ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಬಿಡಿ – ವಿದ್ಯಾರ್ಥಿಗಳ ಆಗ್ರಹ

ಬೆಂಗಳೂರು :  ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು. ಬದಲಿಗೆ ಶಾಲೆಗಳ ಅಭಿವೃದ್ಧಿಯೆಡೆಗೆ ಗಮನವಹಿಸಬೇಕು ಎಂದು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತಿಳಿಸಿದ್ದಾರೆ.

ಮದರಸಗಳಿಗಿಂತ ಉತ್ತಮ ಶಿಕ್ಷಣವನ್ನು ಒದಗಿಸುತ್ತೇವೆ ಎಂಬ ವಾದದೊಂದಿಗೆ ಸರ್ಕಾರವು 2017-18 ಮತ್ತು 2018-19ರ  ಇಸವಿಯಲ್ಲಿ ರಾಜ್ಯದಲ್ಲಿ 200 ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಆರಂಭಿಸಿತ್ತು. ಪ್ರಸ್ತುತ ಒಟ್ಟಾರೆ ಆ ಎಲ್ಲ ಶಾಲೆಗಳಲ್ಲಿ 39,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಆದರೆ ಈಗ ಅವುಗಳ ನಿರ್ವಹಣೆಗೆ ಹಣ (ಅನುದಾನ) ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸರ್ಕಾರವೇ ಸುಮಾರು 22 ಶಾಲೆಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿರುವುದು ದುರದೃಷ್ಟಕರ. ಈ ಶಾಲೆಗಳಲ್ಲಿ ಬಡ, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಓದುತ್ತಿದ್ದು, 100-150 ಕ್ಕು ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೀಗಿರುವಾಗ, ಶಾಲೆಗಳಿಗೆ ಬೀಗ ಹಾಕಿ, ಆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಂತ್ಯ ಹಾಕುವಂತಹ ನಿರ್ಧಾರ ಮಾಡಿರುವುದು ಅತ್ಯಂತ ಖಂಡನೀಯ!

ರಾಜ್ಯದಲ್ಲಿ 13,800 ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುವ ಸರ್ಕಾರದ ನಿರ್ಧಾರದ ಕುರಿತು ಈಗಾಗಲೇ ಸಾಕಷ್ಟು ವಿರೋಧಗಳು, ಚಳುವಳಿಗಳು ಬೆಳೆದಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಉಳಿಸುವ ಆಂದೋಲನದ ಭಾಗವಾಗಿದ್ದಾರೆ. ವಿಲೀನದ ನೆಪದಲ್ಲಿ, ದಾಖಲಾತಿ ಕಡಿಮೆ ಎಂಬ ನೆಪದಲ್ಲಿ ಅಥವಾ ಅನುದಾನ ನೀಡಲು ಹಣದ ಕೊರತೆ ಎಂಬ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದೆ ಸರ್ಕಾರದ ನೀತಿಯಾಗಿ ಬಿಟ್ಟಿದೆ. ಈಗ 22 ಶಾಲೆಗಳನ್ನು ಮುಚ್ಚಲು ನಿರ್ಧಾರ ಮಾಡಿರುವುದು ಅವರ ನೀತಿಗೆ ತಕ್ಕಂತೆ ಇದೆ.

ಶಿಕ್ಷಣದ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂಬುದು ದೇಶದ ಸ್ವಾತಂತ್ರ್ಯ ಚಳುವಳಿ, ನವೋದಯ ಚಳುವಳಿಯ ಆಶಯವಾಗಿತ್ತು. ಈ ಆಶಯಗಳನ್ನು ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಗಾಳಿಗೆ ತೂರಿ, ಸರ್ಕಾರವೆ ನಿಂತು ಸರ್ಕಾರಿ ಶಾಲೆಗಳನ್ನು ಮುಚ್ಚುವಂತಹ ದಾರಿ ಹಿಡಿದಿರುವುದು ಅತ್ಯಂತ ವಿಷಾದನೀಯ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆಯನ್ನು ಸಹ ಮುಚ್ಚಬಾರದು, ಬದಲಿಗೆ ಶಾಲೆಯ ಉತ್ತಮ ನಿರ್ವಹಣೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು.  ಶಾಲೆ ಮುಚ್ಚಲು ನಿರ್ಧಾರ ಮಾಡಿದರೆ, ವಿದ್ಯಾರ್ಥಿಗಳು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *