ಸರ್ಕಾರಿ ನೌಕರರ ಬೇಡಿಕೆಗಳು ಸಂಪೂರ್ಣ ಈಡೇರದೇ ಮುಷ್ಕರ ಹಿಂಪಡೆದಿರುವುದು ಖಂಡನೀಯ

ಬೆಂಗಳೂರು : ಏಳನೇ ವೇತನ ಆಯೋಗದ ಜಾರಿ 40% ಫಿಟ್ಮೆಂಟ್  ಮತ್ತು OPS ಮರುಸ್ಥಾಪನೆ ಈ ಎರಡೇ ಬೇಡಿಕೆಗಳು ಈಡೇರುವವವರೆಗೂ  ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಅನಿರ್ದಿಷ್ಟ ಮುಷ್ಕರವನ್ನು ಹಿಂಪಡೆಯುವುದಿಲ್ಲವೆಂದು ಹೇಳಿದ್ದರ ಹಿನ್ನೆಲೆಯಲ್ಲಿ, ವಿವಿಧ ನೌಕರರ ಸಂಘಟನೆಗಳು ಇಂದಿನ ಮುಷ್ಕರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದವು. ಆದರೆ, NPS ರದ್ದು ಮಾಡಿ OPS ಮರುಸ್ಥಾಪನೆ ಮಾಡಲು ಅಧ್ಯಯನಕ್ಕಾಗಿ ಅಧಿಕಾರಿ ಸಮಿತಿ ರಚಿಸುವುದಾಗಿ ಸರಕಾರ ಹೇಳಿದ ತಕ್ಷಣ ಅದನ್ನು ಒಪ್ಪಿ ಸಂಘವು ಮುಷ್ಕರವನ್ನು ಹಿಂಪಡೆದಿರುವುದು NPS ನೌಕರರಿಗೆ ಬಗೆದ ದ್ರೋಹವಾಗಿದೆ. ಹೀಗೆ ಮಾಡುವುದರ ಮೂಲಕ NPS ನೌಕರರನ್ನು ನಡು ನೀರಿನಲ್ಲಿ  ಕೈ ಬಿಟ್ಟಂತಾಗಿದೆ. ಹಾಗೂ NPS ರದ್ದತಿಯ ಕುರಿತು ಸರಕಾರ ತನ್ನ ಬದ್ಧತೆ ತೋರಿಸದ ಕಾರಣಕ್ಕಾಗಿ ನೌಕರರು ಮತ್ತೊಂದು ಹೋರಾಟದ ಹಾದಿ ತುಳಿಯಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಎಚ್‌ ಎಸ್‌ ಜೈಕುಮಾರ್‌ ತಿಳಿಸಿದ್ದಾರೆ.

ಇದನ್ನು ಓದಿ: 7ನೇ ವೇತನ ಆಯೋಗಕ್ಕಾಗಿ ʻಕರ್ತವ್ಯಕ್ಕೆ ಗೈರಾಗಿʼ ಸರಕಾರಿ ನೌಕರರಿಂದ ಮುಷ್ಕರ

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಒಂದು ವರ್ಷದಿಂದಲೇ ನೌಕರರ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಸರಕಾರ ಏಳನೇ ವೇತನ ಆಯೋಗ ರಚನೆ ಮಾಡಿ, ಕೂಡಲೇ ಅಂದರೆ 01-07-2022ರಿಂದಲೇ ಅನ್ವಯ ಆಗುವಂತೆ ವೇತನ ಪರಿಷ್ಕರಣೆ ಮಾಡಬೇಕು. ಅಲ್ಲದೇ ರಾಜ್ಯದಲ್ಲಿ NPS ರದ್ದು ಮಾಡಿ, OPS ಮರುಸ್ಥಾಪನೆ ಮಾಡಲು ಒತ್ತಾಯಿಸುತ್ತಲೇ ಬಂದಿವೆ. ಆದರೆ ರಾಜ್ಯ ಸರಕಾರ ನೌಕರರ ಒತ್ತಾಯವನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿತು. ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟವು ದಿನಾಂಕ 07-02-2023ರಂದು “ವಿಧಾನಸೌಧ ಚಲೋ” ಕಾರ್ಯಕ್ರಮ ಹಮ್ಮಿಕೊಂಡು ರಾಜ್ಯದ ಸರಕಾರಿ ನೌಕರರ ಜ್ವಲಂತ ಸಮಸ್ಯೆಗಳ ಬಗ್ಗೆ ಸರಕಾರ ಹಾಗೂ ನೌಕರರ ಗಮನ ಸೆಳೆಯಿತು ಎಂದಿದ್ದಾರೆ.

