ಕನ್ನಡದಲ್ಲಿ ಪರಿಸರ ಸಾಹಿತ್ಯ

 

ಪರಿಸರ ‘ಆಗಸದ ಬಾಗು, ಚಂದ್ರಮನ ಗುಂಡಿನ ನುಣ್ಣು
ಸಾಗರದ ತೆರೆವಂಕು, ಗಿಡಬಳ್ಳಿ ಬಳುಕು
ಮೇಘವರ್ಣಚ್ಛಾಯೆಯೀ ಸೃಷ್ಟಿಯಿಂ ನಮೊ-್ಮ
ಳಾಗಿಹುದು ರೂಪರುಚಿ ಮಂಕುತಿಮ್ಮ’
– ಅಹಮದ್ ಹಗರೆ

ಕನ್ನಡ ಸಾಹಿತ್ಯ ಭಾರತದಲ್ಲಿಯೇ ಹಿಂದಿಯ ನಂತರ ಅತಿಹೆಚ್ಚು ಜ್ಞಾನಪೀಠ ಪಡೆದ ಸಾಹಿತ್ಯದಂಗಳ, ಕನ್ನಡ ಸಾಹಿತ್ಯಲೋಕವನ್ನು ಕವಿರಾಜಮಾರ್ಗದಿಂದ ಹಿಡಿದು ಇಂದಿನವರೆಗೂ ಸುಮಾರು 1200ವರ್ಷಗಳಿಂದ ಪಕ್ವವಾಗಿ, ವೈವಿಧ್ಯವಾಗಿ, ಬಹುಮುಖಿಯಾಗಿ ಸೃಜನಶೀಲಗೊಂಡು ಸಮೃದ್ಧವಾಗಿಸಿದೆ. ಕನ್ನಡ ಸಾಹಿತ್ಯಕ್ಕೆ ಪಂಪನ ಕಾಲದಲ್ಲಿ ಸೌಹಾರ್ದ ಲಹರಿಯಾಗಿ ಛಂದೋಬದ್ಧಗೊಂಡು, ವಚನಚಳವಳಿ ಕಾಲದಲ್ಲಿ ಜನಭಾಷೆಯಾಗಿ ಹದಗೊಂಡು, ನವೋದಯದ ಕಾಲಘಟ್ಟದಲ್ಲಿ ಸ್ವಾಭಿಮಾನ-ಸ್ವಾತಂತ್ರ್ಯದ ಹೊಳೆಯಾಗಿ, ಚಳುವಳಿಯ ದನಿಯಾಗಿ ವಿಕಾಸಗೊಂಡು ಅರಳಿ ಕನ್ನಡ ಸಾರಸ್ವತಲೋಕವನ್ನು ಶ್ರೀಮಂತಗೊಳಿಸಿದೆ, ನಿಜ. ಆದರೆ ಈ ಕಾಲಘಟ್ಟದಲ್ಲೇ ನಿಧಾನವಾಗಿ ವಿಕಾಸಗೊಂಡು, ನವೋದಯ ಕಾಲದಲ್ಲಿ ಸ್ಫೊಟಿಸಿದ ವಿಜ್ಞಾನ ಜನರ ಬಳಿ ಬರದೆ ಬಂಡವಾಳಿಗರ ಪದತಳದಲ್ಲಿ ಕುಳಿತಾಗ ಇಂಗ್ಲೀಷ್ ಸಾಹಿತ್ಯ ಮಾತನಾಡಿದಷ್ಟು ಗಟ್ಟಿಯಾಗಿ ಕನ್ನಡ ಸಾಹಿತ್ಯ ಮಾತನಾಡಲಿಲ್ಲ. ಈಗ ನವಉದಾರವಾದಿ ಕಾಲದಲ್ಲಿ ಪರಿಸರ ತನ್ನ ಅಸ್ತಿತ್ವ ಕಳೆದುಕೊಳ್ಳುವ ಹಂತಕ್ಕೆ ಬಂದಿದೆ, ಭೂತಾಪಮಾನ ಹವಾಮಾನದ ವಿಪ್ಲವಕ್ಕೆ ಕಾರಣವಾಗಿದೆ, ವಿಜ್ಞಾನಿಗಳು ಪರಿಸರ ಸಮಸ್ಥಿತಿಗೆ ತರಲು ಭೂತಾಪಮಾನವನ್ನು ನಿರ್ಭಂದಿಸುವ ಎಚ್ಚರಿಕೆಯ ಕರೆಗಂಟೆಯನ್ನು ಕೊಟ್ಟಿದ್ದಾರೆ, 20ನೇ ಶತಮಾನದ ಶ್ರೇಷ್ಠ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಬುದ್ಧಿ ಕಲಿಯದಿದ್ದರೆ 100ವರ್ಷದೊಳಗೆ ಮಾನವ ಬೇರೆ ಗ್ರಹ ನೋಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ವಿಜ್ಞಾನಿಗಳ ಮಾತನ್ನು ಅಲಕ್ಷಿಸಿದ ಅಮೇರಿಕಾ ತಿಂಗಳಿಂದ ಕಾಡ್ಗಿಚ್ಚಿನ ದಳ್ಳುರಿಗೆ ಸಿಲುಕಿ ಅಪಾರಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದೆ.!
ರಿನೇಸಾನ್ಸಿಗೆ ಮುನ್ನುಡಿ ಬರೆದ ಸಾಹಿತ್ಯ, ಶರಣ ಚಳವಳಿಗೆ ಆಸರೆಯಾದ ಸಾಹಿತ್ಯ, ವಿಮೋಚನಾ ಹೋರಾಟಕ್ಕೆ ಹೆಗಲೆಣೆಯಾದ ಸಾಹಿತ್ಯ, ಈಗ ಹವಾಮಾನ ವಿಪ್ಲವದಲ್ಲಿ ನಲುಗುತ್ತಿರುವ ಮೂಕ ಪೃಥ್ವಿಗೆ ಮಾತು ನೀಡಬೇಕಿದೆ. ಪರಿಸರ

ಪರಿಸರ ಸಾಹಿತ್ಯ ಮತ್ತು ಪರಿಸರ ವಿಮರ್ಶೆಯ ಮೂಲ ಮತ್ತು ಅಭಿವೃದ್ಧಿ

ಪರಿಸರ’ ಎಂಬ ಪದವು ‘ಎನ್ವಿರಾನ್’ ಎಂಬ ಫ್ರೆಂಚ್ ಪದದಿಂದ ಹುಟ್ಟಿಕೊಂಡಿದೆ. ಅಂದರೆ ‘ಸುತ್ತುವರೆದಿರುವುದು’ ಎಂದು ಅರ್ಥ. ಈ ಶಬ್ಧ ಮೊದಲು ದಾಖಲೆಗೆ ಸಿಗುವುದು 1603ರಲ್ಲಿ, ಅದು ಆಕ್ಸ್ಫರ್ಡ್ ನಿಘಂಟಿನಲ್ಲಿ. ಅದರ ಪ್ರಕಾರ ಇಂಗ್ಲೀಷಿನ ಇಕಾಲಜಿ ಎಂಬ ಶಬ್ಧದಿಂದ ಬಂದದ್ದು, ಈ ಪದದ ನಿಜ ಮೂಲ ಗ್ರೀಕಿನ ‘ಐಕೋಸ್’. ಐಕೋಸ್ ಅಂದರೆ ‘ಮನೆ’ ಎಂದರ್ಥ ಹಾಗಾಗಿ ಪರಿಸರ ಎಂದರೆ ಮನೆಗೆ ಸಂಬಂದಿಸಿದ ವಿಷಯ. ಮನೆ ಎಂದ ಮೇಲೆ ಮನಸುಗಳು ಇರಬೇಕಲ್ಲ ಹಾಗಾಗಿ ಪರಿಸರ ಎಂದರೆ ಮನಸುಗಳೂ ಕೂಡ ಎಂದರ್ಥ ‘ಮನಸುಗಳ ಮಾತು ಮಧುರ’ ಅದು ಮಧುರ ಪರಿಸರದ ಲಾಲಿತ್ಯ ಹಾಗಾಗಿ ಸಮಸ್ತ ವಸ್ತುಗಳ ವ್ಯವಸ್ಥಿತ ಸಮ್ಮಿಳನವೇ ಪರಿಸರ. ಅದರ ಅಂತರಂಗದ ಸತ್ಯವನ್ನು ಸತ್ವಯುತವಾಗಿ ದಾಖಲಿಸುವುದೇ ಸಾಹಿತ್ಯ, ಪರಿಸರ ಸಾಹಿತ್ಯ. ಪರಿಸರ ಸಾಹಿತ್ಯದ ಪರಿಸರವನ್ನು ಮಾನವನ ಹಿತಾಸಕ್ತಿಗೆ ಒಗ್ಗಿಸಿಕೊಳ್ಳಲು ಮಾನವ ನಿಸರ್ಗದ ನಿಯಮವನ್ನು ಅರಿತು, ಹಿಡಿತ ಸಾಧಿಸಿದ; ತಾಂತ್ರಿಕತೆ ಕಲಿತ, ತಕ್ಷಣ ನಾಗರೀಕತೆ ವೇಗವಾಗಿ ಬೆಳೆಯಲಾರಂಬಿಸಿತು. ನಿಸರ್ಗದ ಬಳುವಳಿಯಾಗಿ ಕಾರು, ಬಂಗಲೆ ಎಲ್ಲಾ ಬಂತು, ಜೊತೆಗೆ ಹವಾಮಾನ ಸಂಕಟವೂ ತಂದಿತು.!

ಪರಿಸರ ವಿಜ್ಞಾನ (“ಪರಿಸರ-ಕಾಲ್ಪನಿಕ” ಅಥವಾ “ಪರಿಸರ ಕಾದಂಬರಿ”) ಎಂಬುದು ಸಾಹಿತ್ಯದ ಶಾಖೆಯಾಗಿ ಅದು ಶಾಸ್ತ್ರೀಯವಾಗಿ (ಕ್ಲಾಸಿಕ್), ಜಾನಪದೀಯವಾಗಿ (ಪ್ಯಾಸ್ಟೋರಲ್), ಕಾಲ್ಪನಿಕ ಸೃಜನಶೀಲವಾಗಿ (ಮ್ಯಾಜಿಕಲ್ ರಿಯಲಿಸಂ), ಜೀವಿಗಳ ರೂಪಾಂತರದ ಓದಾಗಿ (ಅನಿಮಲ್ ಮೆಟಾಮಾರ್ಫೋಸಸ್), ವೈಜ್ಞಾನಿಕ ಕಾಲ್ಪನಿಕ (ಸೈಂಟಿಫಿಕ್ ಫಿಕ್ಷನ್) ಮತ್ತು ಇತರ ಪ್ರಕಾರಗಳಲ್ಲಿ ವಿಲಿಯಂ ವರ್ಡ್ಸವರ್ತ್ ಕಾಲದಿಂದಲೂ ತಣ್ಣಗೆ ಬೆಳೆದು ಬರುತ್ತಿತ್ತು. ಆದರೆ ಪರಿಸರ ಮತ್ತು ಪರಿಸರದ ಸ್ಫೋಟಕ್ಕೆ ವೇದಿಕೆಯನ್ನು ಸೃಷ್ಟಿಸಿದ 1960 ರ ದಶಕದವರೆಗೆ ಪರಿಸರ ವಿಜ್ಞಾನ ಎಂಬ ಪದವು ಜನಪ್ರಿಯವಾಗಲಿಲ್ಲ.

ಅಮೇರಿಕದ ಲೇಖಕಿ, ಜೀವಶಾಸ್ತ್ರಜ್ಞೆ ಮತ್ತು ಪತ್ರಕರ್ತೆ ರ‍್ಯಾಕಲ್ ಕಾರ್ಸೆಲ್ 1962 ರಲ್ಲಿ “ಸೈಲೆಂಟ್ ಸ್ಟ್ರಿಂಗ್” ಎನ್ನುವ ಶಿರೋನಾಮೆಯಲ್ಲಿ ಒಂದು ಸರಣಿ ಲೇಖನವನ್ನ ಅಮೆರಿಕಾದ ಪತ್ರಿಕೆಯೊಂದರಲ್ಲಿ ಪ್ರಕಟಿಸುತ್ತಾಳೆ.(ನಂತರ ಅದು ಪುಸ್ತಕ ರೂಪದಲ್ಲಿ ಹೊರಬರುತ್ತೆ) ಇದರಲ್ಲಿ ಕೈಗಾರಿಕೀಕರಣ ಮತ್ತು ನಗರೀಕರಣದ ದುಷ್ಪರಿಣಾಮಗಳ ಅನುಭವದ ಹಿನ್ನೆಲೆಯಲ್ಲಿ ರಾಸಾಯನಿಕ ಕೀಟನಾಶಕಗಳು ಜೀವವೈವಿಧ್ಯತೆಯ ಮೇಲೆ ಬೀರುವ ಋಣಾತ್ಮಕ ಪರಿಣಾಮದ ಬಗ್ಗೆ ದಾಖಲೆಗಳನ್ನಿಟ್ಟು ಮನಮುಟ್ಟುವಂತೆ ಬರೆಯುತ್ತಾಳೆ. ಈ ಲೇಖನ ಅಮೇರಿಕಾದ ಬೀದಿಬೀದಿಯಲ್ಲಿ ಚರ್ಚೆ ಹುಟ್ಟಿಹಾಕುತ್ತೆ. [ಯೂರೋಪು ಮತ್ತು ಅಮೇರಿಕ ಬಹಳ ವಿಶೆಷವಾದ ದೇಶಗಳು ಅಲ್ಲಿ ಏನೆ ಹೊಸದು ಮೂಡಿದರೆ ಅದು ಬೀದಿ ಚರ್ಚೆಯಾಗುತ್ತದೆ, ಹೊಟೆಲ್ಲುಗಳಲ್ಲಿ, ಮರದ ನೆರಳಿನಲ್ಲಿ, ಶಾಲೆಯ ಸಭಾಂಗಣದಲ್ಲಿ, ಬಸ್ಸುಗಳಲ್ಲಿ ಪರ-ವಿರೋಧದ ಚರ್ಚೆಗಳ ಮೇಲೆ ಚರ್ಚೆಗಳು ನಡೆಯುತ್ತವೆ, ಅದಕ್ಕಾಗೆ ಅಲ್ಲಿ ವಿಜ್ಞಾನ ಬೆಳದದ್ದು]. ಇದು ಪರಿಸರವಾದ ಹುಟ್ಟಲಿಕ್ಕೆ ಪ್ರೇರೇಪಿಸಿತು. ಇಕೋಕ್ರಿಟಿಸಿಸಮ್ ಎನ್ನುವ ಸಾಹಿತ್ಯ ಮತ್ತು ಪರಿಸರದ ಒಂದು ಅಂತರಶಾಸ್ತ್ರೀಯ ದೃಷ್ಟಿಕೋನದಿಂದ ಅಧ್ಯಯನ ಮಾಡುವ ಒಂದು ಶಾಖೆಯನ್ನೇ ಹುಟ್ಟಿಹಾಕುತ್ತೆ. ಬಹಳಷ್ಟು ಇಂಗ್ಲೀಷ್ ಸಾಹಿತಿಗಳು ತಮ್ಮ ವಿಷಯವಸ್ತುವನ್ನು ಇತ್ತಕಡೆ ತಿರುಗಿಸುತ್ತಾರೆ.

ಈ ಲೇಖನ ಹುಟ್ಟುಹಾಕಿದ ಚರ್ಚೆಯ ಭಾಗÀವಾಗಿ 1972ರಲ್ಲಿ ಸ್ಟಾಕ್ ಹೋಂನಲ್ಲಿ ನಡೆದ ‘ಮಾನವ ಪರಿಸರ’ದ ಪ್ರಪ್ರಥಮ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ, ಪರಿಸರ ಸಮಸ್ಯೆಗಳನ್ನು ಬಗೆಹರಿಸಬೇಕಾದಲ್ಲಿ ಮೊಟ್ಟಮೊದಲಿಗೆ ಸಮಸ್ಯೆಯ ಸ್ಪಷ್ಟ ಪರಿಚಯವಿರಬೇಕು. ಅದು ನಮ್ಮ ದಿನನಿತ್ಯದ ಜೀವನದ ಮೇಲೆ ಬೀರುವ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬೇಕು. ಎಂತಹ ಕ್ರಮಗಳಿಂದ ಸಮಸ್ಯೆಯನ್ನು ತಡೆಗಟ್ಟಿ ಪರಿಹರಿಸಬಹುದೆಂಬುದನ್ನು ತಿಳಿದುಕೊಳ್ಳಬೇಕು ಎನ್ನುವ ಮಹತ್ತರ ಕಲ್ಪನೆಯಲ್ಲಿ ಪರಿಸರ ಶಿಕ್ಷಣದ ಕಲ್ಪನೆ ಮೊದಲು ಮೂಡಿಬಂತು. ಪರಿಸರ ಶಿಕ್ಷಣ ಮೂಲಭೂತವಾಗಿ ಪರಿಸರದ ವಿವಿಧ ಘಟಕಗಳ ಮಹತ್ವವನ್ನು ತಿಳಿಸಿ, ಸಮಸ್ಯೆಯನ್ನು ಪರಿಚಯ ಮಾಡಿಕೊಟ್ಟು, ಪರಿಣಾಮಗಳನ್ನು ಎತ್ತಿತೋರಿಸಿ, ಪರಿಹಾರದ ಮಾರ್ಗಗಳನ್ನು ಸೂಚಿಸುತ್ತದೆ. ಇದಕ್ಕೆ ಪೂರಕವಾಗಿ ಪರಿಸರಪರಿಣಾಮ ಸಾಹಿತ್ಯ ಹುಟ್ಟಿಕೊಳ್ಳಲು ಪ್ರೇರಣೆ ನೀಡುತ್ತದೆ.

ಪರಿಸರದ ರಾಯಭಾರಿಯಾಗಿ ಭಾರತ ಮತ್ತು ಕನ್ನಡ ಸಾಹಿತ್ಯ

ಭಾರತೀಯ ಇತಿಹಾಸಕಾರ, ಪರಿಸರವಾದಿ, ಬರಹಗಾರ ಮತ್ತು ಬುದ್ಧಿಜೀವಿ ರಾಮಚಂದ್ರ ಗುಹಾ ಮಹಾತ್ಮಾಗಾಂಧಿಯನ್ನು ಭಾರತದ ಆರಂಭಿಕ ಪರಿಸರವಾದಿ ಎಂದು ಪರಿಗಣಿಸಿತ್ತಾರೆ. ಅವರ ಪ್ರಸಿದ್ಧ “ಜಾಗತಿಕ ಇತಿಹಾಸ” ಪುಸ್ತಕವು ವಿಶ್ವಾದ್ಯಂತ ಪರಿಸರ ಚಳುವಳಿಯೊಳಗಿನ ಪ್ರಮುಖ ಪ್ರವೃತ್ತಿಗಳು, ಕಲ್ಪನೆಗಳು, ಅಭಿಯಾನಗಳು ಮತ್ತು ಚಿಂತಕರ ಬಗ್ಗೆ ಸಮಗ್ರ ವಿವರಣೆಯನ್ನು ನೀಡುತ್ತದೆ. ರಾಮಚಂದ್ರ ಗುಹಾ ಮತ್ತು ಜೋನ್ ಮಾರ್ಟಿನೆಜ್ ಅಲಿಯರ್ ಬರೆದ “ಉತ್ತರ ಮತ್ತು ದಕ್ಷಿಣ” ಅನ್ನುವ ಪ್ರಬಂಧವು ನಾಲ್ಕು ಖಂಡಗಳಲ್ಲಿನ ಪರಿಸರ ಸಂಘರ್ಷಗಳು ಮತ್ತು ಸಿದ್ಧಾಂತಗಳ ವಿಶ್ಲೇಷಣೆಯನ್ನು ಪ್ರಸ್ತುತ ಪಡಿಸುತ್ತದೆ: ನಮ್ಮ ಪ್ರತಿಯೊಂದು ನದಿಗಳು ಜೈವಿಕವಾಗಿ ಸತ್ತಿವೆ” ಎಂದು ರಾಮಚಂದ್ರ ಗುಹಾ ಹೇಳುತ್ತಾರೆ. ನಮ್ಮ ಸ್ವಂತ ಒಳಿತಿಗಾಗಿ ನಮ್ಮ ಪರಿಸರದ ಮೇಲೆ ಮತ್ತಷ್ಟು ಹಾನಿಯನ್ನುಂಟುಮಾಡುವುದನ್ನು ನಿಲ್ಲಿಸಲು ಮಾನವಕುಲವನ್ನು ಒತ್ತಾಯಿಸುವ ಒಂದು ಕಳಕಳಿಯಿದೆ ಸಾಹಿತ್ಯ ಇದರ ಮುಂಚೂಣಿಯಲ್ಲಿರಬೇಕು ಎನ್ನುತ್ತಾರೆ.

ಸಾಹಿತ್ಯ ಮತ್ತು ಭೌತಿಕ ಪರಿಸರದ ನಡುವಿನ ಸಂಬAಧದ ಅಧ್ಯಯನವಾಗಿ ಚೆರಿಲ್ ಗ್ಲೋಟ್‌ಫೆಲ್ಟಿಯವರ ಪರಿಸರ-ವಿಮರ್ಶೆ (ದಿ ಇಕೋ-ಕ್ರಿಟಿಸಿಸಂ ರೀಡರ್) ಮತ್ತು ಸಾಹಿತ್ಯದಲ್ಲಿ ಒಂದು ಚಳುವಳಿಯಾಗಿ ರಾಚೆಲ್ ಕಾರ್ಸನ್ ಅವರ ಸೈಲೆಂಟ್ ವ್ಯಾಲಿ ಜಾಗತಿಕ ಪರಿಸರಸೃಜನಾತ್ಮಕ ಸಾಹಿತ್ಯದ ಸಂವರ್ಧನೆಗೆ ಅಡಿಗಲ್ಲಾಗಿದೆ.

ಭಾರತೀಯ ಇಂಗ್ಲಿಷ್ ಬರಹಗಾರರಲ್ಲಿ ಒಬ್ಬರಾದ ರಸ್ಕಿನ್ ಬಾಂಡ್(1934-), ಪ್ರಕೃತಿಗೆ ಬಹಳ ಹತ್ತಿರದಲ್ಲಿ ಬದುಕುವವರು ಧನ್ಯರು ಎಂದು ನಂಬುತ್ತಾರೆ; ಪ್ರಕೃತಿ ಅವರ ಬರಹಗಳ ಆತ್ಮ. ವರ್ಡ್ಸ್ವರ್ತ್ನಂತೆ, ಅವರು ಪ್ರಕೃತಿಯಲ್ಲಿರುವ ಸಣ್ಣ ವಿಷಯಗಳಲ್ಲಿ ಮೋಡಿಮಾಡುವಿಕೆಯನ್ನು ಬರೆಯುತ್ತಾರೆ. ಅವರ ಸಣ್ಣ ಕಥೆಗಳಾದ ದಿ ಚೆರ್ರಿ ಟ್ರೀ, ಮೈ ಸ್ಟೋರೀಸ್ ಸ್ಟಿಲ್ ಗ್ರೋ ಇನ್ ಡೆಹ್ರಾ, ಟೈಮ್ ಸ್ಟಾಪ್ಸ್ ಅಟ್ ಶಾಮ್ಲಿ, ದಿ ವಿಂಡೋ, ಡಸ್ಟ್ ಆನ್ ದಿ ಮೌಂಟೇನ್; ಮನುಷ್ಯ ಮತ್ತು ಪ್ರಕೃತಿಯ ನಡುವಿನ ಆಳವಾದ ಬಂಧದ ಮಹತ್ವವನ್ನು ಚಿತ್ರಿಸುತ್ತದೆ.

ಭಾರತೀಯ ಲೇಖಕಿ ಅರುಂಧತಿ ರಾಯ್ ನವಅಭಿವೃದ್ಧಿಯು ಉಂಟುಮಾಡುವ ಪರಿಸರ ಬಿಕ್ಕಟ್ಟಿನಿಂದ ಜನರು ಎದುರಿಸುತ್ತಿರುವ ಸವಾಲುಗಳನ್ನು ತಮ್ಮ ಬರಹಗಳಲ್ಲಿ ಗಟ್ಟಿಯಾಗಿ ದಾಖಲಿಸುತ್ತಾರೆ. ಅವರ ಬುಕರ್ ಪ್ರಶಸ್ತಿ ವಿಜೇತ ಕಾದಂಬರಿ “ಗಾಡ್ಸ್ ಆಫ್ ಸ್ಮಾಲ್ ಥಿಂಗ್ಸ್”ನಲ್ಲಿ, ಭಾರತೀಯ ಸಮಾಜದಲ್ಲಿ ಸಣ್ಣ ಸಣ್ಣ ವಿಷಯಗಳನ್ನು ನಿರ್ಲಕ್ಷಿಸಲಾಗಿರುವುದರಿಂದ ಅವು ಉಂಟುಮಾಡುವ ಪರಿಸರ ಸಮಸ್ಯೆಗಳನ್ನು ಬೊಟ್ಟುಮಾಡಿ ತೋರಿಸುತ್ತಾರೆ. ಯುಗಯುಗಗಳಿಂದ ನಮ್ಮ ಪರಿಸರವು ಅಪರಿಮಿತ ವಿನಾಶವನ್ನು ಅನುಭವಿಸುತ್ತಿದೆ ಎಂದು ಅವÀರು ವಿಷಾದಿಸುತ್ತಾರೆ,

ಕನ್ನಡ ಸಾಹಿತ್ಯದಲ್ಲಿ ಪರಿಸರದ ಒಳನೋಟ-ಮತ್ತು ಹೊರನೋಟ

ಇದೆಲ್ಲಾ ಜಾಗತಿಕ ಪರಿಸರ, ಪರಿಸರ ಶಿಕ್ಷಣ, ಪರಿಸರ ಚಳುವಳಿ ಮತ್ತು ಸೃಜನಶೀಲ ಪರಿಸರ ಸಾಹಿತ್ಯದ ಕೆಲಸವಾಯಿತು. 1200ವರ್ಷದ ಇತಿಹಾಸದಿಂದ ಕನ್ನಡ ಸಾಹಿತ್ಯ ಪ್ರಕೃತಿ ಮತ್ತು ಪರಿಸರದ ಕುರಿತು ಏನೇನು ಮಾತಾಡಿದೆ ಎಂದು ಸಂಕ್ಷಿಪ್ತವಾಗಿ ನೋಡೋಣ.

