ಜನರಿಗೆ ಮಾನಸಿಕ ಕಿರಿಕಿರಿ: ದೇಗುಲ ಪ್ರವೇಶಕ್ಕೆ ಅಂಗಿ-ಬನಿಯನ್‌ ತೆಗೆಯುವ ಪದ್ದತಿ ರದ್ದುಪಡಿಸಲು ಮನವಿ

ಮಂಗಳೂರು: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ ಸೇರಿದಂತೆ ಇನ್ನು ಕೆಲವು ಧಾರ್ಮಿಕ ಸ್ಥಳಗಳಲ್ಲಿ ದೇವರ ದರ್ಶನ ಪಡೆಯಲು ಪುರುಷ ಭಕ್ತಾದಿಗಳು ಅಂಗಿ, ಬನಿಯನ್‌ ಕಳಚಿ ಪ್ರವೇಶಿಸಬೇಕೆಂಬ ಪದ್ಧತಿಯನ್ನು ರದ್ದುಪಡಿಸುವಂತೆ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದಿದೆ.

ಧಾರ್ಮಿಕ ದತ್ತಿ ಇಲಾಖೆಗೆ ಬರೆದ ಪತ್ರದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ ಹಾಗೂ ಇನ್ನಿತರ ದೇವಸ್ಥಾನಗಳಲ್ಲಿ ಶರ್ಟು, ಬನಿಯನ್ ಕಳಚಿ ದೇವರ ದರ್ಶನ ಪಡೆಯುವಂಥ ಪದ್ಧತಿ ಇರುವುದು ಸರಿಯಲ್ಲ. ಈ ಕುರಿತಂತೆ ಇರುವ ನಿಯಗಮಳನ್ನು ತೆಗೆದುಹಾಕಬೇಕು. ಭಕ್ತಾದಿಗಳಿಗೆ ಇಂತಹ ಪದ್ಧತಿ ಅನುಸರಿಸಬೇಕೆಂದು ದೇಗುಲಗಳಲ್ಲಿ ಅಳವಡಿಸಲಾಗಿರುವ ಫಲಕಗಳನ್ನು ಸಹ ತೆರವುಗೊಳಿಸಬೇಕು ಎಂದು ಒಕ್ಕೂಟ ಹೇಳಿದೆ.

ಮತ್ತಷ್ಟು ಕೆಲವು ಅಂಶಗಳನ್ನು ಸಹ ವಿವರಿಸಿರುವ ಒಕ್ಕೂಟವು, ಇಂಥ ನಿಯಮಗಳಿಂದ ಕೆಲವು ಭಕ್ತಾದಿಗಳಿಗೆ ಮಾನಸಿಕ ಕಿರಿಕಿರಿಗಳು ಉಂಟಾಗುತ್ತವೆ. ಚರ್ಮರೋಗ ಇರುವವರು ಬಟ್ಟೆ ಕಳಚಿದರೆ ಅವರಲ್ಲಿನ ಕಾಯಿಲೆಯ ಸೋಂಕು ಇತರರಿಗೆ ಹರಡುವ ಸಾಧ್ಯತೆಯೂ ಇರಲಿದೆ. ಅಂಗವಿಕಲರಿಗಂತೂ ಇದರಿಂದ ಸಾಕಷ್ಟು ತೊಂದರೆಗಳು ಎದುರಾಗಲಿದೆ. ಹಾಗಾಗಿ, ಇದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ವಿವರಣೆ ನೀಡಿದೆ.

ಅದರಲ್ಲೂ ಕೆಲವು ದೇವಸ್ಥಾನಗಳಲ್ಲಿ ಇಂಥ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ದೇವಸ್ಥಾನದಲ್ಲಿ ಕೆಲವು ಸಿಬ್ಬಂದಿಗಳು ಬೆತ್ತ ಹಿಡಿದು ನಿಂತಿರುತ್ತಾರೆ. ಈ ನಿಯಮವನ್ನೂ ನಿಲ್ಲಿಸಬೇಕು, ಅಲ್ಲದೆ, ತಮ್ಮೀ ಮನವಿಗೆ 15 ದಿನದಲ್ಲಿ ಉತ್ತರಿಸಬೇಕೆಂದು ಕೋರಿಕೊಂಡಿದೆ.

ಧರ್ಮಗ್ರಂಥಗಳಲ್ಲಿ ಉಲ್ಲೇಖವಿಲ್ಲ

ಹಿಂದೂ ಧರ್ಮಗ್ರಂಥಗಳ ನೆರವನ್ನೂ ಪಡೆದಿರುವ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ, ಹಿಂದೂ ಧರ್ಮದ ಯಾವುದೇ ಧರ್ಮ ಗ್ರಂಥಗಳಲ್ಲಿ ದೇವಸ್ಥಾನದೊಳಕ್ಕೆ ಅಂಗಿ- ಬನಿಯನ್ ಬಿಚ್ಚಿ ಹೋಗಬೇಕೆಂದು ಹೇಳಿಲ್ಲ. ಈ ಕುರಿತಂತೆ ಸರ್ಕಾರದಿಂದ ಯಾವುದೇ ನಿರ್ದೇಶನವಾಗಲೀ, ಸೂಚನೆಯಾಗಲೀ ಅಥವಾ ಆದೇಶಗಳ ಸಹ ಇಲ್ಲ. ಹೀಗಿರುವಾಗ ಇದನ್ನು ಪಾಲಿಸುವುದು ಸಹ ಕಾನೂನು ರೀತಿಯ ಉಲ್ಲಂಘನೆಯಾಗಿದೆ. ಇದರಿಂದ ಭಕ್ತಾದಿಗಳಿಗೆ ಮುಜುಗರವಾಗುವಂಥ ಸಂದರ್ಭಗಳೂ ಇರುತ್ತದೆ ಎಂದಿದೆ.

Donate Janashakthi Media

Leave a Reply

Your email address will not be published. Required fields are marked *