ಕೊಪ್ಪ: ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಮೃತಪಟ್ಟ ಬಾಲಕಿ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಜುಲೈ 7ರಂದು ಬೃಹತ್ ಪ್ರತಿಭಟನೆ ನಡೆಯಿತು. ಬಾಲಕಿ
ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸಾವಿನ ಬಗ್ಗೆ ಸತ್ಯಾಂಶ ತಿಳಿಯಬೇಕು. ವಸತಿ ಶಾಲೆಯ ಪ್ರಾಂಶುಪಾಲರು, ವಾರ್ಡನ್ನನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಆಡಳಿತ ವ್ಯವಸ್ಥೆ, ಸ್ಥಳೀಯ ಶಾಸಕರು, ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ವೀರಭದ್ರ ಸ್ವಾಮಿ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣದ ಆವರಣದಲ್ಲಿ ಸಮಾವೇಶಗೊಂಡಿತು.
ಪ್ರತಿಭಟನಾ ಸಭೆಯಲ್ಲಿ ಪ್ರಗತಿಪರ ಮುಖಂಡ ಕೆ.ಎಲ್.ಅಶೋಕ್ ಮಾತನಾಡಿ, ‘ಮಲೆನಾಡಿನಲ್ಲಿ ಶಿಕ್ಷಣ ಪಡೆಯುವುದು ಕಷ್ಟವಾಗಿದೆ. ಇಂತಹ ವೇಳೆಯಲ್ಲಿ ವಿದ್ಯಾರ್ಥಿನಿಯರು ಇಂದು ಶಾಲೆ, ವಸತಿ ಶಾಲೆಗಳಿಗೆ ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ವಸತಿ ಶಾಲೆಯಲ್ಲಿ ಪದೇ ಪದೇ ಸಾವುಗಳು ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಶಾಸಕರು ಅಲ್ಲಿನ ಪ್ರಾಂಶುಪಾಲರನ್ನು ವಜಾ ಮಾಡಿ ತನಿಖೆ ನಡೆಸುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಇದನ್ನೂ ಓದಿ: ದೇಶದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ವೈದ್ಯಕೀಯ ಕಾಲೇಜು ಹಗರಣ ಬೆಳಕಿಗೆ
ಡಿಎಸ್ಎಸ್ ಮುಖಂಡ ರಾಜಶಂಕರ್ ಮಾತನಾಡಿ, ‘ವಸತಿ ಶಾಲೆ ಅವ್ಯವಸ್ಥೆಯ ಆಗರವಾಗಿದೆ. ಶುಚಿತ್ವ ಇಲ್ಲ. ವಿದ್ಯಾರ್ಥಿಗಳ ಪಾಲಕರನ್ನು ವಸತಿ ಗೃಹದ ಒಳಗಡೆ ಇಲ್ಲಿನ ಶಿಕ್ಷಕರು ಬಿಡುವುದಿಲ್ಲ. ಹಾಸ್ಟೆಲ್ನಲ್ಲಿ ಭಯದ ವಾತಾವರಣವಿದೆ. ಪ್ರಾಂಶುಪಾಲರ ಈ ಘಟನೆಯ ಹೊಣೆ ಹೊರಬೇಕು’ ಎಂದರು.
ಮೃತ ಬಾಲಕಿ ದೊಡ್ಡಮ್ಮ ರಾಜೀವಿ ಮಾತನಾಡಿ, ‘ವಿದ್ಯಾರ್ಥಿನಿ ಸಾವಿನ ಬಗ್ಗೆ ಮೂಲ ಕಾರಣವನ್ನು ತನಿಖೆಯ ಮೂಲಕ ಬಹಿರಂಗ ಪಡಿಸಿಬೇಕು. ವಿದ್ಯಾರ್ಥಿನಿ ಕಿರುಕುಳಕ್ಕೆ ಒಳಗಾಗಿ ಸಾವನ್ನಪ್ಪಿರುವುದೇ ಅಥವಾ ವೈಯುಕ್ತಿಕ ಕಾರಣದಿಂದ ಆಗಿರುವುದೇ ಎಂದು ತಿಳಿಸಬೇಕು. ವಿದ್ಯಾರ್ಥಿನಿ ಮೃತ ಹೊಂದಿದ ದಿನ ಆಕೆಯ ತಾಯಿ 40 ಬಾರಿ ವಾರ್ಡನ್ಗೆ ಕರೆ ಮಾಡಿದ್ದಾರೆ, ಕರೆ ಸ್ವೀಕರಿಸಿಲ್ಲ ಯಾಕೆ? ಪ್ರಾಂಶುಪಾಲರು ಬೇಜಾವಾಬ್ದಾರಿ ಈ ಸಾವಿಗೆ ಕಾರಣವಾಗಿದೆ. ಅವರನ್ನು ಕೆಲಸದಿಂದ ವಜಾ ಮಾಡಬೇಕು. ಪ್ರಾಂಶುಪಾಲರು, ವಾರ್ಡನ್ ಅವರನ್ನು ಕೆಲಸದಿಂದ ತೆಗೆಯಬೇಕು. ಡೆತ್ನೋಟ್ ಇದೆ ಅಂತಾ ಹೇಳುತ್ತಿದ್ದಾರೆ. ಆ ಡೆತ್ನೋಟ್ ನಮಗೆ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದರು.
ತಾಲ್ಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಕೆ.ಎಸ್.ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ‘ಪ್ರತಿಭಟನಾ ಸಭೆಯಲ್ಲಿ ಶಾಸಕರು ಕೂತು ನಮ್ಮ ಸಮಸ್ಯೆ, ದೂರನ್ನು ಆಲಿಸಬೇಕಿತ್ತು. ಅಧಿಕಾರಿಗಳನ್ನು ಕರೆದು ಕ್ರಮ ತೆಗೆದುಕೊಳ್ಳಬೇಕಿತ್ತು. ಯಾವ ಪಕ್ಷ ಬೇಕಾದರು ಅಧಿಕಾರಕ್ಕೆ ಬರಬಹುದು. ಹೆಣದ ಮೇಲೆ ರಾಜಕಾರಣ ಬೇಡ’ ಎಂದರು.
ಬಿಎಸ್ಪಿ ಮುಖಂಡ ಆನಂದ್, ಕರವೇ ನಾಯಕಿ ಪ್ರೇಮಾ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಸುದೀರ್ ಕುಮಾರ್ ಮುರೊಳ್ಳಿ, ಡಿಎಸ್ಎಸ್ ಮುಖಂಡ ರವೀಂದ್ರ ಹೊಸತೋಟ, ಕುಂಚೂರು ವಾಸಪ್ಪ, ಬಜರಂಗದಳ ಮಾಜಿ ಸಂಚಾಲಕ ರಾಕೇಶ್ ಹಿರೇಕೊಡಿಗೆ ಮಾತನಾಡಿದರು.
ಇದನ್ನೂ ನೋಡಿ: ಪಾಲಾರ್ ಸಿನಿಮಾ | ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ Janashakthi Media
