ಜಿಡಿಪಿ ಕೇಕೆಯೂ ಮತ್ತು ನಿಜವಾದ ಪ್ರಗತಿಯೂ

ಜನರಿಗಿಂತ ರಾಷ್ಟ್ರದ ಸಂಪತ್ತಿಗೆ  ಉನ್ನತ ಸ್ಥಾನ ನೀಡುವುದು ಅಪೇಕ್ಷಣೀಯ ಎಂದು ಪರಿಗಣಿಸಿದ ಆಡಂ ಸ್ಮಿತ್, ಡೇವಿಡ್ ರಿಕಾರ್ಡೊರಂತಹ ಕಳೆದ ಶತಮಾನದ ಪಾರಂಪರಿಕ ಅರ್ಥಶಾಸ್ತ್ರಜ್ಞರಂತೆ ಈಗಲೂ ಜಿಡಿಪಿಯ ಮಟ್ಟವನ್ನು “ರಾಷ್ಟ್ರ”ದ ಸಮೃದ್ಧಿಯ ಸೂಚಿಯಾಗಿಯೂ ಮತ್ತು ಅದರ ಬೆಳವಣಿಗೆಯ ದರವನ್ನು ದೇಶದ ಪ್ರಗತಿಯ ಸೂಚಿಯಾಗಿಯೂ ತೆಗೆದುಕೊಳ್ಳಲಾಗುತ್ತಿದೆ. ಈ ಅರ್ಥದಲ್ಲಿ ಬಂಡವಾಳಶಾಹಿಗಳನ್ನು ಸಂತುಷ್ಟಗೊಳಿಸುವ ಮೂಲಕ, ಅವರಿಗೆ ಪ್ರೋತ್ಸಾಹಕಗಳನ್ನು ಒದಗಿಸುವ ಮೂಲಕ, ಅವರ ಹಿತಾಸಕ್ತಿಗಳನ್ನು ಉತ್ತೇಜಿಸುವ ಮೂಲಕ ಮಾತ್ರವೇ ಉತ್ತಮವಾದ ಪ್ರಗತಿಯನ್ನು ಮತ್ತು ಆ ಮೂಲಕ “ರಾಷ್ಟ್ರದ” ಹಿತವನ್ನು ಕಾಪಾಡಿಕೊಳ್ಳಬಹುದು ಎಂಬ ನಿಲುವು ಒಂದು ಪಕ್ಕಾ ಸೈದ್ಧಾಂತಿಕ ಪಕ್ಷಪಾತದ ಕ್ರಮ. ಇದು ಭಾರತದ ವಸಾಹತುಶಾಹೀ-ವಿರೋಧಿ ಹೋರಾಟದ ಮನೋಭಾವಕ್ಕೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಸ್ಥಿತಿ-ಗತಿಗಳೇ ಮುಖ್ಯವಾಗಬೇಕು ಎಂಬುದಕ್ಕೆ ಬಗೆಯುವ ಅಪಚಾರ. ಜಾಗತಿಕ ಹಸಿವು ಸೂಚ್ಯಂಕದಲ್ಲಿ 105ನೇ ಸ್ಥಾನದ ಬಗ್ಗೆ ನಾಚಿಕೆಪಡುವುದರ ಬದಲು, ಜಿಡಿಪಿಯ ಗಾತ್ರದ ಬಗ್ಗೆ ಕೇಕೆ ಹಾಕುವ ಸರ್ಕಾರವೊಂದನ್ನು ನಾವು ಹೊಂದಿದ್ದೇವೆ. 
ಪ್ರೊ. ಪ್ರಭಾತ್ ಪಟ್ನಾಯಕ್
ಅನು : ಕೆ.ಎಂ.ನಾಗರಾಜ್

ಒಂದು ರಾಷ್ಟ್ರದ ಸಮೃದ್ಧಿಯನ್ನು ಅದು ಹೊಂದಿರುವ ಅಮೂಲ್ಯ ಲೋಹಗಳ ಪ್ರಮಾಣದಿಂದ ಮತ್ತು ಪ್ರಗತಿಯನ್ನು ಅದರ ಅಮೂಲ್ಯ ಲೋಹಗಳ ಪ್ರಮಾಣದ ಹೆಚ್ಚಳದ ಪರಿಭಾಷೆಯಲ್ಲಿ ವಾಣಿಜ್ಯವಾದಿಗಳು ವ್ಯಾಖ್ಯಾನಿಸಿದ್ದರು. ಈ ಅಮೂಲ್ಯ ಲೋಹಗಳ ಸಂಗ್ರಹವನ್ನು ಹೆಚ್ಚಿಸಿಕೊಳ್ಳಲು, ಒಂದು ರಾಷ್ಟ್ರವು ತನ್ನ ಸರಕು ಮತ್ತು ಸೇವೆಗಳ ವ್ಯಾಪಾರ ಸಮತೋಲವನ್ನು ಅನುಕೂಲಕರವಾಗಿ ಹೊಂದಿರಬೇಕಾಗುತ್ತಿತ್ತು (ಅಂದರೆ, ಅದರ ರಫ್ತುಗಳು ಅದರ ಆಮದುಗಳಿಗಿಂತಲೂ ಅಧಿಕವಾಗಿರಬೇಕಿತ್ತು), ಆನಂತರ ಈ ಅಧಿಕ ರಫ್ತುಗಳಿಗೆ ಸಮನಾದ ಮೌಲ್ಯವನ್ನು ಅಮೂಲ್ಯ ಲೋಹಗಳನ್ನು, ಅದರಲ್ಲೂ ವಿಶೇಷವಾಗಿ ಚಿನ್ನವನ್ನು, ಆಮದು ಮಾಡಿಕೊಳ್ಳುವ ಮೂಲಕ ಇತ್ಯರ್ಥ ಮಾಡಿಕೊಳ್ಳಬೇಕಾಗುತ್ತಿತ್ತು. ಚಿನ್ನದ ಸಂಗ್ರಹವನ್ನು ಈ ರೀತಿಯಲ್ಲಿ ಹೆಚ್ಚಿಸಿಕೊಳ್ಳಲಾಗುತ್ತಿತ್ತು.

