ಯಮಿಗಳ ಕೂಟಗಳಿಗೇ. ಇದರ ಬದಲಿಗೆ ಆರ್‌ಬಿಐ ಮಿಗುತೆಯ ಒಂದು ಗಮನಾರ್ಹ ಭಾಗವನ್ನು ಕೃಷಿಯನ್ನು ಪುನರುಜ್ಜೀವನಗೊಳಿಸಲು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)ಗೆ ವರ್ಗಾಯಿಸಬಹುದಾಗಿತ್ತು, ಮತ್ತು ಹಣದ ಕೊರತೆಯಿಂದ ನರಳುತ್ತಿರುವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗ)ಗೆ ಕೊಡಬಹುದಾಗಿತ್ತು ಎಂದು ಎಐಕೆಎಸ್‍ ಹೇಳಿದೆ.

ಆರ್‌ಬಿಐ ತನ್ನ ಆರ್ಥಿಕ ಬಂಡವಾಳ ಚೌಕಟ್ಟನ್ನು (ಇಸಿಎಫ್) ಪರಿಷ್ಕರಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿತು. ಈ ಪರಿಷ್ಕರಣೆ ಕೇಂದ್ರ ಸರ್ಕಾರಕ್ಕೆ ಮಿಗುತೆಯ ವರ್ಗಾವಣೆಯನ್ನು ಮಾಡುವುದನ್ನು ಆರ್‌ಬಿಐಗೆ ಸುಗಮಗೊಳಿಸಿದೆ. ದೊಡ್ಡ ಬಂಡವಾಳಿಗರ ನಿಯಂತ್ರಣದಲ್ಲಿರುವ ಭಾರತದ ಪ್ರಭುತ್ವವು ಆರ್ಥಿಕ ಸುಧಾರಣೆಗಳ ನಂತರದ ಯುಗದಲ್ಲಿ ಪ್ರಭುತ್ವದ ದುಡಿಯುವ ಜನರಿಗೆ ವಿರುದ್ಧವಾದ ಒಟ್ಟಾರೆ ಆರ್ಥಿಕ ಕಾರ್ಯತಂತ್ರಕ್ಕೆ ಸರಿಹೊಂದುವಂತೆ ಆರ್‌ಬಿಐನ ಸ್ವಾಯತ್ತತೆಯನ್ನು ವ್ಯವಸ್ಥಿತವಾಗಿ ಕ್ಷಯಿಸುತ್ತ ಬಂದಿದೆ.

ಇದನ್ನೂ ಓದಿ: ಮಹಿಳಾ ಅಧಿಕಾರಿ ಡಿ. ರೂಪಾ ಮೌದ್ಗಿಲ್ ರಿಗೆ ಮುಂಬಡ್ತಿ: ರಾಜ್ಯ ಸರ್ಕಾರ

ಮೋದಿಯವರು ದಿಲ್ಲಿ ಗದ್ದುಗೆ ಏರಿದ ನಂತರದಿಂದ ಒಟ್ಟಾರೆಯಾಗಿ,  ಆರ್ಥಿಕ ಮತ್ತು ಹಣಕಾಸು ಧೋರಣೆಗಳನ್ನು ನಿರ್ಧರಿಸುವಲ್ಲಿ ಜಾಗತಿಕ ಹಣಕಾಸು ಬಂಡವಾಳದ ಪ್ರಭಾವ ಹೆಚ್ಚುತ್ತಲೇ ಬರುತ್ತಿದೆ. ಆರ್‌ಬಿಐ ಸತತವಾಗಿ ಆಳುವ ವರ್ಗಗಳ ಹಿತದಲ್ಲಿ ಕಾರ್ಯನಿರ್ವಹಿಸುವ ಬಲವಂತಕ್ಕೆ ಒಳಗಾಗಿದೆ. ಆರ್‌ಎಸ್‌ಎಸ್-ಬಿಜೆಪಿ ನೇತೃತ್ವದ ಆಳ್ವಿಕೆಯ ದಿಕ್ಕನ್ನು ಗಮನಿಸಿದರೆ ಈ ಹೆಚ್ಚಿನ ಮಿಗುತೆ ವರ್ಗಾವಣೆಯಿಂದ ಪ್ರಯೋಜನ ದಕ್ಕುವುದು ಕೆಲವೇ ದೊಡ್ಡ ಉದ್ಯಮಿಗಳ ಕೂಟಗಳಿಗೇ. ಇದರ ಬದಲಿಗೆ, ಅಖಿಲ ಭಾರತ ನಬಾರ್ಡ್ ನೌಕರರ ಸಂಘ (ಎಐಎನ್‌ಬಿಇಎ)  ಆರ್‌ಬಿಐ ಮಿಗುತೆಯ ಒಂದು ಗಮನಾರ್ಹ ಭಾಗವನ್ನು ಕೃಷಿಯನ್ನು ಪುನರುಜ್ಜೀವನಗೊಳಿಸಲು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)ಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿತ್ತು.  ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಇದಕ್ಕೆ ನಿರಾಕರಿಸಿದ ರೀತಿಯಿಂದಲೇ ಈ ವರ್ಗಾವಣೆ ಯಾರ ಪ್ರಯೋಜನಕ್ಕಾಗಿ ಎಂಬುದು ಸ್ಪಷ್ಟವಾಗುತ್ತದೆ ಎಂದು ಎಐಕೆಎಸ್ ಹೇಳಿದೆ.

