ಪುತ್ತೂರನ ಟೌನ್ ಕೋ-ಅಪರೇಟೀವ್ ಬ್ಯಾಂಕ್‍ ನಲ್ಲಿ ಅವ್ಯವಹಾರ: ಪ್ರಶ್ನಿಸಿದಕ್ಕೆ ಹಲ್ಲೆ, ಗೂಂಡಾಗಿರಿ

ಪುತ್ತೂರು: ಪುತ್ತೂರನ ಟೌನ್ ಕೋ-ಅಪರೇಟೀವ್ ಬ್ಯಾಂಕ್‍ ಕಾರ್ಯಚಟುವಟಿಕೆಗಳಲ್ಲಿ ಅವ್ಯವಹಾರ ನಡೆದಿದ್ದು, ಬ್ಯಾಂಕ್‍ನ ಮಹಾಸಭೆಯಲ್ಲಿ ಇದನ್ನು ಪ್ರಶ್ನಿಸಿದ ಕಾರಣಕ್ಕಾಗಿ ಹಲ್ಲೆ, ಗೂಂಡಾಗಿರಿ ನಡೆಸಿ  ನಮ್ಮ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಸಲಾಗಿದೆ  ಎಂದು ಬ್ಯಾಂಕ್‍ನ ಸದಸ್ಯ, ಆರ್.ಟಿ.ಐ ಕಾರ್ಯಕರ್ತ ಸುದರ್ಶನ್ ಪುತ್ತೂರು ಆರೋಪಿಸಿದ್ದಾರೆ.

ಸುದರ್ಶನ್ ಅವರು ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ, 100 ವರ್ಷಕ್ಕೂ ಹಳೆಯದಾದ ಈ ಟೌನ್‍ ಬ್ಯಾಂಕ್ ಸಭಾಂಗಣ ವನ್ನು ಕಾರ್ಯಕ್ರಮಗಳಿಗೆ ಬಾಡಿಗೆ ನೀಡಲಾಗುತ್ತಿದೆ. ಆದರೆ ಇದರಿಂದ ಬರುವ ಹಣವನ್ನು ಬ್ಯಾಂಕಿನ ಆದಾಯದಲ್ಲಿ ತೋರಿಸುತ್ತಿಲ್ಲ. ಬೈಲಾ ತಿದ್ದುಪಡಿ ಮಾಡದೆ ಬ್ಯಾಂಕಿಗೆ ಸಿಇಒ ನೇಮಕ ಮಾಡಲಾಗುತ್ತಿದೆ. ಆಡಳಿತ ಮಂಡಳಿ ತಮಗೆ ಬೇಕಾದವರನ್ನು ಆಯ್ಕೆ ಮಾಡುವ ಮೂಲಕ ಸಹಕಾರ ನಿಯಮವನ್ನು ಗಾಳಿಗೆ ತೂರಿ ಲಕ್ಷಾಂತರ ರೂ ಸಂಬಳ ನೀಡಿ ನಿಯೋಜನೆ ಮಾಡಲಾಗುತ್ತದೆ. ಬ್ಯಾಂಕಿನ ಚುನಾವಣೆಯಲ್ಲಿ ಸಂಘ ಪರಿವಾರದವರು ಮಾತ್ರ ಸ್ಪರ್ಧಿಸುವಂತೆ ಹುನ್ನಾರ ನಡೆಸುತ್ತಿದ್ದಾರೆ ಎಂದರು.

ಇದನ್ನು ಓದಿ : ಬೆಳೆಗಳನ್ನು ಸಂಪೂರ್ಣ ನಾಶ ಮಾಡಿ ಎರಡು ಕಾಡಾನೆಗಳು; ರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ

ಬ್ಯಾಂಕಿನ ಸಿಬ್ಬಂದಿ ಆಯ್ಕೆಯಲ್ಲೂ ಕಾನೂನು ಮೀರಿ ಸಂಘಪರಿವಾರದವರನ್ನು ಮಾತ್ರ ನಿಯೋಜಿಸಿ ದ್ದಾರೆ. ಕೋಟ್ಯಾಂತರ ರೂ. ವ್ಯವಹಾರ ನಡೆಸುವ ಸಂಸ್ಥೆ ಈತನಕ ಒಂದೇ ಒಂದು ಶಾಖೆ ತೆರೆಯುವ ಕೆಲಸ ಮಾಡಿಲ್ಲ. ಸದಸ್ಯರಿಗೆ ಡಿವಿಡೆಂಟ್ ಏರಿಕೆ ಮಾಡುವುದಿಲ್ಲ. ಎಲ್ಲವನ್ನೂ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಕೆಲಸ ಆಡಳಿತ ಮಂಡಳಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಮಹಾಸಭೆಯಲ್ಲಿ ಈ ಅವ್ಯವಹಾರದ ಬಗ್ಗೆ ಪ್ರಶ್ನಿಸಿದಾಗ ನನ್ನ ಮೇಲೆ ಹಲ್ಲೆ ನಡೆಸಲು ಕೆಲವರು ಮುಂದಾಗಿದ್ದಾರೆ. ಈ ಸಂದರ್ಭ ವೇದಿಕೆಯಲ್ಲಿ ಕುಳಿತ ಆಡಳಿತ ಮಂಡಳಿಯವರು ಹೆಬ್ಬೆಟ್ಟು ತೋರಿಸಿ ಹಲ್ಲೆಗೆ ಕುಮ್ಮಕ್ಕು ಕೊಡುವ ಕೆಲಸ ಮಾಡಿದ್ದರು.

ಈ ಬಗ್ಗೆ ನಗರ ಠಾಣೆಯಲ್ಲಿ ದೂರು ಕೊಟ್ಟ ಬಳಿಕ ಮುಚ್ಚಳಿಕೆ ಬರೆದುಕೊಡುವ ಕೆಲಸ ಆಗಿದೆ. ಬ್ಯಾಂಕಿನ ಅವ್ಯವ ಹಾರದ ವಿರುದ್ಧ ಈತನಕ 8 ದೂರುಗಳನ್ನು ನೀಡಿದ್ದೇನೆ. ಈ ದೂರುಗಳ ವಿಚಾರಣೆ ಸೆ. 29ರಂದು ಜಿಲ್ಲಾ ಸಹಕಾರಿ ನಿಬಂಧಕರ ಮೂಲಕ ನಡೆಯಲಿದೆ. ಈ ಬ್ಯಾಂಕ್ ನಲ್ಲಿ ನಡೆಯುತ್ತಿರುವ ನಿಯಮ ಉಲ್ಲಂಘನೆ ಬಗ್ಗೆ ರಿಸರ್ವ್ ಬ್ಯಾಂಕಿಗೂ ದೂರು ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದರು.

ಇದನ್ನು ನೋಡಿ : ಸತ್ತವರ ಹೆಸರಲ್ಲಿ ಭೂಮಿ ಕಬಳಿಸಿದ ಕುಮಾರಸ್ವಾಮಿ, ಯಡಿಯೂರಪ್ಪ – ಕೃಷ್ಣ ಬೈರೇಗೌಡ ಆರೋಪ

Donate Janashakthi Media

Leave a Reply

Your email address will not be published. Required fields are marked *