ಬೆಂಗಳೂರು: ಬ್ಯಾಂಕ್ಗೆ 439 ಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧ ಸಿಐಡಿಗೆ ಇದೀಗ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮತ್ತಿತರರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ಶೀಟ್ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿದೆ.
ನಗರದ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ಗೆ 439 ಕೋಟಿ ಸಾಲ ಪಾವತಿಸದೇ ವಂಚಿಸಿರುವ ಆರೋಪಕ್ಕೆ ಗುರಿಯಾಗಿರುವ ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಮತ್ತಿಬ್ಬರು ನಿರ್ದೇಶಕರಾಗಿದ್ದ ವಸಂತ್ ಪಾಟೀಲ್ ಮತ್ತು ಶಂಕರ್ ಪವಾಡೆ ಅರ್ಜಿ ಸಲ್ಲಿಸಿದ್ದರು.
ಇದರಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಾಗೂ ಸಿಐಡಿ ನಡೆಸುತ್ತಿರುವ ತನಿಖೆ ರದ್ದುಪಡಿಸುವಂತೆ ಕೋರಿದ್ದರು.
ಇದನ್ನೂ ಓದಿ: ಬೆಂಗಳೂರು| ಒಂದು ವರ್ಷದಲ್ಲಿ 623 ನಕಲಿ ವೈದ್ಯರು ಪತ್ತೆ
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ ಅವರಿದ್ದ ವಿಶೇಷ ನ್ಯಾಯಪೀಠ ಈ ಆದೇಶ ನೀಡಿದೆ. ಸಿಐಡಿಯು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬಹುದು. ಆದರೆ ಹೈಕೋರ್ಟ್ ಆದೇಶ ಮಾಡುವವರೆಗೆ ವಿಶೇಷ ನ್ಯಾಯಾಲಯವು ಆರೋಪ ಪಟ್ಟಿ ಸಂಬಂಧ ಆತುರದ ಕ್ರಮಕೈಗೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದ್ದು, ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿದೆ.
ಸಿಐಡಿ ಪರ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್, 15.3.2024ರಂದು ಹೈಕೋರ್ಟ್ ರಮೇಶ್ ಜಾರಕಿಹೊಳಿಗೆ ಸಿಐಡಿಗೆ ತನಿಖೆಗೆ ಸಹಕರಿಸಲು ಆದೇಶಿಸಿತ್ತು. ಈಗ 2,000 ಪುಟಗಳ ಆರೋಪ ಪಟ್ಟಿ ಸಿದ್ಧವಾಗಿದೆ. ಈ ವಾರಾಂತ್ಯದಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಿದ್ದೇವೆ. ಪ್ರಕರಣದಲ್ಲಿ ಜಾರಕಿಹೊಳಿ ಪಾತ್ರವಿದೆ. ಅವರು ಆರೋಪ ಪಟ್ಟಿಯನ್ನು ಪ್ರಶ್ನಿಸಬಹುದಾಗಿದೆ ಎಂದರು.
ಆಗ ಪೀಠವು ಅರ್ಜಿದಾರರಿಗೆ, ಆರೋಪ ಪಟ್ಟಿಯಲ್ಲಿ ಅರ್ಜಿದಾರರನ್ನು ಉಲ್ಲೇಖಿಸದಿದ್ದರೆ ಈ ಅರ್ಜಿಯು ನಿಮ್ಮ ಪರವಾಗಿರುತ್ತಿತ್ತು. ವಿಚಾರಣಾಧೀನ ನ್ಯಾಯಾಲಯದಲ್ಲಿ ಆತುರದ ನಿರ್ಧಾರ ಕೈಗೊಳ್ಳದಂತೆ ಆದೇಶ ಮಾಡಲಾಗುವುದು. ಅಗತ್ಯ ಬಿದ್ದರೆ ಆರೋಪ ಪಟ್ಟಿ ರದ್ದತಿ ಕೋರಿಕೆಯನ್ನು ಅರ್ಜಿಗೆ ಸೇರ್ಪಡೆ ಮಾಡಬಹುದು ಎಂದು ಮೌಖಿಕವಾಗಿ ಸಲಹೆ ನೀಡಿತು.
ಇದನ್ನೂ ನೋಡಿ: ಇಂಗ್ಲೀಷ್ ಕಲಿಯೋಣ ಬನ್ನಿ Articles – A, An, The ಎಂದರೇನು ? Janashakthi Media