ನಬಾರ್ಡ್ ಕಾಯ್ದೆ ಮತ್ತು ಆರ್‌ಬಿಐ ಕಾಯ್ದೆಯಲ್ಲಿನ ನಿಬಂಧನೆಗಳನ್ನು ಬಳಸಿಕೊಂಡು ಮಿಗುತೆ ಹಣವನ್ನು ನಬಾರ್ಡ್‍ ಗೆ ವರ್ಗಾಯಿಸುವ ಮೂಲಕ, ಸಹಕಾರಿ ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ಮೂಲಕ ರೈತರು ಮತ್ತು ಕೃಷಿ ಕಾರ್ಮಿಕರಂತಹ ಸಾಲಗಾರರಿಗೆ ಬಡ್ಡಿದರಗಳನ್ನು ಕಡಿಮೆ ಮಾಡಬಹುದಿತ್ತು ಎಂದು ಎಐಎನ್‌ಬಿಇಎ ವಾದಿಸಿತ್ತು.

ಇದು ಕೃಷಿ ಬಿಕ್ಕಟ್ಟಿನಿಂದ ಧ್ವಸ್ತಗೊಂಡಿರುವ ರೈತರಿಗೆ ಗಣನೀಯ ಸಹಾಯವನ್ನು ಒದಗಿಸುತ್ತಿತ್ತು. ಸರ್ಕಾರದ ದತ್ತಾಂಶದ ಪ್ರಕಾರ ಭಾರತದಲ್ಲಿ ಪ್ರತಿದಿನ 31 ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 2014 ರಿಂದ ಮೋದಿ ಆಡಳಿತದಲ್ಲಿ 16 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಕಾರ್ಪೊರೇಟ್ ಸಾಲ ಮನ್ನಾ ಮಾಡಿರುವುದು ಮೋದಿ-ಕಾರ್ಪೊರೇಟ್ ಪ್ರೇಮಕಥೆಯ ಆಳವನ್ನು ಸೂಚಿಸುತ್ತದೆ. ಆದರೆ, ಈ ಅವಧಿಯಲ್ಲಿ ಮೋದಿ ಸರ್ಕಾರ ರೈತರು ಮತ್ತು ಕೃಷಿ ಕಾರ್ಮಿಕರ ಸಾಲದ ಒಂದು ರೂಪಾಯಿ ಕೂಡ ಮನ್ನಾ ಮಾಡಲಿಲ್ಲ.

ಕೇಂದ್ರ ಬಜೆಟ್ 2025-26 ರಲ್ಲಿ ನಗದು ಕೊರತೆಯಿರುವ ಮನರೇಗಕ್ಕೆ ಕೇವಲ ರೂ. 86,000 ಕೋಟಿ ಹಂಚಿಕೆ ಮಾಡಿದೆ. ಕೋಟ್ಯಂತರ ಗ್ರಾಮೀಣ ಬಡವರಿಗೆ ಜೀವನಾಡಿಯಾಗಿರುವ ಈ ಯೋಜನೆ 100ದಿನಗಳ ಕೆಲಸದ ಖಾತ್ರಿ ಒದಗಿಸಿದರೂ, ಈಗ ಕೇವಲ ಸರಾಸರಿ ರೂ. 300 ದಿನಗೂಲಿಯಲ್ಲಿ 45 ದಿನಗಳ ಕೆಲಸವನ್ನಷ್ಟೇ ಒದಗಿಸುತ್ತಿದೆ ಎಂದು ಗಮನಿಸುತ್ತ ಎಐಕೆಎಸ್, ಆರ್‌ಬಿಐ ಮಿಗುತೆಯ ಗಣನೀಯ ಭಾಗವನ್ನು ಇದಕ್ಕೆ ವರ್ಗಾಯಿಸಿದ್ದರೆ ಕೃಷಿ ಕಾರ್ಮಿಕರು, ಸಣ್ಣ ಮತ್ತು ಮಧ್ಯಮ ರೈತರು ಮತ್ತು ಗ್ರಾಮೀಣ ಕಾರ್ಮಿಕರ ಸಂಘಟನೆಗಳ ಬೇಡಿಕೆಯಂತೆ ಗ್ರಾಮೀಣ ಬಡವರಿಗೆ ರೂ. 600 ರೂ. ದಿನಗೂಲಿ ಮತ್ತು 200 ಕೆಲಸದ ದಿನಗಳನ್ನು ಒದಗಿಸಬಹುದಿತ್ತು ಎಂದು ಹೇಳಿದೆ.

ಇದು ದುಡಿಯುವ ಜನರ ಖರೀದಿ ಶಕ್ತಿಯನ್ನು ಹೆಚ್ಚಿಸುತ್ತಿತ್ತು ಮತ್ತು ಎಲ್ಲಾ ವಲಯಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತಿತ್ತು. ಮನರೇಗಕ್ಕೆ ಸಾಕಷ್ಟು ಹಣವನ್ನು ಒದಗಿಸುವುದು ಮತ್ತು ಅದನ್ನು ಕೃಷಿಯೊಂದಿಗೆ ಜೋಡಿಸುವುದು ಕೃಷಿ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ನಿರ್ಣಾಯಕವಾಗಿದೆ ಎಂದು ಎಐಕೆಎಸ್ ಅಭಿಪ್ರಾಯಪಟ್ಟಿದೆ.

ಇದನ್ನೂ ನೋಡಿ: ಬಾನು ಮುಷ್ತಾಕ್​ಗೆ ಬೂಕರ್ ಪ್ರಶಸ್ತಿ | ಮೂಲಭೂತವಾದಿಗಳಿಗೆ ಕಪಾಳಮೋಕ್ಷ – ಕೆ.ವಿ.ಪ್ರಭಾಕರ್ Janashakthi Media

Donate Janashakthi Media

Leave a Reply

Your email address will not be published. Required fields are marked *