ಇಂದು ರಾಜ್ಯ ಸರಕಾರ ಏಳನೇ ವೇತನ ಆಯೋಗದ ಭಾಗವಾಗಿ 1 ಏಪ್ರಿಲ್ 2023ರಿಂದ ಅನ್ವಯ ಆಗುವಂತೆ 17% ಮಧ್ಯಂತರ ಪರಿಹಾರವನ್ನು ಘೋಷಿಸಿದೆ. ಅಲ್ಲದೇ , NPS ರದ್ದು ಮಾಡಿ, OPS ಮರುಸ್ಥಾಪನೆ ಮಾಡುವ ಕುರಿತಾಗಿ ಅಧ್ಯಯನ ಮಾಡಿ ಶಿಫಾರಸುಗಳನ್ನು ಮಾಡಲು ಅಧಿಕಾರಿ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ.  ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟವು ಶೇ. 25ರಷ್ಟು ಮಧ್ಯಂತರ ಪರಿಹಾರ ಕೂಡಲೇ ಘೋಷಣೆ ಮಾಡಬೇಕು ಹಾಗೂ ಸರಕಾರವು ಅಂತಿಮವಾಗಿ  40% ವೇತನ ಹೆಚ್ಚಿಸಲು  ಅಗತ್ಯವಾದ 15000 ಕೋಟಿ ರೂಪಾಯಿಗಳ ಅನುದಾನವನ್ನು 2023-24ನೇ ಸಾಲಿನ ಬಜೆಟ್‌ನಲ್ಲಿ ತೆಗೆದಿರಿಸಿ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿತ್ತು.  ಆದರೆ ಸರಕಾರವು ಮಧ್ಯಂತರ ಪರಿಹಾರವನ್ನು 01-07-2022ರಿಂದ ಅನ್ವಯ ಮಾಡದೇ 01-04-2023ರಿಂದ ಅನ್ವಯ ಆಗುವಂತೆ ಆದೇಶ ಮಾಡುವ ಮೂಲಕ ರಾಜ್ಯದ ನೌಕರರು ಒಂಬತ್ತು ತಿಂಗಳ ವೇತನ ಹೆಚ್ಚಳದಿಂದ ವಂಚಿತರಾಗುವಂತೆ ಮಾಡಿರುವುದನ್ನು ಒಕ್ಕೂಟ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿನೌಕರರ ವೇತನ ಶೇ 17ರಷ್ಟು ಹೆಚ್ಚಳ; ಸರ್ಕಾರ ಅಧಿಕೃತ ಆದೇಶ-ಏಪ್ರಿಲ್ 1 ರಿಂದ ಜಾರಿ