‘ದಿ ವೆಲ್ತ್ ಆಫ್ ನೇಷನ್ಸ್’ ಎಂಬ ಮೇರು ಕೃತಿಯನ್ನು ಆಡಮ್ ಸ್ಮಿತ್ ಬರೆದಾಗ, ಈ ವಾಣಿಜ್ಯವಾದಿಗಳು ಅವರ ಟೀಕೆಗೆ ಗುರಿಯಾಗಿದ್ದರು. ಈಸ್ಟ್ ಇಂಡಿಯಾ ಕಂಪನಿಯಂತಹ ವ್ಯಾಪಾರ ಏಕಸ್ವಾಮ್ಯ ಕಂಪನಿಗಳು ಹೇಳಿಕೊಂಡ ಹಾಗೆ, ಒಂದು ರಾಷ್ಟ್ರವು ಹೊಂದಿರುವ ಸಂಪತ್ತನ್ನು ವ್ಯಾಖ್ಯಾನಿಸುವುದು ಅದು ಹೊಂದಿರುವ ಅಮೂಲ್ಯ ಲೋಹಗಳ ದಾಸ್ತಾನಿನ ಪ್ರಮಾಣದ ಮೇಲಲ್ಲ, ಬದಲಿಗೆ, ಅದು ಹೊಂದಿದ ಬಂಡವಾಳ ದಾಸ್ತಾನಿನ ಪ್ರಮಾಣದ ಮೇಲೆ ಎಂಬುದು ಸ್ಮಿತ್ ಅವರ ನಿಲುವಾಗಿತ್ತು. ಹಾಗಾಗಿ, ದೇಶದ ಪ್ರಗತಿಯನ್ನು ಬೃಹತ್ ಪ್ರಮಾಣದ ಬಂಡವಾಳ ಸಂಗ್ರಹಣೆಯ ಮೂಲಕ ನೋಡಲಾಯಿತು. ಈ ಉದ್ದೇಶಕ್ಕಾಗಿ, ಅರ್ಥವ್ಯವಸ್ಥೆಯಲ್ಲಿ ವ್ಯಾಪಾರ ಸ್ವಾತಂತ್ರ‍್ಯವು ಮೇಲುಗೈ ಹೊಂದುವುದನ್ನು ಖಚಿತಪಡಿಸುವ ಮೂಲಕ, ಅಂದರೆ, ಮಾರುಕಟ್ಟೆಗಳು ಮತ್ತು ಬಂಡವಾಳವು ತಮ್ಮ ತಮ್ಮ ಕಾರ್ಯನಿರ್ವಹಣೆಯಲ್ಲಿ ಹೊಂದಿದ್ದ ಸ್ವಾತಂತ್ರ‍್ಯದ ಮೇಲೆ ಪ್ರಭುತ್ವವು ವಿಧಿಸಿದ್ದ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕುವ ಮೂಲಕ, ಅತ್ಯಂತ ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸಲಾಯಿತು. ಈ ಕಾರ್ಯಭಾರವನ್ನು ಸಾಧ್ಯವಾಗಿಸಲು ಈಸ್ಟ್ ಇಂಡಿಯಾ ಕಂಪನಿಯಂತಹ ಏಕಸ್ವಾಮ್ಯ ಕಂಪನಿಗಳ ಹಿಡಿತವನ್ನು ತೆಗೆದುಹಾಕಬೇಕಾಗಿತ್ತು.‌

ಇದನ್ನೂ ಓದಿ : ‘ರಫ್ತು-ಪ್ರಧಾನ ಬೆಳವಣಿಗೆ’ಯ ವಿಫಲ ಕಾರ್ಯತಂತ್ರ

ರಾಷ್ಟ್ರ’ ಮತ್ತು ಜನತೆ

ಸ್ಮಿತ್ ಅವರ ಈ ನಿಲುವಿನಲ್ಲಿದ್ದ ಗಮನಾರ್ಹವಾದ ವಿಷಯವೆಂದರೆ, ರಾಷ್ಟ್ರದ ಬಗ್ಗೆ ಆವರೆಗೆ ಹೊಂದಿದ್ದ ಪರಿಕಲ್ಪನೆಯನ್ನು ಕ್ರಾಂತಿಕಾರಕವಾಗಿ ನುಚ್ಚುನೂರು ಮಾಡಿದೂ, ಅವರು ಜನರ ಬದಲಾಗಿ ರಾಷ್ಟ್ರದ ಮೇಲೇ ಹೆಚ್ಚು ಒತ್ತು ಕೊಟ್ಟರು; ರಾಷ್ಟ್ರದ ಸಂಪತ್ತು, ಜನರಿಗಿಂತಲೂ ಉನ್ನತವಾದ ಸ್ಥಾನವನ್ನು ಹೊಂದಿದೆ ಎಂದೂ ಮತ್ತು ಅದನ್ನು ಅಪೇಕ್ಷಣೀಯವೆಂದೂ ಪರಿಗಣಿಸಿದರು. ಸಂಪತ್ತು ಎಂದರೆ ಯಾವುದು ಎಂಬುದರ ಪರಿಕಲ್ಪನೆಯನ್ನೇ ಬದಲಿಸಿದರು. ಸಂಪತ್ತು ಎಂದರೆ ಚಿನ್ನ ಮತ್ತು ಬೆಳ್ಳಿ ಎಂಬುದರ ಬದಲಾಗಿ ಅದು ಬಂಡವಾಳದ ಒಟ್ಟಾರೆ ಮೊತ್ತ ಎಂದು ಅವರು ಪರಿಗಣಿಸಿದರೇ ವಿನಃ ರಾಷ್ಟ್ರದ ಪರಿಕಲ್ಪನೆಯನ್ನು ಅವರು ಬದಲಿಸಲಿಲ್ಲ.

ಜನರಿಂದ ಭಿನ್ನವಾದ ಮತ್ತು ಅವರಿಗಿಂತಲೂ ಬಹಳ ಎತ್ತರದಲ್ಲಿ ಇರಿಸಿದ ರಾಷ್ಟ್ರದ ಈ ಕಲ್ಪನೆಯು ವೆಸ್ಟ್ ಫಾಲಿಯನ್ ಶಾಂತಿ ಒಪ್ಪಂದಗಳ ನಂತರ ಯುರೋಪಿನಲ್ಲಿ ಬೆಳೆದು ಬಂದ ಬೂರ್ಜ್ವಾ ರಾಷ್ಟ್ರೀಯತೆಯ ಲಕ್ಷಣವೂ ಹೌದು. 1930ರ ದಶಕದಲ್ಲಿ ಯುರೋಪಿನಲ್ಲಿ ತಲೆದೋರಿದ ಫ್ಯಾಸಿಸಂ ಆಳ್ವಿಕೆಯಡಿಯಲ್ಲಿ ಈ ಕಲ್ಪನೆಯು ಉತ್ತುಂಗವನ್ನು ತಲುಪಿದರೂ, ಅದು ಬೂರ್ಜ್ವಾ ಚಿಂತನಾ ಹಾದಿಯಲ್ಲಿ ಸರ್ವಸಾಧಾರಣವಾಗಿ ಕಂಡು ಬರುವ ಒಂದು ವಿಷಯವೂ ಹೌದು.

ರಾಷ್ಟ್ರ ಎಂಬುದು ಜನರಿಗಿಂತಲೂ ಉನ್ನತ ಸ್ಥಾನದಲ್ಲಿದೆ ಎಂದು ಭಾವಿಸಲಾಗಿತ್ತಾದರೂ, “ರಾಷ್ಟ್ರೀಯ ಹಿತಾಸಕ್ತಿ”ಯು ಬೂರ್ಜ್ವಾಗಳ ನಿರ್ದಿಷ್ಟ ವಿಭಾಗಗಳ ಹಿತಾಸಕ್ತಿಗಳೊಂದಿಗೆ ಗುರುತಿಸಲ್ಪಟ್ಟಿತ್ತು. ಚಿನ್ನ-ಬೆಳ್ಳಿಯ ಬದಲಾಗಿ ಷೇರು-ಬಂಡವಾಳವೇ ಸಂಪತ್ತು ಎಂದು ಪರಿಭಾವಿಸುವ ಬದಲಾವಣೆಯು, ಅದುವರೆಗೆ ಈಸ್ಟ್ ಇಂಡಿಯಾ ಕಂಪನಿಯಂತಹ ಏಕಸ್ವಾಮ್ಯ ವ್ಯಾಪಾರಿ ಕಂಪನಿಗಳ ಹಿತಾಸಕ್ತಿಗಳೇ “ರಾಷ್ಟ್ರೀಯ ಹಿತಾಸಕ್ತಿ”ಗೆ ಸಮಾನವೆಂದು ಆದರ್ಶೀಕರಿಸಿದ್ದುದಕ್ಕೆ ಬದಲಾಗಿ, ಉದಯೋನ್ಮುಖ ತಯಾರಿಕಾ ಬೂರ್ಜ್ವಾಗಳ ಹಿತಾಸಕ್ತಿಗಳು “ರಾಷ್ಟ್ರೀಯ ಹಿತಾಸಕ್ತಿ”ಯ ಮೂರ್ತ ರೂಪವೆಂದು ಪರಿಗಣಿಸಿದ ಬದಲಾವಣೆಯಾಗಿತ್ತು. ಈ ಉದಯೋನ್ಮುಖ ತಯಾರಿಕಾ ಬೂರ್ಜ್ವಾಗಳ ಹಿತಾಸಕ್ತಿಗಳನ್ನು ಪ್ರೋತ್ಸಾಹಿಸುವುದನ್ನು ರಾಷ್ಟ್ರದ ಹಿತಾಸಕ್ತಿಗಳ ಪ್ರಗತಿಗೆ ಸಮಾನವೆಂದು ನೋಡಲಾಯಿತು. ಈ ಬದಲಾವಣೆಯನ್ನು ಜನರಿಂದ ಭಿನ್ನವಾದ ಮತ್ತು ಅವರಿಗಿಂತ ಉನ್ನತ ಸ್ಥಾನದಲ್ಲಿರುವ ರಾಷ್ಟ್ರದ ಪರಿಕಲ್ಪನೆಗೆ ಆತುಕೊಂಡೇ ಮಾಡಲಾಯಿತು.

ಡೇವಿಡ್ ರಿಕಾರ್ಡೊ ಸಹ, ಪ್ರಗತಿಯ ಬಗ್ಗೆ, ರಾಷ್ಟ್ರದೊಳಗೆ ಬಂಡವಾಳದ ಸಂಗ್ರಹಣೆಯ ಹೆಚ್ಚಳವೇ ಪ್ರಗತಿ ಎಂದು ಪ್ರತಿಪಾದಿಸಿದ ಆಡಮ್ ಸ್ಮಿತ್ ಅವರ ಅಭಿಪ್ರಾಯವನ್ನೇ ಒಪ್ಪಿಕೊಂಡಿದ್ದರು. ಆದರೆ, ಬಂಡವಾಳದ ಸಂಗ್ರಹಣೆ ಒಂದು ವೇಳೆ ನಿಂತಾಗ, ಷೇರು-ಬಂಡವಾಳವೇ ರಾಷ್ಟ್ರದ ಸಂಪತ್ತು ಎಂಬ ಪರಿಕಲ್ಪನೆಯು ಬಂಡವಾಳಶಾಹಿಯನ್ನು ಒಂದು ಸ್ತಬ್ಧ ಅವಸ್ಥೆಯತ್ತ ಕೊಂಡೊಯ್ಯಬಹುದು, ಆಗ ಪ್ರಗತಿ ಇರುವುದಿಲ್ಲ ಎಂಬ ಭಯ ಅವರಲ್ಲಿ ಹುಟ್ಟಿಕೊಂಡಿತು. ಈ ವಿಷಯದಲ್ಲಿ ಜಾನ್ ಸ್ಟುವರ್ಟ್ ಮಿಲ್ ನಿಸ್ಸಂದೇಹವಾಗಿ ಒಂದು ಅಪವಾದವೇ ಸರಿ. ಏಕೆಂದರೆ, ಕಾರ್ಮಿಕರ ಸ್ಥಿತಿ-ಗತಿಗಳು ಅರ್ಥವ್ಯವಸ್ಥೆಯಲ್ಲಿ ಬಂಡವಾಳವು ಸಂಗ್ರಹಣೆಯಾಗುತ್ತಿರುವ ಸಮಯದಲ್ಲಿ ಇದ್ದುದ್ದಕ್ಕಿಂತಲೂ ಅದರ ಸ್ತಬ್ಧ ಅವಸ್ಥೆಯಲ್ಲಿ ಉತ್ತಮವಾಗಿದ್ದರೆ ಸ್ಥಗಿತತೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಅವರು ದೃಢವಾಗಿ ಹೇಳಿದ್ದರು. ಅಂದರೆ, ಅವರ ಪೂರ್ವವರ್ತಿಗಳಾದ ಆಡಮ್ ಸ್ಮಿತ್ ಮತ್ತು ಡೆವಿಡ್ ರಿಕಾರ್ಡೊ ಅವರುಗಳಿಗಿಂತಲೂ ಭಿನ್ನವಾಗಿ, ಜಾನ್ ಸ್ಟುವರ್ಟ್ ಮಿಲ್ ಅವರು ಕಾರ್ಮಿಕರ ಯೋಗಕ್ಷೇಮವನ್ನು ಬಂಡವಾಳ ಸಂಗ್ರಹಣೆಗಿಂತಲೂ ಮೇಲಿನ ಮಟ್ಟದಲ್ಲಿ ಇರಿಸಿದರು. ಸಾಂಪ್ರದಾಯಕ ರಾಜಕೀಯ ಅರ್ಥವ್ಯವಸ್ಥೆಯು ಹೊಂದಿದ್ದ ನಿಲುವಿನಿಂದ ಭಿನ್ನವಾದ ಅವರ ಈ ದಿಕ್ಪಲ್ಲಟಕ್ಕೆ ಅವರು ತಮ್ಮ ಪತ್ನಿ ಹ್ಯಾರಿಯೆಟ್ ಅವರ ಪ್ರಭಾವದಿಂದಾಗಿ ಸಮಾಜವಾದದತ್ತ ವಾಲಿದ್ದುದು ಕಾರಣವೆನ್ನಬಹುದು.

ತಪ್ಪು ಮಾಲ್ತೂಸ್ ಗ್ರಹಿಕೆ…

ಆದಾಗ್ಯೂ, ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರಾದ ಸ್ಮಿತ್ ಮತ್ತು ರಿಕಾರ್ಡೊ ಅಂಥವರನ್ನು, ಅವರು ತಮ್ಮ ಗಮನವನ್ನು ದುಡಿಯುವ ಜನತೆಯ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸುವ ಬದಲು ಬಂಡವಾಳ ಸಂಗ್ರಹದ (capital stock) ಪ್ರಮಾಣದ (ಮತ್ತು ಅದು ಉತ್ಪಾದಿಸುವ ಉತ್ಪತ್ತಿಯ ಪ್ರಮಾಣ) ಮೇಲೆ ಕೇಂದ್ರೀಕರಿಸಿದ್ದಕ್ಕಾಗಿ ಅತಿಯಾಗಿ ಟೀಕಿಸಬಾರದು. ಕಾರ್ಮಿಕರ ಬಗ್ಗೆ ಅವರಿಗೆ ಹೆಚ್ಚು ಸಹಾನುಭೂತಿ ಇತ್ತಾದರೂ ಕಾರ್ಮಿಕರು ತಮ್ಮ ಲೌಕಿಕ ಜೀವನದ ಸ್ಥಿತಿ-ಗತಿಗಳು ಸುಧಾರಿಸಿದರೆ ವೇಗವಾಗಿ ಸಂತಾನೋತ್ಪತ್ತಿ ಮಾಡುತ್ತಾರೆ ಎಂದು ಅವರು ನಂಬಿದ್ದರು (ಈ ಕಲ್ಪನೆಯು ಮಾಲ್ತುಸ್ ಅವರ ಜನಸಂಖ್ಯಾ ಸಿದ್ಧಾಂತದಲ್ಲಿ ಅಭಿವ್ಯಕ್ತಿ ಪಡೆಯಿತು). ನಿಜ ಕೂಲಿಯು ಒಂದು ವೇಳೆ ಜೀವನಾಧಾರ ಮಟ್ಟಕ್ಕಿಂತ ಮೇಲಿದ್ದರೆ ಜನಸಂಖ್ಯೆ ಹೆಚ್ಚುತ್ತದೆ ಮತ್ತು ಕಾರ್ಮಿಕ ಪೂರೈಕೆಯೂ ಹೆಚ್ಚುತ್ತದೆ ಮತ್ತು ಆನಂತರ ನಿಜ ಕೂಲಿಯನ್ನು ಜೀವನಾಧಾರ ಮಟ್ಟಕ್ಕೆ ತರುತ್ತದೆ ಎಂದು ಭಾವಿಸಿದ್ದರು.

ಅಂದರೆ ಕಾರ್ಮಿಕರ ಸ್ಥಿತಿ-ಗತಿಗಳ ಸುಧಾರಣೆಯು ಅವರ ಮೇಲೆಯೇ ಅವಲಂಬಿತವಾಗಿದೆ ಎಂದಂತಾಯಿತು. ಹಾಗಾಗಿ ಕಾರ್ಮಿಕರು ತಮ್ಮ ಅಭ್ಯಾಸಗಳನ್ನು ತಾವೇ ಬದಲಾಯಿಸಿಕೊಳ್ಳಬೇಕಾಗಿತ್ತು ಮತ್ತು ತಮ್ಮ ಸ್ಥಿತಿ-ಗತಿಗಳು ಸುಧಾರಿಸಿದಾಗಲೂ ತಮ್ಮ ಸಂಖ್ಯೆಯ ಬೆಳವಣಿಗೆಯನ್ನು ಅವರೇ ತಡೆಯಬೇಕಾಗಿತ್ತು; ಆಗ ಮಾತ್ರವೇ ಅವರು ತಮ್ಮ ಜೀವನದಲ್ಲಿ ಸಂಭವಿಸುವ ಸುಧಾರಣೆಗಳನ್ನು ಕಾಪಾಡಿಕೊಳ್ಳಬಹುದು. ನೀತಿಗಳು ಈ ಬಗ್ಗೆ ಏನನ್ನೂ ಮಾಡಲು ಸಾಧ್ಯವಾಗದ ಕಾರಣ, ನೀತಿಯು ಬಂಡವಾಳ ಸಂಗ್ರಹಣೆಯ ಹೆಚ್ಚಳದತ್ತವೇ ಗಮನ ಹರಿಸಬೇಕು ಮತ್ತು ಉತ್ಪಾದನೆಯನ್ನು ಹೆಚ್ಚಿಸಬೇಕು. ಇದು ಎಲ್ಲರಿಗೂ ಲಭಿಸುವ ಉತ್ಪಾದನೆಯ ಒಟ್ಟು ಮೊತ್ತವನ್ನು ಹೆಚ್ಚಿಸುತ್ತದೆ. ಇದರಿಂದ ಕಾರ್ಮಿಕರು ತಮ್ಮ ಅಭ್ಯಾಸಗಳನ್ನು ಒಂದು ವೇಳೆ ಬದಲಾಯಿಸಿಕೊಂಡರೆ ಹೆಚ್ಚಿನ ಪಾಲನ್ನು ಪಡೆಯಬಹುದು ಎಂದು ಅಭಿಪ್ರಾಯಪಡಲಾಯಿತು.

ಈ ಅಭಿಪ್ರಾಯದ ಸಂಬಂಧವಾಗಿ, ಸ್ಮಿತ್ ಮತ್ತು ರಿಕಾರ್ಡೊ ಅವರಿಗೆ ನಾವು ತೋರಬಹುದಾದ ಔದಾರ್ಯವನ್ನು ಆನಂತರದ “ಮುಖ್ಯಧಾರೆಯದು” ಎಂದು ಹೇಳಲಾಗುವ ಬೂರ್ಜ್ವಾ ಅರ್ಥಶಾಸ್ತ್ರಕ್ಕೆ ತೋರಲಾಗದು. ಮಾಲ್ತುಸ್ ಅವರ ಜನಸಂಖ್ಯಾ ಸಿದ್ಧಾಂತದ ಮೇಲಿನ ನಂಬಿಕೆಯು ಬಹಳ ಹಿಂದೆಯೇ ಕೊನೆಗೊಂಡಿತ್ತು. ಈ ಸಿದ್ಧಾಂತ “ಮಾನವಕುಲದ ಮೇಲಿನ ಮಿಥ್ಯಾರೋಪ’ ಎಂದು ಮಾರ್ಕ್ಸ್ ವರ್ಣಿಸಿದ್ದರು. ಇದನ್ನು ಹದಿನೆಂಟನೇ ಶತಮಾನದ ಉತ್ತರಾರ್ಧ ಮತ್ತು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಸಾಮಾನ್ಯವಾಗಿ ಸ್ವೀಕರಿಸಿರಲಿಲ್ಲ. ಆದರೆ ಈಗ ಈ ವರ್ಣನೆಗೆ ಸಾರ್ವತ್ರಿಕ ಸ್ವೀಕೃತಿ ಲಭಿಸಿದೆ.

ಸೈದ್ಧಾಂತಿಕ ಪಕ್ಷಪಾತದ ಕ್ರಮ

ಆದೇನೇ ಇರಲಿ, “ಮುಖ್ಯಧಾರೆಯ” ಬೂರ್ಜ್ವಾ ಸಿದ್ಧಾಂತವು ಈಗಲೂ ಒಟ್ಟು ಆಂತರಿಕ ಉತ್ಪನ್ನ ಅಂದರೆ ಜಿಡಿಪಿಯ ಮಟ್ಟವನ್ನು “ರಾಷ್ಟ್ರ”ದ ಸಮೃದ್ಧಿಯ ಸೂಚಿಯಾಗಿಯೂ ಮತ್ತು ಅದರ ಬೆಳವಣಿಗೆಯ ದರವನ್ನು ದೇಶದ ಪ್ರಗತಿಯ ಸೂಚಿಯಾಗಿಯೂ ತೆಗೆದುಕೊಳ್ಳುತ್ತಿದೆ. ಈ ಅರ್ಥದಲ್ಲಿ “ಪ್ರಗತಿ”ಯನ್ನು ಬಂಡವಾಳಶಾಹಿಗಳ ಕೆಲಸ-ಕಾರ್ಯಗಳ ಮೂಲಕ ಮಾತ್ರ ಸಾಧಿಸಬಹುದಾದ್ದರಿಂದ, ಬಂಡವಾಳಶಾಹಿಗಳನ್ನು ಸಂತುಷ್ಟಗೊಳಿಸುವ ಮೂಲಕ, ಅವರಿಗೆ ಪ್ರೋತ್ಸಾಹಕಗಳನ್ನು ಒದಗಿಸುವ ಮೂಲಕ, ಅವರ ಹಿತಾಸಕ್ತಿಗಳನ್ನು ಉತ್ತೇಜಿಸುವ ಮೂಲಕ ಮತ್ತು ಅವರನ್ನು ವಿಶೇಷ ಸವಲತ್ತಿನ ವ್ಯಕ್ತಿಗಳಾಗಿ ಪರಿಗಣಿಸುವ ಮೂಲಕ ಉತ್ತಮವಾದ ಪ್ರಗತಿಯನ್ನು ಸಾದಿಸಬಹುದು ಮತ್ತು ಆ ಮೂಲಕ “ರಾಷ್ಟ್ರದ” ಹಿತವನ್ನು ಕಾಪಾಡಿಕೊಳ್ಳಬಹುದು. ಈ ನಿಲುವನ್ನು ಸ್ಮಿತ್ ಮತ್ತು ರಿಕಾರ್ಡೊ, ಕಾರ್ಮಿಕರು ತಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವ ವರೆಗೆ ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು (ತಪ್ಪಾಗಿ) ಭಾವಿಸಿದ್ದರಿಂದ ತೆಗೆದುಕೊಂಡಿದ್ದಿರಬಹುದು. ಆದರೆ, ಅವರ ಕಾಲದ ನಂತರದ ಅರ್ಥಶಾಸ್ತ್ರಜ್ಞರು ಅದೇ ನಿಲುವನ್ನು ತೆಗೆದುಕೊಳ್ಳುವುದು ಒಂದು ಶುದ್ಧ ಸೈದ್ಧಾಂತಿಕ ಪಕ್ಷಪಾತದ ಕ್ರಮವಾಗುತ್ತದೆ.

ಇಂಥಹ ಪಕ್ಷಪಾತದ ಇತ್ತೀಚಿನ ಒಂದು ಉದಾಹರಣೆಯೆಂದರೆ, ಜಿಡಿಪಿಯ ಗಾತ್ರದಲ್ಲಿ ಜಪಾನನ್ನು ಹಿಂದಿಕ್ಕಿದ ಭಾರತದ ಜಿಡಿಪಿಯು ಈಗ $4 ಟ್ರಿಲಿಯನ್ ದಾಟಿದೆ ಮತ್ತು ಭಾರತವು ಈಗ ವಿಶ್ವದ ನಾಲ್ಕನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿದೆ ಎಂದು ನೀತಿ ಆಯೋಗದ ಸಿಇಒ ಹೇಳಿರುವುದು. ಅವರು ಇದನ್ನು ಹಾಗೇ ಸುಮ್ಮನೇ ಹೇಳಲಿಲ್ಲ. ಇದನ್ನು ಒಂದು ದೊಡ್ಡ ಸಾಧನೆ ಎಂದು ಬಿಂಬಿಸುವುದಕ್ಕಾಗಿಯೇ ಹೇಳಿರುವುದು. ಈ ಬೆಳವಣಿಗೆಯನ್ನು ಭಾರತದ ದೊಡ್ಡ ದೊಡ್ಡ ಉದ್ದಿಮೆದಾರರು ಶ್ಲಾಘಿಸಿದ್ದಾರೆ. ಅದರಲ್ಲಿ ಆಶ್ಚರ್ಯವೇನಿಲ್ಲ. ಆದರೆ, ಭಾರತವು ಜಪಾನಿಗಿಂತ ಹತ್ತು ಪಟ್ಟು ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಎಂಬ ಅಂಶವನ್ನು ಸಿಇಒ ಹೇಳದಿರುವುದು ಗಮನಾರ್ಹವಾಗಿದೆ. ಅವರ ಈ ವಿಜಯೋತ್ಸಾಹದ ಹೇಳಿಕೆಯು, ಸ್ವಲ್ಪ ಹಿಂದೆ ಮೋದಿ ಅವರು ಭಾರತವು ಶೀಘ್ರದಲ್ಲೇ $5 ಟ್ರಿಲಿಯನ್ ಜಿಡಿಪಿಯನ್ನು ಹೊಂದಲಿದೆ ಎಂಬ ಹೇಳಿಕೆಗೆ ಸಮನಾಗಿತ್ತು.

ದೇಶದ ಜಿಡಿಪಿಯ ಗಾತ್ರದ ಪ್ರಶ್ನೆಯ ಹೊರತಾಗಿಯೂ, ನಮ್ಮ ಜಿಡಿಪಿಯ ಗಾತ್ರವನ್ನು ಮುಂದುವರಿದ ಬಂಡವಾಳಶಾಹಿ ದೇಶಗಳ ಜಿಡಿಪಿಯೊಂದಿಗೆ ಹೋಲಿಸುವುದು ಅರ್ಥಹೀನವಾಗುತ್ತದೆ ಮಾತ್ರವಲ್ಲ, ಜಿಡಿಪಿಯ ಮೇಲೆಯೇ ಇಡೀ ಗಮನವನ್ನು ಕೇಂದ್ರೀಕರಿಸುವ ಕ್ರಮವು ಒಂದು ತಪ್ಪು ಕಣ್ಣೋಟವೂ ಆಗುತ್ತದೆ. ಇದು ಮಾಲ್ತುಸ್‌ವಾದದಲ್ಲಿ ನಂಬಿಕೆ ಇಟ್ಟಿದ್ದ ಹಳೆಯ ದೃಷ್ಟಿಕೋನಕ್ಕೆ ಮರಳುವುದು ಮಾತ್ರವಲ್ಲ, ಒಂದು ಪ್ರಜಾಪ್ರಭುತ್ವ ಸಮಾಜದೊಂದಿಗೆ ಹೊಂದಿಕೆಯಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ಸ್ಥಿತಿ-ಗತಿಗಳು ಮುಖ್ಯವಾಗುತ್ತವೆ. ಆದ್ದರಿಂದ, ಪ್ರಗತಿಯನ್ನು ಜನರ ಸ್ಥಿತಿ-ಗತಿಗಳು ಎಷ್ಟರ ಮಟ್ಟಿಗೆ ಸುಧಾರಿಸುತ್ತಿವೆ ಎಂಬುದರ ಆಧಾರದ ಮೇಲೆ ಅಳೆಯಬೇಕಾಗುತ್ತದೆ.

ಈ ದೃಷ್ಟಿಕೋನವು ನಮ್ಮ ವಸಾಹತುಶಾಹಿ ವಿರೋಧಿ ಹೋರಾಟದ ದೃಷ್ಟಿಕೋನದೊಂದಿಗೆ ಹೊಂದುವುದೇ ಇಲ್ಲ. ಜಿಡಿಪಿಯ ಹೋಲಿಕೆಯಲ್ಲಿ ಜಪಾನನ್ನು ಹಿಂದಿಕ್ಕಿರುವುದು ಒಂದು ಸಂಭ್ರಮದ ವಿಷಯವೆಂದು ಭಾವಿಸುವ “ರಾಷ್ಟ್ರ”ವು. ಅದನ್ನು ಜನರಿಗಿಂತ ಮೇಲಿನ ಸ್ಥಾನದಲ್ಲಿ ಇರಿಸುವ ಪರಿಕಲ್ಪನೆಯ “ರಾಷ್ಟ್ರ”ವಾಗುತ್ತದೆ. ಈ “ರಾಷ್ಟ್ರ”ದ ಈ “ಅದ್ಭುತ” ಸಾಧನೆಗೂ ಜನರ ಸ್ಥಿತಿ-ಗತಿಗಳಿಗೂ ಸಂಬಂಧವಿಲ್ಲ. ಸಾಮ್ರಾಜ್ಯಶಾಹಿ ಆಳ್ವಿಕೆಯಿಂದ “ರಾಷ್ಟ್ರ”ವು ಗಳಿಸಿದ ವಿಮೋಚನೆಯನ್ನು ಜನರ ವಿಮೋಚನೆಗೆ ಸಮಾನಾರ್ಥಕವೆಂದು ಕಂಡ ವಸಾಹತುಶಾಹಿ ವಿರೋಧಿ ಹೋರಾಟದ ಮನೋಭಾವಕ್ಕೆ ಇದು ಒಂದು ಅಪಚಾರವೇ ಸರಿ.

ಸ್ವಾತಂತ್ರ‍್ಯ ಬಂದ ಮುಕ್ಕಾಲು ಶತಮಾನದ ನಂತರವೂ ಜನರ ಪರಿಸ್ಥಿತಿ ಇನ್ನೂ ಶೋಚನೀಯವಾಗಿಯೇ ಉಳಿದಿದೆ. 2024ರ ಜಾಗತಿಕ ಹಸಿವು ಸೂಚಿಯಲ್ಲಿ ಭಾರತವು, ಯಾವ 127 ದೇಶಗಳಿಗಾಗಿ ಅದನ್ನು ಸಿದ್ಧಪಡಿಸಿಲಾಗಿದೆಯೋ, ಅದರಲ್ಲ್ಲಿ 105ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸಂಗತಿಯ ಬಗ್ಗೆ ನಾಚಿಕೆಪಡುವುದರ ಬದಲು, ಜಿಡಿಪಿಯ ಗಾತ್ರದ ಬಗ್ಗೆ ಕೇಕೆ ಹಾಕುವ ಸರ್ಕಾರವೊಂದನ್ನು ನಾವು ಹೊಂದಿದ್ದೇವೆ.

ನಾಲ್ಕನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾದ್ದಕ್ಕೆ

ಭಾರತಕ್ಕೆ ಉದ್ಯೋಗಹೀನ ಯುವಜನರ, ತಲ್ಲಣಿಸುತ್ತಿರುವ ರೈತರ,

ಸಾಲಗ್ರಸ್ತ ಮಧ್ಯಮವರ್ಗದವರ, ಹೆಣಗುತ್ತಿರುವ ಗೃಹಿಣಿಯರ,

ಆತಂಕಿತ ಶಾಲಾಮಕ್ಕಳ ಅಭಿನಂದನೆಗಳು

ವ್ಯಂಗ್ಯಚಿತ್ರ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್

 

ಇದನ್ನೂ ನೋಡಿ : ಅಭಿಮಾನಿಗಳ ಉನ್ಮಾದ, ಸರ್ಕಾರದ ಅತ್ಯುತ್ಸಾಹ ಮತ್ತು ಮಾರುಕಟ್ಟೆಯ ದಾಹ Janashakthi Media

 

Donate Janashakthi Media

Leave a Reply

Your email address will not be published. Required fields are marked *