ಉದ್ಯೋಗ ಭದ್ರತೆ-ಖಾಯಂಗೆ ಆಗ್ರಹಿಸಿ ಅತಿಥಿ ಶಿಕ್ಷಕರ ಪ್ರತಿಭಟನೆ

ಬೆಂಗಳೂರು : ಉದ್ಯೋಗ ಭದ್ರತೆ ಹಾಗೂ ಖಾಯಂಗೆ ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಡಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಇಂದು ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಿದರು. ಅತಿಥಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರ ಕೇಳುತ್ತಿಲ್ಲ. ಹಾಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನೆ ಕಾರರು ಆಕ್ರೋಶ ಹೊರಹಾಕಿದರು.

ಪ್ರತಿಭಟನೆ ಉದ್ದೇಶಿಸಿ ಡಿವೈಎಫ್‌ಐ ರಾಜ್ಯಮುಖಂಡ ಸಂತೋಷ್‌ ಬಜಾಲ್‌ ಮಾತನಾಡುತ್ತಾ, ಕರ್ನಾಟಕ ರಾಜ್ಯದಲ್ಲಿ ಅತಿಥಿ ಶಿಕ್ಷಕರೆಂದು ಗುತ್ತಿಗೆಯಾಧಾರದಡಿ ದುಡಿಯುತ್ತಿರುವ ಫ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಅತ್ಯಂತ ಶೋಚನೀಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಅತಿಥಿ ಶಿಕ್ಷಕರಿಗೆ ಯಾವುದೇ ಉದ್ಯೋಗ ಭದ್ರತೆಯಿಲ್ಲದೆ ಸಿಗುವಂತಹ ಗೌರವ ಧನವೂ ಕನಿಷ್ಟವಾಗಿದ್ದು ಇದರಿಂದ ಜೀವನ ನಿರ್ವಹಿಸಲಾಗದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ಕಾಲದಲ್ಲಿ ಉದ್ಯೋಗ ಇಲ್ಲದೆ ಮಾಡಿದ ಸಾಲಸೋಲವನ್ನು ಈವರೆಗೂ ತೀರಿಸಲು ಸಾಧ್ಯವಾಗದೆ ಇದ್ದು, ಬರುವ ಆದಾಯಗಳೆಲ್ಲವೂ ಸಾಲದ ಕಂತು, ಮಕ್ಕಳ ಶಿಕ್ಷಣ, ಆರೋಗ್ಯ, ಆಹಾರದಂತಹ ದಿನನಿತ್ಯದ ಅಗತ್ಯಗಳ ಪೂರೈಕೆಗಳಿಗೂ ಈಡೇರಿಸಲಾಗದಂತಹ ದುಸ್ಥಿತಿಯಲ್ಲಿ ಬದುಕುವಂತಾಗಿದೆ. ಬಹುತೇಕ ಅತಿಥಿ ಶಿಕ್ಷಕರು ಆರ್ಥಿಕ ಸಂಕಷ್ಟದಿಂದ ಹೊರಬರಲಾಗದೆ ಖಿನ್ನತೆಗೊಳಗಾಗಿ ಆತ್ಮಹತ್ಯೆಯಂತಹ ದಾರಿಯನ್ನಿಡಿದು ತಮ್ಮ ಜೀವವನ್ನೇ ಕೊನೆಯಾಗಿಸಿದ ಘಟನೆಗಳು ಈಗಾಗಲೇ ರಾಜ್ಯದ ಹಲವು ಕಡೆಗಳಲ್ಲಿ ನಡೆದಿದೆ ಎಂದು ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ರಾಜ್ಯ ಸಂಚಾಲಕಿ ಚಿತ್ರಲೇಖಾ ಮಾತನಾಡಿ, ಅತಿಥಿ ಶಿಕ್ಷಕರು ಎದುರಿಸುತ್ತಿರುವ ಹಲವು ಗಂಭೀರ ಸಮಸ್ಯೆಗಳನ್ನು ಹಾಗೂ ಉದ್ಯೋಗ ಭದ್ರತೆಯ ಬೇಡಿಕೆಗಳನ್ನು ರಾಜ್ಯ ಸರಕಾರದ ಮುಂದೆ ಈಗಾಗಲೇ ಹಲವು ರೀತಿಯ ಪ್ರತಿಭಟನೆಗಳ ಮೂಲಕ ಮನವಿಗಳನ್ನು ಸಲ್ಲಿಸುತ್ತಾ ಬಂದಿರುತ್ತೇವೆ. ಆದರೆ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಲಿ, ಶಿಕ್ಷಣ ಸಚಿವರಾಗಲಿ ಸ್ಪಂದಿಸದೆ ಶಿಕ್ಷಕರ ವಿರೋಧಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇತ್ತೀಚೆಗೆ ಸರಕಾರಿ ನೌಕರರ ಹೋರಾಟದ ಸಂದರ್ಭ ಅವರ ಬೇಡಿಕೆಗಳನ್ನು ಕೂಡಲೇ ಈಡೇರಿಸಿದ ಸರಕಾರ, ಕಳೆದ ಹಲವು ವರುಷಗಳಿಂದ ಶಾಂತಿಯುತವಾಗಿ ಒತ್ತಾಯಿಸುತ್ತ ಬಂದ ನಮ್ಮ ಬೇಡಿಕೆಗಳ ಈಡೇರಿಕೆಗೆ ಕನಿಷ್ಟ ನ್ಯಾಯವೂ ಒದಗಿಸಲು ಮುಂದಾಗದಿರುವುದು ಅತ್ಯಂತ ಖೇದಕರ. ಅದೇ ಪಕ್ಕದ ರಾಜ್ಯಗಳಲ್ಲಿ ಶಿಕ್ಷಣದ ಸುಧಾರಣೆಗಾಗಿ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ಖಾಯಂಗೊಳಿಸುವ ಮಹತ್ವಪೂರ್ಣ ತೀರ್ಮಾನವನ್ನು ಅಲ್ಲಿನ ಸರಕಾರಗಳು ಕೈಗೊಂಡಿದೆಯಾದರೂ ಅಂತಹ ತೀರ್ಮಾನಗಳನ್ನು ಕರ್ನಾಟಕ ರಾಜ್ಯ ಸರಕಾರವೂ ಜಾರಿಗೊಳಿಸಬೇಕೆಂದು ಪ್ರತಿಭಟನೆಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಅತಿಥಿ ಶಿಕ್ಷಕರಾದ ಸುಮಿತ್ರಾ, ಐಶ್ವರ್ಯ, ಕಲಾವತಿ, ಯೋಗೇಶ್‌, ಶರಣಪ್ಪ, ಧರ್ಮಣ್ಣ  ಸೇರಿದಂತೆ ಅನೇಕರಿದ್ದರು.

Donate Janashakthi Media

Leave a Reply

Your email address will not be published. Required fields are marked *