ರಾಮಚಂದ್ರಗುಹ ಹಾಗೂ ಅರುಂದತಿ ರಾಯ್ ಅವರ ಪರಿಸರಸಾಹಿತ್ಯದ ಪಖರ ಕೆಲಸಗಳ ಕೃತಿಗಳು ಕನ್ನಡದಲ್ಲಿಯೂ ತರ್ಜುಮೆಗೊಂಡು ಕನ್ನಡ ಸಾಹಿತ್ಯಲೋಕಕ್ಕೆ ಹಸಿರುಸಾಹಿತ್ಯದ ಜಾಗತುಂಬಿಕೊಳ್ಳುತ್ತದೆ.

ವೇದೋಪನಿಷತ್ತು ಕಾಲದ ಕವಿಗಳು ಪರಿಸರದ ನಡುಗರ್ಭದಲ್ಲೇ ಕುಳಿತು ಕಾವ್ಯಗಳನ್ನು, ಮಹಾಕಾವ್ಯಗಳನ್ನು ರಚಿಸಿದರು, ಮೂಲಭೂತವಾಗಿ ರಾಮಾಯಣ ವಿಕಾಸವಾದದ ನೆಲೆಯಿಂದ ಬೋರ್ಗರೆವ ದಟ್ಟವಾದ ಕಾಡನ್ನು ಕೃಷಿಯೋಗ್ಯ ಮಾನವ ಭೂಮಿಯನ್ನಾಗಿ ಪರಿವರ್ತಿಸಿದ ಯಶೋಗಾಥೆ; ರಾಮಾಯಣದ ಸೀತೆ, ರಾಮ, ಹನುಮಂತÀ, ಶಬರಿ, ರಾವಣ, ವಾಲಿ-ಸುಗ್ರೀವರ ಪಾತ್ರಗಳು ಈ ವಿಕಾಸ ಸಂಕಥನದ ಸಂಕೇತಗಳು. ಮತ್ತು ಮಹಾಭಾರತ ಪರಿಸರದ ಮೇಲೆ ದಾಳಿಮಾಡುತ್ತಾ ಗಣ ಸಂಸ್ಕೃತಿಗಳು ಜನಪದಗಳಾಗಿ, ಮಹಾಜನಪದಗಳಾಗಿ ನಗರೀಕರಣಗೊಳ್ಳುವ ಪ್ರಕ್ರಿಯೆ. ಇಲ್ಲಿ ಪರಿಸರ ಒಂದು ತಪೋವನ.

ಹಳೆಗನ್ನಡದ ಕವಿಗಳು ಪರಿಸರ ಅಥವ ಪ್ರಕೃತಿಯನ್ನು ಸೌಂಧರ್ಯದ ವಸ್ತುವಾಗಿ, ರಮಣೀಯ ಅದ್ಭುತವಾಗಿ ನೋಡಿದರು ಮತ್ತದು ಅವರ ಕಾಲಕ್ಕೆ ಸಿರಿಸಂಪನ್ನ ದೈವೀ ಪ್ರಭೆಯಾಗಿತ್ತು, ಬದುಕಿನ ಅಗತ್ಯ ಪೂರೈಸಿಕೊಡುವ ಉಗ್ರ ಭಂಢಾರವಾಗಿತ್ತು, ಅದು ಅವರಿಗೆ ಮಾಯಾಲೋಕವಾಗಿತ್ತು, ಪೊಗದಸ್ತಾಗಿ ಹಸಿರು ಎತ್ತೆತ್ತಲೂ ಕಾಣಸಿಗುತ್ತಿತ್ತು, ಈಗ ನಾವೆದುರುಗೊಳ್ಳುತ್ತಿರುವ ಭೂಗೋಳ ವಿಪ್ಲವದ ಲವಲೇಶವೂ ಅವರಿಗೆ ಕಾಣಲು ಸಾಧ್ಯವೇ ಇರಲಿಲ್ಲ! ಹಾಗಾಗಿ ಪ್ರಕೃತಿ ಜೀವಪರಿಸರದ ಕೇಂದ್ರ ವಸ್ತುವಾಗಿತ್ತು. ಈ ನೆಲೆಯಲ್ಲೇ ತಮ್ಮ ಕಾವ್ಯದೊಳಗೆ ಸೌಂರ‍್ಯದ ವಸ್ತುವಾಗಿ ಢಾಳಾಗಿ ಬಳಕೆಯಾಗುತ್ತಿತ್ತು ಉದಾಹರಣೆಗೆ ಸೂರ್ಯೋದಯ ದೃಶ್ಯಕ್ಕಿಂತ ಅದರ ಪರಿಣಾಮವನ್ನು, ಕುಮುದ ಮುಚ್ಚಿತು, ಕಮಲ ಅರಳಿತು, ಚಕ್ರವಾಕಗಳು ಸೇರಿದುವು, ಚಿಕೋರ ಕೊರಗಿತು, ತಾರೆ ಮಸುಳಿದವು ಇತ್ಯಾದಿ ಕವಿಸಮಯ ನಿರ್ಮಿತವಾದ ಸಂಕೇತಗಳಿಂದ ಬಣ್ಣಿಸುವುದು ಅವರ ಪದ್ಧತಿ. (ಜಿ.ಎಸ್.ಎಸ್-ಸೌಂಧರ್ಯ ಸಮೀಕ್ಷೆ)

ಪಂಪನನ್ನು ಕುವೆಂಪು ರೀತಿ ಪ್ರಾಚೀನಕಾಲದ ಪ್ರಕೃತಿ ಕವಿ ಅಂತಲೂ ಕರೆಯುತ್ತಾರೆ ಅವನ ಕಾವ್ಯಲೋಕದ ಕಣ್ಣು ಪ್ರತಿಯೊಂದು ನಿಸರ್ಗಋತುವಿನ, ಕಾಡಿನ ಸೌಂದರ್ಯದ ಪದರ ಪದರಗಳನ್ನೂ ಬಲ್ಲುದು. ವಿಕ್ರಮಾರ್ಜುನ ವಿಜಯದಲ್ಲಿ ನಿಸರ್ಗವರ್ಣನೆ ಶ್ರೀಮಂತವಾಗಿದೆ: “ಮಳೆಯ ಮೋಡ ಕಟ್ಟಿದಾಗ, ದಿಕ್ಕೆಲ್ಲವೂ ಹಸುರಾಗಿ ಪಚ್ಚೆಯಲಿ ಮುಚ್ಚಿಮುಸುಕಿದಂತಾಯಿತು”. ಮಾನವನ ಸಮಸ್ತ ಅಹಂಕಾರವನ್ನೂ ಪ್ರಕೃತಿಯ ರುದ್ರ ಸೌಂದರ್ಯ ಅರೆದು ಅಪ್ಪಳಿಸುತ್ತದೆ ಎಂದು ಪರಿಭಾವಿಸುತ್ತಾನೆ, “ಮರದಡಿಯ ನೆರಳೂ ಸಹ ಪಂಪನಿಗೆ

“ಬೇಸಗೆಯಲ್ಲಿ ಕರಿಯ ಬಿಸಿಲ್! ಕಾಡಿನಲ್ಲಿ ಉರಿಯ ಬಿಸಿಲ್,
ಗಿರಿತಟದಲ್ಲಿ ಅಚ್ಚರಿಯ ಬಿಸಿಲ್, ಬಟ್ಟಬಯಲಲ್ಲಿ ಪಿರಿಯ ಬಿಸಿಲ್,”

ಮುಂಗಾರಿನ ತಾಂಡವಾಡಂಬರವನ್ನು ಅದರ ರುದ್ರ ಮಾಧುರವನ್ನು ಪಂಪ, ರುದ್ರಭಟ್ಟ, ನಾಗಚಂದ್ರ, ಹರಿಹರ ತಮ್ಮ ಕವನಗಳ ಮೂಲಕ ಸೊಗಸಾಗಿ ಚಿತ್ರಿಸಿದ್ದಾರೆ.
ಹಾಗೆಯೇ ಲಕ್ಷ್ಮೀಶ ಕವಿಯ ಜೈಮಿನಿ ಭಾರತದಲ್ಲಿ ಪ್ರಕೃತಿವರ್ಣನೆ ಢಾಳಾಗಿವೆ “ಓಡಿದುವು ಪಕ್ಷಿಗಳು ಗೂಡಿಂಗೆ, ದೆಸೆದೆಸೆಗಳಂ ನೋಡಿದುವು ಫೂಕಂಗಳ್”.
ಲಕ್ಷ್ಮೀಶ ರಾಘವಾಂಕರಿಬ್ಬರೂ ಕಾಡಿನ ಪರಿಚಯ ಮತ್ತು ಬೇಟೆಯ ವಿವರಗಳನ್ನು ಪರಿಚಯಿಸುವಾಗ ಕಾಡಿನ ಜೀವಜಂತುಗಳ ವರ್ಣನೆಜೊತೆಗೆ ಮಾನವ ಶ್ರಮವನ್ನೂ ಚಿತ್ರಿಸಿರುವುದು ಗಮನಾರ್ಹವಾದ ಸಂಗತಿಯಾಗಿದೆ. ಎಂದು ಜಿ.ಎಸ್.ಎಸ್ ಹೇಳುತ್ತಾರೆ.

ಒಟ್ಟಾರೆ ಪ್ರಾಚೀನ ಕವಿಗಳು ಪುರಾಣದ ವಸ್ತುವಿಷಯದ ಕೇಂದ್ರದಲ್ಲಿದ್ದಂತ ನಿಸರ್ಗ ತತ್ವದಡಿಯಲ್ಲೇ ತಮ್ಮ ಕವನ ರಚನೆ ಮಾಡುತ್ತಿದ್ದರು, ನಿಸರ್ಗ ಅವರ ಪುರಾಣದ ವಸ್ತುವಿನ ಕಾವ್ಯಸೃಷ್ಠಿಯ ಸೃಜನಶೀಲ ಆಕರಗಳಾಗಿತ್ತು ಅಷ್ಟೆ.

12ನೇ ಶತಮಾನದ ವಚನ ಸಾಹಿತ್ಯ, ಶರಣ ಚಳುವಳಿಯ ಉಪಸೃಷ್ಠಿ ಇಡಿ ಚಳುವಳಿಯೇ ನಿಸರ್ಗದಿಂದ ಬೇರ್ಪಡಿಸಿದ ದುಡಿವಮಾನವನನ್ನು ಪುನಃ ನಿಸರ್ಗದ ಜೊತೆಗೂಡಿಸಿದ ಉಪಕ್ರಮ.
“ಭೂಮಿ ನಷ್ಟವಾದರೆ ಜಲಕ್ಕಿಂಬಿಲ್ಲ, ಜಲ ನಷ್ಟವಾದರೆ ಇಂದ್ರಿಯಕ್ಕಿಂಬಿಲ್ಲ, ಇಂದ್ರಿಯ ನಷ್ಟವಾದರೆ ಜಂಗಮಕ್ಕಿಂಬಿಲ್ಲ ಇದು ಕಾರಣ, ಕರಣಾದಿಗಳಂ ಬಿಡದೆ ಅನುವ್ರತಿಯೆಂಬವರ ತೋರಯ್ಯಾ ಕೂಡಲಚೆನ್ನಸಂಗಮದೇವಾ”.- ಭೂಮಿ ನಷ್ಟವಾದರೆ ನೀರಿಗೆ ಆಶ್ರಯವಿಲ್ಲ. ನೀರಿಲ್ಲದಿದ್ದರೆ ಬದುಕುವುದಾದ್ರೂ ಹೇಗೆ ಎನ್ನುವ ಪ್ರಶ್ನೆಯನ್ನು ಎತ್ತಿ ಭೂಮಿಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಈ ವಚನದ ಮೂಲಕ ಚನ್ನಬಸವಣ್ಣ ತಿಳಿಸಿದ್ದಾನೆ.

ಬಸವಾದಿ ಪ್ರಮಥರೆಲ್ಲಾ ನಿಸರ್ಗ-ಹಸಿವು-ಅಸಮಾನತೆ ಸಮ್ಮೇಳಿಸಿಯೇ ವಚನ ಸೃಷ್ಠಿ ಮಾಡಿರುವುದು “ಒಲೆ ಹೊತ್ತಿ ಉರಿದೆಡೆ ನಿಲಬಹುದಲ್ಲದೆ ಧರೆ ಹೊತ್ತಿ ಉರಿದೆಡೆ ನಿಲಲುಬಾರದು”, “ಮರ ಗಿಡ ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ ಇನ್ನಾವುದು ವಿದ್ಧಿಯಯ್ಯಾ?” “ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಜೀವಜಾಲದಲ್ಲಿದೆ ಚರಾಚರವೆಲ್ಲ” ಇವೆಲ್ಲಾ ಪ್ರಕೃತಿಯೊಂದಿಗೆ ತಮ್ಮನ್ನು ತಾವು ಗುರುತಿಸಿಕೊಂಡು ಪ್ರಕೃತಿಯ ಜೊತೆಗೆ ಸಹಬಾಳ್ವೆ ನಡೆಸಿದವರು ಬಸವಾದಿ ಶರಣರು. ಅಕ್ಕಮಹಾದೇವಿ ಜೀವರಾಶಿಗಳು ಪ್ರಕೃತಿಯಲ್ಲಿ ಕಂಡು ಬರುವ ಜೈವಿಕ ಮತ್ತು ಅಜೈವಿಕ ವಸ್ತುಗಳಪ್ರಕ್ರಿಯ ಎಂದು ಪರಿಭಾವಿಸಿದ್ದಳು. “ವನವೆಲ್ಲಾ ನೀನೆ, ವನದೊಳಗಣ ದೇವತರುವೆಲ್ಲಾ ನೀನೆ, ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ. ಚೆನ್ನಮಲ್ಲಿಕಾರ್ಜುನಾ, ಸರ್ವಭರಿತನಾಗಿ ಎನಗೇಕೆ ಮುಖದೋರೆ?”-

20ನೇ ಶತಮಾನದ ಉತ್ತರಾರ್ಧದಲ್ಲಿ ಪಶ್ಚಿಮದಿಕ್ಕಿನಿಂದ ಬೀಸಿದ ನವೋದಯದ ಗಾಳಿ ನಮ್ಮ ಸಾಹಿತ್ಯದ ಮಹಾರಣ್ಯದಲ್ಲಿ ನವ ವಸಂತೋದಯಕ್ಕೆ ಕಾರಣವಾಯಿತು. ಹೊಸ ಆಲೋಚನೆ, ಹೊಸ ಶೈಲಿ, ಹೊಸಜನಭಾಷೆ, ಹೊಸವಸ್ತುಗಳು ತೆರೆತೆರೆಯಾಗಿ ಚಿಮ್ಮಿ ಕಾವ್ಯದಾವರಣವನ್ನು ನವೋಲ್ಲಾಸದಿಂದ ತುಂಬಿದುವು. ನವೋದಯದ ಪರಿಣಾಮವಾಗಿ ಕವಿಮನೋಧರ್ಮದಲ್ಲಿ ವಸ್ತುನಿಷ್ಠವಾದ ಮಹಾಕಾವ್ಯ ಪದ್ಧತಿಯಿಂದ ವ್ಯಕ್ತಿನಿಷ್ಠವಾದ ಭಾವಗೀತೆಯ ಪದ್ಧತಿಗೆ ಬದಲಾಯಿತು. ಆ ಭಾವಗೀತೆಗೆ ಪ್ರಕೃತಿ ಬಹುದೊಡ್ಡ ಆಕರವಾಯಿತು. ಪ್ರಕೃತಿಯ ಜೊತೆ ಬದುಕಿದ ಮನುಷ್ಯನೂ ಕೂಡ ವಸ್ತುವಾದ ಪ್ರಕೃತಿ ಸೌಂಧರ್ಯದ ಜೊತೆ, ಬದುಕು-ಬವಣೆ-ಹಸಿವುಕೂಡ, ಸ್ವಾತಂತ್ರ್ಯದ ಬಿಡುಗಡೆಯೂ ಕೂಡ.

ಇದನ್ನೂ ಓದಿ : ಹದ್ದು ಎಂಬ ವಿಸ್ಮಯದ ಪಕ್ಷಿ ! ಪರಿಸರ

ಜಿ.ಎಸ್.ಎಸ್ ವಿವರಿಸುವ ಹಾಗೆ ನವೋದಯದ ಕಾಲದಲ್ಲಿ ಪ್ರಾಕೃತಿಕ ಪರಿಸರ ಎರೆಡು ರೂಪಗಳಲ್ಲಿ ಚಿತ್ರಿತವಾಗಿದೆ. ಒಂದು ಕವಿಯೇ ಪ್ರಕೃತಿಯ ಕೇಂದ್ರವಾಗಿ ಅಥವ ಪರವಶನಾಗಿ ಅದರ ಬಹಿರಂಗದ ಚೆಲುವನ್ನು ಚಿತ್ರಿಸುವುದು ಒಂದಾದರೆ ಇನ್ನೊಂದು ಪ್ರಕೃತಿಯ ವಸ್ತುಗಳು ತನ್ನೊಳಗೆ ಉಂಟುಮಾಡುವ ಪರಿಣಾಮಗಳನ್ನು ಚಿಂತನಾಕ್ರಮದಲ್ಲಿ ಚಿತ್ರಿಸುವುದು. ಕುವೆಂಪು ಮೊದಲ ರೂಪದ ಕವಿಯಾದರೆ ಬೇಂದ್ರೆ, ಪುತಿನಾ, ಜಿ.ಎಸ್.ಎಸ್, ನಿಸರ್ ಅಹಮದ್ ಎರಡನೆ ಮಾದರಿಯ ಕವಿಗಳು ಒಟ್ಟಿನಲ್ಲಿ ಈ ಎಲ್ಲಾ ಕವಿಗಳು ಪಕೃತಿ ಕೇಂದ್ರಿತ ಕವಿಗಳು ಎಂದು ಗುರುತಿಸಬಹುದು.

ಬೇಂದ್ರೆ: “ಗಿಡಗಂಟೆಗಳಾ ಕೊರಳೊಳಗಿಂದ ಹಕ್ಕಿಗಳ ಹಾಡು
ಹೊರಟಿತು ಹಕ್ಕಿಗಳ ಹಾಡು
ಗಂಧರ್ವರ ಸೀಮೆಯಾಯಿತು
ಕಾಡಿನಾ ನಾಡು ಕ್ಷಣದೊಳು ಕಾಡಿನಾ ನಾಡು!’”

ಕುವೆಂಪು: “ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ.
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ”

 

ನವೋದಯದ ನಂತರ ನವ್ಯ, ಪ್ರಗತಿಶೀಲ, ಬಂಡಾಯ, ಪ್ರಕೃತಿ ಹೀಗೆ ಬಹು ವೈವಿಧ್ಯದ ಕವಲುಗಳಾಗಿ ಕನ್ನಡ ಸಾಹಿತ್ಯ ಟಿಸಿಲೊಡೆದುಕೊಂಡಾಗ ಕನ್ನಡ ಸಾಹಿತ್ಯದ ಸೃಜನಶೀಲತೆಯೂ ವಿಸ್ತಾರವಾಗಿ ಬೆಳೆಯುತ್ತದೆ. ನವೋದಯದ ಕಾಲದಲ್ಲಿ ಸಾಹಿತ್ಯಕಟ್ಟಿದ ಕುವೆಂಪು ನಿಸರ್ಗಗರ್ಭದಿಂದ ಉದಯಿಸಿಬಂದ ಕಾರಣಕ್ಕೋ, ಈ ಪಂಥಗಳ ತಿಕ್ಕಾಟದಿಂದ ಅಂತರ ಕಾಯ್ದುಕೊಂಡ ಕಾರಣಕ್ಕೋ ಗೊತ್ತಿಲ್ಲ ಪರಿಸರ ಮತ್ತು ಬದುಕನ್ನು ಮೇಳೈಸುವ ಸಾಹಿತ್ಯಕೃಷಿಗೆ ಕೈಹಾಕಿದರು ಕನ್ನಡ ಸಾಹಿತ್ಯ ಲೋಕಕ್ಕೆ ಕರುನಾಡಿನ ಪಕೃತಿಯ ಎಲ್ಲೆಯನ್ನು ಅದರೊಳಗೆ ಬೇಯುವ ಮನುಷ್ಯನ ಬದುಕಿನ ಚಿತ್ರಣವನ್ನು ಪರಿಸರಕೇಂದ್ರಿತವಾಗಿ ಕನ್ನಡ ಸಾಹಿತ್ಯಕ್ಕೆ ಶ್ರೀಮಂತ ಕೊಡುಗೆ ನೀಡಿದರು. ಮಲೆಗಳಲ್ಲಿ ಮಧುಮಗಳು ಮತ್ತು ಕಾನೂರು ಹೆಗ್ಗಡತಿಯನ್ನು ಯಾವ ಪ್ರಕಾರಕ್ಕೆ ಸೇರಿಸುವುದು. ಅದರೊಳಗೆ ಪಕೃತಿಯೇ ಮೈವೆತ್ತಿಬಂದ ದೃಷ್ಯವೈಭವಗಳಿವೆ, ಮಲೆನಾಡಿನ ನಿತ್ಯಹರಿಧ್ವರ್ಣ್ವದ ಸೊಬಗನ್ನ ಕಟ್ಟಿಕೊಡುತ್ತೆ, ಶಿವರಾಮಕಾರಂತರ ಚೋಮನದುಡಿಯೂ ಕೂಡ ಈ ಸಾಲಿನಲ್ಲಿ ನಿಲ್ಲಬಲ್ಲ ಕೃತಿ.

ಕುವೆಂಪು-ಕಾರಂತರ ಕಾಲಘಟ್ಟದಲ್ಲಿ ವಿಜ್ಞಾನದ ಬೇರೆ ಬೇರೆ ಕ್ಷೇತ್ರದ ಮಹತ್ವದ ಸಾಧನೆಗಳು ಜನ ಜೀವನವನ್ನು ಪ್ರಭಾವಗೊಳಿಸತೊಡಗಿದಾಗ ಅದರಿಂದಲೇ ಉದ್ಭವವಾಗುವ ಸಾಹಿತ್ಯ ಕೃತಿಗಳಿಗೂ ಪ್ರಭಾವ ಬೀರುತ್ತದೆ, ಡಾರ್ವಿನ್ನನ ವಿಕಾಸವಾದ ವಿಶ್ವÀಪ್ರಸಿದ್ಧವಾಗಿ ಜೀವಸಂಕುಲಗಳ ಕಥೆ ಜಗತ್ತಿನಮುಂದೆ ತೆರೆದಿಟ್ಟಿರುತ್ತದೆ, ಜೀವವಿಜ್ಞಾನದ ಸಾಹಿತ್ಯ ಜಗದಾಧ್ಯಂತ ಬರಲಾರಂಬಿಸುತ್ತದೆ, ಕನ್ನಡ ಸಾಹಿತ್ಯ ಲೋಕಕ್ಕೂ ಪೂರ್ಣಚಂದ್ರ ತೇಜಸ್ವಿ ಮಿಸ್ಸಿಂಗ್ ಲಿಂಕ್ ಮೂಲಕ ಡಾರ್ವಿನ್ನನ್ನು ಜನಮುಖಿಯಾಗಿಸುತ್ತಾರೆ. ನಮ್ಮ ಕಾಲದ ಜೀವನದ ಸಾಮಾಜಿಕ ಅಗತ್ಯಗಳಿಗಾಗಿ ವಿಜ್ಞಾನದ ತಿಳಿಯು ಅಗತ್ಯ ತಿಳಿವು ವಿಜ್ಞಾನ ಸಾಹಿತ್ಯವಾಗಿ ಸೃಜನಶೀಲಗೊಳ್ಳುತ್ತದೆ.

80ರ ದಶಕದ ನಂತರ ಹೆಚ್ಚು ಪರಿಸರ ಸಾಹಿತ್ಯಗಳು ಗಧ್ಯ-ಪದ್ಯಗಳೆರಡರ ಪ್ರಕಾರವಾಗಿ ಕನ್ನಡ ಸಾರಸ್ವತ ಲೋಕಕ್ಕೆ ಸೇರಿಕೊಳ್ಳುತ್ತವೆ ಪೂರ್ಣಚಂದ್ರತೇಜಸ್ವಿ ಈ ಸಾಹಿತ್ಯದ ಮುಂಚೂಣೆ ನಾವಿಕನಂತೆ ತನ್ನೊಂದಿಗೆ ಹೊಸಕಾಲದ ಬರಹಗಾರರನ್ನೂ ಕರೆದುಕೊಂಡು ಸಾಗುತ್ತಾರೆ. ತೇಜಸ್ವಿ ಅಥವ ಕಾರಂತರು ಪರಿಸರ ಸಾಹಿತ್ಯದ ಜೊತೆ ಪರಿಸರ ಚಳವಳಿಯನ್ನೂ ಒಟ್ಟೊಟ್ಟಿಗೆ ಬೆಸೆದವರು ಹಾಗಾಗಿ ತೇಜಸ್ವಿ ಹೇಳ್ತಾರೆ ಕಾರಂತರಿಗೆ ಕಾಡು, ಈಸ್ ಎ ಚಾಲೆಂಜ್ ಟು ಎ ಸಿವಿಲೈಸೇಷನ್, ‘ಬೆಟ್ಟದ ಜೀವ’, ‘ಕುಡಿಯರ ಕೂಸು’ ಅಲ್ಲೆಲ್ಲ ನೋಡಿದರೆ ನಿಮಗೆ, ಕಾಡು ಹೇಗೆ ದೊಡ್ಡ ಸವಾಲಾಗಿ ಮನುಷ್ಯನಿಗೆ ಕಂಡಿದೆ ಅನ್ನೋದು ಗೊತ್ತಾಗುತ್ತೆ. ಕುವೆಂಪು ಅವರಲ್ಲಿ ಬಂದರೆ ಕಾಡು ತಾಯಿಯ ರೀತಿ ಬರುತ್ತೆ. ಮನುಷ್ಯನನ್ನ ಸಂರಕ್ಷಿಸೋದು, ಮನುಷ್ಯನನ್ನ ಮೊರೆಯುವಂಥದ್ದು ಹಾಗೆ ಕಾಣಿಸಿಕೊಳ್ಳುತ್ತೆ. ನನ್ನ ಲೆವೆಲ್ಲಿಗೆ ಬರುವಷ್ಟು ಹೊತ್ತಿಗಾಗಲೆ, ನಾವೇ ಕಾಪಾಡಬೇಕಾದಂತಹ ಕಾಡುಗಳಾಗಿ ಪರಿವರ್ತನೆಯಾಗಿವೆ!

ಅರ್ಜುನನಿಗೆ ಮರದ ಮೇಲಿನ ಗಿಣಿ ಕಾಣಲಿಲ್ಲ ಅದರ ಹೊಳೆಯುವ ಕಣ್ಣಷ್ಟೇ ಕಂಡದ್ದು, ಇದು ಶ್ರೇಷ್ಠ ಧನುರ್ಧಾರಿಯ ನೋಟ; ಹಾಗೆಯೇ ಓಶೋ ಅವರ ಪ್ರಜ್ಞೆಯ ನೋಟ ಮತ್ತೊಂದಿದೆ ‘ಕಾಡಿನ ನಡುವೆ ಉದುರಿ ಬೀಳುವ ಎಲೆಯ ಸದ್ದನ್ನು ಯಾರಾದರೂ ಕೇಳಿದ್ದೀರಾ?’ ಯಾವ ಸಾಹಿತಿಗೆ ಕೇಳುತ್ತದೆ ಅವನೊಬ್ಬ ಉತ್ತಮ ಪರಿಸರ ಸಾಹಿತಿ ಆಗಬಲ್ಲ. ಕನ್ನಡ ಸಾರಸ್ವತಲೋಕಕ್ಕೆ ಕುವೆಂಪು-ಕಾರಂತರ, ನಂತರ ಗಟ್ಟಿಯಾಗಿ ಕರ್ವಾಲೋ, ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು, ಪೆದ್ದು ಚೆರುವಿನ ರಾಕ್ಷಸ, ಕಾಡಿನ ಕಥೆಗಳು, ಕಿರಿಯರಿಗಾಗಿ ಪರಿಸರ, ಮಿಲೆನಿಯಂ ಸರಣಿಗಳ ಮೂಲಕ ಪರಿಸರದ ಕಥೆ ಹೆಣೆದ ಕೆ.ಪಿ.ಪೂರ್ಣಚಂದ್ರತೇಜಸ್ವಿ; ‘ಮುಳುಗಡೆಯ ಊರಿಗೆ ಬಂದವರು’ ‘ದ್ವೀಪ”ಕಾಡಿನ ಬೆಂಕಿ’ ಒಟ್ಟು 50ಕ್ಕೂ ಅಧಿಕ ಕಾದಂಬರಿಗಳ ಮೂಲಕ ಕಾಡಿನ ಜನರ ಕಥನವನ್ನು ಪರಿಸರ ಸ್ಮರಣೆಯಾಗಿಸಿದ ನಾ.ಡಿಸೋಜ; ಸಸ್ಯಪುರಾಣ, ಬೃಹದಾರಣ್ಯಕ ಮುಂತಾದ 17ಹೊತ್ತಗೆಗಳ ಮೂಲಕ ಸಸ್ಯಶಾಸ್ತçದ ಸ್ವಾರಸ್ಯವನ್ನು ರಸತುಂಬಿ ಹಸಿರು ಹೊನ್ನಾಗಿಸಿದ ಬಿಜಿಎಲ್ ಸ್ವಾಮಿ; ಮನಮೋಹಕ ಕವನಗಳಮೂಲಕ ನಿಸರ್ಗದ ಸಿರಿಯನ್ನು ನಿತ್ಯೋತ್ವವಾಗಿಸಿದ ನಿಸಾರ್ ಅಹಮದ್ ಕಾಡಿನ ನಡುವೆ ಉದುರಿ ಬಿದ್ದ ಎಲೆಯ ಸದ್ದನ್ನು ನಾಡಿನೊಳಗೆ ಮಾರ್ದನಿಸಿದವರು. ಅವರ ಬೆನ್ನಲ್ಲೇ ಆ ದನಿಯನ್ನು ಕೇಳಿಸಿಕೊಂಡು ಪರಿಸರದ ಕಥೆ ಹೆಣೆದವರು, ಪರಿಸರಕವನ ಗೀಚಿದವರು, ಪರಿಸರ ಲೇಖನ ಮಾಲೆ ಕಟ್ಟಿದವರು, ಚಳವಳಿಯ ದಸ್ತಾವೇಜು ನಿರ್ಮಿಸಿದವರು, ಹೊರಗಿನ ಪರಿಸರವನ್ನು ಕನ್ನಡಕ್ಕೆ ತಂದವರು, ಪರಿಸರದ ನಾಟಕ ರಚಿಸಿದವರು, ಪರಿಸರ ಚಿತ್ತಾರ ಮೂಡಿಸಿದವರು ಸಹಸ್ರಾರು ಮಂದಿ. ಅದರಲ್ಲೂ ಮಲೆನಾಡಿನ ಕಾನನಪರಿಸರದಿಂದ ಬಂದ ಕವಿಗಳು-ಸಾಹಿತಿಗಳು ಪರಿಸರದ ವರ್ಣನಾ ಸಾಹಿತ್ಯಕ್ಕೆ ಜೀವತುಂಬಿದರು. ಸಕಲೇಶಪುರದ ಮಲೆನಾಡಿನ ಜನರ ಬದುಕನ್ನು ಕಾದಂಬರಿಯಾಗಿಸಿ ನಿಲುವಂಗಿಕನಸು, ಕಡವೆಬೇಟೆ, ಅಜ್ಜನಕಮೋಡುಗಳಂತಹ ಹತ್ತಾರು ಕೃತಿಕೊಟ್ಟ ಹಾಡ್ಲಹಳ್ಳಿನಾಗರಾಜ್, ಮಲೆನಾಡಿನ ಜನಜೀವನ ಮತ್ತು ಜೀವರಾಶಿಗಳ ಸಂಕಟಕ್ಕೆ ಅಕ್ಷರ-ನಾಟಕ ಕಟ್ಟಿ ಆನೆದಾರಿಯಲ್ಲಿ ಅಲ್ಲೋಲಕಲ್ಲೋಲ ರಚಿಸಿದ ಸಾಹಿತಿರಂಗಕರ್ಮಿ ಪ್ರಸಾದ್ ರಕ್ಷಿದಿ, 45ಕ್ಕೂ ಅಧಿಕ ಸರಣಿ ಪುಸ್ತಕಗಳ ಮೂಲಕ ಪರಿಸರದ ಎಲ್ಲಾ ಮಗ್ಗುಲುಗಳನ್ನು ದಾಖಲಿಸಿ ಕೊಟ್ಟ ಗಿರಿಮನೆ ಶ್ಯಾಮರಾವ್ ನನ್ನ ನೆಲದ ಪ್ರಮುಖ ಸಾಹಿತಿಗಳು.

ಇದನ್ನೂ ಓದಿ : ಕೋಮುವಾದದ ನಿಗಿನಿಗಿ ಕೆಂಡವಾದ ಕರಾವಳಿಯನ್ನು ಬಿಡಿಸಬೇಕು ಯಾರು?

ಆದರೆ 90ರ ನಂತರದ ಪರಿಸರ ಕುವೆಂಪುರವರ ಆನಂದಮಯ ಜಗವಲ್ಲ, ತೇಜಸ್ವಿಯ ಸೃಜನಶೀಲ ಆಕರವೂ ಅಲ್ಲ, ಬಿಜಿಎಲ್ ಸ್ವಾಮಿಯವರ ಹಸಿರುಹೊನ್ನಲ್ಲ, ಡಿಸೋಝರ ಪರಿಸರ ದ್ವೀಪವೂ ಅಲ್ಲ ಹವಾಮಾನದ ದಳ್ಳುರಿಯಲ್ಲಿ ಬೇಯುತ್ತಿರುವ ನಿಗಿ ನಿಗಿ ಕೆಂಡ, ಈ ನಿಗಿ ನಿಗಿ ಕೆಂಡಕ್ಕೆ ಅಕ್ಷರಮಾಲೆ ಕಟ್ಟಿ ಪರಿಸರ ಸಾಹಿತ್ಯವನ್ನು ಪರಿಸರದೆಚ್ಚರ ಸಾಹಿತ್ಯವಾಗಿ ರೂಪಿಸಿದ ಅಗ್ರ ಬರಹಗಾರ ನಾಗೇಶ ಹೆಗಡೆ. ಅವರ ಇರುವುದೊಂದೇ ಭೂಮಿಯಿಂದ ನಡುಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತದವರೆಗೂ 40ಕ್ಕೂ ಅಧಿಕ ಪರಿಸರದೆಚ್ಚರ ಕೊಡುವ ಸಾಹಿತ್ಯಮಾಲೆ, ಇವರ ನೋಟದ ಪರಿಸರವಿಪ್ಲವ ಸಾಹಿತ್ಯ ಕನ್ನಡದಲ್ಲಿ ಇನ್ನೂ ಚಿಗುರು ಹಂತದಲ್ಲೇ ಇದೆ, ಅಲ್ಲಲ್ಲಿ ಈ ಪರಿಸರವಿಪ್ಲವ ಸಾಹಿತ್ಯಕ್ಕೆ ತೊರೆಗಳಂತೆ ಕಾಣಿಕೆ ಕೊಟ್ಟವರು ಒಂದಷ್ಟು ಹಸಿಮಣ್ಣು, ಭೂಮ್ತಾಯಿಯಯ ರೆಕ್ಕೆಯಲ್ಲಿ ಪಕ್ಷಿಯಾಗಿ ಪರಿಸರ ವಿಪ್ಲವಗಳ ದಸ್ತಾವೇಜುಗಳನ್ನು ಕಾವ್ಯಾತ್ಮಕವಾಗಿ ಚಿತ್ರಿಸಿಕೊಟ್ಟ ರೂಪಹಾಸನ ಮತ್ತು ಜಾಗತಿಕ ತಾಪಮಾನ ಏರಿಕೆಯ ಉರಿಯನ್ನು ವಿವರಿಸುವ ಹವಾಮಾನ ಬದಲಾವಣೆ ಬೇಕೆ ಈ ದಿನಗಳು ರಚಿಸಿ ಕೊಟ್ಟ ಕೆ.ಎಸ್.ರವಿಕುಮಾರ್ ಕನ್ನಡ ಸಾರಸ್ವತ ಲೋಕಕ್ಕೆ ಪ್ರಮುಖ ಪರಿಸರ ಮತ್ತು ಪರಿಸರ ವಿಪ್ಲವ ಸಾಹಿತ್ಯವನ್ನು ಕಟ್ಟಿಕೊಟ್ಟ ಭರವಸೆಯ ಸಾಹಿತಿಗಳು. ಕುವೆಂಪು ಅವರ ‘ಉದಯರವಿ’ ಪ್ರಕಾಶನ , ಹೆಗ್ಗೋಡಿನ (ಶಿವಮೊಗ್ಗ ಜಿಲ್ಲೆ) ‘ಅಕ್ಷರ ಪ್ರಕಾಶನ’., ಪೂರ್ಣಚಂದ್ರ ತೇಜಸ್ವಿ ಮತ್ತು ಬಿ.ಎನ್.ಶ್ರೀರಾಮ ಅವರು ರೂಪಿಸಿದ ‘ಪುಸ್ತಕ ಪ್ರಕಾಶನ’, ಶಿವಮೊಗ್ಗೆಯ ‘ಪರಿಸರ ಸಾಹಿತ್ಯ’ ಬೆಂಗಳೂರಿನ ಭೂಮಿ ಬುಕ್ಸ್, ಅಂಕಿತ ಪ್ರಕಾಶನ, ಪರಿಸರ ಸಾಹಿತ್ಯವನ್ನು ಹೆಚ್ಚಾಗಿ ಪ್ರಕಟಿಸುತ್ತಿರುವ ಪ್ರಕಾಶನ ಸಂಸ್ಥೆಗಳು.

21ನೇ ಶತಮಾನದ ಡಿಜಿಟಲೀಕರಣಗೊಂಡ ಜಗತ್ತಿನಲ್ಲಿ ವಾಸಿಸುತ್ತಿರುವ ನಾವು, ನಮ್ಮ ಪರಿಸರ ನಾಶದ ಹಾನಿಕಾರಕ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ನಮ್ಮ ಉದಾಸೀನತೆ ಮತ್ತು ನೈಸರ್ಗಿಕ ಪ್ರಪಂಚದಿಂದ ಸಂಪರ್ಕ ಕಡಿತದ ದುಷ್ಪರಿಣಾಮಗಳನ್ನು ಪರಿಗಣಿಸದೆ ನಾವು ನಮ್ಮ ಪ್ರಕೃತಿ ಮತ್ತು ಪರಿಸರವನ್ನು ಲಘುವಾಗಿ ಪರಿಗಣಿಸಿದ್ದೇವೆ. ತಂತ್ರಜ್ಞಾನದ ಅತಿಯಾದ ಬಳಕೆ, ಭೌತಿಕ ಪ್ರಗತಿಯ ಹಂಬಲ, ವಾಹನಗಳು ಮತ್ತು ನಗರೀಕರಣ, ನಮ್ಮ ಜೀವನದಲ್ಲಿ ಆರೋಗ್ಯಕರ ಪರಿಸರದ ಮಹತ್ವವನ್ನು ಮರೆಯುವಂತೆ ಮಾಡಿದೆ. ಅದು ನಾಳೆಯ ಪೀಳಿಗೆಗೆ ಎಂತಹ ನಾಳೆಗಳನ್ನು ನೀಡುತ್ತದೆ!? ಎಂದು ನಮಗೆ ತಿಳಿದಿಲ್ಲ! ಅಧಿಕಾರದಲ್ಲಿರುವ ಜನರು, ಸಂಬಂಧಪಟ್ಟ ಪರಿಸರ ಕಾರ್ಯಕರ್ತರು, ಪರಿಹಾರ ಕ್ರಮಗಳ ಮೂಲಕ ಪ್ರಕೃತಿಯ ಮೇಲಿನ ಮತ್ತಷ್ಟು ಹಾನಿಯನ್ನು ತಡೆಯಲು ಮತ್ತು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನಿಜ. ಅದರ ಜೊತೆ ಪರಿಸರ ಸಾಹಿತ್ಯ ಮತ್ತು ಪರಿಸರ-ವಿಮರ್ಶಾತ್ಮಕ ಬರಹಗಳು ಸಮಾಜಕ್ಕೆ ಶಿಕ್ಷಣ ನೀಡುವ, ಪರಿಸರ ಜಾಗೃತಿಯನ್ನು ಉತ್ತೇಜಿಸುವ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿವೆ ಎನ್ನುವುದು ನನ್ನ ಗಟ್ಟಿ ಅಭಿಮತ. ಇದಕ್ಕೆ ಪೂರಕವೆಂಬಂತೆ ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರಲ್ಲೂ ಚಿಕ್ಕ ವಯಸ್ಸಿನಿಂದಲೇ ಪರಿಸರ ಸಾಕ್ಷರತೆಯನ್ನು ನಿರ್ಮಿಸುವ ಹಾಗೂ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಪಠ್ಯಕ್ರಮದಲ್ಲಿ ಪರಿಸರ ಪ್ರಜ್ಞೆ ಮತ್ತು ಸುಸ್ಥಿರತೆಯನ್ನು ಸಂಯೋಜಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಆದರೆ ಗುಣಮಟ್ಟದ ಪರಿಸರ ಶಿಕ್ಷಣಕ್ಕೆ ಸೀಮಿತ ಪ್ರವೇಶ, ಪರಿಸರದ ಸಂಕೀರ್ಣ ಸಮಸ್ಯೆಗಳ ಬಗ್ಗೆ ಅರಿವಿನ ಕೊರತೆ ಮತ್ತು ಪರಿಸರ ನೀತಿಗಳ ಅಸಮರ್ಪಕ ಅನುಷ್ಠಾನ ಸೇರಿದಂತೆ ವ್ಯಾಪಕ ಪರಿಸರ ಸಾಕ್ಷರತೆಯನ್ನು ಸಾಧಿಸುವಲ್ಲಿ ಭಾರತ ಇನ್ನೂ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ ಎನ್ನುವುದನ್ನು ಕೂಡ ಸಾಹಿತ್ಯ ಮತ್ತು ಸಾಹಿತಿ ಅರ್ಥಮಾಡಿಕೊಳ್ಳಬೇಕಿದೆ.

ಪರಿಸರಶಿಕ್ಷಣದ ಬಲವರ್ಧನೆ ಮತ್ತು ಸುಧಾರಣೆಗೆ ಸಾಕಷ್ಟು ಪರಿಸರ ಸಾಹಿತ್ಯವನ್ನು (ಫಿಕ್ಷನ್ ಮತ್ತು ನಾನ್ ಫಿಕ್ಷನ್) ಕನ್ನಡ ಸಾಹಿತ್ಯಕ್ಷೇತ್ರ ಕಟ್ಟಿಕೊಡಬೇಕಿದೆ, ಅದನ್ನು ನಾವು ಕಾಳಜಿ, ಪ್ರೀತಿ ಮತ್ತು ವಾತ್ಸಲ್ಯದಿಂದ ಮಾಡಬೇಕು. ಈ ಎಲ್ಲಾ ನವಸಾಹಿತಿಗಳಿಗೆ ಪ್ರಕಾಶಕರು ಸಿಗಲಿ ಎಂಬುದೇ ಆಶಯ. ಪರಿಸರ

ಇದನ್ನೂ ನೋಡಿ‘ಬೂಕರ್‌’ ಅನುಭವವನ್ನು ಬಿಚ್ಚಿಟ್ಟ ಬಾನು ಮುಷ್ತಾಕ್ Janashakthi Media ಪರಿಸರ

Donate Janashakthi Media

Leave a Reply

Your email address will not be published. Required fields are marked *