ರಾಜ್ಯದ ಸರಕಾರಿ ನೌಕರರಿಗೆ ರಚಿಸಲಾಗಿರುವ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗಾಗಿ 2023-24ನೇ ಸಾಲಿನ ಬಜೆಟ್‌ನಲ್ಲಿ ಅಗತ್ಯವಿರುವ ಅಂದಾಜು 15000 ಕೋಟಿ ರೂಪಾಯಿಗಳನ್ನು ತೆಗೆದಿರಿಸಬೇಕಾಗಿತ್ತು. ಆದರೆ ಮಾನ್ಯ ಮುಖ್ಯಮಂತ್ರಿಯವರು ಅದಕ್ಕಾಗಿ 6000 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿರುವುದಾಗಿ ಬಜೆಟ್ ಮಂಡನೆಯ ನಂತರ ಹೊರಗೆ ಹೇಳಿದ್ದಾರೆ. NPS ರದ್ದತಿ ಕುರಿತಂತೆ ಪರಿಶೀಲಿಸಲು ಈ ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಮಿತಿಯೊಂದನ್ನು ರಚಿಸಿದ್ದರು. ಆದರೆ ಆ ಸಮಿತಿ ಈವರೆಗೂ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ಆದರೆ, ಈಗ ಸರ್ಕಾರವು ಅಂತಹ ಮತ್ತೊಂದು ಸಮಿತಿ ರಚಿಸಿರುವುದನ್ನು ಗಮನಿಸಿದರೆ, ರಾಜ್ಯ ಸರಕಾರವು NPS ರದ್ದು ಮಾಡಿ OPS ಮರುಸ್ಥಾಪನೆ ಮಾಡಲು ಬದ್ಧತೆ ಹೊಂದಿಲ್ಲ ಎಂಬುದನ್ನು ಗಮನಿಸಬಹುದಾಗಿದೆ.  NPS ರದ್ದು ಮಾಡಿ OPS ಮರುಸ್ಥಾಪನೆ ಕುರಿತಾಗಿ ರಾಜಸ್ಥಾನ, ಛತ್ತೀಸ್ ಘಡ್, ಪಂಜಾಬ್, ಹಿಮಾಚಲ ಪ್ರದೇಶ, ಹಾಗೂ ಜಾರ್ಖಂಡ್ ರಾಜ್ಯಗಳು ದಿಟ್ಟ ನಿರ್ಧಾರ ಕೈಗೊಂಡು ಆದೇಶ ಮಾಡಿವೆ. ಕರ್ನಾಟಕ ರಾಜ್ಯ ಸರಕಾರವೂ ಆ ನಿಟ್ಟಿನಲ್ಲಿ ಆದೇಶ ಹೊರಡಿಸಬಹುದಾಗಿತ್ತು. ಆದರೆ ಈಗಲೂ ಕೂಡಾ ಮತ್ತೊಂದು ಅಧಿಕಾರಿ ಸಮಿತಿ ರಚಿಸಿ, ಅದರಿಂದ ಇನ್ನು ಎರಡು ತಿಂಗಳಲ್ಲಿ ವರದಿ ತರಿಸಿಕೊಳ್ಳುವ ಆದೇಶವೆಂದರೆ NPS ಸಮಸ್ಯೆಯನ್ನು ಯಥಾವತ್ತಾಗಿ ಮುಂದುವರೆಸುವ ತಂತ್ರಗಾರಿಕೆಯಾಗಿ ಕಾಣುತ್ತದೆ ಎಂದು ಆರೋಪಿಸಿದ್ದಾರೆ.

ಇವೆಲ್ಲ ಅಂಶಗಳ ಹಿನ್ನೆಲೆಯಲ್ಲಿ, ಮಧ್ಯಂತರ ಪರಿಹಾರವನ್ನು ದಿನಾಂಕ: 1.07.2022ರಿಂದ ಅನ್ವಯವಾಗುವಂತೆ ಜಾರಿಗೊಳಿಸಬೇಕೆಂದು ಮತ್ತು ಎನ್.ಪಿ.ಎಸ್‌ ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಪದ್ದತಿ ಮರುಸ್ಥಾಪಿಸಲು ಆಗ್ರಹಿಸಿ ಮುಂದಿನ ದಿನಗಳಲ್ಲಿ ಗಂಭೀರ ಹೋರಾಟವನ್ನು ರೂಪಿಸಲು ನೌಕರ ಸಂಘಟನೆಗಳು ಸಜ್ಜಾಗಬೇಕೆಂದು ಒಕ್ಕೂಟವು ಕರೆ ನೀಡುತ್ತದೆ ಎಂದು ತಿಳಿಸಿದ್ದು ಇವರ ಹೇಳಿಕೆಯನ್ನು ಗೌರವಾಧ್ಯಕ್ಷ ಮಹದೇವಯ್ಯ ಮಠಪತಿ, ಕಾರ್ಯಾಧ್ಯಕ್ಷರಾದ ಶೋಭಾ ಲೋಕನಾಗಣ್ಣ, ಪ್ರಧಾನ ಕಾರ್ಯದರ್ಶಿ ಎಸ್‌ ಅಭಿಜಿತ್‌ ಬೆಂಬಲಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *